ಜಿ. ಎನ್. ಆಶೋಕ ವರ್ಧನ - - ಜಿ. ಆರ್. ಉಪಾಧ್ಯಾಯರ - { ವಿ } ಚಿತ್ರ ಜೀವನ

ಸಂಗ್ರಾಹ್ಯ ಪುಸ್ತಕ - (ವಿ)ಚಿತ್ರ ಜೀವನ, जी.Are. ಉಪಾಧ್ಯಾಯ
ನಾಲ್ಕೈದು ವಾರಗಳ ಹಿಂದೆ ಸಾಹಿತ್ಯಪ್ರೇಮಿ ಗೆಳೆಯ ಹಿರಿಯಡಕ ಮುರಳೀಧರ ಉಪಾಧ್ಯರು ಚರವಾಣಿಸಿ ಮೇಲ್ಕಾಣಿಸಿದ ವಿಚಿತ್ರ ಪುಸ್ತಕ ಮತ್ತು ಲೇಖಕರನ್ನು ಎರಡು ಮಾತಿನಲ್ಲಿ ಪರಿಚಯಿಸಿದರು. ಮುಂದುವರಿದು, "ಉಪಾಧ್ಯಾಯರಿಗೆ ತನ್ನ ಪುಸ್ತಕವನ್ನು ಅಂತರ್ಜಾಲಕ್ಕೂ ಏರಿಸಿ, ಸಾರ್ವಜನಿಕರಿಗೆ ಚಿರಕಾಲ ಮುಕ್ತವಾಗುವಂತೆಯೂ ಮಾಡಬೇಕೆಂಬ ಬಯಕೆಯಿದೆ. ಏನು ಮಾಡಬಹುದು?" ನಾನು ಸಹಜವಾಗಿ "ಪಠ್ಯದ ಬೆರಳಚ್ಚು ಲೇಖಕರು ಕೊಡುವುದಿದ್ದರೆ, ನನ್ನ ಜಾಲತಾಣದ (www.athreebook.com) ಪುಸ್ತಕ ವಿಭಾಗದಲ್ಲಿ ಈಗಾಗಲೇ ಇರುವ ಹದಿನಾರು ವಿದ್ಯುನ್ಮಾನ ಪುಸ್ತಕಗಳೊಡನೆ ಇದನ್ನೂ ಸೇರಿಸಬಲ್ಲೆ. ಅಲ್ಲಿಗೆ ಹದಿನೇಳು ಪುಸ್ತಕಗಳು ಉಚಿತವಾಗಿ ಸಾರ್ವಜನಿಕರಿಗೆ ಸಿಗುವಂತಾಗುತ್ತದೆ" ಎಂದೆ. ಮರುದಿನವೇ ಜೀಯಾರ್ ಉಪಾಧ್ಯಾಯರೊಡನೇ ದೂರವಾಣಿ ಮಾತುಕತೆಯಾಯ್ತು. ಬೆರಳಚ್ಚಿನ ಸಮಸ್ಯೆಯೂ ಬಾರದಂತೆ, ಅವರ ಬಳಿ ಇಡೀ ಪುಸ್ತಕದ ಪೀಡಿಯೆಫ್ (ಸರಳವಾಗಿ ಹೇಳುವುದಿದ್ದರೆ ಶುದ್ಧ ಛಾಯಾನಕಲು) ಕಡತ ಇತ್ತು. ಅದನ್ನು ಒಂದು ಕ್ಷಣದ ಮಿಂಚಂಚೆಯಲ್ಲಿ ನನಗೆ ಕಳಿಸಿದರು. ನನ್ನ ಜಾಲತಾಣ ಹಾಗೂ ಮುಂದುವರಿದ ಎಲ್ಲ ಗಣಕ ಚಟುವಟಿಕೆಗಳ ನಿರ್ವಾಹಕ ಅಭಯ, ಅಷ್ಟೇ ಚುರುಕಿನಲ್ಲಿ ಅದನ್ನು ಅಂತರ್ಜಾಲಕ್ಕೇರಿಸಿ, ನನ್ನ ಜಾಲತಾಣದಲ್ಲಿ ನೆಲೆಗೊಳಿಸಿಬಿಟ್ಟ. ಮುರಳೀಧರ ಉಪಾಧ್ಯರು ಹೇಳಿದ ಎರಡು ಮಾತಿನ ಪರಿಚಯದಿಂದಾಚೆ ಲೇಖಕ, ಕೃತಿಯನ್ನು ನಾನು ನೋಡದೇ ನನ್ನ ಪ್ರಕಟಣ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದೆ!
ಜಿಯಾರ್ ಉಪಾಧ್ಯಾಯರು ಬಲು ದಾಕ್ಷಿಣ್ಯದವರಿರಬೇಕು. ನಮ್ಮೊಳಗಿನ ಚರವಾಣಿ ಮಾತುಕತೆಯಲ್ಲಿ ಮತ್ತೆ ಮತ್ತೆ "ನಾನೆಷ್ಟು (ಖರ್ಚು) ಕೊಡಬೇಕು" ಎಂದೇ ವಿಚಾರಿಸಿದ್ದರು. ನಾನೂ ಅಷ್ಟೇ ಖಡಕ್ಕಾಗಿ "ಏನೂ ಇಲ್ಲ" ಎಂದಿದ್ದೆ. ಆದರೂ "ಕನಿಷ್ಠ ಮುದ್ರಿತ ಪುಸ್ತಕದ ಒಂದು ಪ್ರತಿಯಾದರೂ ನಿಮ್ಮಲ್ಲಿರಲಿ" ಎಂದು ಒಂದು ಪುಸ್ತಕವನ್ನು ಉಚಿತವಾಗಿ ಅಂಚೆಯಲ್ಲಿ ಕಳಿಸಿಯೇಬಿಟ್ಟರು. ಹಾಗೆ ಬಂದ ಪುಸ್ತಕದ ಮುಖಪುಟ ನೋಡಿದ್ದೇ "ಅರೆ, ಇವರು ನನ್ನಂಗಡಿಗೆ ಬರುತ್ತಿದ್ದರು...." ಎಂಬಲ್ಲಿಂದ ತೊಡಗಿ, ನನ್ನಂಗಡಿ ಎದುರಿನ ಸರಕಾರೀ ಶಿಕ್ಷಕರ ಶಿಕ್ಷಣ ಸಂಸ್ಥೆಯಲ್ಲೇ ಹದಿಮೂರು ವರ್ಷ ಸೇವೆ ಬೇರೆ ಸಲ್ಲಿಸಿದವರು ಎಂದೆಲ್ಲ ತಿಳಿಯುತ್ತಿದ್ದಂತೆ ಸಂತೋಷವೇನೋ ಆಯ್ತು. ಆದರೆ ತನ್ನ ಹೆಸರು ಮುದ್ರಿಸುವಲ್ಲಿ ಮೂರು ಭಾಷೆಗಳ ಮಿಶ್ರಣ, ರಟ್ಟು ತಿರುಗಿಸಿದ್ದೇ ದೇವದೇವಿಯರೂ ಅಸಂಖ್ಯ ಕೌಟುಂಬಿಕ ಚಿತ್ರಗಳೂ ವಂಶವೃಕ್ಷಗಳೂ ಕಾಣಿಸಿತು. ಇಡಿಯ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಚಿಕಣಿ ಚಿತ್ರಗಳು, ಕೊನೆಯ ಸುಮಾರು ಇಪ್ಪತ್ತೈದು ಪುಟಗಳಂತೂ ಪೂರ್ಣ ವರ್ಣಮಯ ಆಲ್ಬಂನಂತೇ ಇರುವುದು ನೋಡಿದ ಮೇಲೆ ಮನಸ್ಸು ಸ್ವಲ್ಪ ಮುದುಡಿತು. ಎಲ್ಲೋ ನಗಣ್ಯ ಹಿನ್ನೆಲೆಯಿಂದ ಮೇಲೆ ಬಂದ ವ್ಯಕ್ತಿ ಆತ್ಮಸಂತೋಷಕ್ಕೆ ಪ್ರಕಟಿಸಿಕೊಂಡ ಸಾಹಿತ್ಯ, ಕಿರಿದಕ್ಕೆ ಹಿಡಿದ ಭೂತಗನ್ನಡಿ, ಮದುವೆ ವಿಡಿಯೋದ ಹಾಗೇ ಇರಬಹುದು ಎಂದೆಲ್ಲ ಯೋಚಿಸುತ್ತ ಅರೆಮನಸ್ಸಿನಲ್ಲಿ ಪುಟ ಮಗುಚಿದೆ. ಒಂದು ಲೆಕ್ಕದಲ್ಲಿ ನಗಣ್ಯ ಹಿನ್ನೆಲೆ ಹೌದು. ಆರ್ಥಿಕವಾಗಿ ಬಡಬ್ರಾಹ್ಮಣ ಕುಟುಂಬ, ವೈಯಕ್ತಿಕವಾಗಿ (ಕಾರಣ ಏನೇ ಇರಲಿ) ಎಸ್ಸೆಸ್ಸೆಲ್ಸಿಯಿಂದ ಮೇಲೆ ಬಿದ್ದದ್ದೇ ದೊಡ್ಡದು, ಹೆಚ್ಚುಕಮ್ಮಿ ಮನೆಯಿಂದ ಓಡಿಹೋಗಿ ಧಾರವಾಡದಲ್ಲಿ ಹೋಟೆಲ್ ಮಾಣಿ.....ಇತ್ಯಾದಿ. ಆದರೆ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ, ಪುಟ್ಟಪುಟ್ಟ ಟಿಪ್ಪಣಿಗಳಂಥ ಕಥನಗಳಲ್ಲಿ ಬಿಡಿಸಿಕೊಳ್ಳುತ್ತಾ ಹೋದ ಉಪಾಧ್ಯಾಯರ ಜೀವನಾನುಭವ ನನ್ನ ಪೂರ್ವಾಗ್ರಹವನ್ನು ಬಹಳ ಬೇಗನೇ ಹುಸಿಗೊಳಿಸಿಬಿಟ್ಟಿತು.
ಹುಟ್ಟಾ ಸಂಗೀತಗಾರ, ವಿಜ್ಞಾನಿ, ಕ್ರೀಡಾಳು ಎಂದೆಲ್ಲಾ ಹೇಳುತ್ತಾರಲ್ಲ ಹಾಗೇ - ಹುಟ್ಟಾ ಚಿತ್ರಕಾರರು ಗೋಪಾಲಕೃಷ್ಣ ರಾಮ ಉಪಾಧ್ಯಾಯ. ಆದರೆ ಯಾವುದೇ ದೊಡ್ಡ ಆಯಾಮದ ಹಪಹಪಿಯಿಲ್ಲದೇ ಸರಳ, ಸಾಂಪ್ರದಾಯಿಕ ಚಿತ್ರ ಬಿಡಿಸುವ ಒಲವನ್ನು ಜೀವನಶೈಲಿಗೆ ಹೊಂದಿಸಿಕೊಂಡು, (‘ಡ್ರೋಯಿಂಗ್ ಮಾಸ್ಟರ್’) ವೃತ್ತಿಯಾಗಿ ರೂಢಿಸಿಕೊಂಡು, ನಿವೃತ್ತಿಯಲ್ಲೂ ಸಮಾಜಸೇವೆಯಾಗಿ ಉಳಿಸಿಕೊಂಡೇ ಆರ್ಥಿಕ ಯಶಸ್ಸು, ಕೌಟುಂಬಿಕ ಸಂತೋಷಗಳನ್ನು ಗಳಿಸಿದವರು ಈ ಜೀಯಾರ್ ಉಪಾಧ್ಯಾಯ. ಮೇಲೆ ನಾನು ಹೇಳಿದ ವಿಶೇಷಣಗಳೆಲ್ಲವನ್ನು ೨೮೦ಕ್ಕೂ ಮಿಕ್ಕಿದ ಪುಟಗಳಲ್ಲಿ, ನೂರಾರು ರೇಖಾ, ವರ್ಣ, ಛಾಯಾ ಚಿತ್ರಗಳ ಸಾಂಗತ್ಯದಲ್ಲಿ ನಿರ್ಮಮ ಆತ್ಮಕಥಾನಕದ ದಾರದಲ್ಲಿ ಸುಂದರವಾಗಿ ಪ್ರಸ್ತುತಪಡಿಸುತ್ತದೆ - (ವಿ)ಚಿತ್ರ ಜೀವನ. ಆತ್ಮಕಥೆಯಾದ್ದರಿಂದ ಅದು ನುಡಿಚಿತ್ರವೇ ಇರಲಿ, ನಿಜಚಿತ್ರವೇ ಇರಲಿ, ನಿಸ್ಸಂದೇಹವಾಗಿ ಕೌಟುಂಬಿಕ ಅಂಶಗಳು ಇದ್ದೇ ಇವೆ. ಆದರೆ ನುಡಿಚಿತ್ರಗಳಲ್ಲಿ ಎಪ್ಪತ್ನಾಲ್ಕಕ್ಕೂ ಮಿಕ್ಕು ವರ್ಷಗಳ ಈ ಜೀವನಯಾನದಲ್ಲಿ ಸಾಂಪ್ರದಾಯಿಕ ಕಲಿಕೆಯಲ್ಲಿ ದಂಡಭಯದಿಂದ ಕುಗ್ಗಿದ ಎಳೆಯ, ಮನಸ್ಸಿನ ಉಮ್ಮಳಕ್ಕೆ ಚಿತ್ರರಚನೆಯ ಮರಸು ಬಯಸಿ ದೇಶಾಂತರ ಓಡಿ ದಕ್ಕಿಸಿಕೊಂಡ ಸಾಹಸ, ನೆಲೆಕೊಟ್ಟವರಿಗೆ ಹೊರೆಯಾಗದ ಸ್ವಾಭಿಮಾನ, ಹಾಗೆಂದು ತನ್ನ ಮಿತಿಯಲ್ಲಿ ಇತರರಿಗೆ ಒದಗುವಲ್ಲಿನ ಔದಾರ್ಯ, ವೃತ್ತಿಯಲ್ಲಿ ತರತಮ ಕಾಣದ ಶ್ರಮ, ವಿಶ್ವಾಸಕ್ಕೆ ಎರಡು ಬಗೆಯದ ಪ್ರಾಮಾಣಿಕತೆ, ಗೆಲುವಿನಂತೆ ಸೋಲನ್ನೂ ತೆರೆದಿಡುವ ನಿಸ್ಸಂಕೋಚ ಸಮಭಾವ, ಇದ್ದುದರಲ್ಲಿ ಸಮೃದ್ಧವಾಗಿರುವ ತೃಪ್ತಿ....... ಪಟ್ಟಿ ಮಾಡಿದಷ್ಟೂ ಮುಗಿಯದ ಕುಸುರಿ ಕೆಲಸವನ್ನು ನೀವು ಓದಿಯೇ ಸವಿಯಬೇಕು. ಎಲ್ಲೂ ವಾಚಾಳಿಯಲ್ಲ, ಹಾಗೆಂದು ಮುಚ್ಚುಮರೆಯೂ ಇಲ್ಲದ ಟಿಪ್ಪಣಿಗಳ ಓಟದಲ್ಲಿ ಓದು ನಮ್ಮನ್ನು ಹಲವು ಮಜಲುಗಳಲ್ಲಿ ಸೆಳೆಯುತ್ತದೆ. ಉಪಾಧ್ಯಾಯರು ದಿನಚರಿ ಬರೆಯುವ ಹವ್ಯಾಸಿಗಳೋ ಅಥವಾ ಚಿತ್ರಕಾರನ ಮನೋಭಿತ್ತಿ ಅಷ್ಟೂ ವಿವರಗಳನ್ನು ಹಿಡಿದಿಟ್ಟುಕೊಂಡಿತ್ತೋ ಎಂದು ಕೆಲವೊಮ್ಮೆ ಆಶ್ಚರ್ಯಪಡುವಷ್ಟು ಸೂಕ್ಷ್ಮಗಳನ್ನು ಗೆಲುವಿನಲ್ಲಿ ಹಮ್ಮು, ಸೋಲಿನಲ್ಲಿ ಸಂಕೋಚದ ರಂಗುಗಳಿಲ್ಲದೆ ಪ್ರಸ್ತುತಪಡಿಸುತ್ತಾರೆ. ಒಂದು ಸಣ್ಣ ಕೊರತೆ - ಇದನ್ನು ಪ್ರಕಟಣಪೂರ್ವ ಅನುಭವೀ ಗ್ರಂಥಕರ್ತರಿಂದ ತುಸು ಪರಿಷ್ಕರಣೆಗೊಳಪಡಿಸಿದಂತಿಲ್ಲ. ಇದು ಕೆಲವು ಪ್ರಸಂಗಗಳು ಮರುಕಳಿಸುವುದನ್ನು ತಪ್ಪಿಸುತ್ತಿತ್ತು, ಕೆಲವೆಡೆಗಳ ಪ್ರಯೋಗ ಶುದ್ಧಿಯನ್ನು ಹೆಚ್ಚಿಸುತ್ತಿತ್ತು. ಮುದ್ರಣ ಕಾಲದಲ್ಲಿ ಅಕ್ಷರ ಸ್ಖಾಲಿತ್ಯ (ಮುದ್ರಾರಾಕ್ಷಸ) ನಿವಾರಿಸುವಲ್ಲೂ ಭಾವನಾತ್ಮಕ ಓದುಗನಿಗಿಂತ ವೃತ್ತಿಪರ ‘ಛಿದ್ರಾನ್ವೇಷಿ’ ಹೆಚ್ಚು ಉಪಯೋಗಕ್ಕೊದಗುತ್ತಾನೆ. ಪುಸ್ತಕದ ಗುಣಗಳ ಕುರಿತು ಇನ್ನೂ ಹೆಚ್ಚು ಹೇಳಿ ನಿಮ್ಮ ಸ್ವಾರಸ್ಯಗೆಡಿಸುವುದಿಲ್ಲ. ಬದಲಿಗೆ........
ಶಿಕ್ಷಕರ ಶಿಕ್ಷಕನಾಗಿದ್ದ ಬಲದಲ್ಲಿ ಉಪಾಧ್ಯಾಯರು ಬರಹದಲ್ಲಿ ಅಸಂಖ್ಯ ಸುಭಾಷಿತಗಳನ್ನು ಉದ್ಧರಿಸುತ್ತಾರೆ, ಉಪದೇಶಗಳನ್ನೂ ಮಾಡುತ್ತಾರೆ. ಅವೆಲ್ಲವನ್ನೂ ಮೀರಿ ಗ್ರಹಿಸಬಲ್ಲ ಸಹೃದಯಿಗಳಿಗೆ ಅವರ ಜೀವನಶೈಲಿಯೇ ಒಂದು ಆದರ್ಶ ಎಂದರೆ ತಪ್ಪಾಗದು. ಅದಲ್ಲದೆ ಪುಸ್ತಕದೊಳಗಿನ ಅಸಂಖ್ಯ ಜನಪದ ಮತ್ತು ಸಾಂಪ್ರದಾಯಿಕ ಸಲಕರಣೆ ಮತ್ತು ಚಟುವಟಿಕೆಗಳ ಚಿತ್ರಗಳು ಪಲ್ಲಟಿಸುವ ಕಾಲಮಾನದಲ್ಲಿ ದಾಖಲೀಕರಣ ಮತ್ತು ಪುನರುತ್ಥಾನಕ್ಕೆ ಮುಖ್ಯ ಆಕರದ ಆವಶ್ಯಕತೆಯನ್ನು ಪೂರೈಸುತ್ತದೆ. (ವಿ)ಚಿತ್ರ ಜೀವನವನ್ನು ಉಪಾಧ್ಯಾಯರು ಕಳೆದ ವರ್ಷವಷ್ಟೇ ಸ್ವಂತ ಹೆಸರು ವಿಳಾಸದಲ್ಲಿ ಪ್ರಕಟಿಸಿದ್ದಾರೆ. ಆದರೆ ಸಾರ್ವಜನಿಕರ ಅನುಕೂಲಕ್ಕೋಸ್ಕರ ಮಂಗಳೂರು, ಪುತ್ತೂರು ಹಾಗೂ ಉಡುಪಿಯ ಖ್ಯಾತ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರುವಂತೆ ನೋಡಿಕೊಂಡಿದ್ದಾರೆ. ಇದರ ಘನ ಮಹತ್ತಿಗೆ ಮುದ್ರಿತ ಬೆಲೆ ರೂಪಾಯಿ ಮುನ್ನೂರು ತುಂಬ ತುಂಬಾ ಕಡಿಮೆಯೇ ಸರಿ. ಅವರು ಮುದ್ರಿಸಿರುವ ಕೆಲವೇ ಪ್ರತಿಗಳು ಮುಗಿಯುವ ಮುನ್ನ ಅವಸರಿಸಿ ಕೊಂಡುಕೊಳ್ಳಿ. ಏನಲ್ಲದಿದ್ದರೂ........
ಜೀಯಾರ್ ಉಪಾಧ್ಯಾಯರು ಹೇಳಿಕೇಳಿ ಹಳೆಗಾಲದ ಉಪಾಧ್ಯಾಯರೇ! ಇವರಿಗೆ ತನಗೆ ತಿಳಿದೆಲ್ಲವನ್ನೂ ಬಯಸಿ ಬಂದವರಿಗೆ ಮುಕ್ತವಾಗಿ ಕೊಟ್ಟೇ ಗೊತ್ತು. ಸಹಜವಾಗಿ ತಾನು ಮುದ್ರಿಸಿಟ್ಟುಕೊಂಡ ಪುಸ್ತಕಗಳ ಬಗ್ಗೆ ಚಿಂತೆ ಹಚ್ಚಿಕೊಳ್ಳದೇ, ಕಾಲಧರ್ಮಕ್ಕೆ ಒಗ್ಗುವಂತೆ ಈ ಎಲ್ಲ ಮಾಹಿತಿ ಅಂತರ್ಜಾಲದಲ್ಲೂ ಲಭ್ಯವಿರಬೇಕೆಂದು ಬಯಸಿ ನನ್ನಲ್ಲಿಗೆ ಮುಟ್ಟಿಸಿದರು. ಇಂದು ಅದು ನನ್ನ ಜಾಲತಾಣ - www.athreebook.com ಇದರ ‘ಪುಸ್ತಕ ವಿಭಾಗ’ದಲ್ಲಿ ಹದಿನೇಳನೇ ವಿ-ಪುಸ್ತಕವಾಗಿ ಸೇರ್ಪಡೆಗೊಂಡಿದೆ. ನನ್ನ ಇತರ ಪುಸ್ತಕಗಳಂತೆ ಇದನ್ನೂ ಆಸಕ್ತರು ಮುಕ್ತವಾಗಿ (ಪಾವತಿ, ಅನುಮತಿಗಳ ವಿನಾ) ಅಂತರ್ಜಾಲದಲ್ಲಿ ಓದಬಹುದು, ತಂತಮ್ಮ ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಂಡು ಸ್ವಾಂತ ಸುಖಾಯ (ವಾಣಿಜ್ಯ ಅಲ್ಲ) ಧಾರಾಳ ಬಳಸಬಹುದು. ಸದ್ಯ ಯಾವುದಕ್ಕೂ (ವಿ)ಚಿತ್ರ ಜೀವನದ ಪ್ರಾಥಮಿಕ ನೋಟಕ್ಕಾದರೂ ಈ ಸೇತಿನ ಮೇಲೆ ಚಿಟಿಕೆ ಹೊಡೆಯಿರಿ.
Comments
Muralidhar N Prabhu ಸರ್ ಇವರು ನಮ್ಮ ಹೈಸ್ಕೂಲ್ ನ ಡ್ರಾಯಿಂಗ್ ಮೇಸ್ಟ್ರು. ಸಾರ್. ನನ್ನಂಥವನಿಗೂ ಡ್ರಾಯಿಂಗ್ ಕಲಿಸುವ ಕ

Saturday, July 21, 2018

ರೂಪ ಹಾಸನ -ಕೈ ಚಾಚುತ್ತಿವೆ ಕಂದಮ್ಮಗಳು

ಕೈ ಚಾಚುತ್ತಿವೆ ಕಂದಮ್ಮಗಳು

-ರೂಪ ಹಾಸನ

- ಅಭಿರುಚಿ ಪ್ರಕಾಶನ , ನಂ 386 , 14ನೆಯ ಮುಖ್ಯ ರಸ್ತೆ , 3ನೆಯ ಅಡ್ಡ ರಸ್ತೆ ,

ಸರಸ್ವತಿಪುರಮ್ , ಮೈಸೂರು -570009

 kai  Chachuttive Kandammagalu - witten by

Rupa Hasana [ email-rupahassan@gmail.com}

Published by- abhiruchi Prakashana ,386 ,14th Main , 3rd cross , Sarasvathipura ,Mysuru -9 First Impression- 2017 , Pages- 247 , Price- 225 Size-1/8th Demy

No automatic alt text available.
rupa hasana  , ರೂಪ ಹಾಸನ

ಎಮ್. ಆರ್. ಕಮಲಾ ---ನೀವು ನೋಡಿದವಳು



ನೀವು ನೋಡಿದವಳು....
ನಿಮ್ಮ ನೋಟ ನಾನಲ್ಲ
ನನ್ನ ಸೀರೆ, ಕುಂಕುಮ, ಬಿಚ್ಚಿದ ಕೂದಲು
ಅರಳುಗಣ್ಣು, ಭಾವಗಳ ಹೊಮ್ಮಿಸುವ ಚಿತ್ರ 
ಇದ್ಯಾವುದು ನಾನಲ್ಲ.
ಊಹಿಸುತ್ತ ಹೋಗುತ್ತೀರಿ
ನಿಮ್ಮದೇ ಕಲ್ಪನೆಗೆ ರೆಕ್ಕೆಪುಕ್ಕ ಹಚ್ಚಿ
ಸಾವಿರ ಕಣ್ಣ ನವಿಲಾಗಿ ನನ್ನ ಕುಣಿಸುತ್ತೀರಿ
ಇದ್ಯಾವುದು ನಾನಲ್ಲ
ನಿಮ್ಮ ರಾಗ ದ್ವೇಷದಮಲಿನಲಿ
ನನ್ನನ್ನು ನಾದಿ, ಕೆಂಪಗೆ ಕರಿದು
ಕುದಿವ ಸಕ್ಕರೆಯ ಪಾಕದಲ್ಲಿ ಅದ್ದುತ್ತೀರಿ
ಇದ್ಯಾವುದು ನಾನಲ್ಲ
ಓಟದ `ಹಿಮ'ದ ಹುಡುಗಿಯ
ಜಾತಿ, ಖ್ಯಾತಿಯ ಹುಡುಕಿದಂತೆ
ಹಿನ್ನೆಲೆ ಹುಡುಕುತ್ತ ಅಲೆದು ಬಳಲುತ್ತೀರಿ
ಇದ್ಯಾವುದು ನಾನಲ್ಲ
ಹುಲ್ಲು ಕಡ್ಡಿ, ಪುಟ್ಟ ಹೂವು, ಮುಳ್ಳು
ಮರಳು, ಕಡಲು, ಆಕಾಶದಲ್ಲೂ
ಅರ್ಥ ಹುಡುಕಿ,ತಡಕಿ ತೊಳಲುತ್ತೀರಿ
ಅಲ್ಲೂ ದಕ್ಕಿಲ್ಲ, ಇಲ್ಲೂ,,,,




Image may contain: Metikurke Ramaswamy Kamala, closeup


























,,,

ಸುಬ್ರಾಯ ಚೊಕ್ಕಾಡಿ -- ಟಿ. ಜಿ. ರಾಘವರ ಕಾದಂಬರಿ

"ಮನೆ" ಟಿ.ಜಿ.ರಾಘವರ ಒಂದು ವಿಶಿಷ್ಟ ಕಾದಂಬರಿ. ಟಿ.ಜಿ.ರಾಘವರು ನವ್ಯ ಸಾಹಿತ್ಯ ಸಂದರ್ಭದ ಪ್ರಮುಖ ಲೇಖಕರಲ್ಲಿ ಒಬ್ಬರು.ಮೊದಲ ಸಂಕ್ರಮಣ ದ್ವೈಮಾಸಿಕದಲ್ಲಿ ಪ್ರಕಟವಾದ ಅವರ"ಶ್ರಾದ್ಧ"ಕತೆಯು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.1979 ರಲ್ಲಿ ಪ್ರಥಮ ಮುದ್ರಣ ಹಾಗೂ 1990 ರಲ್ಲಿ ದ್ವಿತೀಯ ಮುದ್ರಣ ಕಂಡ ಈ ಪುಟ್ಟ ಕಾದಂಬರಿಯ ಪ್ರಕಾಶಕರು "ಗೀತಾ ಬುಕ್ ಹೌಸ್, ಮೈಸೂರು " ರಾಘವರ ಇತರ ಪ್ರಕಟಿತ ಕೃತಿಗಳಲ್ಲಿ "ಜ್ವಾಲೆ ಆರಿತು"ಹಾಗೂ "ಸಂಬಂಧಗಳು "ಎನ್ನುವ ಕಥಾ ಸಂಕಲನಗಳು,"ವಿಕೃತಿ"ಎನ್ನುವ ಕಾದಂಬರಿ,ಮತ್ತು "ಪ್ರೇತಗಳು"ಎನ್ನುವ ನಾಟಕ ಮುಖ್ಯವಾದವುಗಳು.
"ಸಂತೆಯೊಳಗೊಂದು ಮನೆಯ ಮಾಡಿ,ಸದ್ದು ಗದ್ದಲಕೆ ಅಂಜಿದೊಡೆ ಎಂತಯ್ಯಾ "ಅನ್ನುವುದು ಅಕ್ಕನ ವಚನವೊಂದರ ಸಾಲು. ಈ ಸಾಲಿಗೆ ವಿಷಾದದ ಉದಾಹರಣೆಯಾಗಿ ಈ ಕಾದಂಬರಿಯ ಮುಖ್ಯ-ಆದರೆ ಅಮಾಯಕ-ಪಾತ್ರಗಳಾದ ರಾಜಣ್ಣ ಮತ್ತು ಗೀತಾ ,ನಗರದಲ್ಲಿ ಒಂದು ಪುಟ್ಟ ಮನೆಯು ನೆಮ್ಮದಿಯ ಹಾಗೂ ಖಾಸಗಿಯ ಬದುಕಿಗಾಗಿ ಬೇಕೆಂದು ಹಂಬಲಿಸಿದವರು.;ಅಂಥ ಕನಸು ಕಂಡವರು.ಆದರೆ ನಗರದ ಗದ್ದಲ,ಎಲ್ಲ ಖಾಸಗಿತನವನ್ನೂ ನುಂಗಿ ಹಾಕಿ,ಅದರ ಪಾವಿತ್ರ್ಯವನ್ನು ನಾಶಮಾಡಿ ನಿರ್ದಯವಾಗಿ ವರ್ತಿಸುವ ನಗರದ ಕ್ರೌರ್ಯ,ಖಾಸಗಿ ಬದುಕಿನೊಳಗೆ ಮೂಗುತೂರಿಸುವ ಜನ ಸಮುದಾಯದ ತಲೆಹರಟೆ...ಇವೆಲ್ಲವುಗಳ ನಡುವೆ ರಾಜಣ್ಣ ದಂಪತಿಗಳ ಮನೆಯನ್ನು ಹೊಂದುವ.ಹಾಗೂ ಆಮೇಲೆ ಮನೆಯನ್ನು ಹೇಗೋ ಹೊಂದಿದ ಮೇಲೆ ನೆಮ್ಮದಿಯಾಗಿ ಹಾಗೂ ಖಾಸಗಿಯಾಗಿ ಬದುಕುವ ಕನಸು ವಾಸ್ತವದ ಸುಡು ಬಿಸಿಯಲ್ಲಿ ಕರಗಿ ಹೋಗುವುದನ್ನು ಈ ಕಾದಂಬಲರಿಯು ಅನನ್ಯವಾಗಿ ಚಿತ್ರಿಸುತ್ತದೆ.ಮನೆ ಎನ್ನುವ ಸಂಸ್ಥೆಯ ಸುತ್ತ ನಿರ್ಮಿತವಾಗುವ ಮಧ್ಯಮವರ್ಗದ ಜೀವನದ ದುರಂತವನ್ನು ನಗರದ ಹಿನ್ನೆಲೆಯಲ್ಲಿಈ ಬಗೆಯ ನಿಷ್ಠುರತೆಯಲ್ಲಿ ಕಟ್ಟಿಕೊಟ್ಟ ಕೃತಿ ಇನ್ನೊಂದಿಲ್ಲವೆನ್ನಬಹುದು.ಮನುಷ್ಯನ ಖಾಸಗಿತನದ ಬದುಕು ಕಳೆದು ಹೋಗುತ್ತಿರುವ ನಮ್ಮ ಕಾಲದ ನೋವಿನ ಅನುಭವಕ್ಕೆ ಈ ಕೃತಿಯು ಕನ್ನಡಿ ಹಿಡಿದ ಹಾಗಿದೆ.
ಗಿರೀಶ ಕಾಸರವಳ್ಳಿಯವರ "ಮನೆ" ಸಿನೆಮಾವು ಈ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿದೆ.ಹಿಂದಿ ಹಾಗೂ ಕನ್ನಡ-ಈ ಎರಡೂ ಭಾಷೆಗಳಲ್ಲಿ ತಯಾರಾಗಿರುವ ಈ ಸಿನೆಮಾದಲ್ಲಿ ಖ್ಯಾತ ನಟ ನಟಿಯರಾದ ನಾಸಿರುದ್ದೀನ್ ಷಾ,ದೀಪ್ತಿ ನಾವಲ್,ರೋಹಿಣಿ ಹಟ್ಟಂಗಡಿ ಮೊದಲಾದವರು ಅಭಿನಯಿಸಿದ್ದು ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಪ್ರಶಸ್ತಿಯನ್ನು ಗಳಿಸಿರುತ್ತದೆ.
--ಸುಬ್ರಾಯ ಚೊಕ್ಕಾಡಿ.

Friday, July 13, 2018

ಗುರುರಾಜ ಮಾರ್ಪಳ್ಳಿ - ಕಲಾಯಾನ [ ಕಾದಂಬರಿ }


ಕಲಾಯಾನ [ ಕಾದಂಬರಿ }

- ಗುರುರಾಜ ಮಾರ್ಪಳ್ಳಿ

- ಪ್ರಕಾಶಕರು- ಹೊಸ ಸಂಜೆ ಪ್ರಕಾಶನ , ಕಾರ್ಕಳ

- ಪ್ರಕಟಣೆ ವರ್ಷ -2018 , ಬೆಲೆ- rs -100

Kalayaana [ kannada novel by Gururaja Marpally   , published in 2018 , published by Hosa Sanje Prakashana , Karkala , udupi dist









No automatic alt text available.

ಸುಬ್ರಾಯ ಚೊಕ್ಕಾಡಿ - " ಬಿದ್ದಗರಿ " ಸಂಕಲನದ ಕೆ. ರಾಮಚಂದ್ರ {1935 -55 }

ಎಳವೆಯಲ್ಲೇ ನಿಧನರಾದ,ದ.ಕ.ದ ಇಬ್ಬರು ಕವಿಗಳ ಬಗ್ಗೆ ಬರೆಯಬೇಕೆನಿಸುತ್ತದೆ.ಯರ್ಮುಂಜ ರಾಮಚಂದ್ರ(1933-1955) ಮತ್ತುಕೆ.(ಕುಂಞಿಹಿತ್ಲು)ರಾಮಚಂದ್ರ.(1935-1955).ಈ ಇಬ್ಬರು ಕವಿಗಳೂ ಒಂದೇ ತಿಂಗಳ ಅವಧಿಯಲ್ಲಿ ಕ್ಷಯರೋಗಕ್ಕೆ ತುತ್ತಾಗಿ ನಿಧನರಾದರು.
ಅಧ್ಯಾಪಕರೂ,ಪೋಸ್ಟ್ ಮಾಸ್ಟರೂ,ಮಂಗಳೂರಿನಲ್ಲಿ ಪತ್ರಿಕೋದ್ಯೋಗಿಯೂ ಆಗಿದ್ದ ಯರ್ಮುಂಜರು, ತಮ್ಮ"ಯಾರಿಲ್ಲಿಗೆ ಬಂದರು ಕಳೆದಿರುಳು"ಎಂಬ ಪ್ರಸಿದ್ಧ ಕವಿತೆಯುಳ್ಳ "ವಿದಾಯ"ಕವನ ಸಂಕಲನ ಹಾಗೂ "ಚಿಕಿತ್ಸೆಯ ಹುಚ್ಚು"ಕಥಾ ಸಂಕಲನದ ಮೂಲಕ ಸಾಹಿತ್ಯಾಸಕ್ತರಿಗೆ ತಕ್ಕ ಮಟ್ಟಿಗೆ ಪರಿಚಿತರು.ನಿಧನರಾದಾಗ ಅವರ ವಯಸ್ಸು 22.
ಇನ್ನೊಬ್ಬ ಕವಿ ಕೆ.ರಾಮಚಂದ್ರ ಮೈಸೂರಲ್ಲಿ ಬಿ.ಎ(ಆನರ್ಸ್)ಕೊನೆಯ ವರ್ಷದಲ್ಲಿ ಕಲಿಯುತ್ತಿದ್ದಾಗಲೇ ತಮ್ಮ20ನೇವಯಸ್ಸಿನಲ್ಲೇ ನಿಧನರಾದರು.ಅವರ ಕತೆ"ಕೊನೆಯ ಮಾತು" ಪುತ್ತೂರಿನ"ಜನಪ್ರಿಯ ಸಾಹಿತ್ಯ"ಪ್ರಕಟಿಸಿದ "ಮುಂಗಾರು ಮುಗಿಲು"ಕಥಾ ಸಂಕಲನದಲ್ಲಿ ಪ್ರಕಟವಾಗಿತ್ತು.ಆ ಕೃತಿಗೆ ಅ.ನ.ಕೃ ಮುನ್ನುಡಿಯಿತ್ತು ಹಾಗೂ ಅದನ್ನು ಶಿವರಾಮ ಕಾರಂತರಿಗೆ ಅರ್ಪಿಸಲಾಗಿತ್ತು.ರಾಮಚಂದ್ರರ ಪ್ರಕಟಿತ ಕವನ ಸಂಕಲನ"ಬಿದ್ದ ಗರಿ"ಯಲ್ಲಿ 18 ಕವಿತೆಗಳಿವೆ.ಯರ್ಮುಂಜರ ಹಾಗೂ ರಾಮಚಂದ್ರರ ಕವನನ ಸಂಕಲನಗಳಿಗೆ ಮುನ್ನುಡಿ ಬರೆದವರು ಕವಿ ಗೋಪಾಲಕೃಷ್ಣ ಅಡಿಗರು.ಈ ಇಬ್ಬರ ಅಕಾಲ ನಿಧನದ ಹಿನ್ನೆಲೆಯಲ್ಲಿಆ ಎರಡೂ ಸಂಕಲನದ ಹೆಸರುಗಳು,ರಾಮಚಂದ್ರರ ಏಕಮಾತ್ರ ಕತೆಯ ಹೆಸರುಗಳು ತುಂಬಾ ಅರ್ಥಪೂರ್ಣ ಎಂಬುದನ್ನು ಗಮನಿಸಬೇಕು.
ಅಂದಹಾಗೆ ಕೆ.ರಾಮಚಂದ್ರರ ಅಣ್ಣನ ಮಗ ಕೆ.ಶಿವಸುಬ್ರಹ್ಮಣ್ಯ ಈಗ ಬೆಂಗಳೂರಿನ ಉದಯವಾಣಿಯ ಸಂಪಾದಕರು..!
ಸ್ಯಾಂಪಲ್ ಗಾಗಿ ಕೆ.ರಾಮಚಂದ್ರರ ಕವಿತೆಗಳ ಕೆಲವು ಸಾಲುಗಳ ಸಾಲುಗಳು ನಿಮಗಾಗಿ:
ನಾನು ನೀನು ಎಲ್ಲ ಎಲ್ಲ ಬಾನಿನಲ್ಲೆ ನಡೆದು ಬರುವ
ಗರುಡನಿಟ್ಟ ಮೊಟ್ಟೆಯು.
ಬುವಿಯ ಗಿರಿಕಿರೀಟದಲ್ಲಿ ಕೋಡುಗಲ್ಲ ಗೂಡಿನಲ್ಲಿ
ನಮ್ಮ ಭ್ರೂಣ ನಿದ್ರೆಯು.
ನಮ್ಮ ಸಾಕುತಾಯಿ ಮಾಯೆ, ಕಾವು ಕೂರೆ ಗರುಡನೊಂದುನಿಯಮಿಸಿಟ್ಟ ದಾದಿಯು;ನಾವು ಬೆಳೆಯೆ ಮುಗಿಲ ರಾಣಿ ಅಮರಪುತ್ರರುಣ್ಣುವಂಥ
ತುತ್ತ ತರುವ ನೇಮವು..
* * * * *
ಸಾವನಪ್ಪಿ ಚೆಲ್ಲಿ ಹೋದ ಎಲುಬ ಗೂಡ ರಾಶಿಗೆ
ಮಲಯಗಿರಿಯ ಕಳಸದಿಂದ ಅಮೃತ ಧಾರೆ ಸುರಿವೆವು.
ಸುರಿದು ಕಲ್ಪ ವೃಕ್ಷದೊಂದು ಬೀಜ ನೆಗೆವೆವು
ನೆಗೆದು ರೆಕ್ಕೆ ಬಿಚ್ಚಿ ಧರೆಗೆ ತಂಪು ನೆಳಲ ತರುವೆವು.
(ಸುಪ್ತ ಶಕ್ತಿ)
* * * * *
ಯಾವ ದುಃಖಕೊ ಯಾವ ಸುಖಕೋ ಯಾವ ಗೀತಕೊ ಕಾಣೆನು
ಯಾವ ಮೌನಕೊ ಎದೆಯ ದನಿಯೊಂದೇ ಇದೇನಿದು ಅಚ್ಚರಿ!
* * * *
ಏನಿದೇನಿದು?ಯಾವ ಮೊರೆಯನು ಅರುಹುತಿಲ್ಲಿಗೆ ಬಂದಿಹೆ
ಇಂದ್ರ ಲೋಕದ ತುಂಗ ಸ್ಥಾನವೊ?ನಿಮ್ನ ಲೋಕದ ಬಂಧುವೋ?
* * * *
(ಈ ದನಿ)

Image may contain: 1 person, text

ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದ ಬಂಗಾಳಿ ನೀಳ್ಗತೆ -- " ವಾಸನಾ "

ಬಲಾಯಿಚಂದ್ ಮುಖ್ಯೋಪಾಧ್ಯಾಯ { 1899-1979 }  ಠಾಗೋರೋತ್ತರ ಬಂಗಾಳಿ ಸಾಹಿತ್ಯದ ಮುಖ್ಯ ಲೇಖಕರಲ್ಲಿ ಒಬ್ಬರು. ಬನ್ ಫೂಲ್ " ಕಾವ್ಯನಾಮದ ಬಲಾಯಿಚಂದ್ ಅವರು ಬಂಗಾಳಿ ಕಾವ್ಯ , ನಾಟಕ , ಕಾದಂಬರಿ , ಸಣ್ಣಕತೆ ಪ್ರಕಾರಗಳಿಗೆ ಸಮೃದ್ದ ಕೊಡುಗೆ ನೀಡಿದ್ದಾರೆ . ಅವರ 61  ಕಾದಂಬರಿಗಳು , 600 ಸಣ್ಣ ಕತೆಗಳು ಪ್ರಕಟವಾಗಿವೆ .. ಸತ್ಯಚರಣ ಮುಖ್ಯೋಪಾಧ್ಯಾಯ , ಮೃಣಾಲಿನಿದೇವಿ ದಂಪತಿಗಳ ಮಗನಾಗಿ ಬಲಾಯಿಚಂದರು ಹುಟ್ಟಿದ್ದು ಬಿಹಾರದ ಪೂರ್ವೀಯಾ ಜಿಲ್ಲೆಯ ಮೊನಿಹಾರಿಯಲ್ಲಿ{1899}. ಸತ್ಯಚರಣ್ ಬಿಹಾರದ ಪೂರ್ವಿಯಾ ಜಿಲ್ಲಾಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದರು. ಬಲಾಯಿಚಂದರು 1928 ರಲ್ಲಿ  ಕಲ್ಕತ್ತ ಮೆಡಿಕಲ್ ಕಾಲೇಜಿನ ಎಮ್. ಬಿ. ಬಿ. ಎಸ್ ಪದವೀಧರರಾದರು. ಮುನಿರಾಬಾದ್ ನ ಮುನಿಸಿಪಲ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಬಲಾಯಿಚಂದರು ಮುಂದೆ ಭಾಗಲ್ಪುರದಲ್ಲಿ  ಸ್ವಂತ ಕ್ಲಿನಿಕ್ ಆರಂಭಿಸಿದರು .

 ಬಲಾಯಿಚಂದರ ಕಾದಂಬರಿಗಳನ್ನು ಆಧರಿಸಿದ ಎಂಟು ಸಿನಿಮಾಗಳಿವೆ . ಅವುಗಳಲ್ಲಿ " ಭುವನ್ ಶೋಮ್ " { 1960 } , " ಅಗ್ನೀಶ್ವರ " ಮತ್ತು " ಅರ್ಜುನ್ ಪಂಡಿತ್ "  ಪ್ರಸಿದ್ದಿ ಗಳಿಸಿವೆ.   ಮೃಣಾಲ್ ಸೆನ್ ನಿರ್ದೇಸಿದ ’ ಭುವನ್ ಶೋಮ್ "  ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಮಧುಸೂದನ "{1940 -  ಮೈಖೇಲ್ ಮಧುಸೂಧನ ದತ್ತರ ಜೀವನ ಚರಿತ್ರೆ.} , " ವಿದ್ಯಾ ಸಾಗರ "{ 1941  -ಈಶ್ವರಚಂದ್ರ ವಿದ್ಯಾ ಸಾಗರ ಅವರ ಜೀವನ ಚರಿತ್ರೆ } ಗಳನ್ನು ಬರೆದಿರುವ ಬಲಾಯಿಚಂದರು ತನ್ನ ಆತ್ಮಕತೆಗೆ " ಪಶ್ಚಾತ್ತಾಪ " ಎಂಬ ಶೀರ್ಷಿಕೆ ನೀಡಿದ್ದಾರೆ.. 1975 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡಿದ ಬಲಾಯಿಚಂದರ ಸಮಗ್ರ ಕೃತಿಗಳು ಅಂತರ್ಜಾಲದಲ್ಲಿ ಲಭ್ಯ ಇವೆ.
                                                  ೨
   ಎಮ್. ಹರಿದಾಸ ರಾವ್  ಕನ್ನಡದ ಅಲಕ್ಷಿತ ಲೇಖಕರಲ್ಲೊಬ್ಬರು. ಹರಿದಾಸ ರಾವ್ ಅವರು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದ  ಸರ್ವೋದಯ ಸಾಹಿತ್ಯಮಾಲೆಯಲ್ಲಿ ಪಿ. ವಿ. ಆಚಾರ್ಯ { ಪಾ. ವೆಂ. ಆಚಾರ್ಯ} ರ  " ವಾಸನಾ "  { ಬನ್ ಫೂಲ್ ಅವರ ಬಂಗಾಳಿ ಕತೆಯ ಆಧಾರದಿಂದ } 1950 ರಲ್ಲಿ ಪ್ರಕಟವಾಗಿದೆ. .ಪಾ. ವೆಂ . ಆಚಾರ್ಯರು { 1915- 1992 }  ತನ್ನ  35  ನೆಯ ವಯಸ್ಸಿನಲ್ಲಿ ಈ ನೀಳ್ಗತೆಯನ್ನು ಭಾಷಾಂತರಿಸಿದ್ದಾರೆ . ಬಂಗಾಳಿ ಭಾಷೆ ಕಲಿತಿದ್ದ ಪಾ.ವೆಂ ಮೂಲ ಬಂಗಾಳಿಯಿಂದಲೇ ಈ ಕೃತಿಯನ್ನು ಅನುವಾದಿಸಿರಬಹುದು.
     ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳಿಯ ಶರತ್ ಚಂದ್ರ , ಬಂಕಿಮ ಚಂದ್ರ , ಮತ್ತು ರವೀಂದ್ರನಾಥ ಟಾಗೋರ ಅವರ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಪಾ.ವೆಂ .ಆಚಾರ್ಯರು ಬಂಗಾಳಿಯ ಹೊಸ ಲೇಖಕರೊಬ್ಬರನ್ನು - ಬಲಾಯಿಚಂದ ಮುಖ್ಯೋಪಾಧ್ಯಾಯ - ಕನ್ನಡಕ್ಕೆ ಪರಿಚಯಿಸಿದರು .
 ಬಲಾಯಿಚಂದರು ತನ್ನ ಕಥನ ತಂತ್ರ ಮತ್ತು ಪಾತ್ರಗಳ ಅಂತರಂಗ ಶೋಧದದಿಂದ ಖ್ಯಾತರಾದ ಲೇಖಕ . ’ ವಾಸನಾ ’ ನೀಳ್ಗತೆಯಲ್ಲೂ ಒಂದು ವಿನೂತನ ಕಥನ ತಂತ್ರ ಕಾಣಿಸುತ್ತದೆ .’ ವಾಸನಾ ದ ’ ದ ನಿರೂಪಕ ಒಬ್ಬ ಸರಕಾರಿ ಆಸ್ಪತ್ರೆಯ   ಡಾಕ್ಟರ್. ತನ್ನ ಕರ್ತವ್ಯಕ್ಕಾಗಿ  ನೂರಾರು ಹೆಣಗಳ ಮರಣೋತ್ತರ ಪರೀಕ್ಷೆ ಮಾಡಿದ್ದಾನೆ. ನಿದ್ರೆ ಬರದ ಒಂದು ರಾತ್ರಿ ಅವನಿಂದ ಸಿಗಿಸಿಕೊಡ ಹಲವು ಪಾತ್ರಗಳು ಅವನ ಬಳಿ  ಬಂದು ತಮ್ಮ ಕತೆ ವಿವರಿಸುತ್ತವೆ . ಇಲ್ಲಿ ಭಗ್ನ ಪ್ರಣಯ , ದಾಂಪತ್ಯೇತರ ಸಂಬಂಧ , ಬಡತನ , ಹೆಣ್ಣಿನ ಬಣ್ಣವನ್ನು ಕುರಿತ ಪೂರ್ವಗ್ರಹ , ಕೌಟುಂಬಿಕ ಕ್ರೌರ್ಯ , ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಹಲವು ದಾರುಣ ಕತೆಗಳಿವೆ. ವಿದೇಶಿ ಪಸ್ತ್ರಗಳ ಬಹಿಷ್ಕಾರ ಚಳುವಳಿಯಿಂದ ಒಬ್ಬನ ಬಟ್ಟೆ ಅಂಗಡಿ ದಿವಾಳಿಯಾದ ಪ್ರಸ್ತಾಪ - ಇದು ಸ್ವಾತಂತ್ರ್ಯ ಪೂರ್ವದ ಕತೆ ಎಂಬುದನ್ನು ಸೂಚಿಸುತ್ತದೆ . ಪುರುಷ ಪ್ರಧಾನ ಸಮಾಜದ ಗಂಡು  ಹೆಣ್ನಿ ನ ಸಂಕೀರ್ಣ ಸಂಬಂಧಗಳನ್ನು ಈ ನೀಳ್ಗತೆ ಅನಾವರಣ ಗೊಳಿಸುತ್ತದೆ . ಸೇಡು ಹಾಗೂ ಕೇಡಿನ ,’ ಭದ್ರಲೋಕ’ ದ ಅಭದ್ರ ದಾಂಪತ್ಯ ವ್ಯವಸ್ಥೆಯ ವಿವಿಧ ಕರಾಳ ಮುಖಗಳನ್ನು ಈ ನೀಳ್ಗತೆ ಚಿತ್ರಿಸುತ್ತದೆ .
   ಈ ನೀಳ್ಗತೆಯ ಒಬ್ಬಳು , ಹೆಂಗಸರ ಅಸಹಾಯಕ ಸ್ತಿತಿಯನ್ನು ಹೀಗೆ ವಿವರಿಸುತ್ತಾಳೆ --"ನಾನು ಬದುಕಿದ್ದಾಗ ನೋಡಿದ ಮಟ್ಟಿಗೆ   ಗಂಡಸರು ನಮ್ಮನ್ನು ತೆಗೆದುಕೊಂಡು ಬರಿ ಚಿನ್ನಾಟ ಆಡುತ್ತಾರೆ.. ನಾವು ಹೆಂಗಸರು ಫುಟ್ ಬಾಲ್ . ಅವರು ಪಟುಗಲಾದ ಪಂದ್ಯಾಟಗಾರರು . "    ಹದಿಮೂರರ ಹರೆಯದಲ್ಲಿ " ಪತಿದೇವರನ್ನು " ಕಳೆದುಕೊಂದ ಯುವತಿ , ವಿಧವೆಯರರ ಪಾಡನ್ನು ಕುರಿತು  " ನಮ್ಮ ದೇಶದಲ್ಲಿ ಸತೀ ಸಹಗಮನ ಪದ್ದತಿ ಇತ್ತಲ್ಲ ಅದೇ ಸುಖವಿತ್ತು ನೋಡಿರಿ. ಗಂಡನ ಜತೆಗೇ ಹೆಂಡತಿಯೂ ಸುಟ್ಟು ಹೋಗುತ್ತಿದ್ದಳು . ಸರಿ. ಹೀಗೆ ಬೆಂದು ಬೆಂದು ಕೊರಗಿ ಕೊರಗಿ ಸಾಯುವ ಅವಸ್ಥೆ ಯಾರಿಗೆ ಬೇಕಿತ್ತು ? ಈ ದೇಶದ ಮನೆ ಮನೆಯಲ್ಲಿಯೂ ವಿಧವೆಯರು ಬೆಂದು ಬೆಂದು ಸಾಯುತ್ತಿದ್ದಾರೆ. ಬೆಂಕಿಯ ರೂಪ ಮಾತ್ರ ಬೇರೆ- ಅದು ಚಿತಾನಲ , ಇದು ವ್ಯಥಾನಲ " ಹುಚ್ಚಿ ಹೆಂಡತಿಯನ್ನು ಅಟ್ಟದ ಮೇಲೆ ಬಂಧಿಸಿಟ್ಟು , ತನ್ನ ಏಕಮಾತ್ರ ಪುತ್ರನನ್ನು ಮನೆ ಪಾಥದವನಿಗೆ ಒಪ್ಪಿಸಿ , ತನ್ನ ಲಂಪಟಲೀಲೆಗೆ ಹೊರಡುವ ಶ್ರೀಮಂತನ ಚಿತ್ರ ಕಣ್ಣಿಗೆ ಕಟ್ಟುವಂತಿದೆ.
                      ಬಡರೋಗಿಗಳನ್ನು ಅಲಕ್ಷಿಸುವ ಸರಕಾರಿ ಆಸ್ಪತ್ರೆಯ ವರ್ಣನೆಯಲ್ಲಿ , ವೈದ್ಯ ವೃತ್ತಿಯಲ್ಲಿದ್ದ ಲೇಖಕ ಬಲಾಯಿಚಂದರ   ವೃತ್ತಿ ವಿಮರ್ಸೆ ತೀಕ್ಷ್ಣ ವಾಗಿದೆ.’ . ವಾಸನಾದಲ್ಲಿ ’ ದಲ್ಲಿ ಒಂದು ಕಲಾತ್ಮಕ  ಸಿನಿಮಾದ ಪಠಯ ನಿಚ್ಚಳವಾಗಿ ಕಾಣಿಸುತ್ತದೆ..’ ವಾಸನಾ ’ ಶಬ್ದಕ್ಕಿರುವ ಹಿಂದಿನ ಜನ್ಮದ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ , ಕಲ್ಪನೆ , ಬಯಕೆ , ಸುಗಂಧ , ದುರ್ಗಂಧ , ಜಾಡು - ಈ ಎಲ್ಲ ಅರ್ಥಗಳನ್ನೂ ಈ ಕಾದಂಬರಿ  ಧ್ವನಿಸುತ್ತದೆ. ಪಾ. ವೆಂ. ಆಚಾರ್ಯರ ಭಾಷಾಂತರ ಸ್ವತಂತ್ರ ಕೃತಿಯಂತೆ ಓದಿಸಿ ಕೊಂಡು ಹೋಗುತ್ತದೆ. ಮೂಲ ಕೃತಿ ಓದಲು ನನಗೆ ಬಂಗಾಳಿ ಭಾಷೆ ತಿಳಿದಿಲ್ಲ .
                                                             ೩
     ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದಿರುವ ’ ವಾಸನಾ  ದ ವಸ್ತು ಕನ್ನಡದ ಎರಡು ಕೃತಿಗಳನ್ನು ನೆನಪಿಗೆ ತರುತ್ತದೆ.. ಆಸ್ಪತ್ರೆಗಳ ದುಸ್ಥಿತಿಯ ಚಿತ್ರಣ ನೀಡುವ " ಶವದ ಮನೆ " ಚದುರಂಗರ  ಪ್ರಸಿದ್ದ ಕತೆಗಳಲ್ಲಿ ಒಂದು.’ ಸಾವಿನ ದಶಾವತಾರ{ 2017- ಕೆ. ಸತ್ಯನಾರಾಯಣ }  ಕಾದಂಬರಿಯ ನಿರೂಪಕ ಶವ ಸಂಸ್ಕಾರ ನಿರ್ವಹಣೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಇದೊಂದು ಹೊಸ ವಸ್ತು ಇರುವ,  ಕಾಡುವ ಕಾದಂಬರಿ
            ಈ ಮುನ್ನುಡಿ ಬರಿಯುವ ಅವಕಾಶ ನೀಡಿದ ಪ್ರೊ/ ರಾಥಾ ಕೃಷ್ಣ ಆಚಾರ್ಯರಿಗೆ ಅಭಿವಂದನೆಗಳು .

                                     ಮುರಳೀಧರ ಉಪಾಧ್ಯ ಹಿರಿಯಡಕ
                                        26- 3-2018
  

Monday, July 2, 2018

ಜಿ . ಎನ್. ಆಶೋಕ ವರ್ಧನ - ಮಣ್ಣಪಾಪು ಮನೆ ಮತ್ತು ಕಪ್ಪೆ ಶಿಬಿರ

ಅತ್ರಿ ಬುಕ್ ಸೆಂಟರ್: ಮಣ್ಣಪಾಪು ಮನೆ ಮತ್ತು ಕಪ್ಪೆ ಶಿಬಿರ: ನಾವು ಬೆಳಿಗ್ಗೆ ಹತ್ತು ಗಂಟೆಗೆ ಕಾರೇರಿ ಮಂಗಳೂರು ಬಿಟ್ಟೆವು. ಉಡುಪಿ ಹೆದ್ದಾರಿಯೋಟಕ್ಕೆ ಪಡುಬಿದ್ರೆಯಲ್ಲಿ ಬಲ ಹೊರಳಿಕೆ, ಬೆಳ್ಮಣ್ಣಿನಲ್ಲಿ ಚಾ ವಿರಾಮ. ನನ್ನ ಜತೆ...