stat Counter



Saturday, June 6, 2020

ಮುರಳೀಧರ ಉಪಾಧ್ಯ ಹಿರಿಯಡಕ -- ಬಾಬು ಶಿವ ಪೂಜಾರಿ ಅವರ " ಬಿಲ್ಲವರು ಒಂದು ಅಧ್ಯಯನ "

’ಗುರುತ’ ಪತ್ರಿಕೆಯ ಸಂಪಾದಕರಾಗಿರುವ ಬಾಬು ಶಿವ ಪುಜಾರಿ ಅವರ ಮೊದಲ ಕೃತಿ ’ಬಿಲ್ಲವರು ಒಂದು ಅಧ್ಯಯನ’.
’ಮೂರ್ತೆಗಾರಿಕೆ ಮತ್ತು ಬಿಲ್ಲವರು’ ಎಂಬ ಅಧ್ಯಯದಲ್ಲಿ ಲೇಖಾಕರು ಮೂರ್ತೆಗಾರಿಕೆ ಬಿಲ್ಲವರ ಪ್ರಮುಖ ಉದ್ಯೋಗವಾಗಿರಲಿಲ್ಲ. ಉಪವೃತ್ತಿಯಾಗಿತ್ತು ಎಂದು ವಿವರಿಸಿದ್ದಾರೆ.
’ನಾಯ್ಗರು/ನಾಯಕರು’ ಎಂಬ ಅಧ್ಯಾಯದಲ್ಲಿ ಲೇಖಕರು, ’ನಾಯಗ-ನಾಯ್ಗ ಎನ್ನುವುದು ಅನ್ವರ್ಥನಾಮವಾಗಿ ಅಥವಾ ಜಾತಿ ಸೂಚಕ ಹೆಸರಾಗಿ ಬಿಲ್ಲವ ಜನಾಂಗದಲ್ಲಿ ಸಾವಿರಾರು ವರ್ಷಗಳಿಂದ ಪ್ರಚಲಿತವಿದೆ. ಇಂದೂ ಕೂಡ ತುಳುನಾಡಿನಲ್ಲಿ ನಾಯ್ಗರೆಂದೇ ಕರೆಯಲ್ಪಡುವ ಬಿಲ್ಲವರೂ ಬಿಲ್ಲವ ಮನೆತನಗಲೂ ಇವೆ. ನಾಯ್ಗರು ಬಿಲ್ಲವರ ಪ್ರಾಚೀನ ಇತಿಹಾಸ ದಾಖಲೆಯ ಕೊಂಡಿಯಾಗಿ ಉಳಿದುಕೊಂಡಿದ್ದಾರೆ. ನಾಯಗರ ಇತಿಹಾಸವು ಪ್ರಾಚೀನ ಬಿಲ್ಲವರ ಸ್ಥಿತಿ-ಗತಿಗಳನ್ನು ತಿಳಿಯುವಲ್ಲಿ ಬಹುಪ್ರಮುಖವಾದ ಐತಿಹಾಸಿಕ ದಾಖಲೆಯಾಗಿದೆ" ಎಂದಿದ್ದಾರೆ.ನಾಯ್ಗರು ಬಿಲ್ಲವರು ಎಂಬ್ ಡಾ| ಪೀಟರ್ ಜೆ. ಕ್ಲಾಸ್ ಅವರ ಅಭಿಪ್ರಾಯವನ್ನು ಬಾಬು ಶೀವ ಪೂಜಾರಿ ಅವರು ಸಮರ್ಥಿಸಿದ್ದಾರೆ. 
’ಬಿಲ್ಲವರ-ನಾಯ್ಗರ ಉಲ್ಲೇಖ ಶಿಲಾಶಾಸನಗಳಲ್ಲಿ’ ಎಂಬ ಪ್ರ್ತ್ಯೇಕ ಅಧ್ಯಾಯ ಈ ಗ್ರಂಥದಲ್ಲಿದೆ. ಎಂಟನೆಯ ಶತಮಾನದ ಉತ್ತರಾರ್ಧದ ರಣಸಾಗರನ ಉದ್ಧಾವರ ಶಾಸನದಲ್ಲಿ ವಿಜಯ ನಾಯ್ಗರ ಮಗ ಕಾಲ್ತಿದೆ ಎಂಬವನು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಸತ್ತ ಉಲ್ಲೇಖ ಇದೆ. ಒಂಬತ್ತನೆಯ ಶತಮಾನದ ಪೂರ್ವಾರ್ಧದ ಶ್ವೇತವಾಹನನ ಉದ್ಧಾವರ ಶಾಸನದ ’ ಪಾಂಡ್ಯವಿಲ್ಲರಸರಾ ಮಗ ದೇವ್ರು. ಎಂಬ್ ಸಾಲಿನಲ್ಲಿ ಬಿಲ್ಲವರ ಜಾತಿ ಸೂಚಕ ಶಬ್ಧ ಪ್ರಯೋಗವಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ತುಳುನಾಡನ್ನು ಹಲ್ವು ಶತಮಾನಗಳವರೆಗೆ ಆಳಿದ ಅಳುಪರೆಲ್ಲರೂ ಬಿಲ್ಲವರು ಎಂಬ ತನ್ನವಾದಕ್ಕೆ ಬಾಬು ಶೀ್ವ ಪೂಜಾರಿ ಅವರು ನೀಡುವ ಆಧಾರಗಳು ಸಾಕಷ್ಟಿಲ್ಲ. ಬಿಲ್ಲವರು ತುಳುನಾಡಿನ ನಾಗವಂಶಿಯರು ನಾಗಪೂಜೆಯ ಅಧಿಕಾರಿಗಳು ಆಗಿದ್ದುದರಿಂದ ಅವರನ್ನು ಬೈದ್ಯರೆಂದು ಕರೆಯುತ್ತಿದ್ದರು. ಎಂಬ ಲೇಖಕರ  ಅಭಿಪ್ರಾಯ ಜಿಜ್ಞಾಸೆಗೆ ಯೋಗ್ಯವಾಗಿದೆ.
ಪಾಡ್ದನಗಳಲ್ಲಿ ಬಿಲ್ಲವರು ಎಂಬ ಸುದೀರ್ಘ ಅಧ್ಯಾಯದಲ್ಲಿ ಲೇಖಕರು ಹತ್ತಾರು ಪಾಡ್ದನಗಳಲ್ಲಿರುವ ಬಿಲ್ಲವರ ಉಲ್ಲೇಖಗಳನ್ನು ನೀಡಿದ್ದಾರೆ. ’ ಪಂಜುರ್ಲಿ’ ಪಾಡ್ದನದ ಕುಪ್ಪೆಕೋಟಿ  ಬೈದ್ಯ, ಕಾಂತಬಾರೆ, ಬೂದಬಾರೆ, ’ಮೈಂದಾಳ ಪಾಡ್ದನದ ದೇವ್ರು ಬೈದ್ಯ, ಕೋಟಿ-ಚೆನ್ನಯರು-ಇಂಥ ಹಲವು ಪಾಡ್ದನ ಪಾತ್ರಗಳನ್ನು ಲೇಖಕರು ಚರ್ಚಿಸಿದ್ದಾರೆ. ಅಳುಪರು ಹದಿನಾಲ್ಕನೆಯ ಶತಮಾನದವರೆಗೆ ತುಳುನಾಡನ್ನು ಆಳುತ್ತಿದ್ದರು. ಅಳುಪರ ಕಾಲದ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದ ಬಿಲ್ಲವರ್ತನ್ನು ಹೊಯ್ಸಳ, ವಿಜಯನಗರ ಹಾಗೂ ಜೈನ ಅರಸುಮನೆತನಗಳ ಕಾಲದಲ್ಲಿ ನಡೆದ ಸಾಮಾಜಿಕ  ಸ್ಥಿತ್ಯಂತರಗಳಿಂದ ಸಮಾಜದ ಅಂಚಿಗೆ ತಳ್ಳಲಾಯಿತು ಎಂಬುದು ಲೇಖಕರ ವಾದದ ಸಾರಾಂಶ.ಲೇಖಕರು ಬಿಲ್ಲವ ಸಮಾಜವನ್ನು ವೈಭವೀಕರಿಸಿಲ್ಲ. ಸಮಾಜದ ಏಳು-ಬೀಳಿಗೆ ಐತಿಹಾಸಿಕ ಅಂಶಗಳೇನು ಎಂಬ ಹುಡುಕಾಟವನ್ನು ಇವರು ಆರಂಭಿಸಿದ್ದಾರೆ. ಸಾಮಾಜಿಕ ಇತಿಹಾಸವನ್ನು ಸಮಾಜದ ಅಂಚಿನಲ್ಲಿರುವವರ ನೆಲೆಯಿಂದ ನೋಡುವ ಹೊಸಬಗೆಯ ಪ್ರಯತ್ನ ಇಲ್ಲಿದೆ. 
ಈ ಜನಾಂಗದ ಇತಿಹಾಸವನ್ನು ನೇಯುವ ಕೆಲಸ ಇನ್ನಷ್ಟೇ ಆಗಬೇಕಾಗಿದೆ. ಇದು ಒಬ್ಬಿಬ್ಬರಿಂದ ಅಲ್ಪಾವಧಿಯಲ್ಲಿ ಆಗುವ ಕೆಲಸ ಅಲ್ಲ. ಈ ಕೃತಿ ಮುಂಬರುವ ಬಿಲ್ಲವರ ಜನಾಂಗದ ಅಧ್ಯಯನಕಾರರಿಗೆ ಕೈಕಂಬವೂ ಅಲ್ಲ, ಕಿರುದಾರಿಯೂ ಅಲ್ಲ. ಬದಲಾಗಿ ಕೆಲವು ಅಸ್ಪಷ್ಟ ಹೆಜ್ಜೆಗಳು ಮಾತ್ರ" ಎನ್ನುವ ಬಾಬು ಶಿವ ಪೂಜಾರಿಯವರಲ್ಲಿ ಸಂಶೋಧಕನ ವಿನಯ ಇದೆ. ಆದರೆ, ಬಿಲ್ಲವ ಸಮಾಜದ ಅಧ್ಯಯನ  ಮಾಡುವವರು ಬಾಬು ಶೀವ ಪೂಜಾರಿಯವರ ಗ್ರಂಥವನ್ನು ಅಲಕ್ಷಿಸಿ ಮುಂದುವರಿಯುವಂತಿಲ್ಲ. ಜಿಜ್ಞಾಸೆಗೆ ಯೋಗ್ಯವಾದ ಚೊಚ್ಚಲ ಕೃತಿಯೊಂದನ್ನು ಬರೆದಿರುವ ಬಾಬು ಶಿವ ಪೂಜಾರಿಯವರು ಅಭಿನಂದನಾರ್ಹರು.

ಮುರಳೀಧರ ಉಪಾಧ್ಯ ಹಿರಿಯಡಕ. 

ಬಿಲ್ಲವರು ಒಂದು ಅಧ್ಯಯನ
ಲೇ:ಬಾಬು-ಶಿವ ಪೂಜಾರಿ
ಪ್ರ:ಬಿಲ್ಲವ ಜಾಗೃತಿ ಬಳಗ
೧, ಮೋತಿಲಾಲ್ ಮೆನ್ಯನ್,
ನಾದಿರ್ ಷಾ ಸುಖ್ಯಾ  ಸ್ಟ್ರೀಟ್,
ಫೋರ್ಟ್, ಮುಂಬಯಿ-೪೦೦ ೦೦೧.
ಮೊ.ಮುದ್ರಣ:೨೦೦೩ ಬೆಲೆ ರೂ.೧೦೦.

No comments:

Post a Comment