stat Counter



Thursday, August 31, 2017

ವಿದ್ಯಾ ರಶ್ಮಿ - ಅಗ್ನಿ ದಿವ್ಯದ ಹುಡುಗಿಯ ಕಥನ

ಅಗ್ನಿದಿವ್ಯದ ಹುಡುಗಿಯ ಕಥನ
ಅವಳು ನಿಜಕ್ಕೂ ಅಗ್ನಿದಿವ್ಯದ ಹುಡುಗಿ, ಆನಂದಿ ಜೋಶಿ. ಭಾರತದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆ ಪಡೆದವಳು. ಹೆಣ್ಣುಮಕ್ಕಳು ಹೊರಗೆ ಓಡಾಡುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ತಾನೂ ಓದಬೇಕು, ವೈದ್ಯೆಯಾಗಬೇಕು ಎಂಬ ಮಹದಾಸೆಯ ಕಿಚ್ಚು ಹತ್ತಿಸಿಕೊಂಡವಳು. ಬಾಲ್ಯವಿವಾಹಕ್ಕೂ ಒಳಗಾದ ಈ ಬಾಲೆಯ ಅದೃಷ್ಟವೋ ಏನೋ ಅವಳ ಪತಿ ಗೋಪಾಲ ಜೋಶಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಬಹುವಾಗಿ ಬೆಂಬಲಿಸಿದವನು. ಆಕೆಯನ್ನು ವೈದ್ಯೆಯಾಗಿಸುವ ಪಣ ತೊಟ್ಟವನು. ಅವನ ಬೆಂಬಲದೊಂದಿಗೆ ಆಕೆ ಶಾಲೆಗೆ ಹೋಗುತ್ತಾಳೆ, ಅದಕ್ಕಾಗಿ ಸೆಗಣಿ ನೀರಿನ ಅಭಿಷೇಕಕ್ಕೂ ಒಳಗಾಗುತ್ತಾಳೆ! ಅವಳ ವಿದ್ಯಾಭ್ಯಾಸಕ್ಕಾಗಿ ಭಾರತದ ಊರೂರಿಗೆ ಪಯಣ ಬೆಳೆಸುತ್ತಾರೆ. ಕೊನೆಗೂ ಅಮೆರಿಕದಲ್ಲಿ ಏಷ್ಯಾದ ಮೊದಲ ವೈದ್ಯೆಯಾಗಿ ಪದವಿ ಪಡೆಯುವ ಮಹತ್ಸಾಧನೆಯನ್ನು ಮಾಡಿಯೇಬಿಡುತ್ತಾಳೆ ಆ ಪುಟ್ಟ ಹುಡುಗಿ. ಆ ಪದವಿ ಅವಳ ಸೊತ್ತಾಗುವಾಗ ಅವಳಿಗೆ ಬರಿಯ ೨೧ ವರ್ಷ! ಇಂತಿಪ್ಪ ಹುಡುಗಿ ಕೆಲವೇ ತಿಂಗಳುಗಳಲ್ಲಿ ಕಾಲವಾಗುತ್ತಾಳೆ ಕೂಡ. ಆದರೆ, ಬದುಕಿದ್ದ ಕೆಲವೇ ವರ್ಷಗಳ ಕಾಲ ತಾನು ಹೋದಲ್ಲೆಲ್ಲ ಸೂರ್ತಿಯ ಅಗ್ನಿಯನ್ನು ಜ್ವಲಿಸಿ ಹೋದ ಆ ದಿವ್ಯ ಚೇತನದ ಕಥನ ‘ಅಗ್ನಿ ದಿವ್ಯದ ಹುಡುಗಿ’. ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಆನಂದಿಯ ಹುಟ್ಟಿದ ಸ್ಥಳಕ್ಕೂ ಭೇಟಿ ನೀಡಿ, ಹಲವು ಗ್ರಂಥಗಳನ್ನು ಪರಾಮರ್ಶಿಸಿ, ಆಕೆಯ ಸಂಬಂಧವಾದ ಹಲವರನ್ನು ಸಂಪರ್ಕಿಸಿ ಬರೆದ ಕೃತಿ. ಆನಂದಿ (೧೮೬೫-೧೮೮೭) ಕುರಿತ ಅಕೃತ ಮಾಹಿತಿ ನೀಡುವಲ್ಲಿ ಮಂಡೆಕೋಲು ಅವರ ಶ್ರಮ ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಅವರ ನಿರೂಪಣೆಯ ಶೈಲಿ, ಭಾಷೆಯೂ ಬಲು ಚೆಂದ. ಆನಂದಿಯ ಕಥನವನ್ನು ಹೇಳುವಾಗಲೇ ಆ ಕಾಲದ ಇನ್ನಾವುದೋ ಪ್ರಮುಖ ಘಟನೆಗಳನ್ನು ವರ್ಷ, ತಿಂಗಳ ಸಮೇತ ಬರೆವವ ಸಮಕಾಲೀನ ಇತಿಹಾಸದ ದಾಖಲೀಕರಣವೂ ಅನನ್ಯ. ಆನಂದಿಯನ್ನು ಪೊರೆದ ಹಲವು ವ್ಯಕ್ತಿಗಳ ದೊಡ್ಡತನ, ಆಕೆಯ ಬೆನ್ನೆಲುಬಾಗಿ ನಿಂತ ಪತಿ ಗೋಪಾಲನ ಸಂಕೀರ್ಣ ವ್ಯಕ್ತಿತ್ವ, ಅವಳ ಬದುಕಿನ ಮನಮಿಡಿವ ಘಟ್ಟಗಳು... ಇವನ್ನೆಲ್ಲ ಓದಿಯೇ ತಿಳಿಯಬೇಕು. ಆನಂದಿಬಾಯಿ ಎಂಬ ಸಾಧಕಿಯ ಬದುಕಿನ ಕಥನ ತಿಳಿಯಲು ಹಾಗೂ ಹೃದ್ಯ ಓದಿನ ಖುಷಿಗಾಗಿ ಈ ಕೃತಿಯನ್ನು ಖಂಡಿತ ಓದಬಹುದು.
ಪುಸ್ತಕ ಕೊಟ್ಟು ಓದಲೇಬೇಕಾದ ಕೃತಿ ಎಂದ ಸಹೋದ್ಯೋಗಿ ವಾಗೀಶ್ ಅವರಿಗೆ ಥ್ಯಾಂಕ್ಸ್.
ಅಗ್ನಿ ದಿವ್ಯದ ಹುಡುಗಿ
ಲೇ: ಚಂದ್ರಶೇಖರ ಮಂಡೆಕೋಲು
ಪ್ರ:ಪಲ್ಲವ ಪ್ರಕಾಶನ, ಚನ್ನಪಟ್ಟಣ  {From Face Book }


Image result for ಅಗ್ನಿದಿವ್ಯದ ಹುಡುಗಿಯ ಕಥನ

No comments:

Post a Comment