stat Counter



Monday, June 29, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎಚ್. ಎಸ್. ವೆಂಕಟೇಸಮೂರ್ತಿ ಅವರ ’ ಸುನೀತ ಭಾವ " { 2015 }

 ಇತಾಲಿಯಾದಲ್ಲಿ ಬಾಲ್ಯ ಕಳೆದು , ಇಂಗ್ಲೆಂಡ್ ಮೂಲಕ ಕನ್ನಡಕ್ಕೆ ಬಂದ ಸಾನೆಟ್ , ’ಅಷ್ಟಷಟ್ಪದಿ ’ , ’ ಚತುರ್ದಶಪದಿ’ ಯಾಗಿ ತಿಣುಕುತ್ತ ಕನ್ನಡಿತಿ  ’ ಸುನೀತ ’ ವಾಗಿದೆ . ಗೋವಿಂದ ಪೈಗಳು  ನಾಂದಿ ಹಾಡಿದ ಕನ್ನಡ ಸಾನೆಟ್ ಪ್ರಕಾರವನ್ನು ಬೇಂದ್ರೆ , ಕುವೆಂಪು , ಮಾಸ್ತಿ , ಎಸ್. ವಿ. ಪರಮೇಶ್ವರ ಭಟ್ಟ ರಂಥ ಹಿರಿಯರು , ವೆಂಕಟಗಿರಿ ಕಡೆಕಾರ್ ಅವರಂಥ ಕಿರಿಯರು ಸೃಜನಶೀಲವಾಗಿ ಬೆಳೆಸಿದ್ದಾರೆ.ಕುವೆಂಪು ಅವರ ’ ಕೃತ್ತಿಕೆ ’ [ ೧೯೪೬] ಯಲ್ಲಿ  ತೊಂಬತ್ತಾರು ಸಾನೆಟ್ ಗಳಿವೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರ ’ ಸುನೀತ ಭಾವ ’ [ ೨೦೧೫ ] ದಲ್ಲಿ ಎಪ್ಪತ್ತೊಂದು ಸುನೀತಗಳಿವೆ. ಬೇಂದ್ರೆ , ಕುವೆಂಪು , ಅಡಿಗ , ಕೆ. ಎಸ್. ನ , ಯು. ಆರ್. ಅನಂತಮೂರ್ತಿ , ದೇವನೂರು , ನಿಸಾರ್ , ವೈದೇಹಿ , ವಸುಧೇಂದ್ರ , ಸಿದ್ದಲಿಂಗಯ್ಯ , ಜಿ. ಎಸ್. ಶಿವರುದ್ರಪ್ಪ , ರವಿ ಬೆಳಗೆರೆ ಮತ್ತಿತರ  ಸಮಕಾಲೀನ ಕನ್ನಡ ಸಾಹಿತಿಗಳ , ತನ್ನ ಮಿತ್ರರ  ಸಮೀಪ ಚಿತ್ರಗಳನ್ನು ಎಚ್. ಎಸ್. ವಿ, ಈ ಸಾನೆಟ್ ಗಳಲ್ಲಿ ನೀಡಿದ್ದಾರೆ.
 ಹೆಚ್ಚಿನ ಸಾನೆಟ್ ಗಳು ಸಾಹಿತಿಗಳ ಒಡನಾಟದ ಅನುಭವದಿಂದಾಗಿ ಪುಟ ಬಂಗಾರದ  ಪ್ರತಿಮಾಲೋಕವೊಂದನ್ನು  ನಿರ್ಮಿಸಿವೆ .’ ಅಳಿಲು ರಾಮಾಯಣ ’ ದ  ನಾಟಕಕಾರ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು , ನಾಟಕ ಪ್ರದರ್ಶನದಂದು ವೇದಿಕೆಗೆ ಕರೆಯಲು  ಮರೆತ ಬಿ. ವಿ. ಕಾರಂತರು ಎಚ್. ಎಸ್. ವಿ ಅವರ ಮನೆಗೆ ಬಂದು ಕ್ಷಮೆ ಯಾಚಿಸಿದ ಪ್ರಸಂಗದಲ್ಲಿ ಕಾರಂತರ ವಿನೀತ ಭಾವದ ವ್ಯಕ್ತಿತ್ವ ಕಂಗೊಳಿಸುತ್ತದೆ . ಪು. ತಿ. ನ ಅವರರನ್ನು ಕುರಿತ ಸಾನೆಟ್ ಲಘಿಮಾ        ಕೌಶಲದ ಹಕ್ಕಿಯ  ರೂಪಕದಲ್ಲಿ ಆಪ್ತವಾಗುತ್ತದೆ .’ ಕವಡೆಯಾಟದ ಅನಿಮಿತ್ತ ಕಾರುಣ್ಯ ಕವಿಗಷ್ಟೆ ಗೊತ್ತು ’ ಎಂದು ಮುಕ್ತಾಯಗೊಳ್ಳುವ ಎಸ್. ಮಂಜುನಾಥ್ ಕುರಿತ ಸಾನೆಟ್ ನಲ್ಲಿ ಕವಡೆಯಾಟದ ಧ್ವನಿಪೂರ್ಣ ರೂಪಕವಿದೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರು  ಕುಂದಣಿಸಿದ ಸಾಹಿತಿಗಳು ನಿಮ್ಮ ಖಾಸಗಿ ನೆನಪುಗಳಲ್ಲಿ ಇದ್ದರೆ ಈ ಸಾನೆಟ್ ಗಳು ನಿಮಗೆ ಹೆಚ್ಚು ಖುಷಿ ಕೊಡಬಹುದು . ಚಂಪಾ , ಜಯಂತ ಕಾಯ್ಕಿಣಿ , ಡುಂಡಿರಾಜ್ , ಕೆ. ವಿ. ತಿರುಮಲೇಶ್ , ಪ್ರತಿಭಾ ನಂದಕುಮಾರ್ , ಎಸ್. ಎಲ್. ಭೈರಪ್ಪ , ಎಸ್. ಎಸ್. ರಾಘವೇಂದ್ರ ರಾವ್ , ಕೆ. ಸತ್ಯನಾರಾಯಣ ಇವರನ್ನು ಕುರಿತ ಸಾನೆಟ್ ಗಳಲ್ಲಿ ಆಯಾ ವ್ಯಕ್ತಿತ್ವದ ಚಹರೆಗಳು ಸೊಗಸಾಗಿ ಮೂಡಿ ಬಂದಿವೆ .
 ’ ಒಗ್ಗರಣೆಯ ಮಜವೇ ನಿಜವಾದ ಮಜ, ಮಾತು ಬೇಕೆಂದ ಹಾಗೆ ಆಡುವುದು ನಿಮ್ಮ ಕೈಯ್ಯಲ್ಲಿ ’ [ ಚಂಪಾ ], ’ ತೇಲುನೋಟಕ್ಕೆ  ಸರಳವೆಂಬಂತೆ  ತೋರುವ        ನಿಮ್ಮ ಕಾವ್ಯದ  ಒಳಗೆ ಎಷ್ಟು ಮುಳುಗಿದರಷ್ಟಾಳ ’ [ ಕೆ. ವಿ. ತಿರುಮಲೇಶ್ ] , ’ಆಡುವ ಮುನ್ನ ಮೌನ , ಆಡಿದ್ದಾದ ಮೇಲೂ ಮೌನ .ಅದೇ ವೈನ .ಆಕಾಶದಲ್ಲಿ ನಿಶ್ಶಬ್ದವಾಗುರಿವ ಕೆಂಗದಿರ ನಾಲಗೆ ’[ ದೇವನೂರು ಮಹಾದೇವ ] ,’ ಭಾಷೆಯಲ್ಲಿ ಬೇಷರತ್ತು ಮಗ್ನಗೊಳ್ಳುವ ಶ್ಲೇಷಶಾಯಿ ಆಗದೆ ಇದೆಲ್ಲ ಆಗೊಲ್ಲ ಮಾರಾಯರೇ ’[ ಡುಂಡಿರಾಜ್ ] , ಇಂಥ ಅವಿಸ್ಮರಣೀಯ ಸಾಲುಗಳು ’ ಸುನೀತಭಾವ’ ದಲ್ಲಿವೆ ." ಮಾಸ್ತಿಯವರೊಂದಿಗೆ ತೀರ್ಥ ಸೇವನೆಗೆಂದು ಎಂದು ನೀವು ಹೋದದ್ದು ? " [ ಸಿದ್ದಲಿಂಗಯ್ಯ ]  - ಇಂಥ ಸಾಲುಗಳಿಗೆ ಟಿಪ್ಪಣಿ , ವಿವರಣೆ ಬೇಕಾಗುತ್ತದೆ .’ ಸೆಲ್ಫಿ’ ಯಲ್ಲಿ ಎಚ್. ಎಸ್. ವಿ ಅವರ ಪ್ರಖರ  ಸ್ವವಿಮರ್ಶೆ ಕಾಣಿಸುತ್ತದೆ .
 ’ ಆಷ್ಟಷಟ್ಪದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ ’ ಎಂಬ ಬೇಂದ್ರೆ ಸಾಲನ್ನು , ಕೆ. ಕೆ. ಹೆಬ್ಬಾರರ ರೇಖಾಲೀಲೆಗಳನ್ನು ನೆನಪಿಸುವ ಸುನೀತಗಳಿವು .ಸುನೀತವನ್ನು ತೆಕ್ಕೆಗೊಗ್ಗಿಸಿಕೊಳ್ಲುವುದು ಕವಿಗೆ  ಒಂದು ಅಗ್ನಿದಿವ್ಯ . ಅವಲೋಕಿತೇಶ್ವರನನ್ನು ಎವೆಯಿಕ್ಕದೆ ನೋಡುವಂತೆ  , ಓದಿ ಆಸ್ವಾದಿಸಬೇಕಾದ ಸಾನೆಟ್ ಸಂಕಲನ ’ ಸುನೀತಭಾವ ’. ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಅಭಿನಂದನೆಗಳು.
            - ಮುರಳೀಧರ ಉಪಾಧ್ಯ ಹಿರಿಯಡಕ
ಸುನೀತ ಭಾವ
 ಎಚ್. ಎಸ್. ವೆಂಕಟೇಶಮೂರ್ತಿ
 ಅಂಕಿತ ಪುಸ್ತಕ
  ೫೩ , ಶ್ಯಾಮ್ ಸಿಂಗ್ ಕಾಂಪ್ಲೆ಼ಕ್ಸ್ , ಗಾಂಧಿ      ಬಜಾರ್ ಮುಖ್ಯ ರಸ್ತೆ ,
 ಬೆಂಗಳೂರು - ೫೬೦೦೦೪
 ಬೆಲೆ- ರೂ ೧೫೦  . ಮೊದಲ ಮುದ್ರಣ -೨೦೧೫

Sunday, June 28, 2020

ಎಚ್. . ಡುಂಡಿರಾಜ್ -ಸುಬ್ರಾಯ ಚೊಕ್ಕಾಡಿ 80


Subraya Chokkadi --ಸುಬ್ರಾಯ ಚೊಕ್ಕಾಡಿ-- ನನ್ನ ಕಾವ್ಯ

ಸಾಹಿತ್ಯ ಕ್ಷೇತ್ರದ ಪಯಣದ ಕುರಿತು ಗೀತಾ ನಾಗಭೂಷಣ್ ಮಾತು|GeethaNagabhushan|BookBr...

ಹಿರಿಯ ಸಾಹಿತಿ ಗೀತಾ ನಾಗಭೂಷಣ ಇನ್ನಿಲ್ಲ 28 -6-2020

Muraleedhara Upadhya Hiriadka- ಮಣಿಪಾಲದಲ್ಲಿ ಕನ್ನಡ ಸಾಹಿತ್ಯ - ಕೆಲವು ಟಿಪ್ಪಣಿಗಳು..

Saturday, June 27, 2020

ಮುರಳೀಧರ ಉಪಾಧ್ಯ ಹಿರಿಯಡಕ - ಕನ್ನಡದಲ್ಲಿ ತುಳುವಿನ ಮಂದಾರ ರಾಮಾಯಣ

ಮಂದಾರ  ಕೇಶವ ಭಟ್ಟರು (೧೯೧೮-೧೯೯೭) ಬಹುಭಾಷೆಗಳ ಸಹಬಾಳ್ವೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಕವಿ. ಮರಾಠಿ ಮನೆ ಮಾತಿನ, ವೃತ್ತಿಯಲ್ಲಿ ಅಧ್ಯಾಪಕ ರಾಗಿದ್ದ ಈ ಕ್ವಿ ತುಳುವಿನಲ್ಲಿ ಬ್ರೆದ ’ಮಂದಾರ ರಾಮಾಯಣ ೧೯೮೭ರಲ್ಲಿ   ಪ್ರಕಟವಾಯಿತು. ಕೇಂದ್ರ ಸಾಹಿತ್ಯ್ ಅಕಾಡೆಮಿಯ ’ಭಾಷಾ ಸಮ್ಮಾನ ವನ್ನು  ಪಡೆದ ಈ ಕವಿ ತನ್ನ ತುಳು ರಾಮಾಯಣವನ್ನು ತಾನ್ನೆ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

’ ಮಂದಾರ ರಾಮಾಯಣ ದಲ್ಲಿ ಕವಿ ಮಾಡಿಕೊಂಡಿರುವ ಮುಖ್ಯ ಬದಲಾವಣಿಗಳು ಹೀಗಿವೆ-ಈ ಕಾವ್ಯದ ವಾಲ್ಮೀಕಿ ಒಬ್ಬ ಮಮೆ ಕುಡಿಯನಾಗಿದ್ದವನು. ಅಧರ್ಮದಿಂದ ಬದುಕುತ್ತಿದ್ದ  ಈತ ತನ್ನ ಪಾಪದಲ್ಲಿ ಪಾಲು ಪಡೆಯಲು ಹೆಂಡತಿ-ಮಕ್ಕಳು ಸಿದ್ಧರಿಲ್ಲವೆಂದು ಗೊತ್ತಾದಾಗ ಬದಲಾಗುತ್ತಾನೆ. ಕ್ರೌಂಚವಧೆ ಪ್ರಸಂಗದ ಬದಲು ವಾಲ್ಮೀಕಿ ಕನಸಿನಲ್ಲಿ ಮಾನಸಪುತ್ರಿಯೊಬ್ಬಳನ್ನು ಕಾಣುವ ಪ್ರಸಂಗ ಇದೆ. ರಾಮ ಮತ್ತು ಅವನ್ ತಮ್ಮಂದಿರ ಜನನ, ಬಾಲ್ಯದ ವೃತ್ತಾಂತ್, ವಿಶ್ವಾಮಿತ್ರರ ಪಾಠಗಳು, ತಾಟಕಿ ಸಂಹಾರ, ಅಹಲ್ಯೋದ್ಧಾರ ಪ್ರಸಂಗಗಳಲ್ಲಿ ಹೆಚ್ಚಿನ್ ಬದಲಾವಣಿ ಗಳಿಲ್ಲ. ಸೀತೆಯ ಸ್ವಯಂ ವರಕ್ಕೆ ರಾವಣನ ಮಕ್ಕಳು -ಅತಿಕಾಯ -ಇಂದ್ರಜಿತು ಬರುತ್ತಾರೆ. ಮದುಮಗ್ ರಾಮ, ಪರಶುರಾಮರ ಆಶೀರ್ವಾದ ಪಡೆಯುತ್ತಾನೆ.
 ಮಂಥರೆಯ ಪ್ರಣಯ್ ಭಿಕ್ಷೆಯನ್ನು ರಾಮ ತಿರಸ್ಕರಿಸುತ್ತಾನೆ. ಮಂಥರೆಯ ಚಾಡಿ ಮಾತು ಕೇಳಿದ ಕೈಕೇಯಿಯ್ ಹಠ ದಿಂದಾಗಿ ದಶರಥನ ಕನಸುಗಳು  ಭಗ್ನಗೊಳ್ಳುತ್ತವೆ. ಬಹುಪತ್ನಿತ್ವದಿಂದ ಸಂಕಟ ಅನುಭವಿಸುತ್ತಿರುವ್ ದಶರಥ ಏಕ ಪತ್ನೀ ವ್ರತಸ್ಥನಾಗು ಎಂದು ರಾಮ್ನಿಗೆ ಕಿವಿ ಮಾತು ಹೇಳುತ್ತಾನೆ. ದಶರಥನ್ ಸಾವು, ತಾಯಿಯ್ ಮೇಲೆ ಭರತನ ಸಿಟ್ಟು, ಭರತ ರಾಮರ್ ಭೇಟಿ, ಪಾದುಕಾ ಪಟ್ಟಾಭಿಷೇಕ ಈ ಪ್ರಸಂಗಗಳಲ್ಲಿ ಮೂಲ ಕಾವ್ಯದ ಅನುಸರಣಿ ಇದೆ. ಕಾಮುಕಿ ಶೂರ್ಪನಖಿ ಲಕ್ಷ್ಮಣನಿಂದ ಅವಮಾನಿತಳಾಗುತ್ತಾಳೆ. ಮಲೆ ಕುಡಿಯ್ ಪ್ಂಡಿತನ್ ವೇಷದಲ್ಲಿ ರಾವಣ,ಜಿಂಕೆಯ ವೇಷದಲ್ಲಿ ಶೂರ್ಪನಖಿ ಸೀತಾಪಹರಣಕ್ಕಾ ಬರುತ್ತಾರೆ. ಮಲೆಕುಡಿಯನ್ ಜಿಂಕೆ ತಪ್ಪಿಸಿಕೊಂಡು ಹೋದಾಗ ಅದನ್ನು ಹಿಡಿಯಲು ರಾಮಲಕ್ಷ್ಮಣರು ಹೋಗುತ್ತಾರೆ. ಆಗ್ ರಾವಣ ಸೀತೆಯನ್ನು ಕದ್ದೊಯ್ಯುತ್ತಾನೆ. ಹಕ್ಕಿ ಹಿಡಿಯುವ್ ಜಟಾಯು ರಾವಣನನ್ನು ಎದುರಿಸಿ ಸೋಲುತ್ತಾನೆ. ’ಕಿಸ್ಕಿಂದಾಯ’ ಎಂಬ್ ಭೂತದ ನಾಡಿನ ವಾಲ್-ಸುಗ್ರೀವರ್ ಕತೆಯನ್ನು ಶಬರಿ ರಾಮ್-ಲಕ್ಷ್ಮಣರಿಗೆ ಹೇಳುತ್ತಾಳೆ. ’ಮಂದಾರ ರಾಮಾಯಣದ ಪ್ರಕಾರ ವಾಲಿ-ರುಮೆಯರ ಸಂಬಂಧದ ಕುರಿತು ಇರುವ್ ಆರೋಪಗಳು ಸುಳ್ಳು.
ಹನುಮಂತ ಈಜಿಕೊಂಡು ಕಡಲನ್ನು ದಾಟುತ್ತಾನೆ. ರಾವಣನ ಅಧಿಕಾರಿಗಳ ... ವರ್ಣನೆ ಅವ್ನು ಜನಪ್ರಿಯ ಅರಸನಲ್ಲ ಎಂಬುದನ್ನು ಸೂಚಿಸುತ್ತದೆ. ಸೀತೆಯನ್ನು ಭೇಟಿಯಾದ ವಿಭೀಷಣ- ಸರಮೆ ದಂಪತಿಗಳನ್ನು ರಾವಣ ಬಂಧನದಲ್ಲಿಡುತ್ತಾನೆ.
ಸುಗ್ರೀವನ  ಸೈನಿಕರು ಅಪ್ಪಣ್ಣನ್ ದೋಣಿಗಳಲ್ಲಿ ಕಡಲನ್ನು ದಾಟುತ್ತಾರೆ. ವಿಭೀಷಣನ ಮಗ ಸುಬುದ್ಧಿ ರಾವಣನಿಗೆ ಸಭೆಯಲ್ಲಿ ಹಿತವಚನ ಹೇಳುತ್ತಾನೆ. ರಾವಣನ ಮಕ್ಕಳು ಸುಬುದ್ಧಿ ರಾವಣನಿಗೆ ಸಭೆಯಲ್ಲಿ ಹಿತವಚನ ಹೇಳುತ್ತಾನೆ. ರಾವಣನ ಮಕ್ಕಳು  ಸುಬುದ್ಧಿಯ ಮನೆಗೆ ಬಂದು ಅವನಿಗೆ ಹೊಡೆಯುತ್ತಾರೆ. ಹನುಮಂತ, ಅಂಗದ ರಾವಣನ ಸಭೆಗೆ ಹೋಗಿ ಬರುತ್ತಾರೆ. ಕುಂಭಕರ್ಣನ ಮಗ ಸಿಂಗ, ವಿಭೀಷಣನ ಮಗ ಸುಬುದ್ಧಿ ರಾಮನನ್ನು ಭೇಟಿಯಾಗುತ್ತಾರೆ. ರಾವಣ, ಕುಂಭಕರ್ಣನಿಗೆ ಮದ್ದು ಹಾಕಿಸಿ ಅವನನ್ನು ಅತಿನಿದ್ದೆಯ್ ಬೆಪ್ಪನನ್ನಾಗಿ ಮಾಡಿದ್ದಾನೆ.  ಕುಂಭಕರ್ಣನ ಬಂಧನವಾದ  ಮೇಲೆ ರಾಮ   ಅವನಿಗೆ ತೂಚಣ್ಣ ಪಂಡಿತರಿಂದ ಚಿಕಿತ್ಸೆ ಮಾಡಿಸುತ್ತಾನೆ. ಯುದ್ಧದಲ್ಲಿ ಅತಿಕಾಯ-ಇಂದ್ರಜಿತು ಸಾಯುತ್ತಾರೆ. ಯುದ್ಧದಲ್ಲಿ ರಾವಣ ಸತ್ತ ಮೇಲೆ ರಾಮ್ ಕುಂಭಕರ್ಣನನ್ನು ಅರಸನ್ನಾಗಿ ಮಾಡುತ್ತಾನೆ. ವಿಭೀಷನ  ಮಗಳು ಸೋಮಕ್ಕ ಅಂಗದನ ಮಡದಿಯಾಗುತ್ತಾಳೆ. ರಾಮ್, ಸೀತೆ, ಲಕ್ಷ್ಮಣರೊಂದಿಗೆ ಶಬರಿ ಹಾಗೂ ಗುಹ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬರುತ್ತಾರೆ. ಮಂಥರೆಯ ತಾಯಿಯಾದ ಶಬರಿ ತನ್ನ ಮಗಳ ಕೃತ್ಯಕ್ಕೆ ಅಸಹ್ಯ ಪಟ್ಟು ಪಂಪಾಕ್ಷೇತ್ರಕ್ಕೆ ಹೋಗಿ ದೇವರ ಸೇವೆ ಮಾಡುತ್ತಿದ್ದಳೆಂದು ಕೊನೆಯಲ್ಲಿ  ತಿಳಿಯುತ್ತದೆ.
’ಮಂದಾರ ರಾಮಾಯಣ’ದ ಕವಿ ಕಾವ್ಯದ ಹೊರರಚನೆಯಲ್ಲಿ  ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಒಳ ರಚನೆ ಹಾಗೆಯೇ ಇದೆ. ಮೂಲ ಕಾವ್ಯದ  ಸಂಶೋಧಕರು ಪ್ರಕ್ಷಿಪ್ತವೆಂದು ಗುರುತಿಸುವ  ಭಾಗಗಳನ್ನು ಈ ಕವಿ ಕೈ ಬಿಟ್ಟಿದ್ದಾರೆ-ಉತ್ತರಕಾಂಡ, .... ವೃತ್ತಾಂತ, ಲಂಕೆಯಿಂದ ಹಿಂದಿರುಗುವಾಗ ರಾಮ ಭಾರದ್ವಾಜಾಶ್ರನಕ್ಕೆ ಬಂದಿಳಿಯುವುದು ಹಾಗೂ ಲಂಕಾದಹನ. ಅಗ್ನಿ ಪರೀಕ್ಷೆಯ ಪ್ರಸಂಗವೂ ಈ ಕಾವ್ಯದಲ್ಲಿಲ್ಲ. ಅಪನಂಬಿಕೆಯನ್ನು  ಅಮಾನತ್ತಿನಲ್ಲಿಟ್ಟು ಓದಬೇಕಾದ ಪ್ರಸಂಗಗಳನ್ನು ಮಂದಾರ ಕೇಶವ ಭಟ್ಟರು ಬದಲಾಯಿಸಿದ್ದಾರೆ. ಸಮುದ್ರ ಲಂಘನ, ಸೇತುಬಂಧಗಳು ಈ ಕಾವ್ಯದಲ್ಲಿಲ್ಲ. ’ ಮಂದಾರ ರಾಮಾಯಣ’ ದಲ್ಲಿರುವುದು ಅದ್ಭುತದ  ಸ್ಫರ್ಶ ಮಾತ್ರ ವಿರುವ ವಾಸ್ತವಲೋಕ.

ಜಾತಿಗಳು ಮಾತ್ರವಲ್ಲ, ಭಾಷೆಗಳೂ ಸಂಸ್ಕೃತಾನುಸರಣ ಮಾಡುತ್ತವೆ. ವಸ್ತುವಿನ ಆಯ್ಕೆಗಾಗಿ ಸಂಸ್ಕೃತಾನುಸರಣ ಮಾಡಿ ಅನಂತರ ನಿರೂಪಣೆಯಲ್ಲಿ ’ ದೇಸಿ ಯೊಳ್ ಪುಗುವುದು’ ಮಂದಾರ ರಾಮಾಯಣದ ವೈಶಿಷ್ಟ್ಯ. ತುಳುವಿನಲ್ಲಿ ವಿಷ್ಣು ತುಂಗನ ’ಭಾಗವತ’ ದಂಥ ಪ್ರಾಚೀನಗಳ ಹಾಗೂ ’ಕೋಟಿ-ಚೆನ್ನಯ, ’ಸಿರಿ’ ಯಂಥ ಜನಪದ ಕಾವ್ಯಗಳ ಸತ್ವವನ್ನು ಹೀರಿಕೊಂಡು, ಸಮಕಾಲೀನ ತುಳುವಿಗೆ ಹತ್ತಿರವಾದ ತನ್ನದೇ ಸ್ವತಂತ್ರ ಶೈಲಿಯೊಂದನ್ನು ರೂಪಿಸಿಕೊಂಡಿದ್ದಾರೆ. ಅವರ ಶೈಲಿಯಲ್ಲಿ ಭಾಷೆಯನ್ನು ಅತ್ಯುನ್ನತಿಯತ್ತ ಒಯ್ಯುವ  ಪ್ರತಿಭಾಶಾಲಿಯ ಮುನ್ನೋಟವಿದೆ.

ಭೂತಗಳ ನಾಡಿನ ವಾಲಿ-ಸುಗ್ರೀವರು ವೀಳ್ಯ ಹಾಕಿಕೊಂಡು ಮಾತನಾಡುತ್ತಾರೆ. ಅಂಗದ ಕುಟ್ಟಿ-ದೊಣ್ಣೆ ಆಡುತ್ತಾರೆ. ಬೈಗಳ ಭಾಷೆ, ಸಂಭಾಷಣೆ, ಯುದ್ಧ ವರ್ಣನೆಗಳಲ್ಲಿ ’ ಮಂದಾರ ರಾಮಾಯಣ’ ತುಳುನಾಡಿನ ರಾಮಾಯಣವಾಗಿದೆ. "ಸಾಗರದ ತಡಿಯ ತುಳುನಾಡ ಮಣ್ಣಿನ ಬಣ್ಣ ಬದುಕುಗಳ ಮೂರು ಲೋಕದಿ ಕಾಣುವೆನ್ನೆ ಕಣ್ಣೆಗೆ ಕಾಣುವಂತೀ ಕತೆಯ ಬರೆವೆ."


ಈ ಕನ್ನಡ ಭಾಷಾಂತರವು ಭಾಷಾಂತರವಾಗಿದೆಯೆನ್ನುವುದಕ್ಕಿಂತಲೂ ಪದಾಂತರವಾಗಿ ಬಂದಿರುವುದರಿಂದ ಇದರ ಗುಣವನ್ನೂ ಸಾಹಿತ್ಯದಲ್ಲಿ ಇದರ ಸ್ಥಾನವನ್ನೂ ವಿದ್ವಾಂಸರೇ ಹೇಳಬೇಕು. ಇದರ ತುಳು ಮೂಲವನ್ನು ಇದ್ದಕ್ಕಿದ್ದಂತೆ ಕನ್ನಡಿಸಿದ ರೀತಿಯನ್ನು ನೋಡುವಾಗ ಮೂಲದಂತೆಯೇ ಲಲಿತ ರಗಳೆಯ ಛಂದಸ್ಸಿನ್ ರಗಳೆಯಿಲ್ಲವೆಂಬುದು ಓದುಗರಿಗೆ ತಿಳಿದು ಬಾರದಿರದು." ಎಂದು ಮಂದಾರ ರಾಮಾಯಣದಲ್ಲಿ ವಿಸ್ಮೃತಿಯ್  ಸಮಸ್ಯೆ ಇಲ್ಲ.  ಇಲ್ಲಿನ ಪಾತ್ರಗಳು ತುಳುವನ್ನಾಗಲೀ ತುಳುನಾಡನ್ನಾಗಲೀ ಮರೆತಿಲ್ಲ. ’ಅಗೆಲು’, ’ತಪ್ಪಂಗಾಯಿ’, ’ಪಾರೋಳು’, ’ಮಡೆಂಜಿ’, ಮುಟ್ಟಲೆ’, ’ಮೊರಂಟೆ’, ಮೂಲ್ಯ’ ಸಾಂತಾಣಿ’, ’ಸೋಣ, ಸೀಂತ್ರಿ’- ಇಂಥ ಶಬ್ದಗಳು ಕನ್ನಡ ’ ಮಂದಾರ ರಾಮಾಯಣ ದಲ್ಲಿ ತುಳುನಾಡಿನ ಬಣ್ಣವನ್ನು ಉಳಿಸಿವೆ.

ತುಳುನಾಡಿನ ಜನಪದ ಕಾವ್ಯಗಳು ಮಹಾಪರಂಪರೆಯ ’ರಾಮಾಯಣ" ಮಹಾಭಾರತ’ ಗಳಿಂದ  ದೂರದಲ್ಲಿವೆ. ತಮ್ಮದೇ ಕಿರುಪರಂಪರೆಯೊಂದನ್ನು ಉಳಿಸಿ ಕೊಂಡಿವೆ. ಆದರೆ ಮಹಾಪರಂಪರೆಯ ಕಾವ್ಯಗಳು ತುಳುನಾಡಿನ ಸಹೃದಯರಿಗೆ ಹೊಸದೇನೂ ಅಲ್ಲ. ಇಲ್ಲಿ ಜನಪ್ರಿಯವಾಗಿರುವ ಯಕ್ಷಗಾನ-ತಾಳಮದ್ದಳೆ ಮಾಧ್ಯಮಗಳು ಮಹಾಕಾವ್ಯಗಳ ಸಾತತ್ಯದಲ್ಲಿ ಸೃಜನಶೀಲ ಕೊಡುಗೆ ನೀಡಿವೆ. ಮಹಾ ಪರಂಪರೆಯ ರಾಮಾಯಣವನ್ನು ಕಿರುಪರಂಪರೆಯ ತುಳು ಭಾಷೆಯಲ್ಲಿ ಪುನರ್ ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿರುವ ಮಂದಾರ ಕೇಶವ ಭಟ್ಟರು ತನ್ನ ಕಾವ್ಯವನ್ನು ಸೊಗಸಾಗಿ, ಕನ್ನಡಕ್ಕೆ ತಂದಿದ್ದಾರೆ. ’ ಬಂದಾರ, ತಂದಾರ, ಮಂದಾರ ಹೂವ’ ಎನ್ನುತ್ತ ಈ ಕಾವ್ಯವನ್ನು  ಸ್ವಾಗತಿಸೋಣ. ಭಾಷಾಂತರಕ್ಕೆ ಮಹಾತ್ವಾಕಾಂಕ್ಷೆ ಇಲ್ಲದಿರಬಹುದು. ಆದರೆ ಮಂದಾರ ಕೇಶವ ಭಟ್ಟರು ’ ಬೃಹತ್ಕಥೆಯ ಗುಣಾಢ್ಯನನ್ನು ನೆನಪಿಸುವ ಮಹತ್ವಾಕಾಂಕ್ಷೆಯ ಮಹಾಕವಿ.
ಮಂದಾರ್ ರಾಮಾಯಣ (ಮಹಾ ಕಾವ್ಯ)
ಮೂಲ ತುಳು ಮತ್ತು ಕನ್ನಡಾನುವಾದ: ಮಂದಾರ ಕೇಶವ ಭಟ್ಟ
ಪ್ರ: ಸಾಹಿತ್ಯ ಅಕಾಡೆಮಿ, ರವೀಂದ್ರ ಭವನ, ಹೊಸದಿಲ್ಲಿ-೧೧೦೦೦೧

ಮುರಳೀಧರ ಉಪಾಧ್ಯ ಹಿರಿಯಡಕ

ಮಣಿಪಾಲದಲ್ಲಿ ಉದ್ಘಾಟನೆಗೊಂಡ ಸಿರಿಗನ್ನಡ ಪುಸ್ತಕ ಮಳಿಗೆ

Friday, June 26, 2020

ಮುರಳೀಧರ ಉಪಾಧ್ಯ ಹಿರಿಯಡಕ - ಜನಪದ ಮಹಾಕಾವ್ಯ " ಜುಂಜಪ್ಪ "

 ’ ಜುಂಜಪ್ಪ’ ಕಾಡುಗೊಲ್ಲರ ಜನಪದ ಮಹಾ ಕಾವ್ಯ.’ ಕಾಡುಗೊಲ್ಲರು ಕರ್ನಾಟಕದ ತುಮಕೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಜುಂಜಪ್ಪನ ಜಾತ್ರೆ ಗುಬ್ಬಿ ತಾಲೂಕಿನ್ ಹಾಗಲ್ವಾಡಿಯಲ್ಲಿ ಮತ್ತು ಸಿರಾ ತಾಲೂಕಿನ್ ಕಳುವಾರ್ ಹಳ್ಳಿಯಲ್ಲಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ  ನಡೆಯುತ್ತದೆ. ಜುಂಜಪ್ಪ ಕಾವ್ಯವನ್ನು ಕುರಿತು ಕರ್ನಾಟಕದ ಜಾನಪದ ವಿದ್ವಾಂಸರು ಈಗಾಗಲೇ ಸಾಕಷ್ಟು ಅಧ್ಯಯನ್ ನಡೆಸಿದ್ದಾರೆ. ಡಾ| ತೀ.ನಂ. ಶಂಕರನಾರಾಯಣ ಅವರು ೧೯೯೧-೯೩ ರ ಅವಧಿಯಲ್ಲಿ, ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನೆರವಿನಿಂದ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಜುಂಜಪ್ಪ ಕಾವ್ಯದ ಐವತ್ತು ಪಾಠಗಳನ್ನು ಸಂಗ್ರಹಿಸಿದ್ದಾರೆ.

ಸಮಗ್ರ ಜುಂಜಪ್ಪ ಕಾವ್ಯ್ ಇದೀಗ ಮೊದಲ್ ಬಾರಿ ಪ್ರಕಟವಾಗುತ್ತಿದೆ. ಸಂಪಾದಕ್ ಚಲುವರಾಜು ಅವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ್ ಮಾಡ್ಗಾನ್  ಹಟ್ಟಿಯ, ಅಲಿಳಿತ ಪರಂಪರೆಯ್ ಗಾಯಕ್ ಶ್ರೀ ದಾಸಪ್ಪನವರಿಂದ ಈ ಕಾವ್ಯವನ್ನು ಸಂಗ್ರಹಿಸಿದ್ದಾರೆ. ಈ ಗ್ರಂಥದ ಅನುಬಂಧದಲ್ಲಿರುವ ಶ್ರೀ ದಾಸಪ್ಪನವರ ವಿಸ್ಕ್ರತ ಸಂದರ್ಶನದಲ್ಲಿ ಮಹತ್ವದ ಸಾಂಸ್ಕ್ರತಿಕ್ ವಿವರಗಳಿವೆ. ಜುಂಜಪ್ಪ ಕಾವ್ಯವನ್ನು ಹಾಡುವ ಕಲಾವಿದರು ’ಗಣೆ’ ಯವರು. ಗಣೆ ಎಂದರೆ ಸುಮಾರು ನಾಲ್ಕು ಅಡಿ ಉದ್ದದ ಕೊಳಲಿನ್ ಮಾದರಿಯ್ ವಾದ್ಯ. ಈ ಕಾವ್ಯದ ಪ್ರಸಂಗಗಳಿವೆ ’ ಸಂದುಗಳೆಂದು ಹೆಸರಿದೆ. ಜುಂಜಪ್ಪ ಕಾವ್ಯದಲ್ಲಿ ಹದಿ ಮೂರು ಸಂದುಗಳಿವೆ. ಸಂಪಾದಕರು ಬರೆದಿರುವಂತೆ "ಸುಮಾರು ಏಳು ತಲೆಮಾರುಗಳಷ್ಟು ಹಳೆಯದಾದ ಗೊಲ್ಲರ ಸಮಗ್ರ ಸಂಸ್ಕೃತಿ ಅಂಶಗಳನ್ನು ಅರಗಿಸಿಕೊಂಡಿರುವ ಈ ಮಹಾಕಾವ್ಯ ನೋವು-ನಲಿವುಗಳೆರಡನ್ನೂ ಬಿಂಬಿಸುವ ಕಾಡಿನ ಮಕ್ಕಳ ಹಾಡಿನ ಜೀವದನಿ.

ಕೆಂಗುರಿ ಮಲ್ಲೇಗೌಡ-ಚಿನ್ನಮ್ಮ ದಂಪತಿಗಳ ಮಗನಾಗಿ ಜನಿಸಿದ ಜುಂಜಪ್ಪ ವೀರಭದ್ರನ ಅವತಾರ ಎಂದು ಕಾಡು ಗೊಲ್ಲರು ನಂಬುತ್ತಾರೆ. ಜುಂಜಪ್ಪ ತನ್ನ ತಾಯಿಯ ಬೆನ್ನಿನಿಂದ ಹುಟ್ಟುತ್ತಾನೆ, ಪವಾಡ್ ಪುರುಷನಾಗುತ್ತಾನೆ. ತನ್ನ ದನ- ಎತ್ತುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಶ್ರೀಮಂತನಾದ ಜುಂಜಪ್ಪನನ್ನು ಕಂಡು ಅವನ ಸೋದರ ಮಾವಂದಿರು ಹೊಟ್ಟೆ ಕಿಚ್ಚು ಪಡುತ್ತಾರೆ. ಹುಲಿಕುಂಟೆಗೆ, ಕೆರೆಯ ನೀರಿಗೆ ಮಾಟ್ ಮಾಡಿಸುವಾಗ  ಸೋದರ ಮಾವಂದಿರು ಜೀವಂತವಾಗಿ ಹೂಳಿದ್ದ ಬಡಕಲು ಕರುವನ್ನು ಜುಂಜಪ್ಪ ಸಾಕುತ್ತಾನೆ., ’ಬಡ ಮೈಲ’ ಎಂದು ಹೆಸರಿಡುತ್ತಾನೆ. ಅದು ದೊಡ್ಡ ಹೋರಿಯಾಗಿ, ಜುಂಜಪ್ಪನ ದನಗಳ  ರಕ್ಷಕನಾಗಿ  ಬೆಳೆಯುತ್ತದೆ. ಸೋದರ ಮಾವಂದಿರ ಪರವಾಗಿ ಜುಂಜಪ್ಪನನ್ನು ಕಾಡಲು ಬಂದ ಚೇಳೂರು ರಂಗಣ್ಣ ಪಗಡೆಯಾಟದಲ್ಲಿ  ಸೋಲುತ್ತಾನೆ. ಹದಿನಾರು ವರ್ಷಗಳ ಕಾಲ್ ಪರಾಕ್ರಮ-ಪವಾಡಗಳಿಂದ ಮೆರೆದ ಜುಂಜಪ್ಪನನ್ನು ಸೋದರ ಮಾವಂದಿರು ವಿಷ ಹಾಕಿಸಿ ಸಾಯಿಸುತ್ತಾರೆ.

ಕಾಡುಗೊಲ್ಲರ ಕುಲಗಳಿಗೆ "ಬೆಡಗು’ ಎಂಬ್ ಹೆಸರಿದೆ. ಜುಂಜಪ್ಪನ ಕಾವ್ಯದಲ್ಲಿ ಪುರಾಣ ರಹಸ್ಯದ ಬೆಡಗೂ ಇದೆ; ಕಾವ್ಯ ಕೌಶಲದ ಬೆಡಗೂ ಇದೆ. ಮಹಾ ಪರಂಪರೆಯ ಭಾಗವತದಲ್ಲಿ ಕೃಷ್ಣ-ಕಂಸ ನನ್ನು ಕೊಲ್ಲುತ್ತಾನೆ. ಕಿರುಪರಂಪರೆಯ ಜುಂಜಪ್ಪ ಕಾವ್ಯದಲ್ಲಿ ಸೋದರ ಮಾವಂದಿರು ಜುಂಜಪ್ಪನನ್ನು  ಕೊಲ್ಲಿಸುತ್ತಾರೆ. ಜುಂಜಪ್ಪ ಕಾವ್ಯ ಕಾಡು ಗೊಲ್ಲರ ಬೆಡಗುಗಳ ಒಳಜಗಳದ ಕತೆ. ಮಹತ್ವಾಕಾಂಕ್ಷೆಯಿದ್ದ ಗೊಲ್ಲರ ಹುಡುಗನೊಬ್ಬನ ದುರಂತದ ಕತೆ.
ಬುಡಕಟ್ಟು ಕಾವ್ಯಮಾಲೆಯಲ್ಲಿ ಮಲೆ ಮಾದೇಶ್ವರ್‍, ಮಂಟೇಸ್ವಾಮಿ, ಕುಮಾರರಾಮ್ ಹಾಗೂ ಜುಂಜಪ್ಪನ ಕಾವ್ಯಗಳನ್ನು ಪ್ರಕಟಿಸಿರುವ ಹಂಪಿಯಾ ಕನ್ನಡ ವಿಶ್ವವಿದ್ಯಾನಿಲಯ ಸ್ತುತ್ಯರ್ಹವಾದ ಕೆಲಸ ಮಾಡಿದೆ.


ಜುಂಜಪ್ಪ
ಸಂಪಾದಕ:ಚಲುವರಾಜು
ಪ್ರ: ಕನ್ನಡ್ ವಿಶ್ವವಿದ್ಯಾಲಯ, ಹಂಪಿ,
ವಿದ್ಯಾರಣ್ಯ-೫೭೬೧೦೨
ಮುರಳೀಧರ ಉಪಾಧ್ಯ, ಹಿರಿಯಡಕ.

Wednesday, June 24, 2020

ಗಿರಿಜಾ ಶಾಸ್ತ್ರಿ - ಕೆ. ಸತ್ಯನಾರಾಯಣ ಅವರ " ಬಾಡಿಗೆ ಮನೆಗಳ ರಾಜ ಚರಿತ್ರೆ"


ಇಲ್ಲಿರುವುದೇ ನಮ್ಮ ಮನೆ!

ಚರಿತ್ರೆ ಯೆಂದರೆ, ದಾಖಲಾಗುವ ಲಿಖಿತ ಚರಿತ್ರೆ ಯೆಂದರೆ ಅದು ರಾಜರ ಚರಿತ್ರೆಯೇ. ಮೌಖಿಕ ಪರಂಪರೆಯಲ್ಲಿ ಸ್ಮೃತಿಯ ರೂಪದಲ್ಲಿ ಉಳಿದುಕೊಂಡವು ಚರಿತ್ರೆಯಲ್ಲ, ಎನ್ನುವ ನಂಬಿಕೆ ಈಚಿನವರೆಗೂ ಇತ್ತು. ಈಗೀಗ ಎರಡು ಮೂರು ದಶಕಗಳಿಂದ ಸಬಾಲ್ಟ್ರನ್ ಅಧ್ಯಯನದ ಭಾಗವಾಗಿ ಮೌಖಿಕ ಚರಿತ್ರೆ ಬೆಳಕಿಗೆ ಬರುತ್ತಿದೆ. ಅಂತಹ ಒಂದು ಮೌಖಿಕ ಚರಿತ್ರೆಯ ಭಾಗವಾಗಿ ಕೆ.ಸತ್ಯನಾರಾಯಣ ಅವರು “ಬಾಡಿಗೆ ಮನೆಗಳ ರಾಜ ಚರಿತ್ರೆ” ಯನ್ನು ಕಾಣಬಹುದಾಗಿದೆ.
ಇದನ್ನು “ರಾಜಚರಿತ್ರೆ” ಎಂದು ಕರೆದಿರುವುದೇ ಚರಿತ್ರೆಯ ಬಗೆಗಿನ ಸಾಮಾನ್ಯ ಪರಿಕಲ್ಪನೆಯನ್ನು ವಿರೋಧಿಸುವಂತಿದೆ.
ಒಂದು ಊರಿಗೆ, ಮನೆತನಕ್ಕೆ ತನ್ನದೇ ಆದ ಇತಿಹಾಸ ವಿರುವಂತೆ ಪ್ರತಿಯೊಂದು ಮನೆಗೂ ತನ್ನದೇ ಆದ ಚರಿತ್ರೆ ಇರುತ್ತದೆ.
ಮನೆಯೆಂದರೆ ಕೇವಲ ಗೋಡೆಯಲ್ಲವಲ್ಲ? ಅದರ ಸದಸ್ಯರ ಸಂಬಂಧದ ಸ್ವರೂಪಗಳು, ಬವಣೆ, ಭಾವ ಸಂಭ್ರಮಗಳು ಮಾತ್ರವಲ್ಲ, ಅದರೊಳಗೆ ಲಾಗಾಯ್ತಿನಿಂದ ಬಳಸದೇ ಬಿದ್ದಿರುವ ಸಾಮಾನುಗಳು ಕೂಡ ಹೌದು. (ಇಲ್ಲಿ ಬರುವ ತಂದೆಯ ಮೂಲಕ ಅದು ಬಹಳ ಶಕ್ತಿಯುತವಾಗಿ ವ್ಯಕ್ತವಾಗಿದೆ. ಹೀಗೆ ನಮ್ಮ ಗಮನಕ್ಕೇ ಬಂದಿರದ ಸಾಮಾನುಗಳನ್ನು ನಮಗೇ ಹೊಸದಾಗಿ ಪರಿಚಯಿಸುವವರು ಮನೆಯಲ್ಲಿ ಆಡುವ ಪುಟ್ಟ ಮಕ್ಕಳು. ಇದು ಅವರ ಮೊಮ್ಮಗನ ಪಾತ್ರದ ಮೂಲಕ ಬಹಳ ಲವಲವಿಕೆಯಿಂದ ಮೂಡಿ ಬಂದಿದೆ). ಮನೆಯೆಂದರೆ ಬಂದು ಹೋಗುವವರ ಅದರ ಆಸುಪಾಸಿನವರ ಕಥೆಗಳ ಮೊತ್ತ ಮಾತ್ರವಲ್ಲ. ಮನೆಯೆಂದರೆ ನಮ್ಮ ಗ್ರಹಿಕೆಯ ವಿಶ್ವ, ವಿಶ್ವದ ಗ್ರಹಿಕೆಯೊಳಗಿನ ನಾವು. "ಅಲ್ಲಿರುವುದು ನಮ್ಮ ಮನೆ ಇಲ್ಲಿರುವುದು ಸುಮ್ಮನೆ" ಎನ್ನುವ ದಾಸರ ಮಾತಿದೆ. ಅದಕ್ಕೆ ಪ್ರತಿಯಾಗಿ "ಇಲ್ಲಿರುವುದೇ ನಮ್ಮ ಮನೆ" ಎನ್ನುವ ಮನೆಯ ಪ್ರತೀಕದ ಮೂಲಕವೇ ಮನುಷ್ಯ ಸಂಬಂಧದ ಒಟ್ಟು ಸ್ವರೂಪವನ್ನು ಅನಾವರಣಗೊಳಿಸುವ ಕೃತಿ “ಬಾಡಿಗೆ ಮನೆಗಳ ರಾಜ ಚರಿತ್ರೆ"
ಲೇಖಕರು ತಮ್ಮ ಬಾಲ್ಯದಿಂದ ಹಿಡಿದು ಈ ತನಕ ವಾಸಿಸಿದ ಎಲ್ಲಾ ಮನೆಗಳ 'ಆತ್ಮ'ಚರಿತ್ರೆಯಿದು. (ಮನೆಗಳಿಗೂ ಕೂಡ ಆತ್ಮ ಇದೆ!) ಈ ಮನೆಗಳ ಗೋಡೆಗಳಿಗೆ ಕಿವಿಯಿಟ್ಟು ಕೇಳಿಸಿಕೊಂಡರೆ ಅವು ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಂಡಾವು. ಲೇಖಕರು ಹೀಗೆ ಕಿವಿಯಿಟ್ಟು ಕೇಳಿಸಿಕೊಂಡ ಕಥಾನಕವೇ "ಬಾಡಿಗೆ ಮನೆಗಳ ರಾಜ ಚರಿತ್ರೆ" ಹಾಗೆ ಮನೆಯ 'ಅಡುಗೆ ಕೋಣೆ ಹಿತ್ತಿಲು ಜಗಲಿಗಳ' ಆತ್ಮದ ಮೊರೆಯನ್ನು ಕೇಳಿಸಿಕೊಂಡ ಕಾರಣದಿಂದಲೇ ಕೆ. ಸತ್ಯನಾರಾಯಣ ಇಂದು ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ.
ಲೇಖಕರ ನೆನಪಿನಗುಂಟ ಅವರು ಹೋದಲ್ಲೆಲ್ಲಾ ಈ ಮನೆಗಳೂ ಕೂಡ ಪ್ರವಾಸ ಹೊರಡುತ್ತವೆ. ಯಾವುದೋ ಊರಿನ ಯಾವುದೋ ಮನೆ ಇನ್ನಾವುದೋ ಊರಿನ ಮನೆಯ ಜೊತೆಗೆ ತಳುಕು ಹಾಕಿಕೊಂಡುಬಿಡುತ್ತದೆ.
ಆದುದರಿಂದಲೇ ಈ ಮನೆಗಳ ಚರಿತ್ರೆಯನ್ನು ಕಾಲಾನುಕ್ರಮದಲ್ಲಿ ಜೋಡಿಸಲಾಗಿಲ್ಲವೆನಿಸುತ್ತದೆ.
ಈ ಪ್ರಜ್ಞಾಪ್ರವಾಹವೇ ಅವರು ಮನೆಯಿಂದ ಮನೆಗೆ ಪ್ರಯಾಣ ಮಾಡಿದ ಸ್ವರೂಪವನ್ನು ಬಹಳ ಅನನ್ಯವಾಗಿಕಟ್ಟಿಕೊಡುತ್ತದೆ.
ಭಾರತದಲ್ಲಿರುವ ಲೇಖಕರ ಯಾವುದೋ ಬಾಡಿಗೆ ಮನೆ ಅಮೇರಿಕಾದ ವರ್ಜೀನಿಯಾ ದಲ್ಲಿರುವ ತಮ್ಮ ಮಗನ ಮನೆಗೆ ತಳಕು ಹಾಕಿಕೊಂಡು ಬಿಡುತ್ತದೆ.
ಯಾವುದೋ ಓಣಿಯಲ್ಲಿ ಕಿಷ್ಕಿಂಧದ ಒಂದು ರೂಮು ಲೋಕವಿಖ್ಯಾತ ಸಾಹಿತಿಗಳನ್ನೂ, ಸಂಗೀತಗಾರರು, ಸಿನಿಮಾ ನಟರು, ಲೋಕನಾಯಕರುಗಳನ್ನೂ ಬೆಸೆಯುವ ಸಾಧನವಾಗಿ ಬಿಡುತ್ತದೆ. (ಅಡಿಗ, ಮಾಸ್ತಿ , ದಿವಂಗತ ಜೆಪಿ ಮುಂತಾದವರು ಸಂಪರ್ಕಿಸುವ ಭಾಗ) ಕೆಲವರಂತೂ ಇಸ್ಪೀಟು ಆಟದ ಭಾಗವಾಗಿ ಬಿಡುತ್ತಾರೆ. ಸಾಹಿತ್ಯ, ರಾಜಕೀಯ ಚರ್ಚೆಗಳಿಗೆ ಕಾರಣವಾಗಿ ಬಿಡುತ್ತಾರೆ.
ಮನೆಯೆಂದರೆ ಸಾಹಿತ್ಯ, ಸಂಗೀತ, ರಾಜಕೀಯ, ಮನರಂಜನೆ, ಹೊಡೆದಾಟ, ಜಗಳ ಮನಸ್ತಾಪ ಎಲ್ಲವೂ.
ಲೇಖಕರ ಹಾಸ್ಯ ಪ್ರಜ್ಞೆ ಬಹಳ ಅದ್ಭುತವಾದುದು. ತನ್ನನ್ನೇ, ತನ್ನ ಕೀಳರಿಮೆ, ಬಡತನಗಳನ್ನೇ ಪರಿಹಾಸ್ಯ ಮಾಡಿಕೊಳ್ಳುವ ಪರಿ ಆಧ್ಯಾತ್ಮಿಕವಾದುದು.
ಮನೆಯಿಂದ ಮನೆಗೆ "ತಿರುಪಿರದ ಲಾಂಧ್ರಗಳನ್ನು ತಳವಿರದ ಗೂಡೆಗಳನ್ನು " ಹೊತ್ತೊಯ್ಯುವ ಈ ಕಥಾನಕ ಕೆಳಮಧ್ಯಮ ವರ್ಗದ ಬವಣೆಗಳನ್ನು ಅನನ್ಯ ವಾಗಿ ದಾಖಲಾಗಿಸಿದ್ದರೂ ಅವು ಬವಣೆಗಳಾಗಿ ಕಾಣದೇ, ಬದಲಾಗಿ ಅವುಗಳ ಧಾರಣ ಶಕ್ತಿಯಾಗಿ ಕಾಣುವುದಕ್ಕೆ ಕಾರಣ ಅವರ ಹಾಸ್ಯ ಪ್ರಜ್ಞೆ. ಈ ಧಾರಣ ಶಕ್ತಿಯ ಪ್ರತೀಕವಾದ ಅವರ ತಂದೆ ತಾಯಿಯ ಕಥಾನಕವಂತೂ ಅನನ್ಯವಾಗಿ ಮೂಡಿ ಬಂದಿದೆ. ಅವರ 'ಗೆದ್ದ ದೊಡ್ಡಸ್ತಿಕೆ' ಗಿಂತ ಸೋಲುಂಡ ಪೂರ್ವಾಶ್ರಮದ 'ಭೂತ'ಗಳೇ ಬಹಳ ಪರಿಣಾಮಕಾರಿಯಾಗಿ ವ್ಯಕ್ತವಾಗಿವೆ.
ಮನೆಯೆಂದರೆ ನಿರಂತರವಾಗಿ ಕಂಪಿಸುತ್ತಿರುವ, ಸ್ಮೃತಿ ಸಂಚಯ! ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿರುವ ಭಾವ ಪ್ರಕಾಶ, ಎನ್ನುವುದನ್ನು ಕೆ. ಸತ್ಯನಾರಾಯಣ ಬಹಳ ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಮತ್ತು ಈ ಕೃತಿಯನ್ನು ಪ್ರಕಟಿಸಿರುವ ಅಭಿನವ ರವಿಕುಮಾರ್ ಅವರಿಗೂ ಅಭಿನಂದನೆಗಳು.



Ahalya Ballal, Sumithra Lc and 35 others

40 Comments

6 Shares


Like

Comment
Share

Sunday, June 21, 2020

ಮುರಳೀಧರ ಉಪಾಧ್ಯ ಹಿರಿಯಡಕ - ಶಿವರಾಮ್ ಪಡಿಕ್ಕಲ್ ಅವರ " ನಾದು ನುದಿಯ ರೂಪಕ " { 2001 } ಸಾಮಾಜಿಕ ಅಸ್ಮಿತೆಯ ಹುಡುಕಾಟದ ಕಥನ

ಡಾ| ಶಿವರಾಮ ಪಡಿಕ್ಕಲ್ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಪಿ.ಎಚ್.ಡಿ ಸಂಪ್ರಬಂಧದ ಪರಿಷ್ಕೃತ ರೂಪ ’ನಾಡು-ನುಡಿಯ ರೂಪಕ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಒಂದು ಶತಮಾನದ ಇತಿಹಾಸವಿರುವ ಕನ್ನಡ ಕಾದಂಬರಿ ಪ್ರಕಾರ ಸ್ವಂತಿಕೆಯ  ಛಾಪಿ ನೊಂದಿಗೆ ತಲೆಯೆತ್ತಿ ಬೆಳೆದ ಬಗೆಯನ್ನು ಹಾಗೂ ಅದ ತಾತ್ವಿಕತೆಯನ್ನು ವಿಶ್ಲೇಷಿಸುವುದು ಈ ಸಂಪ್ರಬಂಧದ ಉದ್ದೇಶ. ಕಾದಂಬರಿ ಬರಹದ ಮೂಲಕ ಲಭ್ಯವಾಗುವ ಚಾರಿತ್ರಿಕ ಸನ್ನಿವೇಶವನ್ನು ಚರ್ಚಿಸುತ್ತ, ಮೊದಲ ಕಾದಂಬರಿಗಳು ಕರ್ನಾಟಕದ ಸಂಸ್ಕೃತಿಯನ್ನು ನಿರೂಪಿಸಿದ ರೀತಿಯನ್ನು ಡಾ| ಪಡಿಕ್ಕಲ್ ವಿವರಿಸಿದ್ದಾರೆ.
ಜಾರ್ಜ್ ಲುಕಾಚ್ಸ್ ವಿವರಿಸುವಂತೆ   ವ್ಯಕ್ತಿ  ಮತ್ತು ಸಮಾಜದ  ಛಿದ್ರೀಕರಣದಿಂದ ನಾವೆಲ್ ಹುಟ್ಟುತ್ತದೆ. ನಾವೆಲ್ ನ ನಾಯಕ್ ಬಾಹ್ಯ ಜಗತ್ತಿನಿಂದ ಬೇರ್ಪಟ್ಟವನು. ಗೋಲ್ಡ್ ಮನ್ ನ ಪ್ರಕಾರ ನಾವೆಲ್ ಅವನತ ಸಮಾಜದಲ್ಲಿ ಅಪ್ಪಟ  ಮೌಲ್ಯಗಳ ಹುಡುಕಾಟದ ಕಥನ. ಈ ವ್ಯಾಖ್ಯಾನಗಳನ್ನು , ಅವು ಗಳ ಮಿತಿಗಳನ್ನು ’ ನಾವೆಲ್ ನ್ ಸಿದ್ಧಾಂತ, ಸಮಾಜಶಸ್ತ್ರೀಯ ವಿವರಣಿ ಎಂಬ ಮೊದಲ ಅಧ್ಯಾಯದಲ್ಲಿ ಲೇಖಕರು ಚರ್ಚಿಸಿದ್ದಾರೆ.
 ’ ರಾಷ್ಟ್ರ, ಆಧುನಿಕತೆ ಮತ್ತು ಮೊದಲ  ಕಾದಂಬರಿಗಳಿಉ’ ಎಂಬ್ ಎರಡನೆಯ ಅಧ್ಯಾಯದಲ್ಲಿ ಡಾ| ಪಡಿಕ್ಕಲ್ ಕರಾವಳಿ, ಮೈಸೂರು ಮತ್ತು ಉತರ ಕರ್ನಾಟಕದಲ್ಲಿ ವಿಭಿನ್ನ ರೀತಿಯ ಮೊದಲ ಕಾದಂಬರಿಗಳ ಸೃಷ್ಟಿಗೆ ಕಾರಣಾವಾದ ಸಾಂಸ್ಕೃತಿಕ ಸ್ಥಿತಿಯನ್ನು ವಿವರಿಸಿ, " ಅಂದರೆ ಪಾಶ್ಚಾತ್ಯ ’ನಾವೆಲ್’ ಪರಿಕಲ್ಪನೆಯು ಕನ್ನಡ ಕಾದಂಬರಿಯ್ ಮುಂದೆ ಇದ್ದ ಮಾದರಿಯಾಗಿದೆ. ಆದರೆ ಸಂಪೂರ್ಣವಾಗಿ ’ನಾವೆಲ್’ ಗೆ  ಸದೃಶವಾದ ಕಾದಂಬರಿಯನ್ನು ಕನ್ನಡ ಲೇಖಕರು ರಚಿಸಲಿಲ್ಲ. ಸಾಂಪ್ರದಾಯಿಕ ಬರಹದ ಸಂಪ್ರದಾಯ ಮತ್ತು ನಾವೆಲ್ ಗಳ ನಡುವಿನ್ ರಚನೆಯಿಂದ ಆರಂಭಿಸಿ ಆಧುನಿಕ ಕನ್ನಡ ಕಾದಂಬರಿಯನ್ನು ಅವರು ರಚಿಸಿದರು. ಆದುದರಿಂದ   ’ಕಾದಂಬರಿ’ ಯು ಸೈದ್ಧಾಂತಿಕವಾಗಿಯೇ ನಾವೆಲ್ ಮತ್ತು ಸಾಂಪ್ರದಾಯಿಕ ಕಥನಗಳಿಂದ ಭಿನ್ನ ಮತ್ತು ವಿಶಿಷ್ಟವಾದುದಾಗಿದೆ. ಹತ್ತೊಂಬತ್ತನೆಯ ಶತಮಾನದ ಕನ್ನಡದ ರಮ್ಯ ಕಥಾನಕಗಳು, ರೂಪಾಂತರಗಳು, ನಾಟಕಗಳಲ್ಲಿಯೂ ಕನ್ನಡ ಕಾದಂಬರಿಯ ಹುಟ್ಟಿಗೆ ಕಾರಣ್ವಾದ ವಿದ್ಯಾವಂತ ವರ್ಗದ ಮನ: ಸ್ಥಿತಿಯು ಬಿಂಬಿಸಲ್ಪಟ್ಟಿದೆ" ಎನ್ನುತ್ತಾರೆ.’ ಪ್ರಮುಖ ಲೇಖಾಕರು ಮತ್ತು ವಾಸ್ತವಿಕ ನಿರೂಪಣೆಯ ರಾಜಮಾರ್ಗ’ ಎಂಬ ಮೂರನೆಯ ಅಧ್ಯಾಯದಲ್ಲಿ ಡಾ| ಪಡಿಕ್ಕಲ್ ಅವರ ಒಳನೋಟಗಳಿವೆ. ಮೊದಲ ಕಾದಂಬರಿಗಳಲ್ಲಿರುವ ಆದರ್ಶ್ ಮತ್ತು ವಾಸ್ತವ ಸಂಬಂಧಗಳ ಪರಿಶೀಲನೆ ಯಲ್ಲಿ ಅವರು ಮೂರು ವಿಭಿನ್ನ ಸ್ಥಿತಿಗಳನ್ನು ಗುರುತಿಸಿದ್ದಾರೆ. ಗುಲ್ವಾಡಿ, ಬೋಳಾರರ ಕೃತಿಗಳಲ್ಲಿ ಭವಿಷ್ಯದಲ್ಲಿ ನಿಜವಾಗಿ ಬಿಡುವ ಆದರ್ಶಗಳೀವೆ. ಸಂಪ್ರದಾಯ ಧಾರ್ಮಿಕತೆಯ ವಿಡಂಬನೆ ಈ ಕೃತಿಗಳಲ್ಲಿದೆ. ಪ್ರಗತಿಗಾಗಿ ಗತಕಾಲದತ್ತ  ಹೊರಳುವ ಗಳಗನಾಥ- ಕೆರೂರರ ಕಾದಂಬರಿಗಳಲ್ಲಿ ಆದರ್ಶದ ವೈಭವೀಕರಣವಿದೆ. ಸಂಪ್ರ್ದಾಯವಾದಿಯಾದ ಎಂ,ಎಸ್. ಪುಟ್ಟಣ್ಣಾನವರಿಗೆ ಪಾಶ್ಚಾತ್ಯ ವೈಚಾರಿಕತೆಯ ಅಪಾಯಗಳು ತಿಳಿದಿವೆ. ಆದರ್ಶ ಗತಜೀವನವನ್ನು ಪುನರುಜ್ಜೀವನಗೊಳಿಸುವುದು ಅಸಾಧ್ಯ ಎಂಬ ಅರಿವಿರುವ ಅವರು  ಜೀವನಕ್ರಮದ ಪಲ್ಲಟಗಳನ್ನು ವಿಷಾದದಿಂದ ಚಿತ್ರಿಸುತ್ತಾರೆ.ಡಾ| ಶಿವರಾಮ್ ಪಡಿಕ್ಕಲ್ ಅವರು ವಿವರಿಸುವಂತೆ "ಅಂದರೆ ಈಗಾಗಲೇ ನಾವು ನೋಡಿರುವಂತೆ ವ್ಯಕ್ತಿ ಮತ್ತು ಸಮಾಜದ ದುರಂತ ಬಿರುಕು ಎನ್ನುವುದು ಪಾಶ್ಛಿಮಾತ್ಯ್ ನಾವೆಲ್ ನ್ ಮೂಲಭೂತ ದರ್ಶನ್ವಾದರೆ’ ವ್ಯಕ್ತಿಯ ನೆಲೆಯರಸುವ ಯತ್ನ್’ ಅಥವಾ ಸಾಮಾಜಿಕ ಅಸ್ಮಿತೆಯ ಹುಡುಕಾಟವೆನ್ನುವುದು ಕನ್ನಡ ಕಾದಂಬರಿಯ ತಾತ್ವಿಕತೆಯಾಗಿದೆ. ಇಲ್ಲಿ ಪಾಶ್ಚಿಮಾತ್ಯ ನಾವೆಲ್ ನಲ್ಲಿ ಕಾಣಿಸುವಂತೆ ನಿರೂಪಣಾ ಪ್ರಜ್ಜೆ’ಯದು ಸಮಾಜ್ ದಿಂದ ದೂರ ನಿಂತಿರುವ ಸ್ಥಿತಿಯಲ್ಲ. ಬದಲಾಗಿ ಎಅರಡು ವಿರೋಧೀ ಸಂಸ್ಕೃತಿಗಳಾ )ಆಳಿಸಿಕೊಳ್ಳುವ ಮತ್ತು ಆಳುವ್) ಮುಖಾಮುಖಿಯಲ್ಲಿಯೇ ತನ್ನ ಜನ್ಮವನ್ನು ಪಡೆದು ಅವುಗಳ  ನಡುವೆ ಸಿಲುಕಿರುವ ತ್ರಿಶಂಕು ಸ್ಥಿತಿಯಿಂದ ತನ್ನ ಸಾಮಾಜಿಕ ಅಸ್ಮಿತೆಯನ್ನು ಸ್ಥಾಪಿಸುವ ಯತ್ನವನ್ನು ಕನ್ನಡ ಕಾದಂಬರಿಯ ತಿರುಳೆಂದು  ನಾವು ಗ್ರಹಿಸಬಹುದು. ಆದುದರಿಂದ ಕಾದಂಬರಿಯನ್ನು ’ದೇಸೀ ವಿದ್ಯಾವಂತ ಮತ್ತು ವರ್ಗದ ಸಾಮಾಜಿಕ ಅಸ್ಮಿತೆಯ ಹುಡುಕಾಟದ ಕಥನ’ ಎಂದು ಕರೆಯಬಹುದು.
ಘುಟನಾಪ್ರಧಾನತೆ, ವಾಸ್ತವಿಕತೆ ಮತ್ತು ಆದರ್ಶವಾದಿತನಗಳು ಬೆರೆತಿರುವ ನಿರೂಪಣಾ  ಶೈಲಿ, ಪಾಶ್ಚಿಮಾತ್ಯ ಅರ್ಥದಲ್ಲಿ ’ಇಂಡಿವಿಜುವಲ್’ ಎಂದು ಕರೆಯಲಾಗದ ವಿಶಿಷ್ಟ ವ್ಯಕ್ತಿವಾದಿತನವನ್ನು ಹೊಂದಿದ ಪಾತ್ರಗಳ ಸೃಷ್ಟಿ, ಆದರ್ಶ ಮತ್ತು ವಾಸ್ತವಗಳ ಘರ್ಷಣಾತ್ಮಕ ಸನ್ನಿವೇಶಗಳು ಪರಸ್ಪರ ಘರ್ಷಿಸದೆ ಮೂಲಸ್ಥಿತಿಗೆ ಮರಳುವ ರೀತಿ ಇವನ್ನು ಕನ್ನಡದ ಮೊದಲ ಕಾದಂಬರಿಗಳ ವಿಶಿಷ್ಟ ಲಕ್ಷಣಗಳೆಂದು ಡಾ| ಪಡಿಕ್ಕಳ್ ಗುರುತಿಸುತ್ತಾರೆ.

’ ಇತರ ಕಾದಂಬರಿಗಳು ಮತ್ತು ಮೆಲೋಡ್ರೆಮಾಟಿಕ್ ನಿರೂಪಣೆ ಎಂಬ್ ನಾಲ್ಕನೆಯ ಅಧ್ಯಾಯದಲ್ಲಿ ಲೇಖಕರು ವಸ್ತುವಿನ ದೃಷ್ಟಿಯಿಂದ ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಂಡಿರುವ ವಿಭಾಗಗಳಿವು.೧.ಆರ್ಯ ಕುಲಾಂಗನೆಯರನ್ನು ವೈಭವೀಕರಿಸುವ ಕಾದಂಬರಿಗಳು(ತಿರುಮಲಾಂಭಾ), ೨.ಸ್ತ್ರೀ ಸಮಸ್ಯೆ ಕೇಂದ್ರವಾಗಿರುವ, ಗೃಹಚಿತ್ರವನ್ನು ಮಂಡಿಸುವ ಕಾದಂಬರಿಗಳು(ಆರ್. ಕಲ್ಯಾಣಮ್ಮ ಶಿವರಾಮ್ ಕಾರಂತ, ಎಂ. ಅಣ್ಣಾಜಿ ರಾವ್), ೩. ಗತ ವೈಭವವನ್ನು ವಸ್ತುವಾಗಿರಿಸಿಕೊಂಡ ಕಾದಂಬರಿಗಳು. (ಭಿ.ಪ. ಕಾಳೆ), ೪. ಪತ್ತೇದಾರಿ ಕಾದಂಬರಿಗಳು.

 ’ ಕೆಲವು ಕಾದಂಬರಿಗಳ  ಅಧ್ಯಯನ’   ಎಂಬ ಐದನೆಯ ಅಧ್ಯಾಯದಲ್ಲಿ  ಡಾ| ಪಡಿಕ್ಕಲ್ ಕನ್ನಡದ  ಮೊದಲ ಕಾದಂಬರಿಗಳು ಆಧುನಿಕ   ರಾಷ್ಟ್ರ ಅದರ  ರಾಷ್ಟ್ರೀಯತೆ, ಆಧುನಿಕತೆ ಮತ್ತು ಆ ಆಧುನಿಕತೆಯಲ್ಲಿ ರೂಪುಗೊಳ್ಳುವ ಆಧುನಿಕ ವ್ಯಕಿತ್ವಗಳನ್ನು ನಿರೂಪಿಸುವ ಕಥನಗಳು ಎನ್ನುವ ಮಾತನ್ನು , ’ ಇಂದಿರಾಬಾಯಿ’ ’ ಮಾಡಿದ್ದುಣ್ಣೋ ಮಹಾರಾಯ್’ ’ ಮಾಧವ ಕರುಣಾವಿಲಾಸ’ ದುಗೇರ್ಶ ನಂದಿನಿ ’ ಚೋರ ಗ್ರಹಣ  ತಂತ್ರ ’ ಎಂಬ ಐದು ಕಾದಂಬರಿಗಳ ವಿಶ್ಲೇಷಣೆಯಿಂದ ಸಮರ್ಥಿಸಿದ್ದಾರೆ.

’ಡಾ| ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಡಾ| ಪಡಿಕ್ಕಲ್ ಅವರ ಈ ಅಧ್ಯಯನವು ಹೊರನೋಟಕ್ಕೆ ಸಮಾಜ್ ಶಾಸ್ತ್ರೀಯ ಎಂದು ಕಾಣಿಸಿದರೂ ಅಂತ ರಂಗದಲ್ಲಿ ಮಾರ್ಕ್ಸ್  ವಾದಿ, ಸ್ತ್ರೀವಾದಿ,   ರಾಚನಿಕೋತ್ತರ, ಆಧುನಿಕೋತ್ತರ, ವಸಾಹತೋತ್ತರ, ವಾಚಕ ಕೇಂದ್ರಿತ ಚಿಂತನೆಗಳಾನ್ನು ಅವುಗಳ ಗಡಿ ರೇಖೆಗಳನ್ನು ಮೀರಿ ಒಂದು ಗೂಡಿಸುತ್ತದೆ." ಜನಪ್ರಿಯ ಸಾಹಿತ್ಯ, ಗಂಭೀರ ಸಾಹಿತ್ಯ ಎಂಬ ವರ್ಗೀಕರಣವನ್ನು ನಿರಾಕರಿಸುವ ಪಡಿಕ್ಕಲ್ ಪತ್ತೇ ದಾರಿ ಕಾದಂಬರಿಗಳನ್ನೂ ಅಧ್ಯಯನ ಮಾಡಿದ್ದಾರೆ. ಕನ್ನಡದ ಮೊದಲ್ ಕಾದಂಬರಿಗಳ ಓದುಗರ ಪ್ರತಿ ಕ್ರಿಯೆಗಳಿಗೆ ಅವರು ಒತ್ತು ನೀಡಿದ್ದಾರೆ. ವಸಾಹತುಶಾಹಿ ತಂದ ಇಂಗ್ಲಿಷ್ ಶಿಕ್ಷಣದಿಂದ ಪ್ರೇರಣೆ ಪಡೆದು ಕನ್ನಡದ ಕಾದಂಬರಿ ಪ್ರಕಾರ ಹುಟ್ತಿತು. ಇಂಗ್ಲಿಷ್
 ಶಿಕ್ಷಣದ ಮೂಲಕ ಬಂದ, ಆಧುನಿಕತೆ-ವೈಚಾರಿಕತೆಯನ್ನು ಕುರಿತ ಆಕರ್ಷಣೆ-ವಿಕರ್ಷಣೆ ಕನ್ನಡದ ಮೊದಲ್ ಕಾದಂಬರಿಗಳಲ್ಲಿದೆ. ವಸಾಹತುಶಾಹಿ ಶಿಕ್ಷಣದ ಫಲ ಶ್ರುತಿಯಾಗಿ ಸೃಷ್ಟಿಯಾದ ಕನ್ನಡದ ಮೊದಲ ಕಾದಂಬರಿಗಳನ್ನು ಡಾ| ಪಡಿಕ್ಕಳ್ ವಸಾಹತೋತ್ತರ ಚಿಂತನೆಯ ನೆಲೆಯಿಂದ ವಿಮರ್ಶಿಸಿದ್ದಾರೆ. ಕನ್ನಡ ಕಾದಂಬರಿ ಹಳೆಯ್ ಗದ್ಯ ಕಥನಗಳ ಮುಂದುವರಿಕೆಯೂ ಅಲ್ಲ, ಪಾಶ್ಚಾತ್ಯ ’ನಾವೆಲ್’ ನ ನಕಲೂ ಅಲ್ಲ, ಅದು ಆಧುನಿಕ ವಿದ್ಯಾವಂತ ವರ್ಗದ ಅಸ್ಮಿತೆಯ ಹುಡುಕಾಟದ ಕಥನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದ ಮೊದಲ್ ಕಾದಂಬರಿಗಳ ಉಗಮದ ಸಾಂಸ್ಕೃತಿಕ ಹಿನ್ನಲೆಯನ್ನು ಚರ್ಚಿಸುವ ’ ಕನ್ನಡ ಕಾದಂಬರಿಗಳ ಮೊದಲ್ ಹೆಜ್ಜೆಗಳು’(ಸಂ-ಡಾ| ವಿವೇಕ ರೈ) ಎಂಬ ಲೇಖನ ಸಂಕಲನವೊಂದನ್ನು ಮಂಗಳೂರು ವಿಶ್ವವಿದ್ಯಾನಿಲಯ ೧೯೮೭ರಲ್ಲಿ ಪ್ರಕಟಿಸಿತು. ಇದೀಗ, ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ| ಶಿವರಾಮ್ ಪಡಿಕ್ಕಲ್ ಅವರ ’ ನಾಡು ನುಡಿಯ ರೂಪಕ’ ಎಂಬ ಸಂವಾದ ಯೋಗ್ಯ ಸಂಪ್ರಬಂಧವನ್ನು ಪ್ರಕಟಿಸಿರುವ ಮಂಗಳೂರು ವಿ.ವಿ. ಪ್ರಸಾರಾಂಗ್, ಕನ್ನಡ ಮೊದಲ ಕಾದಂಬರಿಗಳ ಪುನರಾವಲೋಕನದ ಮುಂದಿನ ಹೆಜ್ಜೆಯನ್ನಿರಿಸಿದೆ.
ಮುರಳೀಧರ ಉಪಾಧ್ಯ ಹಿರಿಯಡಕ

ನಾಡು-ನುಡಿಯ ರೂಪಕ
(ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ್ ಕಾದಂಬರಿಗಳು)
ಲೇ:ಡಾ|ಶಿವರಾಮ್ ಪಡಿಕ್ಕಲ್
ಪ್ರ: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳ ಗಂಗೋತ್ರಿ-೫೭೪೧೯೯.
ಮೊದಲ್ ಮುದ್ರಣ:೨೦೦೧
ಬೆಲೆ ರೂ.೧೨೦.


Saturday, June 20, 2020

ವಡ್ದಾರಾಧನೆಯ ಇಂಗ್ಲಿಷ್ ಅನುವಾದ - Veneration to the Elders

ಆಧುನಿಕ ಪೂರ್ವ ಸಾಹಿತ್ಯದ ಮರು ಓದು | ಜೈನ ಸಾಹಿತ್ಯ : ಸಂಘರ್ಷದ ನೆಲೆಗಳು

ನನ್ನ ನೆಚ್ಚಿನ ಸಿನಿಮಾಗಳು-ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಆಯ್ಕೆ

ಮುರಳೀಧರ ಉಪಾಧ್ಯ ಹಿರಿಯಡಕ - ಗೀತಾ ನಾಗಭೂಷಣ ಅವರ " ಬದುಕು " { 2001 } ಅಸಾಧಾರಣ ಪ್ರಾದೇಶಿಕ ಕಾದಂಬರಿ

’ಬದುಕು’  ಒಂದು ಪ್ರಾದೇಶಿಕ  ಕಾದಂಬರಿಯಾಗಿ  ಮೊದಲ ಓದಿನಲ್ಲೇ ಸಹೃದಯರನ್ನು ಆಕರ್ಷಿಸುತ್ತದೆ. ಗುಲ್ಬರ್ಗಾದ ಸಮೀಪದ ಶಿವಳ್ಳಿಯ ಭೌಗೋಳಿಕ ವಿವರಗಳು ಈ ಕಾದಂಬರಿಯಲ್ಲಿವೆ. ಶಿವಳ್ಳಿ ಯ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ವಿವರಗಳನ್ನು ಗ್ರಹಿಸಿ, ಭಾಷೆಯಲ್ಲಿ ಪ್ರತಿ  ಸೃಷ್ಟಿಸಲು ಲೇಖಕಿ ಗೀತಾ ನಾಗಭೂಷಣ  ಪ್ರಯತ್ನಿಸಿದ್ದಾರೆ.

ಶಿವಳ್ಳಿಯ ಮಲ್ಲಪ್ಪ ಜಮಾದಾರನ ಕುಟುಂಬದ ಎರಡು ತಲೆಮಾರಿನ ಕತೆ ಈ ಕಾದಂಬರಿಯ     ಮುಖ್ಯ ಕವಲು.     ಹನ್ನೆರಡನೆಯ ಶತಮಾನದ ಕಲ್ಯಾಣದ ಅಂತರ್ ಜಾತೀಯ ವಿವಾಹದ ಸಮಸ್ಯೆ ಇಪ್ಪತ್ತನೆಯ ಶತಮಾನದ ಶಿವಳ್ಳಿಯಲ್ಲೂ ಮುಖ್ಯವಾಗುತ್ತದೆ. ಮಲ್ಲಪ್ಪನ ಮಗಳು ಕಾಶಮ್ಮ ಲಿಂಗರಾಜನನ್ನು ಪ್ರೀತಿಸುತ್ತಾಳೆ. ಜಾತಿ-ಭೇದದಿಂದಾಗಿ ಇವರ  ವಿವಾಹ ಪೂರ್ವ ಪ್ರಣಯ ಭಗ್ನವಾಗುತ್ತದೆ. ಲಿಂಗ ರಾಜ್-ನೀಲಮ್ಮನನ್ನು ಕಾಶಮ್ಮ-ಮಾರ್ತಾಂಡನನ್ನು ಮದುವೆಯಾಗ ಬೇಕಾಗುತ್ತದೆ ಕೆಲವು ವರ್ಷಗಳ ಅನಂತರ ಲಿಂಗರಾಜ ಕಾಶಮ್ಮ ನನ್ನು ಕರೆತಂದು ತನ್ನ ಉಪಪತ್ನಿಯಾಗಿ ಇರಿಸಿಕೊಳ್ಳುತ್ತಾನೆ. ತನ್ನ ಹೆಂಡತಿಯ  ದಾಂಪತ್ಯ ದ್ರೋಹದಿಂದ ಕಂಗಾಲಾದ ಮಾರ್ತಾಂಡ ಸನ್ಯಾಸಿಯಾಗುತ್ತಾನೆ. ತನ್ನ ಸಾವು ಸಮೀಪಿಸುತ್ತಿದೆ ಅನ್ನಿದಾಗ ಕೊನೆಯ ಬಾರಿ ಕಾಶಮ್ಮನನ್ನು ಭೇಟಿಯಾಗುತ್ತಾನೆ. ಈ ಕಾದಂಬರಿಯಲ್ಲಿ ಮಾರ್ತಾಂಡನ ಪಾತ್ರ ಬೆಳೆಯುವುದಿಲ್ಲ. ಹಾದರದಂತೆ ಕುಡಿತವೂ ಅಂಗ. ಸೇಂದಿ ಅಂಗಡಿಯಲ್ಲಿ ನಡೆದ ಜಗಳವೊಂದರಲ್ಲಿ ಮಲ್ಲಪ್ಪನ ಮಗ ಕಲ್ಯಾಣೆ ಮುಕಡಪ್ಪನಿಗೆ ಹೊಡೆಯುತ್ತಾನೆ. ಬಿದ್ದ ಮುಕಡಪ್ಪ ತಲೆಗೆ ಕಲ್ಲು ತಾಗಿ ಸಾಯುತ್ತಾನೆ. ಕೊಲೆ ಆರೋಪ ಹೊತ್ತ ಕಲ್ಯಾಣೆ ಹದಿನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸುತ್ತಾನೆ. ಕಲ್ಯಾಣೆ ಯ ಹೆಂಡತಿ ಬೆಳ್ಳಿ ಊರಿನ ಗೌಡನ ಉಪ ಪತ್ನಿಯಾಗಲು ಒಪ್ಪದೆ ಸ್ವಾಭಿಮಾನಿಯಾಗಿ, ಗಂಡನ ನಿರೀಕ್ಷೆಯಲ್ಲಿ ಬದುಕುತಾಳೆ.
ಜೋಗತಿಯರ ಬದುಕಿನ ದಾರುಣ ಕತೆ ಈ ಕಾದಂಬರಿಯ ಇನ್ನೊಂದು ಕವಲು. ಮನೆಯವರ  ಒತ್ತಾಯದಿಂದ ಜೋಗತಿಯಾದ ಭರಮ್ಯಾನ ಮಗಳು ನೀಲವ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. "ದೊಡ್ಡ ದೊಡ್ದ ಮ್ಯಾಲಿನ ಜಾತಿ ಹೆಂಗಸರು ಯಾರಲೆ    ಜೋಗಣೇರಾಗಿ ಹಿಂಗ್   ಮೈ ಮಾರ್ಕೊಳ್ಳಾ ದಂಧಾಕ್ಕೆ ನಿಂತಿದ್ದು ಎಲ್ಲೆಲೆ  ಕೇಳಿದ್ದೇಯ ನೀನು?" ಎಂದು ನಿಂಬೆವ್ವ ಪ್ರಶ್ನಿಸುತ್ತಾಳೆ. ಜೋಗಿತಿಯಾಗಿದ್ದ ತುಳಜಾ ಹಾದರದ ಬದುಕನ್ನು ಬಿಟ್ಟು ಹುಸೇನನನ್ನು ಮದುವೆಯಾಗಿ ಊರುಬಿಟ್ಟು ಹೋಗುತ್ತಾಳೆ. ಚುಂಚೂರು ಆರೋಪ ನಿರಾಕರಿಸಿ ಪ್ರತಿಭಟಿಸುತ್ತಾಳೆ.
ಉಪ ಪತ್ನಿ ವ್ಯವಸ್ಥೆಯನ್ನು ಈ ಕಾದಂಬರಿ ಮೆಲುದನಿಯಲ್ಲಿ ವಿರೋಧಿಸುತ್ತದೆ. ಈರವ್ವ, ಮಲ್ಲಪ್ಪ ಜಮಾದಾರನ ಉಪಪತ್ನಿಯಾಗಿದ್ದಾಳೆ. ಬೆಳ್ಳಿ, ಗೌಡನೊಬ್ಬನ ಉಪಪತ್ನಿಯಾಗಲು ಒಪ್ಪುವುದಿಲ್ಲ. ತುಳಜಾಳ ಪ್ರತಿಭಟನೆ ಯಲ್ಲಿ ಬೆಳ್ಳಿಯ ಸ್ವಾಭಿಮಾನದಲ್ಲಿ ಕಾದಂಬರಿ ಕಾರ್ತಿಯ  ವಿಷಾದಪೂರ್ಣ ಆಶಾವಾದ ಕಾಣಿಸುತ್ತದೆ. ಕಲ್ಲವ್ವ, ತನ್ನ ಗಂಡನ ಮೃಗೀಯ ಲೈಂಗಿಕ ಲಾಲಸೆಗೆ ಬಲಿಯಾಗುತ್ತಾಳೆ. ಫತರೂನ ಪಾತ್ರ ಚಿತ್ರಣದಲ್ಲಿ ಶಿವಳ್ಳಿಯಲ್ಲಿನ ಹಿಂದೂ ಮುಸ್ಲಿಂ ಸಹ ಬಾಳ್ವೆಯನ್ನು ಕಾಣುತ್ತೇವೆ. ಶಿಥಿಲ ಬಂಧದ ಈ ಕಾದಂಬರಿ ದೇಸಿ ಕಥನ ಪರಂಪರೆಗೆ ಸೇರುತ್ತದೆ. ದಟ್ಟವಾದ ಅನುಭವ

ಮಂಡನೆಯಲ್ಲಿ ಆಸಕ್ತರಾದ ಲೇಖಕಿ ಗೀತಾ ನಾಗಭೂಷಣ ಆಖ್ಯಾನಗಳಷ್ಟೇ ಉಪಾಖ್ಯಾನಗಳಿಗೂ ಮಹತ್ವ ನೀಡಿದ್ದಾರೆ. ಸರ್ವ ಸಾಕ್ಷಿತ್ವದ ನಿರೂಪಣಿ ಇರುವ ಈ ಕಾದಂಬರಿಯಲ್ಲಿ ಉರ್ದು, ಹಿಂದೀ ಶಬ್ದಗಳು ಹಾಸುಹೊಕ್ಕಾಗಿರುವ ಗುಲ್ಬರ್ಗಾ ಕನ್ನಡವನ್ನು ಲೇಖಕಿ ಸಮರ್ಥವಾಗಿ ಬಳಸಿದ್ದಾರೆ. ಸುದೀರ್ಘವಾದ ಈ ಕಾದಂಬರಿಯ ಮೊದಲ್ ನೂರು ಪುಟ ಓದಿದ ಮೇಲೆ ’ ಗುಲ್ಬರ್ಗ ಕನ್ನಡ ಅರ್ಥವಾಗುತ್ತದೆಯೇ?" ಎಂಬ ಪ್ರಶ್ನೆಗೆ ನೀವು ’ಹೊಯಿಂದು’ (ಹೌದು)ಎನ್ನುತ್ತೀರಿ ಜನಪ್ರಿಯ ಹಾಗೂ  ಸೌಂದರ್ಯಾತ್ಮಕ ಅಂಶಗಳಲ್ಲಿ ಲೇಖಕಿ ರಾಜಿ ಮಾಡಿಕೊಂಡಿದ್ದಾರೆ. ಸಂಭಾಷಣಿ ಹಾಗೂ ಲೈಂಗಿಕ ವರ್ಣನೆಗಳನ್ನು ಅವಲೋಕಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

 ’ಬದುಕು’ ಮಾನವೀಯ ಅನುಭವದ ವ್ಯಾಪ್ತಿಯನ್ನು ವಿಸ್ತರಿಸುವ, ವೈವಿಧ್ಯಪೂರ್ಣ ಜೀವನಾನುಭವವನ್ನು ಜೀವಂತಿಕೆಯಿಂದ ಚಿತ್ರಿಸುವ ಅಸಾಧಾರಣ ಕಾದಂಬರಿ. ಈ ಬಹುಕೇಂದ್ರಿತ ಕಾದಂಬರಿ ಪುರುಷ ಪ್ರಧಾನ ಸಮಾಜದ ಜೋಗತಿ ಹಾಗೂ ಉಪಪತ್ನಿ ವ್ಯವಸ್ಥೆಯಿಂದ ಬಿಡುಗಡೆ ಪಡೆಯಲು ಹೆಣಗಾಡುತ್ತಿರುವ ಗುಲ್ಬರ್ಗಾದ ಗ್ರಾಮೀಣ ಮಹಿಳೆಯರ ಬದುಕಿನ ಆತ್ಮೀಯ ಚಿತ್ರಣವನ್ನು ನೀಡುತ್ತದೆ.

ಮುರಳೀಧರ ಉಪಾಧ್ಯ ಹಿರಿಯಡಕ,
ಬದುಕು(ಕಾದಂಬರಿ)
ಲೇ: ಗೀತಾ ನಾಗಭೂಷಣ
ಪ್ರ: ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮುದ್ರಣ:೨೦೦೧ ಬೆಲೆ ರೂ.೧೯೦ ಪುಟಗಳು-೪೮೯.

ಮುರಳೀಧರ ಉಪಾಧ್ಯ ಹಿರಿಯಡಕ - ಚಂದು ಮೆನೊನ್ ಅವರ " ಇಂದುಲೇಖಾ , ಅನುವಾದ - ಸಿ. ರಾಘವನ್ } ಇಂದುಲೇಖಾ ಇಂಗ್ಲಿಷ್ ಕಲಿತಾಗ

ಭಾರತದ ಹೆಚ್ಚಿನ್ ಭಾಷೆಗಳಲ್ಲಿ ಕಾದಂಬರಿ ಪ್ರಕಾರ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿ ಬೆಳೆಯ ತೊಡಗಿತು. ಮಲಯಾಳದ ಪ್ರಥಮ ಕಾದಂಬರಿಯಾದ ಅಪ್ಪು ನಡುಂಗಾಡಿಯವರ್ ’ಕುಂದಲತ್’ ೧೮೮೭ರಲ್ಲಿ ಪ್ರಕಟವಾಯಿತು. ೧೮೮೯ರಲ್ಲಿ ಪ್ರಕಟವಾದ ಚಂದು ಮೇನೋನ್ ರ ’ಇಂದುಲೇಖಾ’ ಕೇರಳ ಕಾದಂಬರಿ ಪ್ರಕಾರಕ್ಕೆ ದಿಕ್ಸೂಚಿಯಾದ ಪ್ರಧಾನ ಕಾದಂಬರಿ.

ಚಂದು ಮೇನೋನ್ (೧೮೪೭-೧೮೯೯) ನ್ಯಾಯಾಲಯದ ಗುಮಾಸ್ತನಾಗಿ ಉದ್ಯೋಗ ಆರಂಭಿಸಿ ಮುಂದೆ ಮುನ್ಸೀಫ್ ಮತ್ತು ಸಬ್  ಜಡ್ಜ್ ಆಗಿದ್ದರು. ೧೮೮೯ ರಲ್ಲಿ ’ಇಂದುಲೇಖಾ’ ಕಾದಂಬರಿಯನ್ನು ಬರೆದ ಅವರು, ತನ್ನ ಎರಡನೆಯ ಕಾದಂಬರಿ ’ಶಾರದ’ ವನ್ನು ಪೂರ್ತಿಗೊಳಿಸುವ ಮೊದಲು ೧೮೮೯ ರಲ್ಲಿ ನಿಧನ ಹೊಂದಿದರು. ’ಇಂದುಲೇಖಾ ಕಾದಂಬರಿಯ ಇಂಗ್ಲಿಷ್ ಅನುವಾದ ೧೮೯೦ರಲ್ಲಿ ಪ್ರಕಟವಾಯಿತು. ಇಂಗ್ಲಿಷ್ ಭಾಷಾಂತರಕಾರ ಜಾನ್ ವಿಲ್ಲಬಿ ಫ್ರಾನ್ಸಿಸ್ ಡ್ಯೂಮೆರ್ಗ್ ರಿಗೆ  ಬರೆದ   ಪತ್ರದಲ್ಲಿ ಚಂದು ಮೇನೋನ್ ತನ್ನ ಕಾದಂಬರಿ ರಚನೆಯ ಉದ್ದೇಶಗಳನ್ನು ವಿವರಿಸಿದ್ದಾರೆ. ಅವುಗಳಲ್ಲಿ ಎರಡು ಉದ್ದೇಶಗಳು ಐತಿಹಾಸಿಕ ಮಹತ್ವ ಪಡೆದಿವೆ-"ಜನ್ಮ ಸಿದ್ಧವಾದ ಬುದ್ಧಿ  ಸಾಮರ್ಥ್ಯ , ಮೈಮಾಟಗಳಿಗೆ ಹೆಸರು ವಾಸಿಯಾದ ನಮ್ಮ ನಾಯರ್ ಹೆಂಗಸರಿಗೆ ಉತ್ತಮ ಇಂಗ್ಲಿಷ್ ಶಿಕ್ಷಣ ಲಭಿಸಿದ್ದೇ ಆದರೆ ಅವರು  ಸಮಾಜದಲ್ಲಿ ಗಳಿಸಬಹುದಾದ ಸ್ಥಾನ, ಮಾನ, ಪ್ರಭಾವಗಳನ್ನು ನನ್ನ ಮಲಯಾಳ ಸಹೋದದರಿಗೆ ಮನವರಿಕೆ ಮಾಡಿಕೊಡಬೇಕೆಂಬ ಬಯಕೆ. ಕೊನೆಯದಾಗಿ , ನಿರುಪಯೋಗದಿಂದ ಹಾಗೂ ದುರಪಯೋಗದಿಂದ ಹಾಗೂ ದುರಪಯೋಗದಿಂದ ರಭಸವಾಗಿ ನಾಶ ಹೊಂದುತ್ತಿರುವ ಮಲಯಾಳ    ಸಾಹಿತ್ಯದ ಬೆಳವಣೆಗೆಗೆ ಅತ್ಯಲ್ಪವಾದರೂ ನನ್ನ ಸ್ವಂತದ ಕೊಡುಗೆ ನೀಡಬೇಕೆಂಬ ಬಯಕೆ." "ಇಂದುಲೇಖಾ  ಹತ್ತೊಂಬತ್ತನೆಯ ಶತಮಾನದ ಅಂತ್ಯದ ದಕ್ಷಿಣ ಮಲಬಾರಿನ ಮಾತೃ ಪ್ರಧಾನ ಅವಿಭಕ್ತ ಕುಟುಂಬವೊಂದರಲ್ಲಿ ಇಂಗ್ಲಿಷ್ ಶಿಕ್ಷಣದ ಪ್ರಭಾವ ಕಾಣಿಸಿಕೊಂಡದ್ದನ್ನು ಕಲಾತ್ಮಕವಾಗಿ ಚಿತ್ರಿಸುವ ಕಾದಂಬರಿ. ಇಂದುಲೇಖಾ -ಮಾಧವನ್  ಸಂಸ್ಕೃತ್ ಮತ್ತು ಇಂಗ್ಲಿಷ್ ಶಿಕ್ಷಣ ಪಡೆದವರು. ಅವರ  ಮದುವೆಗೆ ಒಪ್ಪಿಗೆ ನೀಡದ ಕುಟುಂಬದ ಯಜಮಾನ  ಪಂಜು ಮೇನೋನ್ ’ ಇಂದುಲೇಖಾ’ ಗಳನ್ನು ಶ್ರೀಮಂತ ಸೂರಿ  ನಂಬೂದಿರಿಪಾಡರಿಗೆ ಅರ್ಪಿಸಲು ನಿರ್ಧರಿಸುತ್ತಾನೆ. ಇಂದುಲೇಖೆಯ ಸ್ವಾಭಿಮಾನ  ಮತ್ತು ಮಾತಿನ ಪೆಟ್ಟುಗಳಿಂದ  ತತ್ತರಿಸುವ ಸೂರಿ ನಂಬೂದಿರಿಪಾಡ್ ’ ಮೃಚ್ಛಕಟಿಕದ  ಶಕಾರನಂಥ  ಹಾಸ್ಯ ಪಾತ್ರವಾಗಿದ್ದಾನೆ. ಇಂದುಲೇಖಾ-ಸೂರಿ ನಂಬೂದಿರಿಪಾಡರನ್ನು ಮದುವೆಯಾದಳೆಂಬ ಸುಳ್ಳು ಸುದ್ದಿಯನ್ನು  ನಂಬಿ ಮಾಧವನ್ ಊರುಬಿಟ್ಟು ಕಲ್ಕತ್ತಕ್ಕೆ ಹೋಗುತ್ತಾನೆ. ಕೊನೆಯಲ್ಲಿ ತನ್ನ ಪ್ರತಿಜ್ಜೆಯನ್ನು ಹಿಂದೆಗೆದುಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಪಂಜು ಮೇನೋನ್ ರು ಇಂದುಲೇಖಾ ಮಾಧವನ್ ರ ಮದುವೆ ಮಾಡಿಸುತ್ತಾರೆ. ಕೇಶವನ್ ನಂಬೂದಿರಿ.
 ಲಕ್ಷ್ಮೀ ಕುಟ್ಟಿ ಅಮ್ಮ, ಕಲ್ಯಾಣಿ ಕುಟ್ಟಿ ಇವರೆಲ್ಲ ಕೇರಳ ಸಮಾಜದ ಸಂಕೀರ್ಣ ಜಾತಿ ಸಂಬಂಧಗಳು ಮತ್ತು ಅವಿಭಕ್ತ ಕುಟುಂಬದ ಕ್ರೌರ್ಯ ದ ನಡುವೆ  ಅಸಹಾಯಕರಾಗಿದ್ದಾರೆ. ಹಾಸ್ಯ, ಸಂಸ್ಕೃತ ನಾಟಕ ಮತ್ತು ತಾಳ ಮದ್ದಲೆಯ ಮಾದರಿಯ್ ಸಂಭಾಷಣೆ  ’ ಇಂದುಲೇಖಾದಲ್ಲಿ ಮುಖ್ಯವಾಗಿ ಗಮನ ಸೆಳೆಯುತ್ತವೆ. ಮಾಧವನ್ ದೇಶಾಂತರ ಹೊರಡುವುದರಿಂದ ಕಾದಂಬರಿಯ್ ಘಟನೆಗಳಿಗೆ ಅಖಿಲಭಾರತ ವ್ಯಾಪ್ತಿ ಪ್ರಾಪ್ತವಾಗಿದೆ. ಇಂಗ್ಲಿಷ್ ಶಿಕ್ಷಣ ಪಡೆದು ದರಿಂದಲೇ ವ್ಯಕ್ತಿ ಪರಿಪೂರ್ಣನಾಗುವುದಿಲ್ಲ ಎಂಬ ಧ್ವನಿಯೂ ಮಾಧವನ್ ನ ಪಾತ್ರ ಚಿತ್ರಣದಲ್ಲಿದೆ.

೧೮೫೭ರಲ್ಲಿ ಇಂಗ್ಲಿಷ್ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯಗಳು ಕಲ್ಕತ್ತಾ, ಮದ್ರಾಸ್ ಮತ್ತು ಮುಂಬೈಗಳಲ್ಲಿ ಆರಂಭಗೊಂಡುವು. . ಇಂದುಲೇಖಾ’ ದ ಮಾಧವನ್ ಮದ್ರಾಸ್ ನಲ್ಲಿ ಇಂಗ್ಲಿಷ್ ಶಿಕ್ಷಣ  ಪಡೆದು, ಸರಕಾರಿ ಅಧಿಕಾರಿಯಾಗುತ್ತಾನೆ. ವಸಾಹತುಶಾಹಿ ಆಡಳಿತದ ಆರಂಭದ ಹಂತದಲ್ಲಿ ಬಂದ ಈ ಕಾದಂಬರಿ ಯಲ್ಲಿ ಇಂಗ್ಲಿಷ್ ಮತ್ತು ’ಧವಳರ ಆಡಳಿತದ ಸ್ವಾಗತ ಮತ್ತು ಆರಾಧನೆ ಕಂಡುಬರುತ್ತದೆ. ಈ ಕಾದಂಬರಿಯ ಮಾಧವನ್ ವಿವರಿಸುವಂತೆ, "ಇಂಗ್ಲಿಷ್ ಸರಕಾರ ಪ್ರಾರಂಭವಾದಂದಿನಿಂದ   ಇಂಡಿಯಾಕ್ಕೆ ವಾಚಾಮಗೋಚರವೆನ್ನ ಬಹುದಾದ ಪ್ರಯೋಜನಗಳು ಉಂಟಾಗಿವೆ. ಅದರ ಪ್ರಯೋಜನಗಳನ್ನು ಇನ್ನಷ್ಟು ವಿಸ್ತರಿಸುವ ಯತ್ನಗಳನ್ನು  ಮಾಡಲು ಕಟ್ಟಿದ ಸಂಸ್ಥೆ-ಕಾಂಗ್ರೆಸ್. ಇಂಗ್ಲಿಷ್ ಜನರಷ್ಟು ಬುದ್ಧಿ
 ಸಾಮರ್ಥ್ಯ ಇರುವ ಇನ್ನೊಂದು ಜನತೆಯನ್ನು ಇನ್ನೆಲ್ಲಾದರೂ ನೋಡಲು  ಸಾಧ್ಯವೇ ? ಸಂಶಯ. ಈ ಬುದ್ಧಿ ಸಾಮರ್ಥ್ಯದ ಲಕ್ಷಣಗಳನ್ನು ಕಾಣುವುದೆಲ್ಲೆ? ಒಂದನೆಯದಾಗಿ ಅವರ್ ನೀತಿ  ಜ್ಜತೆ; ಎರಡನೆಯದಾಗಿ  ಭೇದಭಾವವಿಲ್ಲದ ವಸ್ತು ನಿಷ್ಠ ನೀತಿ; ಮೂರನೆಯದಾಗಿ ದಯೆ; ನಾಲ್ಕನೆಯದು ಶೌರ್ಯ; ಐದನೆ ಯದು ಚುರುಕುತನ; ಆರನೆಯದು ತಾಳ್ಮೆ. ಈ ಆರು ಅಂಶಗಳಿಂದ ಇಂಗ್ಲೀಷರು ಪ್ರಪಂಚದ ಅದೆಷ್ಟೋ ದೇಶಗಳನ್ನು ತಮ್ಮ ಕೈಕೆಳಗಿಟ್ಟು ಕಾಪಾಡಿ ಬರುತ್ತಿದ್ದಾರೆ. ಇಂತಹ ಉತ್ಕೃಷ್ಟ ಮನಸ್ಕರಾದೆ ಮನುಷ್ಯರಿಂದ ಆಡಳಿತ ಮಾಡಲ್ಪಡಲು ಅವಕಾಶ ಬಂದೊದಗಿದ್ದೇ ಇಂಡಿಯಾ ದೇಶಾದ ಮಹಾಭಾಗ್ಯ; ಸಂಶಯವಿಲ್ಲ." ಮಾಧವನ್ ನ್ ಪಾತ್ರ ಚಿತ್ರಿಸಿದ ಚಂದು ಮೇನೋನ್ ಇಂಗ್ಲಿಷ್ ಶಿಕ್ಷಣವನ್ನು ಉತ್ಸಾಹ, ಸಾಮಾಜಿಕ  ಪರಿವರ್ತನೆ ಮತ್ತು ಆಧುನಿಕತೆಯ ಕನಸುಗಳೊಂದಿಗೆ ಸ್ವಾಗತಿಸಿದರು. "ಇಂಗ್ಲಿಷ್  ಶಿಕ್ಷಣ ಅಪಾಯಕಾರಿ ಎಂದಾದರೆ ಆ ಅಪಾಯವನ್ನು ನಾನು ಸ್ವಾಗತಿಸುತ್ತೇನೆ" ಎಂದರು ಚಂದು ಮೇನೋನ್.

ಇಂಗ್ಲಿಷರ ರಾಜಕೀಯವನ್ನು ಕುರಿತ ಗುಮಾನಿಗಳೂ ’ ಇಂದುಲೇಖಾ’ ದಲ್ಲಿ ದಾಖಲಾಗಿವೆ. ’ ನಮ್ಮ ರಾಜರುಗಳನ್ನೆಲ್ಲ ಬರೀ ಹೆಣಗಳಂತೆ ಮಾಡಿಬಿಟ್ಟ’, "ಈ ಧವಳರನ್ನು ನಂಬಲೇಬಾರದು" ಎಂದು ಕೇಶವನ್ ನಂಬೂದಿರಿ ಹೇಳುತ್ತಾನೆ-" ಅವರು ಒಂದೂವರೆ ಲಕ್ಷ ರೂಪಾಯಿಯಷ್ಟು ದೊಡ್ದ ಮೊತ್ತವನ್ನು ಸಂಗ್ರಹಿಸಿದರು. ನೂಲು ಕಂಪೆನಿಯನ್ನು ಅವರ ಊರಿಂದಲೇ ನಿರ್ಮಿಸಿ ಹಡಗದಲ್ಲಿ ಇಲ್ಲಿ ತಂದು ಇಳಿಸಿದರು. ಅವರೆಂಥ ಚತುರರು, ನಾವೆಂಥ ಬೆಪ್ಪರು|" ಕೃತಿಯ ಅಂತ್ಯದಲ್ಲಿ ಬರುವ ನಿರೀಶ್ವರವಾದ ಮತ್ತು ಕಾಂಗ್ರೆಸ್ ಸಂಸ್ಥೆಗಳನ್ನು ಕುರಿತ ಸುದೀರ್ಘ ಚರ್ಚೆಗಳಿಂದ ಕಾದಂಬರಿಯ ಬಂಧ ಶಿಥಿಲವಾಗಿದೆ. ಆದರೆ ಚಂದು ಮೇನೋನ್ ರಿಗೆ ರಾಜಕೀಯ, ಸಾಮಾಜಿಕ್ ಉದ್ದೇಶಗಳಿದ್ದುವು ಎಂಬುದನ್ನು ಮರೆಯಬಾರದು. ಕೇರಳದ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು(೧೮೫೪-೧೯೨೮) ಸಂಸ್ಕೃತ ಶಿಕ್ಷಣದ ಜತೆಯಲ್ಲೆ ಇಂಗ್ಲಿಷ್ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದರು. ನಾರಾಯಣಗುರುಗಳ ಸಮಾಜ ಸುಧಾರಣೆಯ ಆಂದೋಲನಕ್ಕಿಂತ ಮೊದಲೇ ಪ್ರಕಟವಾಗಿರುವ ಚಂದು ಮೇನೋನ್ ರ ಕಾದಂಬರಿಯ ವೈಚಾರಿಕತೆ ಆ ಕಾಲದ ಸಮಾಜದಲ್ಲಿ ಕ್ರಾಂತಿಕಾರಿಯಾಗಿತ್ತು.

ಮಲಯಾಳದ ಸಾಹಿತ್ಯ ಚರಿತ್ರಕಾರ ಪಿ.ಕೆ. ಪರಮೇಶ್ವರನ್ ನಾಯರ್ ’ ಇಂದುಲೇಖಾದ ಮಹತ್ವವನ್ನು ಗುರುತಿಸುತ್ತ, ಆಧುನಿಕ್ ಕೇರಳದದಲ್ಲಿ ಸಾಮಾಜಿಕ ಪರಿವರ್ತನೆಯ ಆದ್ಯ ಪ್ರಚೋದನೆ   ’ ಇಂದುಲೇಖಾ ದಿಂದ ಉಂಟಾದದ್ದೇಂದು ನಿಸ್ಸಂಶಯವಾಗಿ ಹೇಳಬಹುದು. ಅದಕ್ಕೆ ಮೊದಲೇ ಸಮಾಜ ಸುಧಾರಣೆಯನ್ನು ಕುರಿತು ಮಾತನಾಡಿರಬಹುದು; ಬರೆದಿರ ಬಹುದು. ಆದರೆ ಸಾಮಾಜಿಕ ವಿಲಕ್ಷಣ ಪದ್ಧತಿಯ ನಿವಾರಣೆಯ್ ವಿಷಯ ಜನರ ಹೃದಯಕ್ಕೆ ತಾಗಿ ಅವರು ತೀವ್ರವಾಗಿ ಆಲೋಚಿಸುವಂತಾದುದು ’ ಇಂದುಲೇಖ’ ವನ್ನು ಓದಿದ ನಂತರವೇ" ಎಂದಿದ್ದಾರೆ. ಜನಸಾಮಾನ್ಯರ ಭಾಷೆಯ ಬಳಕೆ ಮತ್ತು ಚಿಂತನಶೀಲ ವಾಸ್ತವತಾವಾದಗಳಿಂದಾಗಿ ’ ಇಂದುಲೇಖಾ’ ಮಲಯಾಳ ಕಾದಂಬರಿ ಪ್ರಕಾರಕ್ಕೆ ಮುನ್ನೋಟ ನೀಡಿತು. ಇಂದುಲೇಖಾ’ ಅಂದು ಮಾತ್ರವಲ್ಲ ಇಂದಿಗೂ ಚೆಲುವೆ. ಇಂಗ್ಲಿಷರ ಆಡಳಿತ ಇಂಡಿಯಾದ ಮಹಾಭಾಗ್ಯವೇ ಎಂಬುದು ಚರ್ಚಿಸಬೇಕಾದ ಮಾತು.  ಆದ್ರೆ ’ ಇಂದುಲೇಖಾ’ ಮಲಯಾಳ ಸಾಹಿತ್ಯದ ಮಹಾಭಾಗ್ಯ. ಅನುಭಾವಿ ಭಾಷಾಂತರಕಾರ ಸಿ. ರಾಘುವನ್ ’ಇಂದುಲೇಖಾ’ ವನ್ನು ಚೆನ್ನಾಗಿ ಅನುವಾದಿಸಿದ್ದಾರೆ.
ಕೇರಳ-ಕರ್ನಾಟಕ್ ನೆರೆಹೊರೆಯ್ ರಾಜ್ಯ್ ಗಳು. ಆದರೆ ೧೮೮೯ರಲ್ಲಿ ಪ್ರಕಟವಾದ’ ಇಂದುಲೇಖಾ’ ೧೯೯೫ರಲ್ಲಿ ಒಂದು ಶತಮಾನದ ಅನಂತರ-ಕನ್ನಡಕ್ಕೆ ಭಾಷಾಂತರಗೊಂಡಿದೆ. ಇದು ನಮ್ಮ ಅಂತಾರಾಜ್ಯ ಸಾಂಸ್ಕೃತಿಕ ಸಂಬಂಧಗಳಲ್ಲಿರುವ ಬಿರುಕುಗಳನ್ನೂ ಸರಕಾರಿ ಸಂಸ್ಥೆಗಳ ಎತ್ತಿನ ಗಾಡಿಯ ವೇಗವನ್ನೂ ಒಟ್ಟಿಗೆ ಸೂಚಿಸುತ್ತದೆ.

ಇಂದುಲೇಖಾ
ಲೇ:ಒ. ಚಂದು ಮೆನೊನ್
ಅನುವಾದ-ಸಿ. ರಾಘವನ್
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ,
ಎ-೫ ಗ್ರೀನ್ ಪಾರ್ಕ್,
ಹೊಸದಿಲ್ಲಿ-೧೧೦೦೧೬.


 ಮುರಳೀಧರ ಉಪಾಧ್ಯ, ಹಿರಿಯಡಕ

ಕೃತಿಕಾ ಶ್ರೀನಿವಾಸನ್- -- ನಿಲ್ಲಿಸದಿರು ವನಮಾಲಿ { ಪು. ತಿ. ನ } Pu Ti Narasimhachar

Thursday, June 18, 2020

ಮುರಳೀಧರ ಉಪಾಧ್ಯ ಹಿರಿಯಡಕ - ಯರ್ಮುಂಜ ರಾಮಚಂದ್ರ ರ ಸಮಗ್ರ ಕತೆ ಕಾವ್ಯ {2002 }

ಯರ್ಮುಂಜ  ರಾಮಚಂದ್ರ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡ ಕನ್ನಡ ಲೇಖಕ. ಅವರ ಮೊದಲ    ಸಣ್ಣಕತೆ ’ ಆರಿದ ಹಂಬಲ’ ೧೯೪೮ರಲ್ಲಿ ಮಂಗಳೂರಿನ  ’ಅರುಣ ’ ಪತ್ರಿಕೆಯಲ್ಲಿ ಪ್ರಕಟವಾಯಿತು. ’ಸ್ನೇಹಿ ತರು" ಎಂಬಕತೆ ೧೯೪೯ರಲ್ಲಿ ’ ಜಯಒತೆ’ ಮಾಸ ಪತ್ರಿಕೆ ನಡೆಸಿ ಅಖಿಲ ಕರ್ನಾಟಕ ಕಥಾ ಸ್ಪರ್ಧೆಯಲ್ಲಿ    ಬಹುಮಾನ   ಪಡಯಿತು. ತರುಣ ಯರ್ಮುಂಜರು ಪುತ್ತಾರು ತಾಲೂಕಿನ ಕಬಕ ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್, ಕಲ್ಲಡ್ಕ ಸಮೀಪದ ಬೋಳಂತೂರು ಶಾಲೆಯಲ್ಲಿ ಉಪಾಧ್ಯಾಯ, ಪುತ್ತೂರು ತಾಲೂಕು ಕಚೇರಿಯಲ್ಲಿ ಟೈಪಿಸ್ಟ್, ಮಂಗಳೂರಿನ ’ ನವಭಾರತ’ದಲ್ಲಿ ಉಪಸಂಪಾದಕ, ’ರಾಷ್ಟ್ರಮತ’ದಲ್ಲಿ ಉಪಸಂಪಾದಕ, -ಹೀಗೆ ವಿವಿಧ ವೃತ್ತಿಗಳಲ್ಲಿದ್ದರು. ಅವರ್ ’ ಚಿಕಿತ್ಸೆಯ ಹುಚ್ಚು ಮತ್ತು ಇತರ ಕತೆಗಳು ’ ೧೯೫೪ ರಲ್ಲಿ ಪ್ರಕಣವಾಯಿತು. ಅವರು ತನ್ನ ಇಪ್ಪತ್ತ ಮೂರನೆಯ ವಯಸ್ಸಿನಲ್ಲಿ ೧೯೫೫ರಲ್ಲಿ ತೀರಿಕೊಂಡರು. ಅವರ ’ ವಿದಾಯ’ ಕವನ ಸಂಕಲನ ೧೯೫೬ ರಲ್ಲಿ ಕವಿ ಎಂ.ಗೋಪಾಲ್ ಕೃಷ್ಣ ಅಡಿಗರ್ ಮುನ್ನುಡಿಯೊಂದಿಗೆ ಪ್ರಕಟವಾಯಿತು.

ಯರ್ಮುಂಜರ’ ಚಿಕಿತ್ಸೆಯ ಹುಚ್ಚು’, ’ಚೆನ್ನಪ್ಪ ಒಡೆದ ಮೂರ್ತಿ, ’ನಾನು ಮನುಷ್ಯ, ;ಎಂಕಪ್ಪುವಿನ ದ್ವೇಷಾಗ್ನಿ’, ಪ್ರೇತಾತ್ಮಗಳು ಈ ಕತೆಗಳು  ಈಗಾಗಲೇ ಕನ್ನಡದ ಓದುಗರ ವಿಮರ್ಶಕರ ಗಮನ ಸೆಳೆದಿವೆ. ಈ ಯರ್ಮುಂಜರ ’ ಸಮಗ್ರ ಕಥೆ-ಕಾವ್ಯಕ್ಕೆ ಪ್ರಸ್ತಾವನೆಯನ್ನು ಬ್ರೆದಿರುವ ರಾಮ್ಚಂದ್ರದೇವ, ಯರ್ಮುಂಜರ ಸೃಜನಶೀಲತೆ ಹೆಚ್ಚು ಪ್ರಖರವಾಗಿ ಕಾಣುವುದು ಕಾವ್ಯಕ್ಕಿಂತಲೂ ಹೆಚ್ಚಾಗಿ ಸಣ್ಣಕತೆಯಲ್ಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಗೋಪಾಲಕೃಷ್ಣ ಅಡಿಗರು ’ವಿದಾಯ’ದ ಮುನ್ನುಡಿಯಲ್ಲಿ ಯರ್ಮುಂಜರ ’ಬೆಳಕು’, ’ಚಂದ್ರ ಬಿಂಬ’, ಕ್ಷೋಭೆ, ’ಕಲ್ಪನೆ’, ಯಾರಲ್ಲಿಗೆ ಬಂದರು ಕಳೆದಿರುಳು?’ ಕವನಗಳನ್ನು ಮೆಚ್ಚಿಕೊಂಡಿದ್ದಾರೆ. ’ಯಾರಲ್ಲಿಗೆ ಬಂದರು. ಕಳೆದಿರುಳು’-ಕವನದಲ್ಲಿ ’ಏನೂ ಅರಿಯದ ಮುಗ್ದೆಯೊಬ್ಬಳು’ ತನ್ನ ಕಟು ಮಧುರ ಅನುಭವವೊಂದನ್ನು ನೆನೆಪಿಸಿಕೊಂಡು ಗಾಳಿಯನ್ನು ಮಾತನಾಡಿಸುತ್ತಿದ್ದಾರೆ. ಇದೊಂದು ನಿಗೂಢ, ಧ್ವನಿ ಪೂರ್ಣ ಕವನ. ಅಡಿಗರು ಬರೆದಿರುವಂತೆ, "ಇಲ್ಲಿ ಬಂದವರು ಯಾರು? ಪ್ರೇಯಸಿಯ ಬಳಿಗೆ ಪ್ರಿಯನೇ? ಜೀವಾತ್ಮನ  ಬಳಿಗೆ ಪರಮಾತ್ಮನೇ? ಸಾಂತದ ಕಿವಿಯಲ್ಲಿ ಅನಂತ ಪಿಸುನುಡಿದು ಹೋಯಿತೆ? ಅಥವಾ ಸಾವು  ಹೀಗೆ ಹಠಾತ್ತನೆ ಬಂದು ಮೈ ಸೋಂಕಿಸಿ ಅದೃಶ್ಯವಾಯಿತೆ? ಈ ಎಲ್ಲ ಅರ್ಥಗಳೂ ಇಲ್ಲಿ  ಸಲ್ಲುತ್ತವೆ."
ವೇಣುಗೋಪಾಲ ಕಾಸರಗೋಡು ಅವರ ’ಯರ್ಮುಂಜ  ರಾಮಚಂದ್ರ- ಬದುಕು-ಬರಹ’ ಗ್ರಂಥವನ್ನು ಪುತ್ತೂರು ಕರ್ನಾಟಕ ಸಂಘ ೧೯೯೩ರಲ್ಲಿ ಪ್ರಕಟಿಸಿದೆ. ಯರ್ಮುಂಜರು ಕನ್ನಡ ಸಾಹಿತ್ಯ ಲೋಕಕ್ಕೆ ಅತಿಥಿಯಂತೆ ಬಂದು, ಬೇಗನೆ ’ ವಿದಾಯ’ ಹೇಳಿ ಕಣ್ಮರೆಯಾದ, ತನ್ನ ಹೆಜ್ಜೆ ಹುರುತುಗಳನ್ನು ಉಳಿಸಿ ಹೋದ ಲೇಖಕ. ಪ್ರಿಸಮ್  ಬುಕ್ಸ್ ನವರು ಪ್ರಕಟಿಸಿರುವ ಯರ್ಮುಂಜರ ’ ಸಮಗ್ರ ಕತೆ ಕಾವ್ಯ’ ಯರ್ಮುಂಜರಿಗೊಂದು ಜಂಗಮ ಸ್ಮಾರಕವಾಗಿದೆ.

ಮುರಳೀಧರ ಉಪಾಧ್ಯ, ಹಿರಿಯಡಕ.
ಸಮಗ್ರ ಕಥೆ-ಕಾವ್ಯ
ಲೇ: ಯರ್ಮಂಜ ರಾಮಚಂದ್ರ
ಪ್ರ: ಪ್ರಿಸಮ್ ಬುಕ್ಸ್ ಪ್ರೈ. ಲಿ.
ನಂ.:೧೮೬೫, ೩೨ನೇ ಕ್ರಾಸ್
ಬನಶಂಕರಿ ಎರಡನೇ ಹಂತ,
ಬೆಂಗಳೂರು-೫೬೦೦೭೦.
ಮುದ್ರಣ:೨೦೦೨ ಬೆಲೆ:ರೂ.೮೫

Tuesday, June 16, 2020

ಮುರಳೀಧರ ಉಪಾಧ್ಯ ಹಿರಿಯಡಕ - ಸರೋಜಾ ಆಚಾರ್ಯರ " ಅಲ್ಲಿದೆ ನಮ್ಮನೆ " { ಕಥಾ ಸಂಕಲನ - 2002 } ಮಧ್ಯಮ ವರ್ಗದ ಹಾಡು-ಪಾಡು

 ಸರೋಜ  ಆರ್. ಆಚಾರ್ಯರ ಮೊದಲ್ ಕಥಾಸಂಕಲನ ’ ವ್ಯವಸ್ಥೆ’ ಸಹೃದಯರ ಮೆಚ್ಚುಗೆ ಗಳಿಸಿದೆ. ಇದೀಗ ಪ್ರಕಟ್ವಾಗಿರುವ ಅವರ ಎರಡನೆಯ ಕಥಾಸಂಕಲನದಲ್ಲಿ ಒಂಬತ್ತು ಕತೆಗಳಿವೆ. "ಹಾಗೆ ನಾನು ಕಂಡು ಕೇಳಿ ತಿಳಿದ ಅನುಭವಗಳೇ ನನ್ನ ಕಥಾವಸ್ತುಗಳು. ನಿತ್ಯಜೀವನದಲ್ಲಿ ನೆರೆಹೊರೆಯಲ್ಲಿ, ಸಮಾರಂಭಗಳಲ್ಲಿ ಕಾರ್ಯಾಲಯಗಳಲ್ಲಿ ಎದುರಾಗುವ ನಮ್ಮ ನಿಮ್ಮಂತಹ ವ್ಯಕ್ತಿಗಳೇ ನನ್ನ ಕಥಾ ಪಾತ್ರಗಳು. ನನ್ನ ಕತೆಗಳಲ್ಲಿ  ಬರುವ ಈ ವ್ಯಕ್ತಿಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಹಿಂದೆಲ್ಲೋ ಭೇಟಿಯಾಗಿರುವಂತೆ ನಿಮಗೆ ಅನಿಸಿದರೆ ಅಲ್ಲಿಗೆ ನನ್ನ ಈ ಬರಹ ಸಾರ್ಥಕವಾದಂತೆ" ಎನ್ನುತ್ತಾರೆ ಲೇಖಕಿ.
ಮಹಾನಗರಗಳಲ್ಲಿ ಮಧ್ಯಮ ವರ್ಗದವರ ಜೀವನದ ಕಷ್ಟ-ಸುಖಗಳು ಸರೋಜಾ ಆಚಾರ್ಯರ ಕೆಲವು ಕತೆಗಳ ವಸ್ತು. ’ಆವರಣ’ ಕತೆಯ ಸುಮತಿ-ರವೀಂದ್ರ ದಂಪತಿಗಳು ಮನೆಸೈಟ್ ಕೊಳ್ಳಲಿಕ್ಕಾಗಿ ಲೆಕ್ಕಾಚಾರದಿಂದ ಜೀವನ ಸಾಗಿಸುತ್ತಾರೆ. ’ ವರ್ತುಲ’ ಕತೆಯಲ್ಲಿರುವ ವೈದೃಶ್ಯದ ತಂತ್ರ ಯಶಸ್ವಿಯಾಗಿದೆ. ಆನಂದನ ಪತ್ನಿ ವಸಂತಿ ನಿರುದ್ಯೋಗಿ. ಸ್ಕೂಟರು, ಮನೆಸೈಟು ಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ಜಯರಾಂನ ಪತ್ನಿ ಸರಳಾ ಒಳ್ಳೆಯ ಉದ್ಯೋಗದಲ್ಲಿದ್ದರು ಅವನು ಮಾನಸಿಕವಾಗಿ ಅಸುಖಿಯಾಗಿದ್ದಾನೆ. ಮಹಿಳೆ ಉದ್ಯೋಗದಲ್ಲಿರುವುದನ್ನು
ಲೇಖಕಿ ವಿರೋಧಿಸುವುದಿಲ್ಲ. ಮಧ್ಯಮ ವರ್ಗದ  ಬದುಕಿನ ಆತ್ಮೀಯ ಸಮೀಪ ಚಿತ್ರವೊಂದನ್ನು ಈ ಕತೆಯಲ್ಲಿ ನೀಡಿದ್ದಾರೆ. ಕೌಟುಂಬಿಕ ಸಂಬಂಧಗಳನ್ನು ಕುರಿತಾ ಕೆಲವು ಒಳ್ಳೆಯ ಕತೆಗಳು ಸರೋಜಾ ಆಚಾರ್ಯರ ವ್ಯವಸ್ಥೆ ಸಂಕಲನದಲ್ಲಿದ್ದುವು.

ಈ ಸಂಕಲನದ ’ ಸಂಜೆ ಮೂಡಿದ ಬೆಳಕು’ ತಲೆಮಾರುಗಳ ಅಂತರ ಕೌಟುಂಬಿಕ ಸಂಬಂಧಗಳನ್ನು ಕಲಾತ್ಮಕವಾಗಿ ಚಿತ್ರಿಸುತ್ತದೆ. ರಾಜಮ್ಮ ಹಾಗೂ ಅವರ್ ಮೈದುನ ಗೋಪಿಯ ನಡುವೆ ಅಕಾರಣ ದ್ವೇಷವಿದೆ.  ತಮ್ಮ ಮಕ್ಕಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಇವರು ಕತೆಯ ಕೊನೆಯಲ್ಲಿ ಪರಸ್ಪರ ಹೊಂದಿಕೊಂಡು ಬದುಕಲು ಕಲಿಯುತ್ತಾರೆ. ಈ ಸುದ್ದಿ ಹೊಸತಲ್ಲ; ಕತೆ ಅವಿಭಕ್ತ ಕುಟುಂಬದ ಇತಿಹಾಸ ದಲ್ಲಿರುವ ನಿಗೂಢ, ದಾರುಣ ಸಂಗತಿಗಳನ್ನು ಹದಿಹರೆಯದ ಹುಡುಗಿಯೊಬ್ಬಳು ಗಮನಿಸುತ್ತಾಳೆ.  ಗರ್ಭಿಣೆ ವಿಧವೆಯೊಬ್ಬಳನ್ನು ಮನೆಯಿಂದ ಹೊರ ಹಾಕಿದ ಈ ಕುಟುಂಬ ಈಗ ಶಾಪ ಗ್ರಸ್ತವಾಗಿದೆ.


’ ಸಹ ಪ್ರಯಾಣಿಕರು’ ಅನಿರೀಕ್ಷಿತ ಮುಕ್ತಾಯ ತಂತ್ರದ ಒಂದು ಒಳ್ಳೆಯ ಕತೆ. ಬದುಕಿನ ಆಕಸ್ಮಿಕಗಳನ್ನು ಈ ಕತೆ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಹಾಸಿಗೆ ಇದ್ದಷ್ಟು ಲ್ಕಾಲು ಚಾಚಲು, ಹೊಸ ತಲೆಮಾರಿನ ಎಳೆಯರೊಂದಿಗೆ ಹೊಂದಿಕೊಳ್ಳಲು ಹೆಣಗಾಡುವ ಮಹಿಳೆಯರ ಹಾಡು-ಪಾಡು ಚಿತ್ರಿಸುವ ’ಅಲ್ಲಿದೆ ನಮ್ಮನೆ’ ಒಂದು ವಾಚನಯೋಗ್ಯ ಸಂಕಲನ.

ಮುರಳೀಧರ ಉಪಾಧ್ಯ ಹಿರಿಯಡಕ
 ಅಲ್ಲಿದೆ ನಮ್ಮನೆ (ಕಥಾಸಂಕಲನ)
ಲೇ: ಸರೋಜ ಆರ್. ಆಚಾರ್ಯ
ಪ್ರ: ಸುಮಂತ ಪ್ರಕಾಶನ, ೧೧೮೩,
ಉಪ್ಪಿನಕೋಟೆ, ಬ್ರಹ್ಮಾವರ-೫೭೬೧೨೫.
ಮೊ.ಮುದ್ರಣ:೨೦೦೨ ಬೆಲೆ:ರೂ೬೦.



Thursday, June 11, 2020

ಮುರಳೀಧರ ಉಪಾಧ್ಯ ಹಿರಿಯಡಕ - ಸುಶೀಲಾ ಕೊಪ್ಪರ ಅವರ ಆತ್ಮಕತೆ- " ಕಣ್ಣು ಮುಚ್ಚಿ ನೋಡೊದಾಗ " { 2002 } ಉತ್ತರ ಕರ್ನಾಟಕದ ಮಹಿಳೆಯರ ಅವಸ್ಥೆ

ಅಂಚೆ ಇಲಾಖೆಯಲ್ಲಿದ್ದ ಶ್ರೀ ಮಧ್ವರಾಯರ ಮಗಳು ಸುಶೀಲಾ. ಜನನ- ೧೯೨೪ರಲ್ಲಿ ಖ್ಯಾತ ಕಾದಂಬರಿಕಾರ ವಿ.ಎಂ.ಇನಾಂದಾರ್ ಇವರ ಹಿರಿಯಣ್ಣ. ಬಾಗಲ್ ಕೋಟೆ ವಿಜಾಪುರಗಳಲ್ಲಿ ವಿದ್ಯಾಭ್ಯಾಸ. ಹದಿಮೂರನೆಯ ವಯಸ್ಸಿನಲ್ಲಿ  ಮದುವೆ./ ವಿಜಾಪುರದ ಜನಸಂಖ್ಯೆ ಎಷ್ಟು? ಎಂಬುದು ಇವರಿಗೆ ವಧುಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ. ಪತಿ ಅನಂತರರಾವ್ ಕೊಪ್ಪರರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ. ೧೯೫೭ರಲ್ಲಿ ಪತಿ ನಿಧನರಾದಾಗ ಸುಶೀಲಾರ ಬದುಕಿನಲ್ಲಿ ಕಾರ್ಮೋಡ. ಮೂವರು ಮಗಳಂದಿರ ಶಿಕ್ಷಣದ, ಮದುವೆಯ ಜವಾಬ್ದಾರಿ.೧೯೫೮ರಿಂದ ೧೯೬೪ರ ವರೆಗೆ ’ಸಂಯುಕ್ತ ಕರ್ನಾಟಕದಲ್ಲಿ ಗ್ರಂಥಪಾಲಕಿ. ಮುಂದೆ’ ಪ್ರಜಾವಾಣಿಯಲ್ಲಿ ಉದ್ಯೋಗ.
ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸುಶೀಲಾ ಕೊಪ್ಪರ ತನ್ನ ಬಾಲ್ಯ, ವಿದ್ಯಾಭ್ಯಾಸ, ದಾಂಪತ್ಯ ಹಾಗೂ ಸಾರ್ವಜನಿಕ ಜೀವನದ ನೆನಪುಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ. ಇಪ್ಪತ್ತೆನೆಯ ಶತಮಾನದ ಆರಂಭದಲ್ಲಿ ಮಡಿವಂತಿಕೆಯ ಚಿಪ್ಪಿನೊಳಗಿದ್ದ ಬ್ರಾಹ್ಮಣ ಮಹಿಳೆಯರು ನಿಧಾನವಾಗಿ ಪರಿವರ್ತನೆಯ ಹಾದಿ ಹಿಡಿದುದನ್ನು ಲೇಖಕಿ ಚೆನ್ನಾಗಿ ವಿವರಿಸಿದ್ದಾರೆ. ’ ಬಾಲ್ಯದಲ್ಲಿ ನಾ ಕಂಡ ಮರೆಯಲಾರದ ವಿಧವೆಯರು’ ಎಂಬುದು ಸಮಾಜಶಾಸ್ತ್ರದ ವಿದ್ಯಾರ್ಥಿಗಳು ಗಮನಿಸಬೇಕಾದ ಅಧ್ಯಾಯ. ವಿಧವೆಯೊಬ್ಬಳ ಅಗಮ್ಯ ಗಮನ ಸಂಬಂಧದ ಹೃದಯ ವಿದ್ರಾವಕ್ ಕತೆ ಈ ಅಧ್ಯಾಯದಲ್ಲಿದೆ. ’ಶಿಕ್ಷಣ ಪಡೆದು ಶಿಕ್ಷಕಿಯರಾಗಿದ್ದ ದಲಿತ ಮಹಿಳೆಯರು ಮಡಿವಂತ ಕುಟುಂಬದ ಬ್ರಾಹ್ಮಣ ಮಹಿಳೆಯರಿಗಿಂತ ಉತ್ತಮ ಸ್ಥಿತಿ ಯಲ್ಲಿದ್ದುದನ್ನು ಲೇಖಕಿ ಗುರುತಿಸಿದ್ದಾರೆ.
ತನ್ನ ಮದುವೆಯ ಖರ್ಚು-ವೆಚ್ಚವನ್ನು ಲೇಖಕಿ ಹೀಗೆ ವಿವರಿಸಿದ್ದಾರೆ-"೧೯೩೮ರ ಜೂನ್ ತಿಂಗಳ್ ಹದಿನೈದನೆಯ ದಿನಾಂಕ ಹುಬ್ಬಳ್ಳಿಯಲ್ಲಿ ’ಸಿಂಪಲ್; ಮದುವೆ ನಡೆಯಿತು. ಅಂದಿನ ಕಾಲದ  ’ಸಿಂಪಲ್" ಎಂದರೆ ಮೂರೇ ದಿನದ ಮದುವೆ! ಹದಿ ಮೂರು ರೂಪಾಯಿಗೆ ಕ್ವಿಂಟಾಲ್   ಗೋಧಿ, ಒಂದು ರೂಪಾಯಿಗೆ ಹದಿನೈದು ಇಪ್ಪತ್ತು ಸೇರು ಜೋಳ, ಮೂವತ್ತೈದು ರೂಪಾಯಿಗೆ ಒಂದುತೊಲ ಚಿನ್ನ ಸಿಕ್ಕುತ್ತಿತ್ತು. ಹದಿನೆಂಟು ರೂಪಾಯಿಗೆ ತೊಲಕೊಳ್ಳುತ್ತಿದ್ದ ಜನ ಬಂಗಾರದ ಬೆಲೆ ಜಾಸ್ತಿ ಎನ್ನುತ್ತಿದ್ದರು. ೧೯೩೮ರಲ್ಲಿಯ ಕರ್ನಾಟಕದಲ್ಲಿದ್ದ   ಬೆಲೆಗಳಿವು."
ತನ್ನ ಅಣ್ಣ ಕಾದಂಬರಿಕಾರ ಇನಾಂದಾರರ ವ್ಯಕ್ತಿತ್ವದ ಬಗ್ಗೆ ಲೇಖಕಿ ಯಾಕೆ ಮೌನ ವಹಿಸಿದ್ದಾರೆ? ಸುಶೀಳಾ ಕೊಪ್ಪರ ಅವರ ’ಕಣ್ತುಂಬಿ ನೋಡಿದಾಗ’ ಉತ್ತರ ಕರ್ನಾಟಕದ  ಮಹಿಳೆಯರ ಸಾಮಾಜಿಕ ಗತಿ-ಬಿಂಬದ ಕುರಿತು ಕಣ್ತೆರೆಸುವ ಸತ್ಯ ಸಂಗತಿಗಳನ್ನು ದಾಖಲಿಸುವ ಒಳ್ಳೆಯ ಆತ್ಮಕತೆ. ಇಂಥ ನೂರಾರು ಮಹಿಳೆಯರ ಆತ್ಮಕತೆಗಳು ಪ್ರಕಟವಾಗಬೇಕು. ಇದು ಸ್ತ್ರೀವಾದಿ ಚಳವಳಿಗೆ ನೀರೆರೆದು ಪೋಷಿಸುವ ರಚನಾತ್ಮಕ ಕೆಲಸವೂ ಹೌದು.
ಮುರಳೀಧರ ಉಪಾಧ್ಯ  ಹಿರಿಯಡಕ
ಕಣ್ಣುಮುಚ್ಚಿ ನೋಡಿದಾಗ
(ಆತ್ಮಕತೆ)
ಲೇ:ಸುಶೀಲಾ ಕೊಪ್ಪರ
ಪ್ರ:ಇಳಾ ಪ್ರಕಾಶಾನ,
ಬೆಂಗಳೂರು-೫೬೦೦೨೬
ಮೊದಲ ಮುದ್ರಣ:೨೦೦೨
ಬೆಲೆ:ರೂ೧೦೦

Monday, June 8, 2020

ಮುರಳೀಧರ ಉಪಾಧ್ಯ ಹಿರಿಯಡಕ - - ಡಾ| ಬಿ.ಜಿ.ಎಲ್. ಸ್ವಾಮಿಯವರ ಭಾಷಾಂತರ ಕೃತಿಗಳು { ನಡೆದಿಹೆ ಬಾಳೌ ಕಾವೇರಿ }

ಸಸ್ಯ ವಿಜ್ಜಾನಿ ದಿ| ಡಾ| ಬಿ.ಜಿ.ಎಲ್. ಸ್ವಾಮಿ ಕನ್ನಡದ ಮುಖ್ಯ ಗದ್ಯ  ಲೇಖಕರಲ್ಲೊಬ್ಬರು. ಅವರ ’ಹಸಿರು ಹೊನ್ನು’ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ವಿಜ್ಜಾನ ಸಾಹಿತ್ಯ ಕೃತಿ. ’ಕಾಲೇಜು ರಂಗ’, ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’, ಶಾಸನಗಳಲ್ಲಿ ಗಿಡಮರಗಳು’ ’ಫಲಶ್ರುತಿ’-ಇಂಥ ಹಲವು ಸ್ವಾರಸ್ಯ ಪೂರ್ಣ ಪುಸ್ತಕಗಳನ್ನು ಅವರು ಬರೆದಿದ್ದಾರೆ.

 ಚಿಟ್ಟಿ ಮತ್ತು ಜಾನಕಿರಾಮನ್ ಅವರ ನಡೆಂದಾಯ್ ವಾಳೆ ಕಾವೇರಿ’ ಎಂಬ ತಮಿಳು ಪ್ರವಾಸ ಕಥನವನ್ನು ’ ನಡೆದಿಹೆನಾಳೌ ಕಾವೇರಿ’ ಎಂಬ ಹೆಸರಿನಲ್ಲಿ ಬಿ.ಜಿ.ಎಲ್.ಸ್ವಾಮಿ ಅವರು ೧೯೭೭ರಲ್ಲಿ ಕನ್ನಡಕ್ಕೆ ಭಾಷಾಂಅತರಿಸಿದ್ದರು. ಇಪ್ಪತ್ತೈದು ವರ್ಷಗಳಾ ಅನಂತರ ಅವರ್ ಹಸ್ತಪ್ರತಿಗೆ ಮುದ್ರಣಾಯೋಗ ಪ್ರಾಪ್ತವಾಗಿದೆ. ಕಾವೇರಿ, ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ೭೬೦ ಕಿ.ಮೀ. ಹರಿದು ತಮಿಳು ನಾಡಿನ ’ಕಾವಿರಿಪೂ’ ಪಟ್ಟಣದ ಬಳಿ ಬಂಗಳದ ಕಡಲಿಗೆ  ಸೇರುತ್ತದೆ.

ಕರ್ನಾಟಕದಲ್ಲಿ ಇನ್ನೂರು ಕಿ.ಮೀ.  ಹರಿಯುವ ಕಾವೇರಿ, ತಮಿಳುನಾಡಿನಲ್ಲಿ ಐನೂರ ಅರುವತ್ತು ಕಿ.ಮೀ. ದೂರ ಹರಿಯುತ್ತದೆ. ಶ್ರೀರಂಗಪಟ್ಟಣ, ಶ್ರೀರಂಗಂ, ಕುಂಭಕೋಣ, ತಿರುವಾರೂರು, ಮಯೂರಂ, ತಿರುವೈಯಾರು, ಚಿದಂಬರಂ ಕಾವೇರಿ ತೀರದಲ್ಲಿರುವ ಮುಖ್ಯ ಕ್ಷೇತ್ರಗಳು. ತಮಿಳರು ಕಾವೇರಿಯನ್ನು ’ಪೊನ್ನಿ’ ಎಂದು ಕರೆಯುತ್ತಾರೆ. ಕರ್ನಾಟಕ-ತಮಿಳುನಾಡುಗಳಲ್ಲಿರುವ ಕಾವೇರಿ ತೀರದ ಪ್ರೇಕ್ಷಣೇಯ ಸ್ಥಳಗಳ ಪ್ರವಾಸ ಕಥನ ಈ ಪುಸ್ತಕದಲ್ಲಿದೆ. ಪುರಾಣ ಇತಿಹಾಸ-ವರ್ತಮಾನಗಳಿಂದ ಈ ಪ್ರವಾಸ ಕಥನ ತನ್ನ ಹೊಸತನದಿಂದ ಗಮನ ಸೆಳೆಯುತ್ತದೆ. ಸ್ವಾಮಿಯವರ ಭಾಷಾಂತರ ಅಲ್ಲಲ್ಲಿ ತಮಿಳಿನ ಕಂಪಿನಿಂದ ಕೂಡಿದೆ.
ಸುಬ್ರಹ್ಮಣ್ಯ ಭಾರತಿ (೧೮೮೨-೧೯೨೧) ತನ್ನ ರಾಷ್ಟ್ರಭಕ್ತಿ ಗೀತೆಗಳಿಂದ ಮನೆ-ಮನಗಳಲ್ಲಿ ನೆಲೆಸಿರುವ ’ಜ್ಞಾನರಥ’ ಅವರ ಪ್ರಸಿದ್ಧ ಗದ್ಯ ಕೃತಿ
’ಜ್ಞಾನರಥ’ ಎಂಬ ನೀಳ್ಗತೆ ಹಾಗೂ ಹದಿಮೂರು ಕಿರುಗತೆಗಳು ಈ ಪುಸ್ತಕ ಕವಿ. ದಲ್ಲಿವೆ. ’ಜ್ಞಾನರಥ’ ಒಂದು ಕಾಲ್ಪನಿಕ ಪ್ರವಾಸ ಕಥನ. ಕವಿ ಜ್ಞಾನರಥವನ್ನೇರಿ  ಉಪಶಾಂತಿ, ಗಂರ್ಧವ, ಸತ್ಯ, ಮೃತ್ತಿಕಾ ಮತ್ತು  ಧರ್ಮಲೋಕಗಳಿಗೆ ಭೇಟಿ ನೀಡುತ್ತಾನೆ.ಮನ ಆಳಿದ ಬಳಿಕ ಉಪಶಾಂತಿ ಎಂದು ತಿಳಿದಾಗ ಮನಸ್ಸನ್ನು ಕಳಗೊಂಡ ಉಪಶಾಂತಿ ತನಗೆ ಬೇಡ ಎಂದು ಕವಿ ನಿರ್ಧರಿಸುತ್ತಾನೆ. ’ಯಾವುದರಲ್ಲೂ ತೃಪ್ತಿ ಇಲ್ಲದೇ ಇರುವುದೇ ಮಾನವ ಜನ್ಮಕ್ಕೆ ರಕ್ಷೆ ಹಾಗೂ ಅದರ ಹಿರಿಮೆ’ ಎಂದು ಗಂಧರ್ವಕುಮಾರಿ ಕವಿಗೆ ತಿಳಿಸುತ್ತಾಳೆ. ತಮಾಷೆ ಮಾಡಬಂದವನಿಗೆ ಸತ್ಯ ಅರ್ಥವಾಗುವುದಿಲ್ಲ ಎಂಬ ಅರಿವು ಸತ್ಯಲೋಕದಲ್ಲಿ ಕವಿಗೆ ಮೂಡುತ್ತದೆ.ಮರ್ತ್ಯಲೋಕ ದಲ್ಲಿ ಕವಿ ಕುರುಡು ಕಾಂಚಾಣ್ದ ಕುಣಿತವನ್ನು ಕಾಣುತ್ತಾನೆ. ’ಅರ್ಧ ಧರ್ಮಕ್ಕೆ ಅನ್ನ. ಆದ್ದರಿಂದ ಧರ್ಮವಿರುವವರೆಗೂ ಅದು ಇದ್ದೇ ಇರುತ್ತದೆ’ ಎಂದು  ಧರ್ಮ ಲೋಕದ ಸತ್ಯರಾಮ ಹೇಳುತ್ತಾನೆ.

ಸುಬ್ರಹ್ಮಣ್ಯ ಭಾರತಿಯವರ ಕೆಲವು ಕಿರುಗತೆಗಳು ಜನಪದ ಕತೆಗಳ, ಪಂಚ ತಂತ್ರ ಕತೆಗಳ ಮಾದರಿಯಲ್ಲಿವೆ. ’ಹೊನ್ನು ಬಾಲದ ನರಿ’, ’ಗಿಳಿಕತೆ’ ’ಕಾಗೆ ವ್ಯಾಕರಣ ಕಲಿತದ್ದು’, ’ಸಂಗೀತ ಕಲಿಯತೊಡಗಿದ ಕತ್ತೆ’-ಈ ಕತೆಗಳಲ್ಲಿ ಭಾರತೀಯವರು ಅನ್ಯೋಕ್ತಿ ತಂತ್ರಗಳ ಮೂಲಕ ಮನುಷ್ಯರ ಕುರೂಪ-ಬಹುರೂಪಗಳನ್ನು ಚಿತ್ರಿಸಿದ್ದಾರೆ. ’ ಹೊನ್ನ ಬಾಲದ ನರಿ’ ಕತೆಯನ್ನು ಭಾರತವನ್ನಾಳಿದ ಬ್ರಿಟಿಷ್ ರಾಣೆಯನ್ನು ಕುರಿತ ವಿಡಂಬನೆಯಾಗಿಯೂ ಅರ್ಥೈಸ ಬಹುದು. ’ರಾಘವ ಶಾಸ್ತ್ರಿಯ ಕತೆ’ಯಲ್ಲಿ ಜಾತಿಪದ್ಧತಿಯ ವಿರುದ್ಧ ಹೋರಾಡಿದ ಶ್ರೀ ನಾರಾಯಣ ಗುರುಗಳ  ಜೀವನದ ಹಲವು ಪ್ರಸಂಗಗಳಿವೆ. ಈ ಕತೆಯ್ ತಂತ್ರಕ್ಕೂ ಮಾಸ್ತಿಯವರ್ ಕಥನ್ ತಂತ್ರ್ಕ್ಕೂ ಇರುವ ಸಾಮ್ಯ ಗಮನಾರ್ಹ. ಮಾಸ್ತಿಯವರು ಸುಬ್ರಹ್ಮಣ್ಯ ಭಾರತಿಯವರಿಂದ ಪ್ರೇರಣೆ ಪಡೆದಿರಬಹುದು. ತಮಿಳು ಗದ್ಯ ಸಾಹಿತ್ಯದ ಮಹತ್ವದ ಕೃತಿಯೊಂದನ್ನು ಡಾ| ಬಿ.ಜಿ.ಎಲ್. ಸ್ವಾಮಿಯವರು ಸೊಗಸಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಮುರಳೀಧರ ಉಪಾಧ್ಯ ಹಿರಿಯಡಕ,

ಡೆದಿಹೆ ಬಾಳೌ ಕಾವೇರಿ                                      ಜ್ಞಾನ ರಥ
ತಮಿಳು ಮೂಲ-ಚಿಟ್ಟಿ,                                         ತಮಿಳು ಮೂಲ:ಸುಬ್ರಹ್ಮಣ್ಯ ಭಾರತಿ                       
ಜಾನಕಿರಾಮನ್                                                ಕನ್ನಡಕ್ಕೆ ಡಾ| ಬಿ.ಜಿ.ಎಲ್. ಸ್ವಾಮಿ                          
ಕನ್ನಡಕ್ಕೆ-ಡಾ|ಬಿ.ಜಿ.ಎಲ್.ಸ್ವಾಮಿ                         ಪ್ರ:ಅಂಕಿತ ಪುಸ್ತಕ
ಪ್ರ: ಕಾವ್ಯಾಲಯ,                                              ೫೩, ಶ್ಯಾಮಸಿಂಗ್ ಕಾಂಪ್ಲೆಕ್ಸ್,   
ಪ್ರಕಾಶಕರು, ಜಯನಗರ್,                                     ಗಾಂಧಿಬಜಾರ್ ಮುಖ್ಯ ರಸ್ತೆ,          
ಮೈಸೂರು-೫೭೦೦೧೪.                                     ಬಸವನಗುಡಿ, ಬೆಂಗಳೂರು-೫೬೦೦೦೪.
ಮೊದಲ ಮುದ್ರಣ:೨೦೦೧                                    ಮೊದಲ ಮುದ್ರಣ:೨೦೦೧ 
ಬೆಲೆ:ರೂ.೧೩೫.                                                  ಬೆಲೆ:ರೂ.೭೦         
.                                                                       

Sunday, June 7, 2020

ಮುರಳೀಧರ ಉಪಾಧ್ಯ ಹಿರಿಯಡಕ - ಜಾವೇದ್ ಅಕ್ತರ್ - ಕಹಿ ಹೇಗಿಲ್ಲದಿದ್ದೀತು ನಮ್ಮ ಕವಿತೆಗಳಲ್ಲಿ?

’ಹೊಳೆಬಾಗಿಲು’,   ’ಪಾಪನಾಶಿನಿ’ ಸಂಕಲನಗಳ ಕವನ್ ಸಂಕಲನಗಳ,  ಕವಯಿತ್ರಿ ಕನಕ ಹಾ.ಮ., ಜಾವೇದ್ ಅಖ್ತರ್ಫ಼್ ಅವರ ಪ್ರಥಮ ಕವನ್ ಸಂಕಲನ ’ತರ್ಕಶ್’ ನ್ನು (ಬತ್ತಳಿಕೆ) ಉರ್ದುವಿ ನಿಂದ ಕನ್ನಡಕ್ಕೆ ತಂದಿದ್ದಾರೆ. ಜಾವೇದ್ ಅಖ್ತರ್, ’ಶೋಲೆ’, ’ದೀವಾರ್’ಗಳ ಚಲನಚಿತ್ರ್ ಲೇಖಕರಾಘಿ, ’ಲಗಾನ್’, ’ದಿಲ್ ಚಾಹ್ ತಾ ಹೈಗಳ ಚಿತ್ರಗೀತ ಕಾರರಾಗಿ ಜನ್ಪ್ರಿಯರಾಗಿರುವ ಕವಿ. ಈ ಸಂಕಲನದಲ್ಲಿರುವ  ’ ನನ್ನ ಬಗ್ಗೆ’ ಎಂಬ ಚಿಕಣೆ ಆತ್ಮಕತೆಯಲ್ಲಿ ಜಾವೇದ್ ಅಖ್ತರ್, ತನ್ನ ಗ್ವಾಲಿಯರ್, ಲಖನ, ಅಲೀಗಢ, ಭೋಪಾಲ್, ಮುಂಬೈ ನೆನಪುಗಳ ಬಗ್ಗೆ ಹಾಗೂ ಬಾಲ್ಯ, ಯೌವನ, ದಾಂಪತ್ಯ ವಿಚ್ಛೇದನ, ಮರುಮದುವೆಗಳ ಕುರಿತು ಬರೆದಿದ್ದಾರೆ.
ಬತ್ತಳಿಕೆ’ಯಲ್ಲಿ ಮೂಲ ಉರ್ದು ಕವನ್ ಹಾಗೂ ಕನ್ನಡ ಅನುವಾದವನ್ನು ಎದುರು-ಬದುರಾಘಿ ಮುದ್ರಿಸಲಾಗಿದೆ. ಕವಿ ಜಾವೇದ್ ಅಖ್ತರ್ ಅವರಿಗೆ ಬಾಲ್ಯದ ನೆನಪುಗಳಿಂದ ಬಿಡುಗಡೆ ಇಲ್ಲ. ಬಾಲ್ಯ ಕಾಲ ಸ್ಮೃತಿ ಅವರ್ ಅನೇಕ ಕವನಗಳ ವಸ್ತುವಾಘಿದೆ. ’ಹಸಿವು’,’ಆ ಕೋಣೆ ನೆನಪಾಗುತ್ತದೆ’, ’ಅಲೆಮಾರಿ-ಈ ಕವನಗಳು ಸಮೃದ್ಧ ನೆನಪುಗಳಿಂದ ತುಂಬಿವೆ;
ಆದರೆ ವಾಚಾಳಿತನದಿಂದ ಸೊರಗಿವೆ.
ಕೋಮು ಗಲಭೆಗಳಿಂದ ತತ್ತರಿಸಿದ,   ಮಹಾನಗರವೊಂದರ  ಮನಮಿಡಿಯುವ  ಚಿತ್ರಣ ’ ದಂಗೆಯ ಮೊದಲು’ ದಂಗೆಯ ನಂತರ’ ಕವನಗಳಲ್ಲಿದೆ. ಹೆದರಿದ ಮಗುವಿನಂತೆ ತನ್ನ್ ನೆರಳಿಗೆ ತಾನೇ ಬೆಚ್ಚುತ್ತಿರುವ ನಗರವನ್ನು ಕುರಿತು ಕವಿ, ’ಪಂಚಾಂಗ ನೋಡು, ಇಂದೇನೊ ಹಬ್ಬವಿರಬೇಕು’. ಎನ್ನುತ್ತಾರೆ. ಹಬ್ಬ ಬಂತೆಂದು ಹೆದರುವ ಅವಸ್ಥೆ ಭಯಾನಕವಾಗಿದೆ. ’ ದಂಗೆಯ ಬಳಿಕ ’ ಮಹಾನಗರದಲ್ಲಿ ಗಾಢ ಮೌನ ತುಂಬಿದೆ. ಆದರೆ, ’ಮೊದಲು ಇ ವರಿಗಾಗಿ ಆಳೋಣಾ, ಲೂಟಿ ಮಾಡಾಲು ಬಂದು ತಾವೇ ಲೂಟಿಯಾದರಲ್ಲ. ಏನು ಲೂಟಿಯಾಯಿತು ಎಂಬ ಅರಿವೂ ಇಲ್ಲ. ಅವರಿಗೆ ಮಂದದೃಷ್ಟಿ, ಶತಶತಮಾನಗಳಾ ಸಂಸ್ಕೃತಿ ಆ ಬಡಪಾಯಿಗಳಿಗೆ ಕಾಣಲೇ ಇಲ್ಲ" ಎನ್ನುತ್ತಾರೆ ಕವಿ.
"ಈ ಜಗತ್ತು ಒಳಗೆ ಯಾಕಿಷ್ಟು ಕರಾಳ?’ ಎಂಬ ಪ್ರಶ್ನೆ ಅಖ್ತರ್ ಅವರನ್ನು ಕಾಡುತ್ತದೆ.
’ಗಜಲ್’ ಪರ್ಶಿಯನ್ ಸಾಹಿತ್ಯದಿಂದ ಉರ್ದು ಕಾವ್ಯ ಪ್ರಕಾರ. ಗಜಲ್  ಗೆ ’ ನಲ್ಲೆಯೊಂದಿಗೆ ಸಂವಾದ’, ’ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ’ ಎಂಬ ಅರ್ಥಗಳಿವೆ. ಐದರಿಂದ ಹನ್ನೊಂದು ದ್ವಿಪದಿ(ಶೇರ್) ಗಳಿರುವ ರಚನೆ-ಗಜಲ್, ಗಜಲ್ ಕವಿ ರೂಪಕ ಸಂಕೇತಗಳ ಮೂಲಕ ವ್ಯಕ್ತಿನಿಷ್ಠ ಅನುಭವಗಳನ್ನು ’ಹಿಡಿದರೆ ಹಿಡಿತುಂಬ, ಬಿಟ್ಟರೆ ಜಗವೆಲ್ಲ’ ಎಂಬಂತೆ
ನಿರೂಪಿಸುತ್ತಾನೆ. ಗಜಲ್ ಪ್ರಣಯ, ಅಧ್ಯಾತ್ಮ ರಾಜಕೀಯ ವಿಡಂಬನೆ ಎಲ್ಲವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಂಡಿದೆ. ಉರ್ದು ಕಾವ್ಯದ ಜನಕ ವಲಿ, ಇಕ್ಬಾಲ್, ಫಿರಾಕ್ ಗೋರಖ್ ಪುರಿ, ಹಸನ್   ನಯೀಮ್ ಮತ್ತಿತರ ನೂರಾರು ಕವಿಗಳು ಗಜಲ್ ನ್ನು ಸೃಜನಶೀಲವಾಗಿ ಬೆಳೆಸಿದ್ದಾರೆ. ಹಸನ್ ನಯೀಮ್ ’ಗಜಲ್ ಅಕಾಡೆಮಿ’ಯನ್ನು  ಸ್ಥಾಪಿಸಿದ್ದಾರೆ.
ಗಜಲ್ ಗಳಲ್ಲಿ ಜಾವೇದ್ ಅಖ್ತರ್ ಅವ ಪ್ರತಿಭೆಯ ಮಿಂಚುಗಳಿವೆ.""A poem begins in delight and ends in wisdom'(ರಾಬಟ್ ಫ್ರಾಸ್ಟ್) ಎನ್ನುವಂಥ ರಚನೆಗಳಿವು.
"ಮಿಂಚುವ ದೇಹ, ದಟ್ಟ ಮುಡಿ, ಮಾಂತ್ರಿಕ ಕಣ್ಣು, ತುಟಿ ಗುಲಾಬೀ
ಅಮೃತಶಿಲೆ, ನೇರಳೆ ಮೋಡ, ಕೆಂಪು ದಿಗಂತ, ಹೆದರಿದ ಹರಿಣೇ’

ಎಂದು ಆರಂಭಾವಾಗುವ ಗಜಲ್ ಮನಮೋಹಕವಾಗಿದೆ. " ಕಹಿ ಹೇಗಿಲ್ಲದಿದ್ದೀತು ನಮ್ಮ ಬದುಕಲ್ಲಿ, ಗತಿಸಿದ್ದು ಬದುಕಲ್ಲಿ ನಮಗೆ ನೆನಪಿದೆ ಎಲ್ಲ" ಎನ್ನುತ್ತಾರೆ ಅಖ್ತರ್.
’ಉಸ್ ಚಿರಾಗೋ  ಮೆ
ತೇಲ್ ಹಿ  ಕಮ್ ಥಾ
 ಕ್ಯೊಂ ಗಿಲಾ ಫಿರ್ ಹಮೇ
ಹವಾ ಸೇ ರಹೇ’

ಹಣತೆಯಲ್ಲೇ ಎಣ್ಣೆ ಕಮ್ಮಿಯಿದೆ
 ಸುಮ್ಮನೆ ದೂರುವುದೇಕೆ ಗಾಳಿಯನ್ನು’

-ಸಂಸ್ಕೃತ್ ರಕ್ಷಣೆಯ ಸಂವಾದದಲ್ಲಿ ’ಎಣ್ಣೆ ಹೊಯ್ಯಮ್ಮ ದೀಪಕ್ಕೆ’
ಎಂಬ ಸಾಲಿನೊಂದಿಗೆ ಈ ದ್ವಿಪದಿಯ ಆಶಯವನ್ನು ಕುರಿತೂ ಚಿಂತಿಸಬೇಕು.
ಕನಕ ಹಾ.ಮ. ಅವರ್ ಅನುವಾದದಲ್ಲಿ ಗಜಲ್ ನ ನರ್ತನದ ಬದಲು ನಡಿಗೆ ಕಾಣಿಸುತ್ತದೆ. ಮುನ್ನಡಿ ಬರೆದಿರುವ ಕವಿ ಜಯಂತ ಕಾಯ್ಕಿಣೆ ಅವರು ಇಲ್ಲಿನ ಗದ್ಯಗಂಧಿ ಶೈಲಿಯನ್ನು ಗುರುತಿಸಿದ್ದಾರೆ.
 ಕಾವ್ಯವನ್ನು ಅನುವಾದಿಸುವ ಸಮಸ್ಯೆಗಳ ಅರಿವಿದ್ದರೂ ಅನುವಾದಿಸುವ ಹಂಬಲ್, ನಮ್ಮ ಕವಿಗಳಲ್ಲಿ ಚಿರಂತನವಾಗಿದೆ. ’ಮನದ ಮುಂದಣ್ ಆಸೆಯೇ ಮಾಯೆ’ ಎಂಬಂತೆ ಅನುವಾದಿಸುವ ಆಸೆ ಕವಿಗಳನ್ನು ಕಾಡುತ್ತದೆ. ಸೋತು ಗೆಲ್ಲುವುದು, ಕಾವ್ಯ ಪುರುಷ ತೆಕ್ಕೆಗೆ ಒಗ್ಗಲಿಲ್ಲವೆಂದು ಅಳುವುದು ಅನುವಾದದ ಜಾಯಮಾನ. ’ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ’ ಯಲ್ಲಿ ಅನುವಾದದ ಪವಾಡಗಳು ಸಾಧ್ಯವಾಗುತ್ತವೆ.

ಜಾವೇದ್ ಅಖ್ತರ್ ಅವರ ’ತರ್ಕಶ್’ (ಬತ್ತಳಿಕೆ)ನಲ್ಲಿ ಕೋಮು ದ್ವೇಷದ ಬಾಣಗಳ ಬದಲು, ವಾತ್ಸಲ್ಯ, ಪ್ರೀತಿಗಳ ಕುಸುಮಬಾಣಾಗಳಿವೆ. ಅಖ್ತರ್ ’ಪುಷ್ಪಕವಿ’ ಅಲ್ಲ, ಕಬೀರ್ ದಾಸನ ಸಂಸ್ಕಾರ ಕಾಲದ ಪುಷ್ಪ ಪವಾಡ ಈಗಲೂ ನಿಜವಾಗಬಾರದೆ, ದಂಗೆಯ ಮೊದಲೇ ಶಾಂತಿಯ ಹೂಗಳು ಅರಳಬಾರದೆ ಎಂದು ತುದಿಗಾಲ್ ದಿಗಿಲಿನಿಂದ ಹಾರೈಸುವ ಕವಿ.
"ಭಾಷಾಂತರ ಮೂಲಕ್ಕೆ ಪ್ರತಿಸ್ಪರ್ಧಿ ಅಲ್ಲ, ಪರ್ಯಾಯವೂ ಅಲ್ಲ, ಅಪೂರ್ಣ. ಯಾವ ಭಾಷಾಂತರವನ್ನೂ ಸಮರ್ಪಕ ವಾಘಿ ಮುಗಿಸುವುದು ಎಂಬುದಿಲ್ಲ" ಎಂಬ್ ಎ.ಕೆ. ರಾಮಾನುಜನ್  ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಕನಕಾಂಬರ ಹೂವಿನಂತಿರುವ ಈ ’ಬತ್ತಳಿಕೆ’ ಯನ್ನು ಸ್ವಾಗತಿಸೋಣ.
ಮುರಳೀಧರ ಉಪಾಧ್ಯ ಹಿರಿಯಡಕ
ಬತ್ತಳಿಕೆ
(ಕವನಗಳು, ಗಜಲ್ ಗಳು)
ಉರ್ದು ಮೂಲ: ಜಾವೇದ್ ಅಖ್ತರ್ 
ಕನ್ನಡಕ್ಕೆ-ಕನಕ ಹಾ.ಮ.
ಪ್ರ: ಕರ್ನಾಟಕ ಸಂಘ,
ಪುತ್ತೂರು-೫೭೪೨೦೨
ಮೊದಲ ಮುದ್ರಣಾ:೨೦೦೩
ಬೆಲೆ ರೂ.೧೫೦.

Lve- , ಬೂಟು ಬಂದೂಕುಗಳ ನಡುವೆ"Bootu Bandukugala Naduve" Kannada ...

"బూటు బందుకుగాల నాడువే" కన్నడ నాటకం, "Bootu Bandukugala Naduve" Kannada ...

Saturday, June 6, 2020

ಮುರಳೀಧರ ಉಪಾಧ್ಯ ಹಿರಿಯಡಕ -- ಬಾಬು ಶಿವ ಪೂಜಾರಿ ಅವರ " ಬಿಲ್ಲವರು ಒಂದು ಅಧ್ಯಯನ "

’ಗುರುತ’ ಪತ್ರಿಕೆಯ ಸಂಪಾದಕರಾಗಿರುವ ಬಾಬು ಶಿವ ಪುಜಾರಿ ಅವರ ಮೊದಲ ಕೃತಿ ’ಬಿಲ್ಲವರು ಒಂದು ಅಧ್ಯಯನ’.
’ಮೂರ್ತೆಗಾರಿಕೆ ಮತ್ತು ಬಿಲ್ಲವರು’ ಎಂಬ ಅಧ್ಯಯದಲ್ಲಿ ಲೇಖಾಕರು ಮೂರ್ತೆಗಾರಿಕೆ ಬಿಲ್ಲವರ ಪ್ರಮುಖ ಉದ್ಯೋಗವಾಗಿರಲಿಲ್ಲ. ಉಪವೃತ್ತಿಯಾಗಿತ್ತು ಎಂದು ವಿವರಿಸಿದ್ದಾರೆ.
’ನಾಯ್ಗರು/ನಾಯಕರು’ ಎಂಬ ಅಧ್ಯಾಯದಲ್ಲಿ ಲೇಖಕರು, ’ನಾಯಗ-ನಾಯ್ಗ ಎನ್ನುವುದು ಅನ್ವರ್ಥನಾಮವಾಗಿ ಅಥವಾ ಜಾತಿ ಸೂಚಕ ಹೆಸರಾಗಿ ಬಿಲ್ಲವ ಜನಾಂಗದಲ್ಲಿ ಸಾವಿರಾರು ವರ್ಷಗಳಿಂದ ಪ್ರಚಲಿತವಿದೆ. ಇಂದೂ ಕೂಡ ತುಳುನಾಡಿನಲ್ಲಿ ನಾಯ್ಗರೆಂದೇ ಕರೆಯಲ್ಪಡುವ ಬಿಲ್ಲವರೂ ಬಿಲ್ಲವ ಮನೆತನಗಲೂ ಇವೆ. ನಾಯ್ಗರು ಬಿಲ್ಲವರ ಪ್ರಾಚೀನ ಇತಿಹಾಸ ದಾಖಲೆಯ ಕೊಂಡಿಯಾಗಿ ಉಳಿದುಕೊಂಡಿದ್ದಾರೆ. ನಾಯಗರ ಇತಿಹಾಸವು ಪ್ರಾಚೀನ ಬಿಲ್ಲವರ ಸ್ಥಿತಿ-ಗತಿಗಳನ್ನು ತಿಳಿಯುವಲ್ಲಿ ಬಹುಪ್ರಮುಖವಾದ ಐತಿಹಾಸಿಕ ದಾಖಲೆಯಾಗಿದೆ" ಎಂದಿದ್ದಾರೆ.ನಾಯ್ಗರು ಬಿಲ್ಲವರು ಎಂಬ್ ಡಾ| ಪೀಟರ್ ಜೆ. ಕ್ಲಾಸ್ ಅವರ ಅಭಿಪ್ರಾಯವನ್ನು ಬಾಬು ಶೀವ ಪೂಜಾರಿ ಅವರು ಸಮರ್ಥಿಸಿದ್ದಾರೆ. 
’ಬಿಲ್ಲವರ-ನಾಯ್ಗರ ಉಲ್ಲೇಖ ಶಿಲಾಶಾಸನಗಳಲ್ಲಿ’ ಎಂಬ ಪ್ರ್ತ್ಯೇಕ ಅಧ್ಯಾಯ ಈ ಗ್ರಂಥದಲ್ಲಿದೆ. ಎಂಟನೆಯ ಶತಮಾನದ ಉತ್ತರಾರ್ಧದ ರಣಸಾಗರನ ಉದ್ಧಾವರ ಶಾಸನದಲ್ಲಿ ವಿಜಯ ನಾಯ್ಗರ ಮಗ ಕಾಲ್ತಿದೆ ಎಂಬವನು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಸತ್ತ ಉಲ್ಲೇಖ ಇದೆ. ಒಂಬತ್ತನೆಯ ಶತಮಾನದ ಪೂರ್ವಾರ್ಧದ ಶ್ವೇತವಾಹನನ ಉದ್ಧಾವರ ಶಾಸನದ ’ ಪಾಂಡ್ಯವಿಲ್ಲರಸರಾ ಮಗ ದೇವ್ರು. ಎಂಬ್ ಸಾಲಿನಲ್ಲಿ ಬಿಲ್ಲವರ ಜಾತಿ ಸೂಚಕ ಶಬ್ಧ ಪ್ರಯೋಗವಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ತುಳುನಾಡನ್ನು ಹಲ್ವು ಶತಮಾನಗಳವರೆಗೆ ಆಳಿದ ಅಳುಪರೆಲ್ಲರೂ ಬಿಲ್ಲವರು ಎಂಬ ತನ್ನವಾದಕ್ಕೆ ಬಾಬು ಶೀ್ವ ಪೂಜಾರಿ ಅವರು ನೀಡುವ ಆಧಾರಗಳು ಸಾಕಷ್ಟಿಲ್ಲ. ಬಿಲ್ಲವರು ತುಳುನಾಡಿನ ನಾಗವಂಶಿಯರು ನಾಗಪೂಜೆಯ ಅಧಿಕಾರಿಗಳು ಆಗಿದ್ದುದರಿಂದ ಅವರನ್ನು ಬೈದ್ಯರೆಂದು ಕರೆಯುತ್ತಿದ್ದರು. ಎಂಬ ಲೇಖಕರ  ಅಭಿಪ್ರಾಯ ಜಿಜ್ಞಾಸೆಗೆ ಯೋಗ್ಯವಾಗಿದೆ.
ಪಾಡ್ದನಗಳಲ್ಲಿ ಬಿಲ್ಲವರು ಎಂಬ ಸುದೀರ್ಘ ಅಧ್ಯಾಯದಲ್ಲಿ ಲೇಖಕರು ಹತ್ತಾರು ಪಾಡ್ದನಗಳಲ್ಲಿರುವ ಬಿಲ್ಲವರ ಉಲ್ಲೇಖಗಳನ್ನು ನೀಡಿದ್ದಾರೆ. ’ ಪಂಜುರ್ಲಿ’ ಪಾಡ್ದನದ ಕುಪ್ಪೆಕೋಟಿ  ಬೈದ್ಯ, ಕಾಂತಬಾರೆ, ಬೂದಬಾರೆ, ’ಮೈಂದಾಳ ಪಾಡ್ದನದ ದೇವ್ರು ಬೈದ್ಯ, ಕೋಟಿ-ಚೆನ್ನಯರು-ಇಂಥ ಹಲವು ಪಾಡ್ದನ ಪಾತ್ರಗಳನ್ನು ಲೇಖಕರು ಚರ್ಚಿಸಿದ್ದಾರೆ. ಅಳುಪರು ಹದಿನಾಲ್ಕನೆಯ ಶತಮಾನದವರೆಗೆ ತುಳುನಾಡನ್ನು ಆಳುತ್ತಿದ್ದರು. ಅಳುಪರ ಕಾಲದ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದ ಬಿಲ್ಲವರ್ತನ್ನು ಹೊಯ್ಸಳ, ವಿಜಯನಗರ ಹಾಗೂ ಜೈನ ಅರಸುಮನೆತನಗಳ ಕಾಲದಲ್ಲಿ ನಡೆದ ಸಾಮಾಜಿಕ  ಸ್ಥಿತ್ಯಂತರಗಳಿಂದ ಸಮಾಜದ ಅಂಚಿಗೆ ತಳ್ಳಲಾಯಿತು ಎಂಬುದು ಲೇಖಕರ ವಾದದ ಸಾರಾಂಶ.ಲೇಖಕರು ಬಿಲ್ಲವ ಸಮಾಜವನ್ನು ವೈಭವೀಕರಿಸಿಲ್ಲ. ಸಮಾಜದ ಏಳು-ಬೀಳಿಗೆ ಐತಿಹಾಸಿಕ ಅಂಶಗಳೇನು ಎಂಬ ಹುಡುಕಾಟವನ್ನು ಇವರು ಆರಂಭಿಸಿದ್ದಾರೆ. ಸಾಮಾಜಿಕ ಇತಿಹಾಸವನ್ನು ಸಮಾಜದ ಅಂಚಿನಲ್ಲಿರುವವರ ನೆಲೆಯಿಂದ ನೋಡುವ ಹೊಸಬಗೆಯ ಪ್ರಯತ್ನ ಇಲ್ಲಿದೆ. 
ಈ ಜನಾಂಗದ ಇತಿಹಾಸವನ್ನು ನೇಯುವ ಕೆಲಸ ಇನ್ನಷ್ಟೇ ಆಗಬೇಕಾಗಿದೆ. ಇದು ಒಬ್ಬಿಬ್ಬರಿಂದ ಅಲ್ಪಾವಧಿಯಲ್ಲಿ ಆಗುವ ಕೆಲಸ ಅಲ್ಲ. ಈ ಕೃತಿ ಮುಂಬರುವ ಬಿಲ್ಲವರ ಜನಾಂಗದ ಅಧ್ಯಯನಕಾರರಿಗೆ ಕೈಕಂಬವೂ ಅಲ್ಲ, ಕಿರುದಾರಿಯೂ ಅಲ್ಲ. ಬದಲಾಗಿ ಕೆಲವು ಅಸ್ಪಷ್ಟ ಹೆಜ್ಜೆಗಳು ಮಾತ್ರ" ಎನ್ನುವ ಬಾಬು ಶಿವ ಪೂಜಾರಿಯವರಲ್ಲಿ ಸಂಶೋಧಕನ ವಿನಯ ಇದೆ. ಆದರೆ, ಬಿಲ್ಲವ ಸಮಾಜದ ಅಧ್ಯಯನ  ಮಾಡುವವರು ಬಾಬು ಶೀವ ಪೂಜಾರಿಯವರ ಗ್ರಂಥವನ್ನು ಅಲಕ್ಷಿಸಿ ಮುಂದುವರಿಯುವಂತಿಲ್ಲ. ಜಿಜ್ಞಾಸೆಗೆ ಯೋಗ್ಯವಾದ ಚೊಚ್ಚಲ ಕೃತಿಯೊಂದನ್ನು ಬರೆದಿರುವ ಬಾಬು ಶಿವ ಪೂಜಾರಿಯವರು ಅಭಿನಂದನಾರ್ಹರು.

ಮುರಳೀಧರ ಉಪಾಧ್ಯ ಹಿರಿಯಡಕ. 

ಬಿಲ್ಲವರು ಒಂದು ಅಧ್ಯಯನ
ಲೇ:ಬಾಬು-ಶಿವ ಪೂಜಾರಿ
ಪ್ರ:ಬಿಲ್ಲವ ಜಾಗೃತಿ ಬಳಗ
೧, ಮೋತಿಲಾಲ್ ಮೆನ್ಯನ್,
ನಾದಿರ್ ಷಾ ಸುಖ್ಯಾ  ಸ್ಟ್ರೀಟ್,
ಫೋರ್ಟ್, ಮುಂಬಯಿ-೪೦೦ ೦೦೧.
ಮೊ.ಮುದ್ರಣ:೨೦೦೩ ಬೆಲೆ ರೂ.೧೦೦.

Friday, June 5, 2020

ಮುರಳೀಧರ ಉಪಾಧ್ಯ ಹಿರಿಯಡಕ- ರಾಜಾರಾಮ ಹೆಗಡೆ ಅವರ " ಲೌಕಿಕ ಅಲೌಕಿಕ " -- ವಿಭಿನ್ನ ಸಂಸ್ಕೃತಿಗಳ ಮುಖಾಮುಖಿ

ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ| ರಾಜಾರಾಮ್ ಹೆಗಡೆ ಯವರ್ ’ಲೌಕಿಕ-ಅಲೌಕಿಕದಲ್ಲಿ ಆರು ಸಂಪ್ರಬಂಧಗಳಿವೆ. ಭಾರತೀಯ ಇತಿಹಾಸದಲ್ಲಿ ಪ್ರಭುತ್ವ ರಚನೆ ಮತ್ತು ಮತ ಸಮ್ಪ್ರದಾಯಗಳು’ ಎಂಬುದು ಈ ಗ್ರಂಥದ ಉಪಶೀರ್ಷಿಕೆ. ಪ್ರಾಚೀನ ಹಾಗೂ ಮಧ್ಯಕಾಲೀನ ರಾಜ್ಯಗಳಲ್ಲಿ ವಿಭಿನ್ನ ಮತ ಸಂಪ್ರದಾಯಗಳು ಹಾಗೂ ಅವುಗಳ ತಾತ್ವಿಕತೆಗಳು ಲೌಕಿಕವಾಗಿ ಪ್ರಭುತ್ವ ನಿರ್ಮಾಣದಲ್ಲಿ ಹೇಗೆ ಭಾಗವಹಿಸಿದ್ದವೆನ್ನುವುದನ್ನು  ಪರಿಶೀಲಿಸುವುದು ಈ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ನಡೆದ ಸಾಂಸ್ಕೃತಿಕ ಪ್ರಕ್ರಿಯೆಗಳ ಚರ್ಚೆಗೆ ಲೇಖಕರು ಒತ್ತು ನೀಡಿದ್ದಾರೆ.

’ ಅಧಿಕಾರ ರಚನೆಯ ಅಲೌಕಿಕ-ವಿನ್ಯಾಸಗಳು’ ಎಂಬ ಸಂಪ್ರಬಂಧ ಈ ಗ್ರಂಥದ ಇತರ ಲೇಖನಗಳಿಗೆ ಒಂದು ಪ್ರಸ್ತಾವನೆಯಂತಿದೆ. ಈ ಸಂಪ್ರಬಂಧದಲ್ಲಿ ಲೇಖಕರು ಧರ್ಮ-ಸಂಪ್ರದಾಯ, ಅಶೋಕನ  ಧರ್ಮ (ಧಮ್ಮ) ಹಾಗೂ ಅದರ ರಾಜನೈತಿಕ ಅಂಶಗಳು, ಬ್ರಾಹ್ಮಣ-ಶ್ರಮಣ, ರಾಜ್ಯ ಮತ್ತು ಪೂಜಾ ಸಂಸ್ಕೃತಿ, ರಾಜತ್ವದಲ್ಲಿ ದೇವತೆಗಳು, ಮಠಗಳ ಬೆಳವಣಿಗೆ ನಾಶ, ಅಕ್ಬರನ  ಪ್ರಯೋಗಗಳು, ರಾಜಧರ್ಮ ಮತ್ತು ದೇವರು ಈ ವಿಷಯಗಳಾನ್ನು ಚರ್ಚಿಸಿದ್ದಾರೆ.
ವಿರಕ್ತರು ಮತ್ತು ರಾಜಪ್ರಭುತ್ವದ ಸಂಬಂಧವನ್ನು ಡಾ| ರಾಜಾರಾಮ ಹೆಗಡೆ ಹೀಗೆ ವಿವರಿಸುತ್ತಾರೆ-"ವಿರಕ್ತರಿಗೆ ಲೌಕಿಕ ಆಸರೆ ತೀರಾ ಮೂಲಭೂತವಾದ ಆವಶ್ಯಕತೆಯಾಗಿದೆ. ಅದರಲ್ಲೂ ಒಂದು ಸಂಸ್ಥೆಯನ್ನೇ ಬೆಳೆಸಬಯಸಿದ ಸಂಪ್ರದಾಯಗಳಿಗೆ ಪ್ರಭುತ್ವದ ಆಶ್ರಯ ಅನಿವಾರ್ಯ. ವಿರಕ್ತರು ವೈಯಕ್ತಿಕವಾಗಿ ಈ ಪ್ರಪಂಚದಿಂದ ಹೊರಗೆ ಇರಬಯಸುತ್ತಾರಾದರೂ ಈ ಪ್ರಪಂಚದ ವ್ಯವಸ್ಥೆ ಮುಂದುವರಿದುಕೊಂಡು ಹೋಗುವುದೂ ಅವರ ಒಂದು ಭೌತಿಕ ಆವಶ್ಯಕತೆಯೇ    ಆಗಿರುತ್ತದೆ.

ಈ ಮೂಲಕ ಅವರೂ ಒಂದು ಪ್ರಭುತ್ವದ ಪ್ರಭಾವದಲ್ಲಿ ಲೌಕಿಕವಾಗಿ ಸಿಲುಕುತ್ತಾರೆ. ವಿರಕ್ತರಿಗೆ ಲೌಕಿಕ ಹೀಗೆ ಅನಿವಾರ್ಯವಾದರೆ ಈ ಲೌಕಿಕ ವ್ಯವಸ್ಥೆಯ ವಿಭಿನ್ನ ರೂಪಗಳನ್ನು ಇದ್ದ ಹಾಗೇ ಸಮರ್ಥಿಸುವ ಬ್ರಾಹ್ಮಣರಿಗೂ ವಿರಕ್ತರ ಮಾದರಿಗಳು ಹಾಗೂ ಆಚರಣೇಗಳು ಅನಿವಾರ್ಯವಾಗುತ್ತವೆ. ಏಕೆಂದರೆ ಈ ವ್ಯವಸ್ಥೆಯೊಳಗೆ ತಮ್ಮನ್ನು ಪವಿತ್ರಮರೆಂದು ಪ್ರತಿಪಾದಿಸುವ ಬ್ರಾಹ್ಮಣರಿಗೆ ವಿರಕ್ತರ ಅಲೌಕಿಕ ಆಚರಣೆಗಳನ್ನು ಒಳಗೊಳ್ಳುವುದು ಒಂದು ಲೌಕಿಕ ಅಗತ್ಯವೇ ಆಗಿತ್ತು...ಈ ಮಠ ವ್ಯವಸ್ಥೆಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವುದು ’ವಿರಕ್ತ’ ಆಚಾರ್ಯನೊಬ್ಬನಲ್ಲಿ ರಾಜ  ಪ್ರಭುತ್ವದಲ್ಲಿ. ’ವಿರಕ್ತನ’ ಪಾತ್ರವು ಹೀಗೆ  ಮತ್ತೊಂದು ಪ್ರಭುವಾಗಿ  ಬದಲಾಗುತ್ತದೆ." ;ಶಾತವಾಹನರ ಕಾಲದ ಬೌದ್ಧರು ಎಂಬ ಸಂಪ್ರಬಂಧದಲ್ಲಿ ರಾಜಾರಾಮ ಹೆಗಡೆ ಶಾತವಾಹನರ ಕಾಲದ ಆಂಧ್ರದಲ್ಲಿ ಮಹಾಯಾನ ಸೂತ್ರಗಳು ರೂಪುಗೊಂಡದ್ದನ್ನು ವಿವರಿಸಿದ್ದಾರೆ.’ಬಲಿ’ ಪುರಾಣದ ಸಾಂಸ್ಕೃತಿಕ ಸಂದರ್ಭಗಳು’ ಎಂಬ ಸಂಪ್ರಬಂಧದಲ್ಲಿ ಲೇಖಕರು "ಬಲಿಗೆ ಸಂಬಂಧಿಸಿದ ಪುರಾಣಕತೆಗಳು  ಮಧ್ಯಕಾಲೀನ ಭಾರತದ ಪ್ರಭುತ್ವ ನಿರ್ಮಾಣದ ಇತಿಹಾಸದ ವಿಭಿನ್ನ ಮಗ್ಗುಲುಗಳನ್ನು ತೆರೆದಿಡುತ್ತವೆ... ಆ ಕಥೆಯು ಒಂದೆಡೆ ವೈದಿಕ-ಅವೈದಿಕ ದ್ವಂದ್ವಗಳನ್ನು ಪ್ರಭುತ್ವದೊಳಗಡೆ ಪರಿಹರಿಸುವುದಲ್ಲದೆ ವರ್ಣ ಕಲ್ಪನೆಯ ರಾಜ್ಯದ ಬ್ರಾಹ್ಮಣ ಕ್ಷತ್ರಿಯ ಅಧಿಕಾರ ಬಿಂದುಗಳಿಗೆ ಸಮಾನ ಮಾನ್ಯತೆ ನೀಡುತ್ತದೆ" ಎಂದು ವಿಶ್ಲೇಷಿಸಿದ್ದಾರೆ. ’ವಡ್ಡಾರಾಧನೆ, ಲೌಕಿಕ ಅಧಿಕಾರ ರಚನೆ ಮತ್ತು ಮಧ್ಯಕಾಲೀನ ಜೈನಮತ’ ಎಂಬ ಲೇಖನ, ಜೈನಮತದಲ್ಲಿ ಮಧ್ಯಕಾಲ ದಲ್ಲಿ ಆಗುತಿದ್ದ ಮಾರ್ಪಾಟುಗಳಿಗೆ ವಡ್ಡಾರಾಧನೆ ಹೇಗೆ ಕನ್ನಡಿ ಹಿಡಿಯುತ್ತದೆ ಎಂಬುದನ್ನು ಚರ್ಚಿಸುತ್ತದೆ.
ದೇವಾಲಯ ಸಂಸ್ಕೃತಿ ಮತ್ತು ಮಧ್ಯಕಾಲೀನ ಶೈವಸಂಪ್ರದಾಯ’ ಎಂಬ ಸಂಪ್ರಬಂಧದಲ್ಲಿ ಕ್ಷೇತ್ರಕಾರ್ಯದ ಫಲಶ್ರುತಿ ಹಾಗೂ ಒಳನೋಟುಗಳಿವೆ. ಶಿಕಾರಿಪುರದ ಬಳ್ಳಿಗಾವೆಯ ಸುತ್ತಮುತ್ತ  ಸುಮಾರು ೩೦೦-೪೦೦ ಕಿ.ಮೀ ಪರಿಧಿಯೊಳಗೆ ೧೦ ರಿಂದ ೧೩ನೆಯ ಶತಮಾನಗಳ ಅವಧಿಯಲ್ಲಿ ಶೈವ ಸಂಪ್ರದಾಯವು ಪ್ರತಿಷ್ಠಿತರ ಒಂದು ಭಾಗವಾಗಿ     ಬೆಳೆದು  ನಿಂತ ಬಗೆಯನ್ನು ಪರಾಮರ್ಶಿಸುವುದು ಈ ಲೇಖನದ ಉದ್ದೇಶ.ಇದರಲ್ಲಿ ರಾಜಾರಾಮ ಹೆಗಡೆಯವರು ಶಿವಾಲಯ ಸಂಸ್ಕೃತಿಗೆ ಸಿಕ್ಕಿದ ರಾಜಕೀಯ ಪೋಷಣೆ ಹಾಗೂ ಅಬ್ಬಲೂರಿನ ಘಟನೆಯನ್ನು   ಚರ್ಚಿಸಿದ್ದಾರೆ. ಕ್ರಿ.ಶ. ೧೧೫೦ರಲ್ಲಿ ಅಬ್ಬಲೂರಿನ ಜಿನಾಲಯವೊಂದನ್ನು ವೀರ ಸೋಮನಾಥ ದೇವಾಲಯವೆಂದು ಬದಲಾಯಿಸಿದ ಘಟನೆ ಏಕಾಂತ ರಾಮಯ್ಯನ ಪವಾಡವೆಂದು ಪ್ರಚಾರ ಪಡೆಯಿತು. ಇದರ ಹಿನ್ನೆಲೆಯಲ್ಲಿ ಲೇಖಕರು ಶಿವಾಲಯ ಸಂಸ್ಕೃತಿಯ ರಾಜಕೀಯ ಪಾಬಲ್ಯವನ್ನು ಗುರುತಿಸುತ್ತಾರೆ. ’ ರಂಗನಾಥ-ತಿಮ್ಮಪ್ಪ’ ಎಂಬ ಲೇಖನದಲ್ಲಿ ಸೋಲಿಗರ ಕುಸುಮಾಲೆಯನ್ನು ಪ್ರೀತಿಸುವ ಬೆಳಿಗಿರಿ ರಂಗನ ಪುರಾಣದ ಸ್ವಾರಸ್ಯಪೂರ್ಣ ಅಂಶಗಳತ್ತ ಲೇಖಕರು ನಮ್ಮ ಗಮನ ಸೆಳೆಯುತ್ತಾರೆ. ವಿಭಿನ್ನ ಸಂಸ್ಕೃತಿಗಳು ಮುಖಾಮುಖಿಯಾಗಿರುವ ಕರ್ನಾಟಕದ ಪೂಜಾ ಸಂಸ್ಕೃತಿಗಳ ಇತಿಹಾಸದಲ್ಲಿ ಡಾ| ರಾಜಾರಾಮ್ ಹೆಗಡೆಯವರ ವಿಶೇಷ ಆಸಕ್ತಿ. ಇವರು ವಿಕೇಂದ್ರೀಕರಣ, ಭಿನ್ನಮತ, ಅನೇಕಾರ್ಥ, ವೈವಿಧ್ಯಗಳಲ್ಲಿ ನಂಬಿಕೆ ಇರುವ ಇತಿಹಾಸಕಾರ. ಜೈನರಂಥ ಮತೀಯ ಧಾರ್ಮಿಕ ಅಲ್ಪಸಂಖ್ಯಾಕರನ್ನು ಅಲಿಖಿತ ಸಂಪ್ರದಾಯದ ಸೋಲಿಗರ  ಹಾಡುಗಳನ್ನು ಏಕಾಂತ ರಾಮಯ್ಯನ ಪವಾಡದ ಜನಪ್ರಿಯ ಕಥೆಯನ್ನು  ಇವರು ಅಲಕ್ಷಿಸುವುದಿಲ್ಲ. ನಿಶ್ಷಿತಪಥವಿಲ್ಲದೆ, ಭಿನ್ನಗತಿಗಳಲ್ಲಿ ಚಲಿಸುವ ಇತಿಹಾಸದ ವೈರುಧ್ಯಗಳತ್ತ,  ಅಲಕ್ಷಿತ ಅಂಶಗಳತ್ತ ಬೆಳಕು ಚೆಲ್ಲುವ ;ಲೌಕಿಕ-ಅಲೌಕಿಕ; ಒಂದು ಸಂವಾದ ಯೋಗ್ಯ ಗ್ರಂಥ.