stat Counter



Tuesday, July 25, 2017

ಹೊನ್ನ ಕಣಜ { ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳ ಸಂಕಲನ }

No automatic alt text available.
ಹೊಸಗನ್ನಡ ಸಾಹಿತ್ಯದ ಸಣ್ಣಕಥೆಗಳ ಪರಂಪರೆಗೆ `ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ' ನೀಡಿರುವ ಕೊಡುಗೆ ಅಸಾಧಾರಣ. ದೀಪಾವಳಿ ವಿಶೇಷಾಂಕಕ್ಕೂ ಕನ್ನಡದ ಸಣ್ಣಕಥೆಗಳಿಗೂ ಕರುಳುಬಳ್ಳಿಯ ಸಂಬಂಧವಿದೆ ಅನ್ನಿಸುವಂತೆ ಪ್ರಮುಖ ಕಥೆಗಾರರ ಅನನ್ಯ ಕಥೆಗಳು ವಿಶೇಷಾಂಕಗಳ ಒಡಲಲ್ಲಿ ಅರಳಿವೆ. ದೀಪಾವಳಿ ಕಥಾಸ್ಪರ್ಧೆಗೆ ಅರವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ, ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳನ್ನು ಮೂರು ಸಂಪುಟಗಳಲ್ಲಿ ಸಂಕಲನ ಮಾಡಿ ಕನ್ನಡ ಓದುಗರ ಕೈಗಿಡುವುದು "ಪ್ರಜಾವಾಣಿ ಪ್ರಕಾಶನ" ದ ಮತ್ತು ಪ್ರಜಾವಾಣಿಯ ಸಂಪಾದಕರಾದ ಕೆ. ಎನ್. ಶಾಂತ ಕುಮಾರ್ ಅವರ ಕನಸಿನ ಯೋಜನೆ. ಸಣ್ಣಕಥೆಗಳ ಈ "ಹೊನ್ನ ಕಣಜ"ದ ಪ್ರಥಮ ಸಂಪುಟ ಪ್ರಕಟವಾಗಿದೆ.
ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಈ ಕಥನ ಕಾಲ, ಕಾಲದ ಕಥನವೂ ಆಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ವಸ್ತು ಮತ್ತು ವಿನ್ಯಾಸದಲ್ಲಿ ಅದು ಕಾಲದ ಜೊತೆ ಹೆಜ್ಜೆ ಹಾಕಿದೆ. ಹೊಸಗನ್ನಡ ಸಾಹಿತ್ಯದ ಎಲ್ಲ ಚಳುವಳಿಗಳ ಆಶಯಗಳು ಇಲ್ಲಿ ಅಭಿವ್ಯಕ್ತಿ ಪಡೆದಿವೆ. ನೂರಾರು ಪ್ರತಿಭಾವಂತರು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅತ್ಯುತ್ತಮ ಸಾಹಿತಿಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಕನ್ನಡ ನಾಡಿನ ಸಮಸ್ತ ಸೃಜನಶೀಲ ಬರಹಗಾರರನ್ನು ಒಳಗೊಳ್ಳುವ ವಾರ್ಷಿಕ ಸಾಹಿತ್ಯ ಕೈಂಕರ್ಯವಾಗಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಮುಂದುವರೆಯುತ್ತಿದೆ. ಅದರ ಅದ್ಭುತ ಬಹುಮಾನಿತ ಕಥೆಗಳು "ಹೊನ್ನ ಕಣಜ" ಸಂಪುಟಗಳಲ್ಲಿ ಸೇರಲಿವೆ.
"ಹೊನ್ನ ಕಣಜ" ದ ಪ್ರಥಮ ಸಂಪುಟಕ್ಕೆ ಪ್ರಖ್ಯಾತ ಕಲಾವಿದ ಗುರುದಾಸ್ ಶೆಣೈ ಅವರ ಕಲಾಕೃತಿಯ ಮುಖಪುಟವಿದೆ. ಒಟ್ಟು ೫೦ ಕಥೆಗಳಿರುವ ಡೆಮಿ ೧/೮ ಆಕಾರದ ಪುಸ್ತಕದಲ್ಲಿ ೪೯೦ ಪುಟಗಳಿವೆ. ಬೆಲೆ ರೂ. ೪೦೦. ಇದರ ವಿತರಕರಾದ ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲಿ, ಎಲ್ಲ ನಗರಗಳ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ "ಹೊನ್ನ ಕಣಜ" ದ ಪ್ರಥಮ ಸಂಪುಟ ಲಭ್ಯವಿದೆ. ನವಕರ್ನಾಟಕದ ಆನ್ ಲೈನ್ ಸೇವೆಯಲ್ಲೂ ಇದನ್ನು ಖರೀದಿಸಬಹುದು.
"ಪ್ರಜಾವಾಣಿ ಪ್ರಕಾಶನ" ಇದುವರೆಗೆ ಸ್ಕೂಪ್ (ಕುಲದೀಪ್ ನಯ್ಯರ್), ವಚನ ಸಾಹಿತ್ಯ ಸಂವಾದ, ಜಾತಿ ಸಂವಾದ, ಸಮಾನತೆ ಕನಸನ್ನು ಮತ್ತೆ ಕಾಣುತ್ತ... (ಅತಿಥಿ ಸಂಪಾದಕ: ದೇವನೂರು ಮಹಾದೇವ, ತೃತೀಯ ಮುದ್ರಣ), ನಾರೀಕೇಳಾ (ಎಂ. ಎಸ್. ಆಶಾದೇವಿ) ಮತ್ತು ಅಂಕುರ (ಡಾ. ಎಸ್. ಎಸ್. ವಾಸನ್) ಪುಸ್ತಕಗಳನ್ನು ಪ್ರಕಟಿಸಿದೆ.
   - ಪೂರ್ಣಿಮಾ ಆರ್ { From Face Book }

No comments:

Post a Comment