ರಾಜೇಂದ್ರ ಪ್ರಸಾದ್ - ಬೊಳುವಾರು ಅವರ ಕಾದಂಬರಿ -- " ಉಮ್ಮಾ "



ಇಸ್ಲಾಂ ಭಾರತಕ್ಕೆ ಬಂದು ಹತ್ತತ್ತಿರ ಒಂದೂಕಾಲು ಸಾವಿರ ವರ್ಷಗಳಾಗುತ್ತಿವೆ. ಈ ನೆಲದ ಸಂಸ್ಕೃತಿ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಅಡುಗೆಯಾದಿಯಾಗಿ ಸರ್ವಕ್ಷೇತ್ರಗಳಲ್ಲೂ ಇಸ್ಲಾಂ/ಪರ್ಷಿಯನ್ ನ ಪ್ರಭಾವಗಳನ್ನು ಗುರುತಿಸಬಹುದಾಗಿದೆ. ಆದರೆ ಈ ನೆಲದ ಇಸ್ಲಾಮೇತರರಿಗೆ 'ಇಸ್ಲಾಂ' ಕುರಿತು ಎಷ್ಟು ತಿಳಿದಿದೆಯೆಂದು ಹುಡುಕಿದರೆ ಉತ್ತರ ಬಹಳ ನಿರಾಶದಾಯಕವಾಗಿದೆ. ಭಾರತೀಯ ಪುರಾಣ, ಕಾವ್ಯಗಳು ಬಗ್ಗೆ ಎಲ್ಲಾ ಮತಧರ್ಮದವರೂ ಮಾತಾಡಬಲ್ಲರು.. ರಾಮನ ಬಗ್ಗೆ‌, ಕೃಷ್ಣನ‌ ಬಗ್ಗೆ, ಅವರ‌ ಹೆಂಡತಿಯರ ಬಗ್ಗೆ ; ಆದರೆ ಪೈಗಂಬರ್ ಯಾರು ಅವರ ಹೆಂಡತಿಯರಾರು? ಎಂದು ಕೇಳಿದರೆ ನಮಗೇ ಗೊತ್ತೇ ಇಲ್ಲ. ಇಸ್ಲಾಂ‌ ಇತಿಹಾಸ ನಮಗೆ ಗೊತ್ತಿಲ್ಲ, ಅದನ್ನು ಗೊತ್ತು ಮಾಡಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ.‌ ಎನ್ನುವ ಮಟ್ಟಿಗೆ ಸಮಾಜವನ್ನು ಭ್ರಷ್ಟಗೊಳಿಸಿ, ಅಮಾನತು ಮಾಡಿಬಿಟ್ಟಿದ್ದೇವೆ.
ಕನ್ನಡದಲ್ಲಂತೂ ಇಸ್ಲಾಂನ ಇತಿಹಾಸ ಕುರಿತಂತೆ ಸೃಜನಶೀಲ ಕೃತಿ ಬಂದಿದ್ದೇ ಇಲ್ಲ. ಯಾಕಂದರೆ ಅಷ್ಟು ಸ್ವಾತಂತ್ರ್ಯ ತೆಗೆದುಕೊಂಡು ಬರೆವ ಲೇಖಕ ನಮ್ಮ‌ ಭಾಷೆಗಷ್ಟೇ ಅಲ್ಲ, ಅನ್ಯ ಭಾಷೆಗಳಲ್ಲೂ ಇಲ್ಲ. ಆದರೆ ಅಂತಹ‌ ಒಂದು ಸಾಹಸವನ್ನು 'ಓದಿರಿ' ಕಾದಂಬರಿಯ ಮೂಲಕ ಮಾಡಿದ್ದು ಬೊಳುವಾರು ಮಹಮದ್ ಕುಂಞ ಅವರು. ಆದಾದ ನಂತರ ಇದೀಗ ' ಉಮ್ಮಾ ' ಮೂಲಕ ಪ್ರವಾದಿ ಮಹಮ್ಮದರ ಕುಟುಂಬದ ಹೆಣ್ಣುಮಕ್ಕಳು ಕಂಡ ಪ್ರವಾದಿಯವರ ಬಗ್ಗೆ/ ಇಸ್ಲಾಂ‌ ಬಗ್ಗೆ , ಅದು ಬೆಳೆದು ಬಂದ ಬಗ್ಗೆ ಬರೆದಿದ್ದಾರೆ. ಅಪಾರ ಓದಿನ- ಅಧ್ಯಯನದ ಶ್ರಮ ಈ ಕಾದಂಬರಿ‌ ಹಿಂದೆ ಇದೆ. ಒಂದೂವರೆ ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಕುರಿತು ಅದು ವ್ಯಕ್ತಿಗತ ನೆಲೆಯಲ್ಲಿ ಕಾವ್ಯದಂತೆ ಕಟ್ಟುತ್ತಾ ಹೋಗುವುದು ಸವಾಲಿನ- ಸಾಹಸದ ಕೆಲಸ. ತೀರಾ ವಿಭಿನ್ನವಾದ ದೇಶ-ಕಾಲ ಎರಡರಲ್ಲೂ ಬದುಕುತ್ತಿರುವ ಹೊತ್ತಿನಲ್ಲಿ ಆವತ್ತಿನ ದೇಶಕಾಲವನ್ನು ಮುಂದಿಟ್ಟುಕೊಟ್ಟು ಭೌಗೋಳಿಕ ವಿವರಗಳು, ವ್ಯಕ್ತಿಗಳು, ಸಂದರ್ಭ ಮುಂತಾದವನ್ನು ಕಟ್ಟೋದು ಅಂತಿಂತಹದಲ್ಲ!‌ ಪ್ರತಿ ಸಂದರ್ಭಕ್ಕೂ ಅದರದೇ ವಿವರಣೆಗಳಿವೆ. ಅದರದೇ ಐತಿಹಾಸಿಕ ಪುರಾವೆಗಳೂ ಇವೆ. ಅದಾಗ್ಯೂ ಲೇಖಕರು ಇದನ್ನು ಕಲ್ಪನೆ ಎನ್ನುತ್ತಾರೆ. ಓದುಗನಿಗೆ ಯಾವುದು ವಾಸ್ತವ ಯಾವುದು ಕಲ್ಪನೆ ಎಂದು ಕಂಡುಹಿಡಿಯುವುದು ಕಷ್ಟವಿಲ್ಲ.‌ ಮತ್ತು ಕಲ್ಪನೆಯ ಭಾಗವಿಲ್ಲದೆ ಇತಿಹಾಸವನ್ನು ಬರೆಯಲಾಗದು.
ಉಮ್ಮಾ - ಕಾದಂಬರಿಗೆ ಇರುವ ವಿಶೇಷ 'ಹೆಣ್ಣು'. ಪ್ರವಾದಿಯವರ ಹೆಂಡತಿಯರು, ಮಕ್ಕಳು, ಸಂಬಂಧಿಗಳು, ಕೆಲಸದವರು ಹೀಗೆ ಸಾಲುಸಾಲು ಮಹಿಳೆಯರ ಪಟ್ಟಿಯೇ ಈ ಕಾದಂಬರಿಯ ಉದ್ದಕೂ ನಮಗೆ ಸಿಗುತ್ತಾ ಹೋಗುತ್ತದೆ. ಈ ಒಂದೊಂದು ಪಾತ್ರವೂ 'ಪ್ರವಾದಿಯವರ ಜೀವನದಲ್ಲಿ ಎಂತಹ ಮುಖ್ಯಪಾತ್ರವನ್ನು ವಹಿಸಿದೆ' ಎಂಬುದನ್ನು ಓದಿಯೇ ತಿಳಿಯಬೇಕು. ಅರೇಬಿಕ್ ಭಾಷೆ ಮತ್ತು ಪರಿಸರಕ್ಕೆ ದೂರದಲ್ಲಿರುವ ನಮಗೆ ವ್ಯಕ್ತಿಗತ ಹೆಸರುಗಳನ್ನು, ಭೌಗೋಳಿಕ ಪ್ರದೇಶಗಳ ಹೆಸರುಗಳನ್ನು ಮೊದಲ ಓದಿಗೆ ನೆನೆಪಿಟ್ಟುಕೊಳ್ಳುವುದು ಕಷ್ಟ. ಮೊದಲೇ ಹೇಳಿದಂತೆ ಈ ಇಡೀ ಪರಿಸರವೇ ನಮಗೆ ಹೊಸದು. ಮರಳು, ಬಿಸಿಗಾಳಿ, ಅಡುಗೆ, ಉಡುಗೆ, ಹೆಸರು, ಸಂಪ್ರದಾಯಗಳು, ಹೋರಾಟಗಳು ಎಲ್ಲವೂ ನಮಗೆ ಹೊಸವು. ಯಾಕಂದರೆ ಈ ಒಂದೂಕಾಲು ಸಾವಿರ ವರ್ಷಗಳಲ್ಲಿ ಇಷ್ಟು ಅಚ್ಚಕಟ್ಟಾದ ಪ್ರಯತ್ನವು ನಡೆದಿರಲಿಕ್ಕಿಲ್ಲ. ಅದರಲ್ಲೂ ಇಸ್ಲಾಂ ಮತಸ್ಥರು ಹೆಣ್ಣುಮಕ್ಕಳ ಮೂಲಕ ಪ್ರವಾದಿಯವರ ಜೀವನವನ್ನು ನೋಡುವ ಪಯತ್ನ ಮಾಡುವುದು ಕಷ್ಟಸಾಧ್ಯ! ಅದಕ್ಕಿರುವ ಕಾರಣಗಳು ನಮಗೆಲ್ಲಾ ಗೊತ್ತಿರುವಂತವೇ ಆಗಿವೆ.
ಕನ್ನಡ ಅಥವಾ ಸಂಸ್ಕೃತ ಮಹಾಕಾವ್ಯಗಳಿಗಿರುವಂತೆ ಈ ಕಥನಕ್ಕೆ ' ಕಥನಕಾರನ ಮೂಲಕ ಸಿಗುವ ಪ್ರವೇಶಿಕೆ ಕೊನೆಯಲ್ಲಿ ಅವನ‌ ಮೂಲಕವೇ ಮುಕ್ತಾಯವಾಗುತ್ತದೆ.‌ ಇಡೀ ಕಥನವನ್ನು ಇತಿಹಾಸದ ಪುಟಗಳನ್ನು ಆಯ್ದು ನಿಧಾನವಾಗಿ ಸಜ್ಜುಗೊಳಿಸಿದ ಸಜ್ಜಿಗೆಯಂತೆ ನಿರೂಪಿಸಲಾಗಿದೆ. ಪ್ರತಿಭಾಗವೂ ಒಬ್ಬೊಬ್ಬ ಹೆಣ್ಣುಮಗಳ ಮೂಲಕ ಕಥನವನ್ನು ಕಟ್ಟಿಕೊಂಡಿದೆ. ಅವರೆಲ್ಲಾ ಮಾತಾಡಿದಂತೆಯೇ ಕಥನ ಸಾಗುತ್ತಲೇ ಇರುತ್ತದೆ.
ಸಾಹಿತ್ಯಕ ಮಹತ್ವ ಮತ್ತು ವಿಮರ್ಶೆಯ ದೃಷ್ಟಿಯಿಂದ ಹೇಳಬೇಕಾದ ಮಾತುಗಳು ಬಹಳ ಇವೆ. ಹತ್ತತ್ತಿರ ಹತ್ತು ತಿಂಗಳ ಹಿಂದೆ ಅರ್ಧವಾಗಿದ್ದ ಈ ಕಾದಂಬರಿಯನ್ನು ಓದಿದ್ದೆ. ನನ್ನ ಒಂದಷ್ಟು ಮಾತು ತಿಳಿಸಿದ್ದೆ. ಇದೀಗ ಪೂರ್ಣವಾಗಿ ಫೆಬ್ರವರಿಯಲ್ಲಿ ಬಂದು ತಲುಪಿದ 'ಉಮ್ಮಾ' ಕಾದಂಬರಿಯನ್ನು ಪೂರ್ಣವಾಗಿ ಓದಲು ಸಾಧ್ಯವಾಗಿರಲಿಲ್ಲ. ಅರ್ಧಕ್ಕೆ ಬರುವುದು ನಂತರ ನಿಲ್ಲುವುದು ಹೀಗೇ ಈಗಲೂ ಮತ್ತೊಮ್ಮೆ ನಿಲ್ಲದ ನಿರಂತರವಾದ ಒಂದು ಪೂರ್ಣವಾದ ಮತ್ತೆ ಬೇಕು ಅನಿಸಿದೆ.
ಸಂಕಥನದಲ್ಲಿ ಈ ಕುರಿತ ಬರಹ ಪ್ರಕಟವಾಗುವುದು. ಅಷ್ಟರೊಳಗೆ ಕಾದಂಬರಿಯೂ ನಿಮಗೆಲ್ಲಾ ಓದಲು ಸಿಗುವುದು.‌
 {Rajendra Prasad ಅವರ Face Book  ನಿಂದ }

ರಾಜಾರಾಮ ತಲ್ಲೂರ್ --ಹಾರಿ ಬಂದ ಹಾರು ಬೂದಿಗೊಂದು ಬಹಿರಂಗ ಪತ್ರ

ಹಾರಿ ಬಂದ ಹಾರುಬೂದಿಗೊಂದು ಬಹಿರಂಗ ಪತ್ರ!
- - - - - - - - - - - -
ಆಗಸ್ಟ್ 3-4 ರಂದು ಉಡುಪಿ ಮಣಿಪಾಲಗಳಲ್ಲಿ ಸುರಿದಿರುವ ಹಾರುಬೂದಿ ಎಂದು ನಾವಂದುಕೊಂಡಿರುವ ನಿಗೂಢ ವಸ್ತುವೇ… ನಮಸ್ಕಾರ!
ನಾಡಿನ ಮಾಲಿನ್ಯ ನಿಯಂತ್ರಣ ಮಂಡಳಿಯು ನೀನು “ಸಿಲಿಕಾ” ಎಂದು ತೀರ್ಮಾನ ಕೊಟ್ಟಿದೆ. ಅದಕ್ಕೆಂದೇ “ಮಣಿಪಾಲದ ಭೂಗರ್ಭತಜ್ನರು ಮತ್ತು ಎನ್ ಐ ಟಿ ಕೆ ಸುರತ್ಕಲ್ಲಿನ ತಜ್ನರು ಅದು ಸಿಲಿಕಾ ಎಂದು ಗುರುತಿಸಿದ್ದಾರೆ” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದು ಬೆಳಗ್ಗೆ ನೋಡಿದ್ದೇನೆ.
ನೀನು ಗಲ್ಫಿನಿಂದ ಬಂದದ್ದು ಹೌದಾದರೆ, ನಿನಗೆ ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ಉಡುಪಿಯೇ ಏಕೆ ಕಣ್ಣಿಗೆ ಬಿತ್ತು ಎಂದು ಗೊತ್ತಾಗಲಿಲ್ಲ. ಹೆಚ್ಚಿನಂಶ ಇಲ್ಲಿನವರು ಬಹಳ ಮಂದಿ ದುಬಾಯಿಯಂತಹ ಕಡೆ ಇರುವವರ ಮೂಲ ಉಡುಪಿ ಆಗಿರುವುದರಿಂದ ಅವರ ಮಣ್ಣಿನ ಋಣ ತೀರಿಸಲು ನೀನು ಇಲ್ಲಿಗೆ ಬಂದದ್ದಿರಬೇಕು ಎಂದುಕೊಂಡಿದ್ದೇನೆ. ಇರಲಿ. ಗಲ್ಫಿನಲ್ಲಿ ಎಲ್ಲವೂ ಕುಶಲವೇ? ಕ್ಷೇಮವೇ?!!
ಆದರೂ ನೀನು 2500ಕಿಲೋಮೀಟರ್ ಗಳಷ್ಟು ದೂರಕ್ಕೆ ಗಾಳಿಗೆ ಎಲ್ಲೂ ಚದುರದೇ, ನೇರವಾಗಿ ಉಡುಪಿಗೇ ಬಂದು ತಲುಪಿದ್ದಕ್ಕಾಗಿ ನಿನಗೆ ವಿಶೇಷ ಪ್ರಶಸ್ತಿಯೊಂದನ್ನು ಕೊಡಲು ಶಿಫಾರಸು ಮಾಡುತ್ತೇನೆ. ಹೇಗೂ ರಾಜ್ಯೋತ್ಸವ ಹತ್ತಿರ ಬರ್ತಾ ಉಂಟು!!
ಅಂದಹಾಗೆ ನಾನಂತೂ ನಿನ್ನನ್ನು ಹಾರುಬೂದಿ ಎಂದುಕೊಂಡಿದ್ದೆ. ನನ್ನಂತೆ ಬಹಳ ಜನ ನಿನ್ನನ್ನು ಹಾರುಬೂದಿ ಎಂದುಕೊಂಡಿದ್ದೆವು. ಯಾಕೆ ಗೊತ್ತಾ? ಈಗ ಇಂಟರ್ನೆಟ್ ಯುಗದಲ್ಲಿ ಏನು ಕಂಡರೂ ಗೂಗಲ್ ಮಾಡುವ ಚಟ ನಮಗೆ. ಹಾರು ಬೂದಿಯ ಬಗ್ಗೆ ಗೂಗಲಣ್ಣ ಏನಂದ ಗೊತ್ತಾ?
ಸುಡುವ ಕಲ್ಲಿದ್ದಲು ಎಲ್ಲಿಂದ ಬಂದಿದೆ ಎಂಬುದನ್ನಾಧರಿಸಿ, ಅದರ ಹಾರುಬೂದಿಯಲ್ಲಿ ಬೇರೆ ಬೇರೆ ಅಂಶಗಳಿರಬಹುದು. ಆದರೆ ಈ ಮೂರು ಅಂಶಗಳು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಅವು ಯಾಕಿರುತ್ತವೆ ಎಂದರೆ, ಹಲವು ಬಗೆಯ ಖನಿಜಾಂಶಗಳಿರುವ ಕಲ್ಲಿನ ಪದರಗಳಡಿಯಲ್ಲೇ ಈ ಕಲ್ಲಿದ್ದಲು ಸಿಗುವುದು!. ಆ ಮೂರು ಅಂಶಗಳು ಯಾವುವೆಂದರೆ:
೧. ಹರಳು ಗಟ್ಟಿದ ಅಥವಾ ಹರಳುಗಟ್ಟಿರದ “ಸಿಲಿಕಾ” (SiO2)
೨. ಅಲುಮೀನಿಯಂ ಆಕ್ಸೈಡ್ (Al2O3)
೩. ಕ್ಯಾಲ್ಷಿಯಂ ಆಕ್ಸೈಡ್ (CaO)
ಇವಲ್ಲದೇ ಸಣ್ಣ ಪ್ರಮಾಣದಲ್ಲಿ ಆರ್ಸೆನಿಕ್, ಬೆರಿಲಿಯಂ, ಬೊರಾನ್, ಕ್ಯಾಡ್ಮಿಯಂ, ಕೋರಿಯಂ, ಕೋಬಾಲ್ಟ್, ಸೀಸ, ಮ್ಯಾಂಗನೀಸ್, ಪಾದರಸ, ಮಾಲಿಬ್ಡಿನಂ, ಸೆಲೆನಿಯಂ, ಸ್ಟ್ರೋಂಟಿಯಂ, ಥಾಲಿಯಂ, ವಾನಾಡಿಯಂ ಇತ್ಯಾದಿ ಲೋಹಾಂಶಗಳು, ವಿಷಕಾರಿ ರಾಸಾಯನಿಕಗಳೂ ಇರಬಹುದು.
ಸಿಲಿಕಾ ಚರ್ಮಕ್ಕೆ ತಾಗಿದಾಗ ಚರ್ಮದ ಕಿರಿಕಿರಿ, ಶ್ವಸಕೋಶದ ತೊಂದರೆಗಳು, ಸಿಲಿಕೋಸಿಸ್ ಎಂಬ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಜೊತೆಗೆ ಹರಳು ಸಿಲಿಕಾ ಕ್ಯಾನ್ಸರ್ ಕಾರಕ ಎಂದು ಅಮೆರಿಕದ ತಜ್ನರು ಕಂಡುಕೊಂಡಿದ್ದಾರೆ.
ಡಿಯರ್ ಸಿಲಿಕಣ್ಣ, ನೀನು ಗಲ್ಫಿನಿಂದ ಬಂದದ್ದೇ ಹೌದಾದರೆ ನಿನ್ನ ಇಮಿಗ್ರೇಷನ್ ದಾಖಲೆಗಳನ್ನೂ ಪಾಸ್ ಪೋರ್ಟನ್ನೂ ತೋರಿಸಿಬಿಡು, ಜನ ನಿನ್ನನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲ. ಇಲ್ಲದಿದ್ದರೆ ಜನ ಏನೆಂದುಕೊಳ್ಳುತ್ತಾರೆ ಗೊತ್ತಾ?
ಹಾರುಬೂದಿ ಮಳೆ ಬಂದಾಗ ಉಡುಪಿಯ ಮೇಲೆ ಉದುರಿತು. ಅದರಲ್ಲಿದ್ದ ಬೇರೆ ರಾಸಾಯನಿಕಾಂಶಗಳು ಒಂದೋ ಮಳೆ ನೀರಿನಲ್ಲಿ ತೊಳೆದುಹೋದವು, ಇಲ್ಲವೇ ಕರಗಿಹೋದವು, ಕಡೆಗೆ ಪರಿಸರ ಮಾಲಿನ್ಯದವರು ಬಂದು ಮಾದರಿ ಸಂಗ್ರಹಿಸುವಾಗ ಕೇವಲ “ ಸಿಲಿಕಾ” ಅಂಶ (ನಾವಿಲ್ಲಿ ಅದನ್ನು ಸೂಕ್ಷ್ಮ ಮರಳು ಧೂಳಿನ ಕಣಗಳು ಎಂದೂ ಕರೆಯುತ್ತೇವೆ!) ಮಾತ್ರ ಉಳಿಯಿತು ಅಂತ!
ಸುಮ್ಮನೇ ಉಡುಪಿಗೂ ನಿನಗೂ ಗೊಂದಲ, ಮನಸ್ಥಾಪ ಬೇಡ. ಹಾಗಾಗಿ ದಯಮಾಡಿ ನೀನು ಯಾರೆಂಬುದನ್ನು ಬಹಿರಂಗವಾಗಿ ಹೇಳಿಬಿಡು.
ಅಂದಹಾಗೆ ಮುಂದಿನ ಬಾರಿ ನಿನ್ನ ಉಡುಪಿ ಭೇಟಿ ಯಾವಾಗ?
ಬರುವಾಗ ದುಬಾಯಿ ಚಾಕಲೇಟು ಮರೆಯದೇ ತೆಗೆದುಕೊಂಡು ಬಾ. ಆಯ್ತಾ ಸಿಲಿಕಣ್ಣ!!
ನಿನ್ನ ಪ್ರೀತಿಯ
ಉಡುಪಿಯ 'ಜುಜುಬಿ' ನಾಗರಿಕ.
#ಹಾರುಬೂದಿ #ಉಡುಪಿ_ಪಾಡು #ಸಿಲಿಕಾ
P V Bhandary Shrinivas Karkala Suresha Kanjarpane Nikhil KolpeRamakrishna Herle Dinesh Holla M.G. Hegde

Friday, August 10, 2018

ಸುಬ್ರಾಯ ಚೊಕ್ಕಾಡಿ---ಮನೆ



Image may contain: 1 person, smiling









ಸುಬ್ರಾಯ ಚೊಕ್ಕಾಡಿ --- ಮನೆ




ನೀಟಾಗಿ ಕತ್ತರಿಸಿದ ಹೂಗಿಡಗಳ ನಡುವೆ
ಒಡ್ಡೋಲಗಸ್ಥ ಮಹಾರಾಜನ ಹಾಗೆ
ವಿರಾಜಮಾನವಾಗಿದೆ ಆ ಮನೆ.
ಶೆಡ್ಡಿನಲಿ ಮಲಗಿದ ಕಾರು,ಪಕ್ಕದಲೆ
ಆಳೆತ್ತರದ ಆಲ್ಸೇಶನ್ ನಾಯಿ-ಗೇಟಿನಲಿ
*ನಾಯಿಗಳಿವೆ ಎಚ್ಚರಿಕೆ* ಫಲಕ.
ಒಳ ಹೊಕ್ಕರೆ ಸ್ವಾಗತಿಸುವ ಭವ್ಯ ದಿವಾನಖಾನೆ
ಬೃಹದ್ಗಾತ್ರದ ಟಿ.ವಿ.ಮೂಲೆಗಳಲ್ಲಿ ಸೈನಿಕರಂತೆ ನಿಂತ
ಎತ್ತರದ ವಿಗ್ರಹಗಳು;ಹೂ ಕುಂಡಗಳು.
ಕುಳಿತರೆ ಪಾತಾಳಕ್ಕೆಸೆವ ಸೋಫಾಗಳು.ಅದರಾಚೆ
ಹೊಕ್ಕರೆ ಹೊರಡಲು ದಾರಿ ಸಿಗದಂತೆ ಹತ್ತಾರು
ಕೊಠಡಿಗಳು,ಮುಚ್ಚಿರುವ ಬಾಗಿಲುಗಳು,ತಿರುವುಗಳಲ್ಲಿ
ಮಾಯವಾಗುವ ಪುಟ್ಟ ಹಾದಿಗಳು.ಎಲ್ಲಿಂದಲೋ
ಕೇಳಿಸುವ ಹಾಡಿನ ತುಣುಕುಗಳು,ಅಹಹಾ!ಈ
ಮಯನರಮನೆ ತುಂಬ ವಿದೇಶೀ ಸೆಂಟಿನ ಘಮಲು.
ತಾಯಿ,ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು
ಅವರವರ ಕೋಣೆಗಳಲ್ಲಿ.ನಡುವೆ
ಸಂಪರ್ಕ ಆಗೀಗಮೊಬೈಲ್ ಗಳ ಮೂಲಕವೇ
ಇಳಿದನಿಯ ತುಂಡು ಮಾತುಗಳು.ಕಂಪ್ಯೂಟರಲ್ಲಿ
ಕೀಲಿಸಿದ ಕಣ್ಣುಗಳು.ಆಗೀಗೊಮ್ಮೆ ಆಚೀಚೆ
ಸರಿದಾಡುವ ನೆರಳುಗಳು;ಹೆಜ್ಜೆ ಸದ್ದುಗಳು.
ಇನ್ನೂ ಒಳಗೆ-ಅನಾಥ ಎಂಬಂತೆ
ತೆರೆದುಕೊಂಡೇ ಇರುವ ಡೈನಿಂಗ್ ಹಾಲ್ ,ಮೇಜಿನ ಮೇಲೆ
ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವ
ವಿಧವಿಧದ ತಿಂಡಿ ತಿನಿಸುಗಳು;ಹಣ್ಣುಗಳು.ಯಾವಾಗ
ಯಾರು ಇಲ್ಲಿಗೆ ಬರುತ್ತಾರೆ;ಯಾವಾಗ
ಇವೆಲ್ಲ ಖಾಲಿಯಾಗುತ್ತವೆ-ಯಾರಿಗೂ ಗೊತ್ತಿಲ್ಲ.
ಒಮ್ಮೊಮ್ಮೆ ಕೇಳಿಸುವ ನಗುವಿನ ಸದ್ದು,ಗದರುವ ಸದ್ದು
ಪಿಸುದನಿಯ ಗೊಣಗಿನ ಸದ್ದು-ಸದ್ದಿನ ಆಚೆ
ಸದಾ ನೆಲೆ ನಿಂತಿರುವ ಗಾಢ ನಿಗೂಢ ಮೌನ.
ಹೊರಗೆ,
ಎಲೆಯುದುರಿಸಿದ ಮರದ ಕೊಂಬೆಯಲಿ
ಕುಳಿತ ಆ ಒಂಟಿ ಹಕ್ಕಿ ಉಲಿಯುತ್ತದೆ:
ಆಹ!ಎಷ್ಟು ಸುಂದರ!ಆಹ!
ಅಲ್ಲಿರುವುದು ಅಂಥ ಮನೆ,
ಇಲ್ಲಿರುವುದು ಸುಮ್ಮನೆ!
--ಸುಬ್ರಾಯ ಚೊಕ್ಕಾಡಿ

Friday, August 3, 2018

ನಟರಾಜ . ಕೆ. ಪಿ--- ಹುಣಸೆಯ ಮರವ ನೋಡವ್ವ

ಹುಣಸೆಯ ಮರವ ನೋಡವ್ವ ಕಣ್ಣಿಗೆ ಕಟ್ಟಿ ನಿಲ್ಲುವ ಹುಣಸೆ ಮರವ ನೋಡವ್ವ ಶ್ರಾವಣ ಮಾಸದ ಕಡು ಹಸಿರು ಎಲೆ ಎಲೆಗಳಲ್ಲಿ ದಟ್ಟೈಸಿ ನಿಂತಿರುವ ಹುಣುಸೆಯ ಮರವ ನೋಡವ್ವ ನೋಡುವುದಕ್ಕೆರಡು ಕಣ್ಣು ಸಾಲದವ್ವ
ಜಾತರೆ ಯಾತರೆ ಬಿಟ್ಟಿಲ್ಲಿ ಬಾರವ್ವ ನಿಂತ ನಿಲುವಿಗೆ ಲೋಕವ ಕೈಮಾಡಿ ಕರೆದಿರುವ ಹುಣಸೆಯ ಮರವ ನೋಡವ್ವ ಅವ್ವ ನಾನು ಚಿಕ್ಕವನಿರುವಾಗ ನೀನು ಚಿಕ್ಕವಳಿರುವಾಗ ಮುದ್ರೆಯ ಹೊಲದ ತಿಪ್ಪೆಯ ಗುಂಡಿಯ ಹತ್ತಿರವಿದ್ದ ಹುಣಸೆಯ ಮರವ ನೋಡವ್ವ
ಕೊಂಬೆ ರೆಂಬೆ ಟೊಂಗೆ ಟಿಸಿಲುಗಳ ಹೊಕ್ಕು ಒಳ ಹೊಕ್ಕು ಮರದೊಳ ಹೊಕ್ಕು ದಟ್ಟೈಸಿರುವ ಹಸಿರು ಎಲೆಗಳ ನುಸಿದು ಮರದ ಒಳಹೊಕ್ಕು ನಿಗೂಢ ಕತ್ತಲ ಒಳಾಯಕ್ಕೆ ಹೋಗವ್ವ ಹುಣಸೆಯ ಮರಾಂತರಂಗಕ್ಕೆ ಹೋಗವ್ವ
ಬಳ್ಳಿ ಬಿಳಲುಗಳಂತದರ ಇಳಿ ಬೀಳುವ ಟಿಸಿಲುಗಳು ವಾಲಾಡುವ ಪರಿಯ ನೋಡವ್ವ ಅವ ಹಸುರು ಶಿಶುಗಳ ಜೀವವಾಡುವ ಪರಿಯ ನೋಡವ್ವ
ಅವ್ವ ಲೋಕ ಯಾತ್ರೆಯಿದು ಮುಗಿತಾಯ ಕ್ಕೆ ಬರುವ ವೇಳೆಯಾಯಿತು ಬಂದಿಲ್ಲಿ ನಿಲ್ಲವ್ವ
ಹುಣುಸೆಯ ಬೀಜ ಹುಣಸೆಯ ಹಣ್ಣು ಹುಣಸೆಯ ಕಾಯಿ ಹುಣಸೆಯ ಬರಲು ಹುಣಸೆಯ ಹುಳಿ ಹುಣಸೆಯ ಮರದ ಜೊತೆ ಬದುಕಿ ಬಂದಿದ್ದೇವವ್ವ ಹುಣಸೆಯ ಮರ ಮುಪ್ಪು ಹುಣಸೇಯ ಹುಳಿ ಮುಪ್ಪೆ ಗಾದೆಯ ರಸದ ಹೆಸರುವಾಸಿ ಮರವ ನೋಡವ್ವ
ಊರು ಓಡಾಡುವ ಜಾಗದಲ್ಲಿರುವ ಮೂರು ಹಾದಿ ಕೂಡುವ ಜಗದ್ಜಾಗದಲ್ಲಿರುವ ಲೌಕಿಕಕು ಅಲೌಕಿಕಕು ಆಗಿಬರುವ ಹುಣಸೆಯ ಮರಕೆ ಬಾರವ್ವ ಅರಸಿ ಬಾರವ್ವ



Image may contain: Nataraja Kalkere, smiling, closeup