stat Counter



Friday, April 25, 2014

ಡಾ| ಸುಬ್ಬಣ್ಣಯ್ಯ ಕೋಟಿಗದ್ದೆ - ಕಾಡನು ರಕ್ಷಿಸೆ ನಾಡುಳಿಯುವುದು

ಭಟ್ಟರ ತೋಟದ ಪಕ್ಕದ ಕಾಡಲಿವಾಸಿಸುತಿದ್ದವು ಮಂಗಗಳು
ತಿನ್ನಲು ಏನೂ ಸಿಕ್ಕದೆ ಹಸಿವಲಿ ಇದ್ದವು ಮರದಲಿ ಕುಳಿತಲ್ಲೇ
ಹಿಂದೆ ಕಾಡಲಿ ತಿನ್ನಲು ತುಂಬಾ ಹಣ್ಣು ಹ್ಂಪಲು ಸಿಗುತಿತ್ತು
Dr.Subbannayya Kotigadde
ಕಾರೆ ಕುಂಟಲ ಕೊಟ್ಟೆ ಸಂಪಿಗೆ ಹಣ್ಣುಗಳಿಂದಾ ತುಳುಕಿತ್ತು

ಕಾಲ ಉರುಳಿತು ಕಾಡು ಹೋಯಿತು ಬರಡಾಯಿತು ನೆಲ ಎಲೆಲ್ಲೂ
ಪರದೇಶೀ ತಳಿ ಅಕೇಶಿಯಾಕ್ಕೆ ಆಶ್ರಯ ಸಿಕ್ಕಿತು ಕಾಡಲ್ಲಿ
ಮಂಗ ಹಂದಿ ನರಿ ಕಾಡು ಕೋಣಗಳು ಕಂಗೆಟ್ಟವು ಬಲು ಹಸಿವಲ್ಲಿ
ವಲಸೆ ಹೋದವು ವನ್ಯ ಪ್ರಾಣಿಗಳು ಮಂಗಗಳೆಲ್ಲವ ಬಿಟ್ಟಿಲ್ಲಿ

ಕಂಗು ಪೇರಳೆ ಹಲಸು ಮಾವುಗಳು ತೋಟದ ತುಂಬಾ ಬೆಳೆದಿತ್ತು
ಗೊಂಚಲು ಗೊಂಚಲು ಎಳನೀರಿಂದ ತೆಂಗಿನ ಮರ ಕಂಗೊಳಿಸಿತ್ತು
ಹಸಿವನು ತಾಳದ ಮುದಿಕಪಿಯೊಂದಕೆ ಯೋಚನೆಯೊಂದು ಹೊಳೆದಿತ್ತು
ಬನ್ನಿರಿ ಎಲ್ಲರು ಮಾತನು ಕೇಳಿರಿ ಎನ್ನುತ ಬಳಗವ ಕರೆದಿತ್ತು

ನೋಡಿರಿ ತೋಟದಿ ಕಾಯಿಗಳಿಂದ ತೊನೆಯುತ್ತಿರುವ ತೆಂಗನ್ನು
ಎಲ್ಲರು ಮರವನು ಏರುತ ಕುಡಿಯುವ ಸಿಹಿ ಸಿಹಿ ತೆಂಗಿನ ನೀರನ್ನು
ನುಗ್ಗೆಯ ಸೊಪ್ಪು ಬಾಳೆಯ ಹಣ್ಣು ಕೊಕೋ ಪೇರಳೆ ಮೆಲ್ಲುವ ನಾವ್
ಹಲಸು ಮಾವುಗಳ ಸವಿಯುತ ಹಸಿವನು ನೀಗಿಸಿಕೊಳ್ಳುವ ಅನುದಿನವೂ

ಹಿರಿಕಪಿ ಮಾತನು ಕೇಳುತ ತೋಟಕೆ ಹಾರಿದವೆಲ್ಲಾ ಮಂಗಗಳು
ಏರುತ ಮರವನು ಕುಡಿದವು ಕೆಡೆದವು ಚೆಲ್ಲಾಡಿದವೆಳೆ  ಕಾಯಿಗಳ
ಭಟ್ಟರ ತೋಟದಿ ಲೆಕ್ಕಕೆ ಇಂದಿಗೆ ತೆಂಗಿನ ಮರಗಳು ನೂರಾರು
ಒಂದೇ ಒಂದು ಕಾಯಿಯು ಇಲ್ಲ ನಿತ್ಯಕೆ ಮಾಡಲು ಸಾಂಬಾರು

ಎಲ್ಲೆಡೆ ಎದ್ದಿದೆ ಹಾಹಾಕಾರ ಕಪಿಗಳಿಗೇನು ಪರಿಹಾರ
ಕೃಷಿ ಉತ್ಪನ್ನ ಕಪಿ ಪಾಲಾದರೆ ನಮಗೇನುಳಿಯಿತು ಆಹಾರ
ಕಾಡನು ರಕ್ಷಿಸೆ ನಾಡುಳಿಯುವುದು ಎಂಬುದ ನಾವು ತಿಳಿದಿರಲು
ನೆಲೆಸುವುದೆಲ್ಲೆಡೆ ಸುಖ ಸಂಮೃದ್ಧಿ ನಮ್ಮಯ ಬದುಕಿಗೆ ಮರು ಅರಳು

                                                                          ಡಾ| ಸುಬ್ಬಣ್ಣಯ್ಯ ಕೋಟಿಗದ್ದೆ
                                                                          ಪ್ರಾಧ್ಯಾಪಕ
                                                                           ಸೂಕ್ಷ್ಮಜೀವಶಾಸ್ತ್ರ ವಿಭಾಗ
                                                                            ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
                                                                            ಕುರುಂಜಿಬಾಗ್,ಸುಳ್ಳ್ಯ574327



No comments:

Post a Comment