stat Counter



Monday, July 16, 2018

ಸುಬ್ರಾಯ ಚೊಕ್ಕಾಡಿ -- ಟಿ. ಜಿ. ರಾಘವರ ಕಾದಂಬರಿ

"ಮನೆ" ಟಿ.ಜಿ.ರಾಘವರ ಒಂದು ವಿಶಿಷ್ಟ ಕಾದಂಬರಿ. ಟಿ.ಜಿ.ರಾಘವರು ನವ್ಯ ಸಾಹಿತ್ಯ ಸಂದರ್ಭದ ಪ್ರಮುಖ ಲೇಖಕರಲ್ಲಿ ಒಬ್ಬರು.ಮೊದಲ ಸಂಕ್ರಮಣ ದ್ವೈಮಾಸಿಕದಲ್ಲಿ ಪ್ರಕಟವಾದ ಅವರ"ಶ್ರಾದ್ಧ"ಕತೆಯು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.1979 ರಲ್ಲಿ ಪ್ರಥಮ ಮುದ್ರಣ ಹಾಗೂ 1990 ರಲ್ಲಿ ದ್ವಿತೀಯ ಮುದ್ರಣ ಕಂಡ ಈ ಪುಟ್ಟ ಕಾದಂಬರಿಯ ಪ್ರಕಾಶಕರು "ಗೀತಾ ಬುಕ್ ಹೌಸ್, ಮೈಸೂರು " ರಾಘವರ ಇತರ ಪ್ರಕಟಿತ ಕೃತಿಗಳಲ್ಲಿ "ಜ್ವಾಲೆ ಆರಿತು"ಹಾಗೂ "ಸಂಬಂಧಗಳು "ಎನ್ನುವ ಕಥಾ ಸಂಕಲನಗಳು,"ವಿಕೃತಿ"ಎನ್ನುವ ಕಾದಂಬರಿ,ಮತ್ತು "ಪ್ರೇತಗಳು"ಎನ್ನುವ ನಾಟಕ ಮುಖ್ಯವಾದವುಗಳು.
"ಸಂತೆಯೊಳಗೊಂದು ಮನೆಯ ಮಾಡಿ,ಸದ್ದು ಗದ್ದಲಕೆ ಅಂಜಿದೊಡೆ ಎಂತಯ್ಯಾ "ಅನ್ನುವುದು ಅಕ್ಕನ ವಚನವೊಂದರ ಸಾಲು. ಈ ಸಾಲಿಗೆ ವಿಷಾದದ ಉದಾಹರಣೆಯಾಗಿ ಈ ಕಾದಂಬರಿಯ ಮುಖ್ಯ-ಆದರೆ ಅಮಾಯಕ-ಪಾತ್ರಗಳಾದ ರಾಜಣ್ಣ ಮತ್ತು ಗೀತಾ ,ನಗರದಲ್ಲಿ ಒಂದು ಪುಟ್ಟ ಮನೆಯು ನೆಮ್ಮದಿಯ ಹಾಗೂ ಖಾಸಗಿಯ ಬದುಕಿಗಾಗಿ ಬೇಕೆಂದು ಹಂಬಲಿಸಿದವರು.;ಅಂಥ ಕನಸು ಕಂಡವರು.ಆದರೆ ನಗರದ ಗದ್ದಲ,ಎಲ್ಲ ಖಾಸಗಿತನವನ್ನೂ ನುಂಗಿ ಹಾಕಿ,ಅದರ ಪಾವಿತ್ರ್ಯವನ್ನು ನಾಶಮಾಡಿ ನಿರ್ದಯವಾಗಿ ವರ್ತಿಸುವ ನಗರದ ಕ್ರೌರ್ಯ,ಖಾಸಗಿ ಬದುಕಿನೊಳಗೆ ಮೂಗುತೂರಿಸುವ ಜನ ಸಮುದಾಯದ ತಲೆಹರಟೆ...ಇವೆಲ್ಲವುಗಳ ನಡುವೆ ರಾಜಣ್ಣ ದಂಪತಿಗಳ ಮನೆಯನ್ನು ಹೊಂದುವ.ಹಾಗೂ ಆಮೇಲೆ ಮನೆಯನ್ನು ಹೇಗೋ ಹೊಂದಿದ ಮೇಲೆ ನೆಮ್ಮದಿಯಾಗಿ ಹಾಗೂ ಖಾಸಗಿಯಾಗಿ ಬದುಕುವ ಕನಸು ವಾಸ್ತವದ ಸುಡು ಬಿಸಿಯಲ್ಲಿ ಕರಗಿ ಹೋಗುವುದನ್ನು ಈ ಕಾದಂಬಲರಿಯು ಅನನ್ಯವಾಗಿ ಚಿತ್ರಿಸುತ್ತದೆ.ಮನೆ ಎನ್ನುವ ಸಂಸ್ಥೆಯ ಸುತ್ತ ನಿರ್ಮಿತವಾಗುವ ಮಧ್ಯಮವರ್ಗದ ಜೀವನದ ದುರಂತವನ್ನು ನಗರದ ಹಿನ್ನೆಲೆಯಲ್ಲಿಈ ಬಗೆಯ ನಿಷ್ಠುರತೆಯಲ್ಲಿ ಕಟ್ಟಿಕೊಟ್ಟ ಕೃತಿ ಇನ್ನೊಂದಿಲ್ಲವೆನ್ನಬಹುದು.ಮನುಷ್ಯನ ಖಾಸಗಿತನದ ಬದುಕು ಕಳೆದು ಹೋಗುತ್ತಿರುವ ನಮ್ಮ ಕಾಲದ ನೋವಿನ ಅನುಭವಕ್ಕೆ ಈ ಕೃತಿಯು ಕನ್ನಡಿ ಹಿಡಿದ ಹಾಗಿದೆ.
ಗಿರೀಶ ಕಾಸರವಳ್ಳಿಯವರ "ಮನೆ" ಸಿನೆಮಾವು ಈ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿದೆ.ಹಿಂದಿ ಹಾಗೂ ಕನ್ನಡ-ಈ ಎರಡೂ ಭಾಷೆಗಳಲ್ಲಿ ತಯಾರಾಗಿರುವ ಈ ಸಿನೆಮಾದಲ್ಲಿ ಖ್ಯಾತ ನಟ ನಟಿಯರಾದ ನಾಸಿರುದ್ದೀನ್ ಷಾ,ದೀಪ್ತಿ ನಾವಲ್,ರೋಹಿಣಿ ಹಟ್ಟಂಗಡಿ ಮೊದಲಾದವರು ಅಭಿನಯಿಸಿದ್ದು ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಪ್ರಶಸ್ತಿಯನ್ನು ಗಳಿಸಿರುತ್ತದೆ.
--ಸುಬ್ರಾಯ ಚೊಕ್ಕಾಡಿ.

No comments:

Post a Comment