stat Counter



Sunday, November 20, 2011

ಹಳೆಯಮ್ಮನ ಆತ್ಮಕತೆ[ಕಾದಂಬರಿ }-{ U.Varamahalaxmi Holla }

ಹಳೆಯಮ್ಮನ ಆತ್ಮಕಥೆ
                                                                  - ಮುರಳೀಧರ ಉಪಾಧ್ಯ ಹಿರಿಯಡಕ
      
ಕುಂದಾಪುರ ಕನ್ನಡ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬೈಂದೂರಿನವರೆಗೆ ಬಳಕೆಯಲ್ಲಿರುವ ಪ್ರಾದೇಶಿಕ ಸೊಗಡಿನ ಪ್ರಭೇದ. ಶಿವರಾಮ ಕಾರಂತರ ಆಕ್ಷೇಪವನ್ನು ಲೆಕ್ಕಿಸದೆ ಮೊದಲ ಬಾರಿ ತನ್ನ ಕತೆಗಳಲ್ಲಿ ಕುಂದಾಪುರ ಕನ್ನಡವನ್ನು ಬಳಸಿದವರು ವೈದೇಹಿ. ಮುಂಬೈಯಲ್ಲಿರುವ ಕನ್ನಡ ಲೇಖಕಿ ಮಿತ್ರಾ ವೆಂಕಟರಾಜರ ಕತೆಗಳಲ್ಲೂ ಕುಂದಾಪುರ ಕನ್ನಡ ರಯಿಸುತ್ತದೆ. 'ಅಕ್ಕ, ಕುಂಕುಮದಕ್ಕ' ಎಂಬ ಕುಂದಾಪುರ ಕನ್ನಡದ ಜನಪದ ಹಾಡುಗಳ ಸಂಕಲನವನ್ನು ಸಂಪಾದಿಸಿರುವ ಯು.ವರಮಹಾಲಕ್ಷ್ಮೀ ಹೊಳ್ಳರ 'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ಕಾದಂಬರಿ.
ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಅವಿಭಕ್ತ ಕುಟುಂಬವೊಂದರಲ್ಲಿ ಬದುಕಿದ ಶತಾಯುಷಿ ಹಳೆಯಮ್ಮನ (ವಾಗ್ದೇವಿ) ಆತ್ಮಕತೆ ಹಾಗೂ ಕೆಲವು ಉಪಕತೆಗಳು ಈ ಕಾದಂಬರಿಯಲ್ಲಿವೆ. ಹಳೆಯಮ್ಮ ಪುರುಷ ಪ್ರಧಾನ ಸಮಾಜದ ಮಹಿಳೆಯರ ಅವಸ್ಥೆಯನ್ನು ಕಂಡವಳು; ಅನುಭವಿಸಿದವಳು; ಜೀವನದ ಸಿಹಿ-ಕಹಿ ಅನುಭವದಿಂದ ಮಾಗಿದವಳು. ಮೊಗೇರರ ಯುವಕ ಡಾಕ್ಟರ್ನನ್ನು ಪ್ರೀತಿಸಿದ ತನ್ನ ಮಗಳು ಯಶೋದೆಗೆ ಅವನೊಡನೆ ಊರು ಬಿಟ್ಟು ಹೋಗಲು ಸಲಹೆ ನೀಡುವುದರಲ್ಲಿ ಅವಳ ಮಾನವೀಯ ಮನೋಧರ್ಮ ಕಾಣಿಸುತ್ತದೆ.
ಹಳೆಯಮ್ಮನ ಮಾವನ ತಮ್ಮ (ಶೇಷ ಮಾವ) ಇಟ್ಟುಕೊಂಡ ಹೆಣ್ಣಿನ ಮಗಳು ಕಮಲ. ಕಮಲೆಯನ್ನು ಪ್ರೀತಿಸಿ ಮದುವೆಯಾದ ಮೂರ್ತಿ ಮಾಸ್ಟ್ರು ಸಂಶಯಪಿಶಾಚಿಯಾಗಿ ಅವಳನ್ನು ಬಿಟ್ಟು ಹೋಗುತ್ತಾನೆ. ಬೈಂದೂರಿನಲ್ಲಿ ಶಿಕ್ಷಕಿಯಾದ ಕಮಲ ಪಾತ್ರೆ ಅಂಗಡಿ ಮಾಬ್ಲೇಶ್ವರನನ್ನು ಮದುವೆಯಾಗುತ್ತಾಳೆ. ಕಮಲೆಯನ್ನು ಕುರಿತ ಸಹಾನುಭೂತಿಯಲ್ಲೂ ಅನಕ್ಷರಸ್ಥೆ ಹಳೆಯಮ್ಮನ ದೊಡ್ಡತನ ಕಾಣಿಸುತ್ತದೆ.
ಶೇಷ ಮಾವನ ಮಗ ನಾರಾಯಣ ಗಾಂಧೀವಾದಿ. ಅವನ ಹೆಂಡತಿ ಗೌರಿ ಆಧುನಿಕ ಶಿಕ್ಷಣ ಪಡೆದವಳು; ಗಾಂಧೀಜಿಯ ವಿಚಾರಧಾರೆ ತಿಳಿದವಳು. ನಾರಾಯಣ ಸತ್ತಾಗ ತಲೆ ಬೋಳಿಸಲು ನಿರಾಕರಿಸುವ ಗೌರಿ, ಶಾಲೆ ಮಕ್ಕಳಿಗೆ ಊಟ ನೀಡುತ್ತ ಬದುಕುತ್ತಾಳೆ, ಸಮಾಜದ ಟೀಕೆ-ಟಿಪ್ಪಣಿಗಳನ್ನು ಲೆಕ್ಕಿಸದೆ ಅನ್ಯಜಾತಿಯ ವೃದ್ಧರೊಬ್ಬರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುತ್ತಾಳೆ.
ಮಗಳ ಜೊತೆಯಲ್ಲಿ ತಾವೂ ಹೆರುವ, ಹೆರಿಗೆಯಂತ್ರವಾದ ಮಹಿಳೆಯರು 'ಹಳೆಯಮ್ಮನ ಆತ್ಮಕತೆ'ಯಲ್ಲಿದ್ದಾರೆ. ರುಕ್ಮತ್ತೆ ತನ್ನ ಗಂಡ ಇಟ್ಟುಕೊಂಡ ಹೆಣ್ಣನ್ನು, ಅವಳ ಮಕ್ಕಳನ್ನು ಸಹಿಸುವುದು ಅನಿವಾರ್ಯವಾಗುತ್ತದೆ. ಮೀನಾಕ್ಷಿ ತನ್ನ ಕುರಿತು ಪದ್ಯ ಕಟ್ಟಿದಳೆಂದು ಸಿಟ್ಟುಗೊಂಡ ಅವಳ ಗಂಡ, ಅವಳ ಬಾಯಿಗೆ ಉರಿವಕೊಳ್ಳಿ ತುರುಕುತ್ತಾನೆ. ಅವಳು ತೌರಿಗೆ ಓಡಿ ಬರುತ್ತಾಳೆ. ಗಂಡನ ಮನೆಯಲ್ಲಿ ಹೊಡೆತ ತಾಳಲಾರದೆ ಓಡಿ ಬಂದ ಪುಟ್ಟತ್ಗಿ ಲೈಂಗಿಕ ಅತೃಪ್ತಿಯಿಂದ ಮನೋರೋಗಿಯಾಗುತ್ತಾಳೆ. ಮಂಟಪದ ಶೀನಪ್ಪಯ್ಯನ ಮೂರನೆಯ ಹೆಂಡತಿ ಹದಿನೈದರ ಪ್ರಾಯದಲ್ಲಿ ಹೆರಲು ಆರಂಭಿಸಿ, ಒಂಬತ್ತು ಮಕ್ಕಳ ತಾಯಿಯಾಗಿ ಮೂವತ್ತಕ್ಕೆ ವಿಧವೆಯಾಗುತ್ತಾಳೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅಮೇರಿಕ ಕ್ರಿಯಾಕೇಂದ್ರವಾಗಿರುವ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. (ಉದಾಹರಣೆ: ಗುರುಪ್ರಸಾದ ಕಾಗಿನೆಲೆ ಅವರ 'ಬಿಳಿಯ ಚಾದರ') ಅಲಕ್ಷಿತವಾಗಿರುವ ಕುಂದಾಪುರ ಕನ್ನಡ ದೃಷ್ಟಿಕೇಂದ್ರವಾಗಿರುವ 'ಹಳೆಯಮ್ಮನ ಆತ್ಮಕತೆ' ದೇಸಿಯತ್ತ ಹೊರಟಿರುವುದು ಗಮನಾರ್ಹ - ಆಗ್ಳಿನ ಹೆಂಗಸ್ರ ಹಣೆ ಬರವೇ ಹಾಂಗೇ. ಹೆಚ್ಚಿಗೆ ಮಾತಾಡೀರೆ, 'ನಿಂಗೇನ ಉಂಬ್ಕೆ ತಿಂಬ್ಕೆ ಕಡ್ಮಿ ಮಾಡಿದ್ನಾ' ಅಂಬ್ರ. ಹೆಂಗಸ್ರಿಗೆ ಇಪ್ದು ಬರೀ ಹೊಟ್ಟಿ ಮಾತ್ರ ಅಂತ ತಿಳ್ಕೊಂಡಿದ್ರಾ ಕಾಣತ್. ಇಷ್ಟ್ ಮಾತ್ರ ಅಲ್ಲ, ತಮಗೆ ಮನೆಯಲ್ಲಿ ಅಗ್ನಿ ಸಾಕ್ಷಿಯಾಯಿ ಮದಿಯಾಯಿ ಬಂದ ಹೆಣ್ತಿ ಬೇಸಿ ಹಾಕೂಕೆ, ಮಕ್ಳನ್ ಹೆತ್ತ್ಕೊಟ್ಟ್ ಮನಿ ಕಂಡ್ಕಂಬ್ಕೆ ಆದ್ರೆ ಶೋಕಿಗೆ ಇನ್ನೊಂದ ಹೆಣ್ಣನ್ನ ಇಟ್ಕಂಬ್ದೂ ಒಂದ ದೊಡ್ಡಸ್ತಿಕೆ ಆಗಿನ ಗಂಡಸ್ರಿಗೆ. ಹೊಟ್ಟೀಗೆ ಬೆಂಕಿ ಬಿದ್ರೂ ಆ ಹೆಂಡ್ತಿ ತೋರ್ಸಕಂಬ್ಕಿಲ್ಲ. ಗಂಡ್ನ ಹತ್ರ ಹಾಂಗೆ ಮಾಡಬೇಡಿ ಅನ್ನೂಕೂ ಇಲ್ಲೆ. ಬ್ಯಾರೆ ಹೆಂಗ್ಸ್ರಾಯ್ಲಿ ಗಂಡಸ್ರಾಯ್ಲಿ ಈ ಹೆಂಗ್ಸಿನ ಪಾಡರ್ಿಗೆ ಬಪ್ಪುವವರೂ ಅಲ್ಲ. ಏನಾಯ್ತು, ಅಂವ ಗಂಡ್ಸ ಅಲ್ದಾ ಅಂಬವ್ರೇ ಎಲ್ಲ.'
ಸ್ತ್ರೀವಾದಿ ಓದಿನಲ್ಲಿ ಗಮನ ಸೆಳೆವ ಅಂಶಗಳು 'ಹಳೆಯಮ್ಮನ ಆತ್ಮಕತೆ'ಯಲ್ಲಿವೆ. ಗೌರಿಯ ವೈಯಕ್ತಿಕ ಬಂಡಾಯದ ಹಿನ್ನೆಲೆಯಲ್ಲಿ ಗಾಂಧೀಜಿಯ ಸುಧಾರಣಾವಾದಿ ಚಳುವಳಿ ಇದೆ. ನಾಗವೇಣಿ ಅವರ 'ಗಾಂಧಿಬಂದ', ವ್ಯಾಸರಾಯ ಬಲ್ಲಾಳರ 'ಹೆಜ್ಜೆ'ಗಳಲ್ಲಿರುವಂತೆ, 'ಹಳೆಯಮ್ಮನ ಆತ್ಮಕತೆ'ಯಲ್ಲೂ ಗಾಂಧೀವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಂದ ಪರಿವರ್ತನೆಯ ಒಳನೋಟಗಳಿವೆ. ಮೊದಲ ಪ್ರೇಮ ವಿವಾಹದಲ್ಲಿ ಕಹಿ ಅನುಭವ ಪಡೆದ ಕಮಲೆಯ ಮಗಳು ಮರುಮದುವೆ ಬೇಡ ಎಂದು ನಿರ್ಧರಿಸುತ್ತಾಳೆ. ಅನಂತನ ಪತ್ನಿ ಹಾಗೂ ಅವಳ ಮೈದುನ ಪದ್ಮನಾಭನ ಚಿತ್ರಣದಲ್ಲಿ ಲೇಖಕಿಯ ಪ್ರಬುದ್ಧ ಸಂಯಮ ಕಾಣಿಸುತ್ತದೆ. ಹಳೆಯಮ್ಮನ ಗಂಡನ ಮನೋರೋಗದ ಕಾರಣ ನಿಗೂಢವಾಗಿ ಉಳಿದಿದೆ.
ಛಿದ್ರವಾದ ಅವಿಭಕ್ತ ಕುಟುಂಬಗಳು, ಗಾಂಧೀವಾದ ತಂದ ಹೊಸತನ, ದೇವದಾಸಿ ಪದ್ಧತಿಯ ಅವಸಾನ, ಅಂತರ್ಜಾತೀಯ ವಿವಾಹಗಳ ಆರಂಭ, ಬ್ರಾಹ್ಮಣರು ಆರಂಭಿಸಿದ ಹೋಟೇಲು ಉದ್ಯಮ - ಹೀಗೆ ಸಾಮಾಜಿಕ ಪರಿವರ್ತನೆಯ ವಿವಿಧ ಮುಖಗಳು ಈ ಕಾದಂಬರಿಯಲ್ಲಿ ದಾಖಲಾಗಿವೆ. ಜನಾರ್ದನ, ನಂಬಿಕೆಗಳನ್ನು ಕಳಕೊಂಡ ಹೊಸ ತಲೆಮಾರಿನ ಪ್ರತಿನಿಧಿಯಾಗಿದ್ದಾನೆ. ಅಪ್ಪ ಸತ್ತ ಸುದ್ದಿ ಬಂದರೂ ಅವನು ತನ್ನ ಮಗನ ಮದುವೆ ಮುಂದೂಡುವುದಿಲ್ಲ.
'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಬರೆದಿರುವ ಪ್ರಥಮ ಪ್ರಾಯೋಗಿಕ ಕಾದಂಬರಿ. ಈ ಚೊಚ್ಚಲ ಕೃತಿಯಲ್ಲಿ ಯಶಸ್ವಿಯಾಗಿರುವ ಕಾದಂಬರಿಕಾರ್ತಿ ಯು.ವರಮಹಾಲಕ್ಷ್ಮೀ ಹೊಳ್ಳರಿಗೆ ಅಭಿನಂದನೆಗಳು.
      
ಹಳೆಯಮ್ಮನ ಆತ್ಮಕತೆ
-ಯು. ವರಮಹಾಲಕ್ಷ್ಮೀ ಹೊಳ್ಳ.
ಪ್ರ.-ಸ್ವಾಗತ ಸಮಿತಿ,
ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನ,
ಉಡುಪಿ.
ಫೋನ್: 08254-256003.
ಮೊದಲ ಮುದ್ರಣ 2007.
ಬೆಲೆ ರೂ. 30.00
Haleyammana Atmakathe {A novel in Kannada }
Author-U.Varamahalxmi Holla
             08254-256003
Published by
Reception Committee
All India 74th Kannada Literary Conference,
Udupi
First Edition-2007
For copies contact-
Udupi Jilla Kannada Sahitya Parishat
Phone-9342438727

No comments:

Post a Comment