stat Counter



Thursday, October 18, 2018

ಸುನಿಲ್ ಧರ್ಮಸ್ಥಳ - ಪುರುಷೋತ್ತಮನ ಪುನರ್ಮಿಲನ -ಒಂದು ಮನ ಮಿಡಿವ ಸತ್ಯ ಕತೆ

ಇದು ಸುಮಾರು ಮೂರು ವರ್ಷಗಳ ಹಿಂದಿನ ಕಥೆ.. ಒಬ್ಬ ಪತ್ರಕರ್ತನಾಗಿ ಹಲವಾರು ನ್ಯೂಸ್‌ಗಳನ್ನು ಕವರ್ ಮಾಡಿದ್ದೀನಿ. ಅದರಲ್ಲಿ ಕೆಲವೊಂದು ಬಹುತೇಕ ಒಂದು ನ್ಯೂಸ್ ಮಾತ್ರ. ಇನ್ನೂ ಕೆಲವು, ಕೇವಲ ನ್ಯೂಸ್ ಮಾತ್ರ ಅಲ್ಲದೆ ಅದರಾಚೆಗೆ ಹಲವರಿಗೆ ನೆರವಾಗಿದೆ. ಇದರಲ್ಲೂ ಎರಡು ರೀತಿಯದ್ದು ಇರತ್ತೆ. ಮೊದಲನೆಯದ್ದು ನ್ಯೂಸ್ ಟಿವಿಯಲ್ಲಿ ಬಂದ ಬಳಿಕ ಅದರಿಂದ ಕೆಲವರಿಗೆ ನೆರವಾಗುತ್ತೆ. ಎರಡನೆಯದ್ದು ನಾವು ಮಾಡಿರುವ ನೆರವು ನ್ಯೂಸ್ ಆಗೋದು. ನಾನಿಲ್ಲಿ ಹೇಳೋಕೆ ಹೊರಟಿರೋದು ಎರಡನೆಯ ವಿಚಾರ. ಇದು ನನ್ನ 11 ವರ್ಷಗಳ ವೃತ್ತಿ ಜೀವನದಲ್ಲಿ ತುಂಬಾನೇ ತೃಪ್ತಿ ತಂದು ಕೊಟ್ಟ ವಿಚಾರಗಳಲ್ಲಿ ಒಂದು.
2015ರಲ್ಲಿ ನಾನು ಟಿವಿ ನೈನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಕ್ರೈಂ ರಿಪೋರ್ಟರ್ ಆಗಿ. ನನ್ನ ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ. ಆಗೊಮ್ಮೆ ಈಗೊಮ್ಮೆ ರಜೆ ಸಿಕ್ಕಾಗ ಊರಿಗೆ ಹೋಗಿ ಒಂದರೆಡು ದಿನ ಮನೆಯಲ್ಲಿ ಇದ್ದು ಬರ್ತಿದ್ದೆ. ಊರಿಗೆ ಹೋದಾಗೆಲ್ಲ ಸ್ನೇಹಿತರನ್ನು ಭೇಟಿಯಾಗುವುದು ವಾಡಿಕೆ. ಹೀಗೆ ನಾನು ಭೇಟಿಯಾಗುವ ಗೆಳೆಯರಲ್ಲಿ ಮುಂಡಾಜೆಯ ಅಜೀಜ್ ಸಹ ಒಬ್ಬರು. ಆಗಾಗ ಫೋನ್ ಮಾಡ್ತಾ ಇರ್ತಾರೆ. ಅದೊಂದು ದಿನ ನಾನು ಬೆಂಗಳೂರಿನಲ್ಲಿದ್ದಾಗಲೇ ಅಜೀಜ್ ನನಗೆ ಫೋನ್ ಮಾಡಿದ್ರು. ಕ್ಯಾಸುವಲ್ ಟಾಕ್ ಮಧ್ಯೆ ತಮ್ಮೂರಿನ ವ್ಯಕ್ತಿಯೊಬ್ಬನ ಬಗ್ಗೆ ವಿಚಾರ ಪ್ರಸ್ತಾಪಿಸಿದ್ರು.
ಆತನ ಹೆಸರು ಪುರುಷೋತ್ತಮ್.. ವಯಸ್ಸು ಸುಮಾರು 40 ಇರಬಹುದು. ಕಳೆದ ಎರಡು ವರ್ಷಗಳಿಂದ ಮುಂಡಾಜೆಯ ಸಂಗಮ್ ಅನ್ನೋ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದಾನೆ. ಒರಿಯಾ ಭಾಷೆ ಬಿಟ್ರೆ ಅಲ್ಪಸ್ವಲ್ಪ ತೆಲುಗು ಬರುತ್ತೆ. ಮಾನಸಿಕವಾಗಿ ಅಷ್ಟೇನೂ ಗಟ್ಟಿಯಾಗಿಲ್ಲ. 2013ರಲ್ಲಿ ಈತ ಯಾವುದೋ ಊರಿಂದ ಲಾರಿ ಹತ್ತಿ ಕೊನೆಗೆ ಮುಂಡಾಜೆಯಲ್ಲಿ ಇಳ್ಕೊಂಡಿದ್ದ. ಕತ್ತರಿ ಕಾಣದ ಕೂದಲು.. ಗಡ್ಡದಿಂದ ಆವೃತವಾದ ಮುಖದಲ್ಲಿ ಕಣ್ಣು, ಮೂಗು ಬಿಟ್ರೆ ಇನ್ನೇನು ಕಾಣಿಸ್ತಿರ್ಲಿಲ್ಲ. ಮುಂಡಾಜೆಯ ಸಂಗಮ್ ಹೋಟೆಲ್ ಮುಂಭಾಗದ ಪುಟ್ಟ ಬಸ್ ನಿಲ್ದಾಣದಲ್ಲಿ ಅನಾಥನಾಗಿ ಕುಳಿತಿದ್ದ. ಆರಂಭದಲ್ಲಿ ಇವನನ್ನು ಎಲ್ಲರೂ ವಿಚಿತ್ರ ಜೀವಿಯಂತೆ ನೋಡ್ತಿದ್ರು. ಯಾರಾದ್ರೂ ಏನಾದ್ರೂ ಕೇಳಿದ್ರೆ ತನ್ನೆಲ್ಲ ಹಲ್ಲುಗಳನ್ನು ತೋರಿಸ್ತಾ ನಗುತ್ತಿದ್ದ. ಮುಂಡಾಜೆಯಲ್ಲಿ ಜನ ಮಾತಾಡೋದು ತುಳು ಭಾಷೆ. ಅಪರೂಪಕ್ಕೆ ಕನ್ನಡ ಬಳಸ್ತಾರೆ. ಆದ್ರೆ ಪುರುಷೋತ್ತಮ್‌ಗೆ ಇದ್ಯಾವುದೂ ಅರ್ಥ ಆಗಲ್ಲ. ಕೊನೆಗೆ ಗೊತ್ತಿರುವ ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಮಾತನಾಡಿಸಿದ್ರು. ಯಾರು ಏನೇ ಮಾತಾಡಿದ್ರೂ ಪುರುಷೋತ್ತಮ್ ಉತ್ತರ ನಗುವೇ ಆಗಿತ್ತು. ಒಂದೆರಡು ದಿನ ಬಸ್ ಸ್ಟ್ಯಾಂಡ್‌ನಲ್ಲೇ ಕಾಲ ಕಳೆದ ಪುರುಷೋತ್ತಮ್‌ಗೆ ಸ್ಥಳೀಯರೇ ಊಟ ತಿಂಡಿ ನೀಡ್ತಿದ್ರು. ಈತ ಪ್ಯೂರ್ ವೆಜ್. ನಾನ್‌ವೆಜ್ ತಿನ್ನಲ್ಲ. ಊಟ ತಿಂಡಿ ಕೊಟ್ಟವರಿಗೆ ತನ್ನ ನಗುವಿನ ಮೂಲಕವೇ ಥ್ಯಾಂಕ್ಸ್ ಹೇಳ್ತಿದ್ದ. ಹೀಗೆ ಇದ್ದ ಪುರುಷೋತ್ತಮ್ ಸ್ಥಳೀಯರೊಬ್ಬರಿಂದ ಒಂದು ಕತ್ತಿ(ಮಚ್ಚು) ತಗೊಂಡ. ನಂತ್ರ ಬಸ್ ಸ್ಟ್ಯಾಂಡ್ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕಡಿದು ಕ್ಲೀನ್ ಮಾಡಿದ. ಸ್ಥಳೀಯರು ತನಗೆ ಊಟ ತಿಂಡಿ ಕೊಡ್ತಿದ್ದಾರೆ. ಅದಕ್ಕೆ ಪ್ರತಿಫಲವಾಗಿ ತಾನು ಏನಾದ್ರೂ ಮಾಡ್ಬೇಕು ಅಂತ ಕಳೆ ಕೀಳುವುದು ಮತ್ತಿತರ ಕೆಲಸ ಮಾಡ್ತಿದ್ದ. ಇದನ್ನು ನೋಡಿದ ಸಂಗಮ್ ಹೋಟೆಲ್ ಮಾಲೀಕ ಲತೀಫ್ ಒಂದು ನಿರ್ಧಾರಕ್ಕೆ ಬಂದ್ರು. ಇವನನ್ನ ನಮ್ಮ ಹೋಟೆಲ್‌ನಲ್ಲೇ ಕೆಲಸಕ್ಕೆ ಸೇರ್ಸೋಣ ಅಂತ.. ಕೆಲಸಕ್ಕೆ ಸೇರ್ಸೋ ಮೊದ್ಲು ಪುರುಷೋತ್ತಮ್‌ನ ಒಂದು ರೌಂಡ್ ಕ್ಲೀನ್ ಮಾಡಿದ್ರು. ತಿಂಗಳಾನುಗಟ್ಟಲೆಯಿಂದ ಬೆಳೆದಿದ್ದ ಉದ್ದ ಕೂದಲು ಕತ್ತರಿಸಿ, ಶೇವಿಂಗ್ ಮಾಡ್ಸಿದ್ರು. ಹೊಸ ಬಟ್ಟೆ ಕೊಡಿಸಿದ್ರು. ಹೋಟೆಲ್ ಸಮೀಪವೇ ಪುರುಷೋತ್ತಮ್ ಇರೋದಿಕ್ಕೆ ಒಂದು ರೂಮ್ ಕೊಟ್ರು.
ಹಾಗೆ ಪುರುಷೋತ್ತಮ್ ಹೋಟೆಲ್‌ನಲ್ಲಿ ಕ್ಲೀನಿಂಗ್ ಮಾಡ್ತಾ ಕೆಲಸ ಆರಂಭಿಸಿದ. ಮೂರು ಹೊತ್ತು ಹೋಟೆಲ್‌ನಲ್ಲೇ ಊಟ. ಹಬ್ಬ ಹರಿದಿನ ಇದ್ದಾಗ ಲತೀಫ್ ತನ್ನ ಮನೆಗೆ ಪುರುಷೋತ್ತಮ್‌ನನ್ನೂ ಕರ್ಕೊಂಡು ಹೋಗ್ತಿದ್ದ. ಕ್ರಮೇಣ ಲತೀಫ್ ಮನೆಯವರಿಗೆಲ್ಲ ಪುರುಷೋತ್ತಮ್ ಇಷ್ಟವಾಗಿಬಿಟ್ಟ. ಈತ ಯಾವಾಗ್ಲೂ ತುಂಬಾನೇ ಕ್ಲೀನ್ ಆಗಿ ಇರ್ತಿದ್ದ. ಬೆಳಿಗ್ಗೆ ಎದ್ದು ಒಮ್ಮೆ ಸ್ನಾನ ಮಾಡ್ತಿದ್ದ. ರಾತ್ರಿ ಕೆಲಸ ಮುಗಿಸಿ ಇನ್ನೊಮ್ಮೆ ಸ್ನಾನ ಮಾಡಿದ್ಮೇಲೆ ಮಲಗ್ತಾ ಇದ್ದಿದ್ದು. ಹೋಟೆಲ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡೋದಾದ್ರೂ ತುಂಬಾನೇ ಅಚ್ಚುಕಟ್ಟಾಗಿ ಇರ್ತಿದ್ದ. ಹೀಗೆ ಎರಡು ವರ್ಷ ಕಳೆಯಿತು. ಹೋಟೆಲ್ ಮಾಲೀಕ ಅಜೀಜ್ ಪುರುಷೋತ್ತಮ್ ಹೆಸರಿನಲ್ಲಿ ಪ್ರತಿ ತಿಂಗಳು ಪಿಗ್ಮಿಗೆ ಹಣ ಕಟ್ಟುತ್ತಿದ್ರು. ಅವನು ದುಡಿದ ಹಣ ಅವನ ಹೆಸರಲ್ಲೇ ಇರ್ಲಿ ಅಂತ.. ಈ ನಡುವೆ ಲತೀಫ್ ಸೇರಿದಂತೆ ಹೋಟೆಲ್‌ಗೆ ಬರ್ತಿದ್ದವರೆಲ್ಲ ಪುರುಷೋತ್ತಮ್‌ನ ಊರು ಯಾವುದು ಅನ್ನೋದನ್ನು ವಿಚಾರಿಸ್ತಿದ್ರು. ಎರಡು ವರ್ಷಗಳಿಂದ ಮನೆಯಿಂದ ದೂರ ಇದ್ದಾನೆ, ಮನೆಯವರೆಲ್ಲ ಗಾಬರಿಯಾಗಿರ್ತಾರೆ, ಹೇಗಾದ್ರೂ ಮಾಡಿ ಈತನ ಮನೆಯವರ ಜೊತೆಗೆ ಸಂಪರ್ಕ ಸಾಧಿಸ್ಬೇಕು ಅಂತ ತುಂಬಾನೇ ಪ್ರಯತ್ನ ಪಡ್ತಿದ್ರು. ಆದ್ರೆ ಪುರುಷೋತ್ತಮ್‌ಗೆ ತನ್ನ ಹೆಸರು ಬಿಟ್ರೆ ಇನ್ನೇನು ಹೇಳೋಕೆ ಗೊತ್ತಿರ್ಲಿಲ್ಲ. ಪುರುಷೋತ್ತಮ್‌ಗೆ ಭಾಷೆ ಒಂದು ಸಮಸ್ಯೆಯಾದ್ರೆ, ಮತ್ತೊಂದು ಕಡೆ ತನ್ನ ಊರು, ಮನೆಯವರು ಯಾವುದೂ ಅಷ್ಟಾಗಿ ನೆನಪಿರಲಿಲ್ಲ. ಹಾಗಾಗಿ ಲತೀಫ್ ಮತ್ತು ಸ್ಥಳೀಯರ ಪ್ರಯತ್ನಕ್ಕೆ ಯಾವುದೇ ಫಲ ಸಿಕ್ಕಿರಲಿಲ್ಲ.

ಇವಿಷ್ಟೂ ವಿಚಾರಗಳನ್ನು ಅಜೀಜ್ ಫೋನ್ ಮಾಡಿದಾಗ ನನ್ನ ಬಳಿ ಹೇಳಿಕೊಂಡಿದ್ರು. ನೀವು ಊರಿಗೆ ಬಂದಾಗ ಒಮ್ಮೆ ಹೋಟೆಲ್‌ಗೆ ಬನ್ನಿ, ಸಾಧ್ಯವಾದ್ರೆ ಮಾತನಾಡಿಸಿ, ಹೇಗಾದ್ರೂ ಮಾಡಿ ಪುರುಷೋತ್ತಮ್‌ನ ಕುಟುಂಬದವರ ಜೊತೆಗೆ ಸೇರಿಸೋಣ ಅಂದ್ರಿದ್ರು. ನಾನದನ್ನು ಅಷ್ಟೇನೂ ಗಂಭೀರವಾಗಿ ತಗೊಂಡಿರ್ಲಿಲ್ಲ. ಆದ್ರೂ ಊರಿಗೆ ಹೋದಾಗ ಮುಂಡಾಜೆಗೆ ಹೋಗಿದ್ದೆ. ಮೊದ್ಲು ಅಜೀಜ್‌ನ ಭೇಟಿಯಾಗಿದ್ದೆ. ಬಳಿಕ ಅಜೀಜ್ ಜೊತೆಗೆ ಸಂಗಮ್ ಹೋಟೆಲ್‌ಗೆ ಹೋದೆ. ಹೋಟೆಲ್ ಮಾಲೀಕ ಲತೀಫ್ ಸಿಕ್ಕಿದ್ರು. ಜೊತೆಗೆ ಕೂತ್ಕೊಂಡು ಒಂದು ಟೀ ಕುಡಿದು ನಂತ್ರ ಪುರುಷೋತ್ತಮ್ ಬಗ್ಗೆ ಕೇಳಿದೆ. ತಕ್ಷಣ ಲತೀಫ್ ಪುರುಷೋತ್ತಮ್‌ನ ಕೂಗಿದ್ರು. ಇವ್ನ ಹೆಸ್ರು ಪುರುಷೋತ್ತಮ್ ಆದ್ರೂ ಅಲ್ಲಿದ್ದವರೆಲ್ಲ ಕರೀತಾ ಇದ್ದಿದ್ದು ಪುರ್ಸ ಅಂತ.. ಪುರುಷೋತ್ತಮ್ ಅನ್ನೋ ಉದ್ದ ಹೆಸರನ್ನು ಶಾರ್ಟ್ ಮಾಡಿ ಪುರ್ಸ ಅಂತ ಕರೀತಿದ್ರು. ಮಾಲೀಕ ಕರೆದಿದ್ದರಿಂದ ಹೋಟೆಲ್ ಹಿಂದೆ ಕಿಚನ್‌ನಲ್ಲಿ ಇದ್ದ ಪುರುಷೋತ್ತಮ್ ಓಡೋಡಿ ಬಂದ. ನಂಗೂ ತೆಲುಗು ಅಷ್ಟೇನೂ ಚೆನ್ನಾಗಿ ಮಾತನಾಡೋಕೆ ಬರಲ್ಲ. ಆದ್ರೆ ಬೇಸಿಕ್ ಕಮ್ಯುನಿಕೇಷನ್‌ಗೆ ಬೇಕಾದಷ್ಟು ಗೊತ್ತು. ಹಾಗೇ ಪುರುಷೋತ್ತಮ್ ಜೊತೆಗೆ ಮಾತು ಶುರು ಮಾಡ್ದೆ. ಆತ ತನ್ನ ಹೆಸರು ಹೇಳ್ದ. ಊರಿನ ಹೆಸರು ಹೇಳ್ದ.. ಆದ್ರೆ ಅದನ್ನು ಅರ್ಥ ಮಾಡ್ಕೊಳ್ಳೋಕೆ ತುಂಬಾ ಕಷ್ಟ ಆಯ್ತು. ಕೊನೆಗೆ ಆತನ ಊರಿನ ಹೆಸರು ಅಂತರ್‌ಸಿಂಗಿ ಅನ್ನೋದು ಗೊತ್ತಾಯ್ತು. ಒರಿಸ್ಸಾ ರಾಜ್ಯದ ಪುಟ್ಟ ಕುಗ್ರಾಮ. ಅದು ಯಾವ ಜಿಲ್ಲೆಯಲ್ಲಿದೆ ಅನ್ನೋದು ಗೊತ್ತಿಲ್ಲ. ಸುಮಾರು 15 ನಿಮಿಷ ಪುರುಷೋತ್ತಮ್ ಜೊತೆ ಮಾತಾಡಿದ್ರು ಆತನ ಬಾಯಿಂದ ಊರಿನ ಹೆಸರು ಬಿಟ್ರೆ ಇನ್ನೇನೂ ಗೊತ್ತಾಗ್ಲಿಲ್ಲ. ಎಷ್ಟೇ ಕೇಳಿದ್ರೂ ಆತನಿಗೆ ಇನ್ನೇನು ಹೇಳೋಕೆ ಗೊತ್ತಾಗಲ್ಲ ಅಂತ ಅನ್ಸಿತ್ತು. ಕೊನೆಗೆ ನನ್ನ ಮೊಬೈಲ್‌ನಲ್ಲಿ ಆತನ ಫೋಟೋ ಕ್ಲಿಕ್ಕಿಸಿ ಪುರುಷೋತ್ತಮ್‌ಗೊಂದು ಬಾಯ್ ಹೇಳಿ, ಲತೀಫ್ ಮತ್ತು ಅಜೀಜ್‌ಗೆ ಭರವಸೆ ಕೊಟ್ಟು ಅಲ್ಲಿಂದ ಹೊರಟೆ. ಅದೇ ದಿನ ರಾತ್ರಿ ಬೆಂಗಳೂರಿಗೆ ಬಸ್ ಹತ್ತಿ ಮರುದಿನ ಆಫೀಸ್‌ಗೆ ಹೋಗಿದ್ದೆ. ಮಧ್ಯಾಹ್ನ ಸ್ವಲ್ಪ ಫ್ರೀ ಆಗ್ತಿದ್ದಂಗೆ ಪುರುಷೋತ್ತಮ್ ನೆನಪಾದ. ಇಂಟರ್‌ನೆಟ್‌ನಲ್ಲಿ ಅಂತರ್‌ಸಿಂಗಿ ವಿಲೇಜ್‌ಗಾಗಿ ಹುಡುಕಾಟ ಆರಂಭಿಸಿದೆ...
ಒಂದಷ್ಟು ಹುಡುಕಾಟದ ಬಳಿಕ ಅಂತರ್‌ಸಿಂಗಿ ವಿಲೇಜ್‌ ಬಗ್ಗೆ ಮಾಹಿತಿ ಸಿಕ್ಕಿತ್ತು. ಒರಿಸ್ಸಾ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಗಂಜಂ ಅನ್ನೋ ಜಿಲ್ಲೆಗೆ ಈ ಅಂತರ್ ಸಿಂಗಿ ವಿಲೇಜ್ ಒಳಪಡುತ್ತೆ. ಆರಂಭದಲ್ಲಿ ಗಂಜಂ ಜಿಲ್ಲೆಯ ವೆಬ್‌ಸೈಟ್ ಮೂಲಕ ಪೊಲೀಸ್ ಕಂಟ್ರೋಲ್ ರೂಮ್ ಮಾಹಿತಿ ಕಲೆಹಾಕಿದೆ. ಇದಾದ ಬಳಿಕ ಕಂಟ್ರೋಲ್ ರೂಮ್ ಸಿಬ್ಬಂದಿ ಜೊತೆಗೆ ಮಾತನಾಡಿ ಅಂತರ್‌ಸಿಂಗಿ ಗ್ರಾಮ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರತ್ತೆ ಅನ್ನೋದನ್ನು ತಿಳ್ಕೊಂಡು ಆ ಠಾಣೆಯ ನಂಬರ್ ಪಡ್ಕೊಂಡೆ. ಅಂತರ್‌ಸಿಂಗಿ ಗ್ರಾಮ ಜರಡ ಅನ್ನೋ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೆ. ವೆಬ್‌ಸೈಟ್‌ನಲ್ಲಿ ಸಿಕ್ಕಿದ ಜರಡ ಠಾಣೆಯ ನಂಬರ್‌ಗೆ ಫೋನ್ ಮಾಡಿ ಅಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ನಂಬರ್ ಪಡ್ಕೊಂಡೆ. ನಂತರ ಸರ್ಕಲ್ ಇನ್ಸ್‌ಪೆಕ್ಟರ್‌ ನಂಬರ್‌ಗೆ ಕರೆ ಮಾಡಿ ನಾನು ಬೆಂಗಳೂರಿನಿಂದ ಕರೆ ಮಾಡ್ತಿದ್ದೀನಿ ಎಂದು ಹೇಳಿ ವಿಷಯ ಪ್ರಸ್ತಾಪ ಮಾಡಿದೆ. ಇದಕ್ಕೂ ಮುನ್ನ ಗಂಜಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯಾರು ಅನ್ನೋದನ್ನು ತಿಳಿದುಕೊಂಡು ಐಪಿಎಸ್ ಸಿವಿಲ್ ಲಿಸ್ಟ್‌ ಮೂಲಕ ಅವರ ಬ್ಯಾಚ್ ಯಾವುದು ಅನ್ನೋದನ್ನು ತಿಳ್ಕೊಂಡಿದ್ದೆ. ತದನಂತರ ಅವರದ್ದೇ ಬ್ಯಾಚ್‌ನ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿಯೊಬ್ಬರ ಮೂಲಕ ಫೋನ್ ಮಾಡಿಸಿ ಸಹಾಯ ಮಾಡುವಂತೆ ಮನವಿ ಮಾಡಿಸಿದ್ದೆ. ಬ್ಯಾಚ್‌ಮೇಟ್ ಒಬ್ರು ಫೋನ್ ಮಾಡಿ ಹೇಳಿದ್ದರಿಂದ ಗಂಜಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ಜರಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿ ಸಹಾಯ ಮಾಡುವಂತೆ ಸೂಚಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಫೋನ್ ಮಾಡಿದ್ದಕ್ಕೋ ಅಥವಾ ನನ್ನ ಮನವಿ ಅವರಿಗೆ ಅರ್ಥ ಆಗಿದ್ದಕ್ಕೋ ಗೊತ್ತಿಲ್ಲ.. ಜರಡಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸುಜಿತ್ ಕೆ ನಾಯಕ್ ತುಂಬಾ ಚೆನ್ನಾಗಿ ರೆಸ್ಪಾಂಡ್ ಮಾಡಿದ್ರು. ನಾನು ಫೋನ್ ಮಾಡಿ ವಿಷಯ ಹೇಳ್ತಿದ್ದಂಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ವ್ಯಾಟ್ಸಪ್ ಮೂಲಕ ಪುರುಷೋತ್ತಮ್ ಫೋಟೋ ಕಳುಹಿಸುವಂತೆ ಹೇಳಿದ್ರು. ಫೋನ್ ಡಿಸ್‌ಕನೆಕ್ಟ್ ಆಗ್ತಿದ್ದಂಗೆ ನಾನು ವ್ಯಾಟ್ಸಪ್ ಮೂಲಕ ಪುರುಷೋತ್ತಮ್‌ನ ಫೋಟೋ ರವಾನಿಸಿದೆ. ಬಹುಷ ನಾನು ಬೆಳಿಗ್ಗೆ ಫೋಟೋ ಕಳುಹಿಸಿದ್ದೆ ಅನ್ಸತ್ತೆ. ಸಂಜೆಯಾಗ್ತಿದ್ದಂಗೆ ಸುಜಿತ್ ಕೆ ನಾಯಕ್ ನನಗೆ ಫೋನ್ ಮಾಡಿದ್ರು. ಹ್ಯಾಪಿ ನ್ಯೂಸ್, ಪುರುಷೋತ್ತಮ್ ಫ್ಯಾಮಿಲಿಯನ್ನು ಪತ್ತೆ ಹಚ್ಚಿದ್ದೇವೆ ಅಂದ್ರು. ನನ್ನ ಸಂತೋಷಕ್ಕೆ ಪಾರವೇ ಇರ್ಲಿಲ್ಲ... ಕೆಲವೇ ಗಂಟೆಗಳಲ್ಲಿ ಹೇಗೆ ಪತ್ತೆ ಹಚ್ಚಿದ್ದು ಅನ್ನೋ ಕುತೂಹಲವನ್ನು ಸುಜಿತ್ ಅವರಿಗೆ ಕೇಳಿದೆ. ಆಗ ಸುಜಿತ್ ಬೆಳಿಗ್ಗೆಯಿಂದ ನಡೆದ ಇನ್ವೆಸ್ಟಿಗೇಷನ್ ಬಗ್ಗೆ ಮಾಹಿತಿ ನೀಡಿದ್ರು. ಸುಜಿತ್ ಅವರು ನಾನು ವ್ಯಾಟ್ಸಪ್‌ನಲ್ಲಿ ಕಳುಹಿಸಿದ್ದ ಪುರುಷೋತ್ತಮ್ ಫೋಟೋ ಪ್ರಿಂಟ್ ಔಟ್ ತೆಗೆದು, ಅದನ್ನು ತಮ್ಮ ಠಾಣೆಯ ಸಿಬ್ಬಂದಿ ಮೂಲಕ ಅಂತರ್‌ಸಿಂಗಿ ಗ್ರಾಮದ ಹಲವೆಡೆ ಹಂಚಿದ್ದರು. ಅಲ್ಲದೆ ತಮ್ಮ ಸಿಬ್ಬಂದಿ, ಬಾತ್ಮೀದಾರರು ಮತ್ತು ಊರ ಮುಖಂಡರ ಮೂಲಕ ಮಾಹಿತಿ ಕಲೆಹಾಕಿದ್ದರು. ಫೋಟೋದಲ್ಲಿ ಇರುವ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕರೆ ಮಾಡುವಂತೆ ಠಾಣೆಯ ನಂಬರ್ ಸಹ ನೀಡಿದ್ದರು. ಮಧ್ಯಾಹ್ನ ಎಷ್ಟೋ ಹೊತ್ತಿಗೆ ಸಾರ್ವಜನಿಕರ ಮೂಲಕ ಪೊಲೀಸರಿಗೆ ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಖುದ್ದು ಅಲ್ಲಿಗೆ ತೆರಳಿ ಪುರುಷೋತ್ತಮ್ ಕುಟುಂಬದವರ ಜೊತೆಗೆ ಮಾತನಾಡಿದ್ರು. ಫೋಟೋದಲ್ಲಿರುವ ವ್ಯಕ್ತಿಯನ್ನು ಪುರುಷೋತ್ತಮ್ ಕುಟುಂಬದವರು ಪತ್ತೆ ಹಚ್ಚಿದ್ರು. ಪುರುಷೋತ್ತಮ್ ಅಣ್ಣ ತಾರಕೇಶ್ ಸಂಪರ್ಕಕ್ಕೆ ಸಿಕ್ಕಿದ್ರು. ನನಗೆ ಪುರುಷೋತ್ತಮ್ ಯಾರೂ ಆಗಿರಲಿಲ್ಲ.. ಗೆಳೆಯನೂ ಅಲ್ಲ, ರಕ್ತ ಸಂಬಂಧವೂ ಇಲ್ಲ.. ವೈಯಕ್ತಿಕವಾಗಿ ಪುರುಷೋತ್ತಮ್ ಕುಟುಂಬದವರನ್ನು ಪತ್ತೆ ಹಚ್ಚಿದೆ ಅನ್ನೋ ಸಂತೋಷ. ಹಾಗಿದ್ದಾಗ ಪುರುಷೋತ್ತಮ್ ಕುಟುಂಬದವರು ಎಷ್ಟು ಖುಷಿ ಪಟ್ಟಿರಬಹುದು ಅಂತ ಅನ್ಸಿತ್ತು..
ಮುಂದಿನ ಪ್ರಕ್ರಿಯೆಗಳೆಲ್ಲವೂ ಬೇಗನೇ ಆಯ್ತು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಪುರುಷೋತ್ತಮ್ ಅಮ್ಮ, ಅಣ್ಣ, ಪತ್ನಿ ಮತ್ತು ಮಕ್ಕಳ ಫೋಟೋ ತೆಗೆದು ಇನ್ಸ್‌ಪೆಕ್ಟರ್‌ ಸುಜಿತ್‌ಗೆ ಕಳುಹಿಸಿದ್ದರು. ಸುಜಿತ್ ಅವೆಲ್ಲವನ್ನೂ ನಂಗೆ ಫಾರ್ವಡ್ ಮಾಡಿದ್ದರು. ನಾನು ಆ ಫೋಟೋಗಳನ್ನೆಲ್ಲ ಅಜೀಜ್‌ಗೆ ಕಳುಹಿಸಿದ್ದೆ. ಆದ್ರೆ ಅಜೀಜ್ ಆ ಪೋಟೋಗಳನ್ನು ಪುರುಷೋತ್ತಮ್‌ಗೆ ತೋರಿಸಿರಲಿಲ್ಲ. ಫೋಟೋ ಈಗ್ಲೇ ತೋರಿಸಿದ್ರೆ ಕುಟುಂಬದವರನ್ನು ನೇರವಾಗಿ ನೋಡಿದಾಗ ಉಂಟಾಗುವ ಭಾವನೆ ಕೊಂಚ ಕಡಿಮೆಯಾಗಬಹುದು. ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಬೇಕು ಅಂತ ಸ್ವಲ್ಪ ಸಸ್ಪೆನ್ಸ್ ಇಟ್ಟುಕೊಂಡಿದ್ವಿ.
ಈ ನಡುವೆ ಅಧಿಕೃತ ಮಾಹಿತಿ ವಿನಿಮಯಕ್ಕಾಗಿ ಇನ್ಸ್‌ಪೆಕ್ಟರ್ ಸುಜಿತ್ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಜೊತೆಗೆ ಮಾತನಾಡಿ ನಂಬರ್ ಕೊಡುವಂತೆ ಹೇಳಿದ್ರು. ಅದರಂತೆ ನಾನು ಬೆಳ್ತಂಗಡಿ ಪೊಲೀಸ್ ಠಾಣೆಯ ಅಂದಿನ ಸಬ್ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದ್ದೆ. ಅವರ ಪರಿಚಯ ನನಗೆ ಇರ್ಲಿಲ್ಲ. ನಾನೇ ನನ್ನ ಪರಿಚಯ ಹೇಳ್ಕೊಂಡು ಮುಂಡಾಜೆಯ ಪುರುಷೋತ್ತಮ್‌ ಕಥೆ ಹೇಳಿ, ಅಂತರ್‌ಸಿಂಗಿ ಗ್ರಾಮದಲ್ಲಿರುವ ಅವರ ಕುಟುಂಬದವರನ್ನು ಪತ್ತೆ ಹಚ್ಚಿದ ವಿಚಾರವನ್ನು ಹೇಳಿದೆ. ನಂತ್ರ ಅಧಿಕೃತ ಮಾಹಿತಿ ವಿನಿಮಯಕ್ಕಾಗಿ ಅಲ್ಲಿನ ಪೊಲೀಸರು ನಿಮ್ಮ ನಂಬರ್ ಕೇಳಿದ್ದಾರೆ ಅಂತ ಹೇಳಿದಾಗ ಸಬ್ ಇನ್ಸ್‌ಪೆಕ್ಟರ್ ಉತ್ತರಿಸಿದ ರೀತಿ ಮಾತ್ರ ವಿಚಿತ್ರವಾಗಿತ್ತು. ನಿಮ್ಗೆ ಯಾರ್ರೀ ಹೇಳಿದ್ದು ಇದನ್ನೆಲ್ಲ ಮಾಡೋಕೆ, ಅವರ ಕುಟುಂಬದವರನ್ನು ಪತ್ತೆ ಹಚ್ಚಲು ನಾವು ಪೊಲೀಸರು ಇದ್ದೀವಿ, ನಿಮ್ಗೆ ಇದೆಲ್ಲ ಯಾಕ್ ಬೇಕು ಅಂತ ಹೇಳಿ ಸಿಟ್ಟಲ್ಲಿ ಫೋನ್ ಇಟ್ರು. ನಂಗೆ ಸಾಮಾನ್ಯವಾಗಿ ಕೋಪ ಬರಲ್ಲ.. ಆದ್ರೆ ಅವತ್ತು ಅವರು ಆ ರೀತಿ ಹೇಳಿದಾಗ ಮಾತ್ರ ಪಿತ್ತ ನೆತ್ತಿಗೇರಿತ್ತು. ಆ ಕ್ಷಣಕ್ಕೆ ಕೋಪ ತೋರಿಸಿಕೊಳ್ಳದೆ ಮುಂದೇನು ಮಾಡೋದು ಅಂತ ಯೋಚನೆ ಮಾಡಿದೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್‌ಪಿ ಅವರ ಸರ್ಕಾರಿ ನಂಬರ್ ಮೊಬೈಲ್‌ನಲ್ಲಿ ಇತ್ತು. ಆ ನಂಬರ್‌ಗೆ ಕಾಲ್ ಮಾಡಿ ನನ್ನ ಪರಿಚಯ ಹೇಳ್ಕೊಂಡೆ. ನಂತ್ರ ಪುರುಷೋತ್ತಮ್ ಕಥೆ ಹೇಳಿದೆ. ನಾನು ಪೂರ್ತಿ ಸ್ಟೋರಿ ಹೇಳ್ತಿದ್ದಂಗೆ ಅವರು ಶಭಾಶ್ ಹೇಳಿ ಜರಡಾ ಪೊಲೀಸರಿಗೆ ನನ್ನ ನಂಬರ್ ಕೊಡಿ, ನಾನೇ ಅವರೊಂದಿಗೆ ಮಾತಾಡ್ತೇನೆ ಅಂತ ಹೇಳಿದ್ರು. ಸರಿ ಸಾರ್ ಅಂತ ಹೇಳಿ ಫೋನ್ ಇಟ್ಟೆ. ಇದಾದ ನಂತರ ಇನ್ಸ್‌ಪೆಕ್ಟರ್‌ ಸುಜಿತ್‌ಗೆ ಅವರ ನಂಬರ್ ಕೊಟ್ಟು ಮಾತಾಡುವಂತೆ ಹೇಳಿದ್ದೆ. ಮರುದಿನವೇ ಜರಡಾ ಪೊಲೀಸ್ ಮತ್ತು ದಕ್ಷಿಣ ಕನ್ನಡ ಪೊಲೀಸರ ಮಧ್ಯೆ ಅಧಿಕೃತ ಮಾಹಿತಿ ವಿನಿಮಯವಾಯ್ತು. ಈ ನಡುವೆ ನಾನು ಬಂಟ್ವಾಳ ಉಪ ವಿಭಾಗದ ಡಿವೈಎಸ್‌ಪಿ ಯಾರು ಅಂತ ಆಗಿನ ಮಂಗಳೂರು ಟಿವಿನೈನ್ ರಿಪೋರ್ಟರ್ ಆಗಿದ್ದ ರಾಜೇಶ್ ಅವರಿಗೆ ಕೇಳಿದ್ದೆ. ಆಗ್ಲೇ ನೋಡಿ ಗೊತ್ತಾಗಿದ್ದು, ಅವರು ಡಿವೈಎಸ್‌ಪಿ ಅಲ್ಲ, ಐಪಿಎಸ್‌ ಅಧಿಕಾರಿ ಅನ್ನೋದು. 2014ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್.. ಹಾಸನ ಎಸ್‌ಪಿ ಆಗಿದ್ದ ರಾಹುಲ್ ಸರ್ ಇತ್ತೀಚೆಗಷ್ಟೇ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದಾರೆ. ಪ್ರೊಬೆಷನರಿ ಅವಧಿಯ ಬಳಿಕ ಬಂಟ್ವಾಳ ಉಪ ವಿಭಾಗದ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಾನೊಬ್ಬ ಐಪಿಎಸ್ ಅಧಿಕಾರಿ ಅನ್ನೋ ಯಾವ ಹಮ್ಮೂ ಬಿಮ್ಮೂ ಇಲ್ಲದೆ ನನ್ನೊಂದಿಗೆ ಒಳ್ಳೆಯ ಸ್ನೇಹಿತನ ರೀತಿಯಲ್ಲಿ ಮಾತನಾಡಿದ್ರು. ಆ ಸ್ನೇಹ ಹಾಗೇ ಮುಂದುವರಿಯಿತು... ವಿ ಆರ್ ಬೆಸ್ಟ್ ಫ್ರೆಂಡ್ಸ್ ನವ್...
ಪುರುಷೋತ್ತಮ್ ಅಣ್ಣ ತಾರಕೇಶ್ ಮತ್ತಿಬ್ಬರು ಸಂಬಂಧಿಕರು ಗಂಜಂನಿಂದ ರೈಲು ಹತ್ತಿ ಮಂಗಳೂರಿಗೆ ಹೊರಟೇ ಬಿಟ್ರು. ಗಂಜನಿಂದ ಮಂಗಳೂರಿಗೆ ಸುಮಾರು 1628 ಕಿಲೋಮೀಟರ್. ರೈಲು ಹತ್ತಿ ಮಂಗಳೂರಿಗೆ ಬಂದ ತಾರಕೇಶ್ ಮತ್ತಿತರ ಸಂಬಂಧಿಕರನ್ನು ಅಜೀಜ್ ಭೇಟಿ ಮಾಡಿ ತನ್ನ ಕಾರಿನಲ್ಲಿ ಉಜಿರೆಗೆ ಕರ್ಕೊಂಡು ಬಂದ್ರು. ತಡರಾತ್ರಿಯಾಗಿದ್ದರಿಂದ ಒಂದು ಹೋಟೆಲ್‌ನಲ್ಲಿ ರೂಮ್ ಮಾಡಿ ಅವರಿಗೆ ಅಲ್ಲಿಯೇ ತಂಗುವಂತೆ ತಿಳಿಸಲಾಯ್ತು. ಮರುದಿನ ಬೆಳಿಗ್ಗೆ ಅಜೀಜ್ ಮತ್ತೆ ಹೋಟೆಲ್‌ಗೆ ಹೋಗಿ ತಾರಕೇಶ್ ಮತ್ತು ಸಂಬಂಧಿಕರನ್ನು ಕಾರಿನಲ್ಲಿ ಕೂರಿಸಿಕೊಂಡು ಮುಂಡಾಜೆಯ ಸಂಗಮ್ ಹೋಟೆಲ್‌ಗೆ ಕರ್ಕೊಂಡು ಬಂದ್ರು. ಆ ಕ್ಷಣದವರೆಗೂ ಪುರುಷೋತ್ತಮ್‌ಗೆ ತನ್ನ ಕುಟುಂಬದವರನ್ನು ನೋಡ್ತೀನಿ ಅನ್ನೋ ಕಲ್ಪನೆಯೂ ಇರ್ಲಿಲ್ಲ....
ಅಜೀಜ್ ಅವರ ಮಾರುತಿ 800 ಕಾರಿನಿಂದ ಇಳಿದು ಬಂದ ತನ್ನ ಅಣ್ಣನನ್ನು ನೋಡಿ ಪುರುಷೋತ್ತಮ್‌ಗೆ ಮಾತೇ ಹೊರ ಬರ್ಲಿಲ್ಲ. ನಿಂತಲ್ಲೇ ನಿಂತು ಬಿಟ್ಟಿದ್ರು. ಆತನ ಮುಖದ ಭಾವನೆಯೇ ಅರ್ಥ ಆಗ್ತಿರ್ಲಿಲ್ಲ.. ಕೆಲವು ಕ್ಷಣಗಳ ನಂತರ ಪುರುಷೋತ್ತಮ್ ಕಣ್ಣಲ್ಲಿ ಹನಿಗಳು ಕಾಣಿಸಿಕೊಂಡಿತ್ತು. ಖುಷಿ, ದುಃಖ, ಆಶ್ಚರ್ಯ.. ಎಲ್ಲವೂ ಪುರುಷೋತ್ತಮ್ ಮುಖದಲ್ಲಿತ್ತು. ಅಣ್ಣ ತಮ್ಮಂದಿರಿಬ್ಬರೂ ಆಲಿಂಗನ ಮಾಡ್ಕೊಂಡು ಸ್ವಲ್ಪ ಹೊತ್ತು ನಿಂತಿದ್ರು. ಅಣ್ಣನ ಜೊತೆಗಿದ್ದ ಸಂಬಂಧಿಕರನ್ನು ಕಂಡು ಪುರುಷೋತ್ತಮ್ ಮತ್ತಷ್ಟು ಭಾವುಕನಾದ. ಅಂದ ಹಾಗೆ ಎಲ್ರೂ ಅಂದ್ಕೊಂಡಿದ್ದು, ಪುರುಷೋತ್ತಮ್ ಎರಡು ವರ್ಷದಿಂದ ಮನೆಯಿಂದಾಚೆ ಇದ್ದಾನೆ ಅನ್ನೋದು.. ಆದ್ರೆ ಅಸಲಿಗೆ ಪುರುಷೋತ್ತಮ್‌ ಅಂತರ್ ಸಿಂಗಿಯ ಮನೆ ಬಿಟ್ಟು ಬರೋಬ್ಬರಿ 10 ವರ್ಷಗಳಾಗಿತ್ತು. 2005ರಲ್ಲಿ ಕೆಲಸಕ್ಕೆಂದು ಕೇರಳದ ಕೊಚ್ಚಿಗೆ ಹೋಗಿದ್ದ ಪುರುಷೋತ್ತಮ್ ವಾಪಾಸ್ ಬಂದಿರಲಿಲ್ಲ. ಕೆಲವು ತಿಂಗಳುಗಳ ಬಳಿಕ ಅಂದಿನ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ನೀಡಿದ್ದರು. ಆದ್ರೆ ಅದರಿಂದ ಪ್ರಯೋಜನವೇನೂ ಆಗಿರಲಿಲ್ಲ. ವರ್ಷಗಳಾದ್ರೂ ಪುರುಷೋತ್ತಮ್ ವಾಪಾಸ್ ಬಾರದೆ ಇದ್ದಿದರಿಂದ ಮನೆಯವರೆಲ್ಲ ನಿರೀಕ್ಷೆ ಕಳೆದುಕೊಂಡಿದ್ರು. ಪುರುಷೋತ್ತಮ್ ಬದುಕಿದ್ರೆ ಒಮ್ಮೆಯಾದ್ರೂ ಮನೆಗೆ ಬರ್ತಿದ್ದ.. ಇಷ್ಟು ವರ್ಷಗಳಾದ್ರೂ ಬರ್ಲಿಲ್ಲ ಅಂದ್ರೆ ಅವನಿಗೆ ಏನೋ ಅನಾಹುತವಾಗಿರಬಹುದು ಅಂದ್ಕೊಂಡಿದ್ರು. ಕೊಚ್ಚಿಗೆ ಕೆಲಸಕ್ಕೆ ಬಂದಿದ್ದ ಪುರುಷೋತ್ತಮ್‌ಗೆ ಏನ್ ಸಮಸ್ಯೆ ಆಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಪುರುಷೋತ್ತಮ್‌ಗೆ ಹಳೆಯ ದಿನಗಳೂ ನೆನಪಿಲ್ಲ.. ಹಾಗಾಗಿ 2005ರಿಂದ 2013ರವರೆಗೆ ಏನೇನ್ ಆಯ್ತು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದಿದೆ.
10 ವರ್ಷಗಳ ಬಳಿಕ ಪುರುಷೋತ್ತಮ್ ಮತ್ತೆ ಸಿಕ್ಕಿದ ಖುಷಿ ಒಂದೆಡೆಯಾದ್ರೆ, ಮತ್ತೊಂದು ಪುರುಷೋತ್ತಮ್ ಮಗಳ ಮದುವೆ ಸಂಭ್ರಮ. ಪುರುಷೋತ್ತಮ್ ಸಿಗುವ ಮುನ್ನವೇ ಅಣ್ಣ ತಾರಕೇಶ್ ಆಕೆಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಫಿಕ್ಸ್ ಮಾಡಿದ್ರು. ಪುರುಷೋತ್ತಮ್ ಸಿಗದೆ ಇದ್ರೂ ಮುಂದಿನ ಮೂರು ತಿಂಗಳಲ್ಲಿ ಆ ಹುಡುಗಿಯ ಮದುವೆ ಆಗ್ತಿತ್ತು. 10 ವರ್ಷದಿಂದ ಪುರುಷೋತ್ತಮ್ ಮನೆಗೆ ಬಂದಿಲ್ಲ. ಇನ್ನು ಬರ್ತಾನೆ ಅನ್ನೋ ನಿರೀಕ್ಷೆಯೂ ಇಲ್ಲ. ಹಾಗಾಗಿಯೇ ತಮ್ಮನ ಮಗಳಿಗೆ ಮದುವೆ ವಯಸ್ಸಾಗಿದ್ದರಿಂದ ದೊಡ್ಡಪ್ಪನಾದ ತಾರಕೇಶ್ ತಾನೇ ನಿಂತು ಮದುವೆ ಮಾಡಿಸೋಕೆ ಮುಂದಾಗಿದ್ದ. ಆದ್ರೆ ವಾಪಾಸ್ ಬರಲ್ಲ ಅಂದ್ಕೊಂಡಿದ್ದ ಅಪ್ಪ ಅನಿರೀಕ್ಷಿತವಾಗಿ ಮಗಳ ಮದುವೆ ಸಮಯಕ್ಕೆ ಸರಿಯಾಗಿ ಕಣ್ಣೆದುರಿಗಿದ್ದ. ಇದೆಲ್ಲ ಸಿನೆಮಾ ಸ್ಟೋರಿ ಥರ ಇದೆ. ಆದ್ರೆ ಇವೆಲ್ಲವೂ ರಿಯಲ್ ಸ್ಟೋರಿ.. ಹೀಗೆಲ್ಲ ಆಗತ್ತೆ ಅನ್ನೋ ಯಾವ ಊಹೆಯೂ ನನಗೆ ಇರ್ಲಿಲ್ಲ. 2 ವರ್ಷಗಳಿಂದ ಮನೆ ಬಿಟ್ಟಿರುವ ಪುರುಷೋತ್ತಮ್ ವಾಪಾಸ್ ತನ್ನ ಕುಟುಂಬಸ್ಥರನ್ನು ಸೇರಿದ್ರೆ ಸಾಕು ಅಂದ್ಕೊಂಡು ಮಾಡಿದ ಪ್ರಯತ್ನ.. ಏನೇನೋ ಆಗೋಯ್ತು... ಸೋ ಫೈನಲಿ ಪುರುಷೋತ್ತಮ್ ತನ್ನ ಅಣ್ಣನ ಜೊತೆಗೆ ಊರಿನತ್ತ ಪ್ರಯಾಣ ಬೆಳೆಸೋಕೆ ಮುಂದಾದ. ಅಂದು ಸಂಗಮ್ ಹೋಟೆಲ್‌ನಲ್ಲಿ ಊರವರೆಲ್ಲ ಸೇರಿದ್ದರು. ವರ್ಷಗಳ ಬಳಿಕ ಒಂದಾದ ಪುರುಷೋತ್ತಮ್ ಕುಟುಂಬದ ಸಂಭ್ರಮವನ್ನು ಕಣ್ತುಂಬಿಕೊಂಡ್ರು. ಇವೆಲ್ಲದರ ಮಧ್ಯೆ ಹೋಟೆಲ್ ಮಾಲೀಕ ಲತೀಫ್ 25 ಸಾವಿರ ರೂಪಾಯಿ ಹಣವಿದ್ದ ಒಂದು ಕವರ್‌ನ ಪುರುಷೋತ್ತಮ್ ಅಣ್ಣ ತಾರಕೇಶ್ ಕೈಗಿತ್ತರು. ಇವ್ನು 2 ವರ್ಷಗಳಿಂದ ಇಲ್ಲಿ ಕೆಲಸ ಮಾಡ್ತಿದ್ದಾನೆ. ಅವನ ಹೆಸರಲ್ಲಿ ನಾನು ಪಿಗ್ಮಿಗೆ ಹಾಕಿದ ಹಣ ಇದು ಅಂತ ಕೊಟ್ರೆ ಪುರುಷೋತ್ತಮ್ ಹಣ ಸ್ವೀಕರಿಸಲು ತಯಾರಿರಲಿಲ್ಲ. 2 ವರ್ಷ ಊಟ, ತಿಂಡಿ, ಬಟ್ಟೆ, ಇರೋಕೆ ಜಾಗ ಜೊತೆಗೆ ಕುಟುಂಬದವನ ರೀತಿಯಲ್ಲಿ ಪ್ರೀತಿಸಿದ ಮಾಲೀಕ.. ತಾನು 2 ವರ್ಷ ಕೆಲಸ ಮಾಡಿದ್ದು ಹೌದು.. ಆದ್ರೆ ಅದಕ್ಕೆ ಹಣ ಪಡೆದುಕೊಳ್ಳಲು ಪುರುಷೋತ್ತಮ್ ತಯಾರಿರಲಿಲ್ಲ. ಆದ್ರೆ ಲತೀಫ್ ತನ್ನ ಪಟ್ಟು ಬಿಡದೆ ಬಿದ್ದಾಗ ಅನಿವಾರ್ಯವಾಗಿ ಪುರುಷೋತ್ತಮ್ ಅಣ್ಣ ಹಣ ಸ್ವೀಕರಿಸಿದ್ರು. ಅಂದು ಮಧ್ಯಾಹ್ನ ಎಲ್ರೂ ಒಟ್ಟಾಗಿ ಕೂತು ಊಟ ಮಾಡಿದ್ರು. ಮಧ್ಯಾಹ್ನದ ಬಳಿಕ ಒಲ್ಲದ ಮನಸಿನಿಂದ ಪುರುಷೋತ್ತಮ್‌ನನ್ನು ಬೀಳ್ಕೊಟ್ರು. ಪುರುಷೋತ್ತಮ್ ತನ್ನ ಅಣ್ಣನ ಜೊತೆಗೆ ಕಾರ್ ಹತ್ತಿ ಕೂತಿದ್ದ. ಆದ್ರೆ ಅತನ ಕಣ್ಣಾಲಿಗಳು ತೇವಗೊಂಡಿತ್ತು. ಒಂದು ಕಡೆ 10 ವರ್ಷಗಳ ಬಳಿಕ ತನ್ನ ಹೆತ್ತವರು, ಪತ್ನಿ ಮತ್ತು ಮಕ್ಕಳನ್ನು ನೋಡುವ ಆಸೆ.. ಮತ್ತೊಂದೆಡೆ 2 ವರ್ಷಗಳಿಂದ ತನ್ನನ್ನು ಸಾಕಿ ಸಲಹಿದ ಲತೀಫ್, ಅಜೀಜ್ ಮತ್ತು ಊರವರ ಪ್ರೀತಿ, ಕಾಳಜಿ, ಅಕ್ಕರೆ..
ರಾತ್ರಿ ಮಂಗಳೂರಿನಿಂದ ಹೊರಟ ರೈಲಿನಲ್ಲಿ ಪುರುಷೋತ್ತಮ್‌ನನ್ನು ಕರ್ಕೊಂಡು ಹೋದ್ರು. ಊರು ಸೇರಿದ ಬಳಿಕ ಅಲ್ಲಿನ ಚಿತ್ರಣ ಹೇಗಿತ್ತು ಅನ್ನೋದನ್ನು ಕಣ್ಣಾರೆ ನೋಡಿಲ್ಲ. ಆದ್ರೆ ಇನ್ಸ್‌ಪೆಕ್ಟರ್ ಸುಜಿತ್ ತಮ್ಮ ಸಿಬ್ಬಂದಿ ನೀಡಿದ ವಿವರಣೆಯನ್ನು ನನಗೆ ಹೇಳಿದ್ರು.. 10 ವರ್ಷಗಳ ಬಳಿಕ ಮಗನನ್ನು ನೋಡಿದ ಕೂಡ್ಲೇ ಓಡೋಡಿ ಬಂದ ಅಮ್ಮ ತಬ್ಬಿಕೊಂಡಿದ್ದು ಜೊತೆಗೆ ಪತ್ನಿ ಮಕ್ಕಳು.. ಸ್ವಲ್ಪ ಹೊತ್ತು ಅಲ್ಲಿ ಮಾತೇ ಇರ್ಲಿಲ್ಲ.. ಎಲ್ರೂ ಕಣ್ಣೀರಲ್ಲೇ ಕಣ್ಣಲ್ಲೇ ಪರಸ್ಪರ ಮಾತನಾಡಿಕೊಂಡಿದ್ರು... ಇದೆಲ್ಲ ಆಗಿ ಒಂದೆರಡು ದಿನಗಳ ಬಳಿಕ ಪುರುಷೋತ್ತಮ್ ಅಣ್ಣನ ನಂಬರ್‌ನಿಂದ ನಂಗೆ ಫೋನ್ ಬಂತು. ಅತ್ತ ಕಡೆಯಿಂದ ಮಾತನಾಡಿದ್ದು ಪುರುಷೋತ್ತಮ್ ಅಮ್ಮ.. ಆಕೆ ಮಾತನಾಡಿದ್ದು ಒರಿಸ್ಸಾ ಭಾಷೆಯಲ್ಲಿ.. ಆ ಭಾಷೆ ನಂಗೆ ಅರ್ಥ ಆಗ್ತಿರ್ಲಿಲ್ಲ.. ಆದ್ರೆ ಅವ್ರು ಥ್ಯಾಂಕ್ಸ್ ಹೇಳ್ತಾ ಇದ್ದಾರೆ ಅನ್ನೋದು ಮಾತ್ರ ಅರ್ಥ ಆಯ್ತು.. ಮಗನನ್ನು ಸುರಕ್ಷಿತವಾಗಿ ವಾಪಾಸ್ ಮನೆ ಸೇರಿಸಿದ್ದಕ್ಕೆ ಆಕೆ ಏನೇನೋ ಹೇಳಿದ್ರು. ಜೊತೆಗೆ ಒಂದಿಷ್ಟು ಕಣ್ಣೀರು..
ಇದಾದ ಕೆಲ ದಿನಗಳ ಬಳಿಕ ಪುರುಷೋತ್ತಮ್ ತನ್ನ ಪತ್ನಿ ಮತ್ತು ಮಕ್ಕಳ ಜೊತೆಗೆ ನಿಂತಿದ್ದ ಫೋಟೋ ಒಂದು ವ್ಯಾಟ್ಸಪ್‌ನಲ್ಲಿ ಬಂತು. ನೋಡಿದ್ರೆ ಅದು ಪೊಲೀಸ್ ಠಾಣೆಯಲ್ಲಿ ತೆಗೆದಿದ್ದು. ಪುರುಷೋತ್ತಮ್‌ನ ಇನ್ಸ್‌ಪೆಕ್ಟರ್ ಸುಜಿತ್ ಠಾಣೆಗೆ ಕರೆಸಿಕೊಂಡಿದ್ರು. ಅವಾಗ ಪತ್ನಿ, ಮಕ್ಕಳು ಎಲ್ರೂ ಬಂದಿದ್ರು. ಸುಜಿತ್ ಅವರ ಕೊಠಡಿಯಲ್ಲಿ ಎಲ್ರೂ ಜೊತೆಗಿದ್ದ ಫೋಟೋಗಳನ್ನು ನನಗೆ ಕಳುಹಿಸಿದ್ರು. ಕುಟುಂಬವನ್ನು ಒಂದು ಮಾಡಿದ್ದಕ್ಕೆ ಸುಜಿತ್ ಕೂಡ ಥ್ಯಾಂಕ್ಸ್ ಹೇಳಿದ್ರು... ಇವೆಲ್ಲ ಆಗಿ ಮೂರು ತಿಂಗಳಲ್ಲಿ ಮಗಳ ಮದುವೆಯೂ ಆಯ್ತು.. ಪುರುಷೋತ್ತಮ್ ಊರಲ್ಲೇ ಏನೋ ಕೆಲ್ಸ ಮಾಡ್ತಾ ಕುಟುಂಬದ ಜೊತೆಗೆ ಖುಷಿಯಾಗಿದ್ದಾನೆ. ಲತೀಫ್ ಮತ್ತು ಅಜೀಜ್‌ಗೆ ಹೆಚ್ಚಾಗಿ ಕಾಲ್ ಮಾಡ್ತಾರೆ.. ಅವ್ರು ಹೇಳೋದು ಇವ್ರಿಗೆ ಅರ್ಥ ಆಗಲ್ಲ, ಇವ್ರು ಹೇಳೋದು ಅವ್ರಿಗೆ ಅರ್ಥ ಆಗಲ್ಲ.. ಆದ್ರೂ ಫೋನ್‌ನಲ್ಲಿ ಮಾತಾಡ್ತಾರೆ.. ಕೆಲ ದಿನಗಳ ಹಿಂದಷ್ಟೇ ನಾನು ಸಹ ಪುರುಷೋತ್ತಮ್ ಅಣ್ಣನಿಗೆ ಪೋನ್ ಮಾಡಿ ಮಾತನಾಡಿದ್ದೆ... ಇವೆಲ್ಲ ಆಗಿ ಮೂರು ವರ್ಷ ಕಳೆಯಿತು.. ಇಂದಿಗೂ ಸಂಪರ್ಕದಲ್ಲಿದ್ದಾರೆ.. ಜೊತೆಗೆ ಇನ್ಸ್‌ಪೆಕ್ಟರ್ ಸುಜಿತ್ ಕೆ ನಾಯಕ್ ಕೂಡ..

{ From - Sunil Dharmasthala's FACE BOOK with thanks }



Image may contain: 1 person, smiling

No comments:

Post a Comment