stat Counter



Tuesday, December 11, 2018

ಉಡುಪಿಯ ಪತ್ರಕರ್ತ ಮಾಧವ ಆಚಾರ್



ಉಡುಪಿಯ ಹಿರಿಯ ಪತ್ರಕರ್ತ, ಯುಎನ್‌ಐ ವರದಿಗಾರರಾಗಿದ್ದ ಮಾಧವ ಆಚಾರ್ ನಿಧನರಾಗಿದ್ದಾರೆ.
ನಾನು ಉಡುಪಿಯಲ್ಲಿ ಪತ್ರಕರ್ತನಾಗಿ ಕರ್ತವ್ಯ ಆರಂಭಿಸಿದಾಗ, ಸಹೋದ್ಯೋಗಿಯಾಗಿದ್ದರು. ವರದಿಗಾರಿಕೆ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದವರು. ಮಣಿಪಾಲದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸೆಮಿನಾರ್‌ಗಳು, ಇಂಗ್ಲಿಷ್ ಭಾಷಣಗಳ ಬಗ್ಗೆ ವರದಿ ಮಾಡುವಾಗ ಅವರ ಸಲಹೆ ಪಡೆದುಕೊಳ್ಳುತ್ತಿದ್ದೆ. ಒಮ್ಮೆ ನಾವೆಲ್ಲಾ ಆಂಧ್ರಪ್ರದೇಶದ ಕಾಕಿನಾಡಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದೆವು.
ಅವರ ಮನೆ ಮಣಿಪಾಲದಲ್ಲಿತ್ತು. ಉಡುಪಿಗೆ ಬಂದಾಗಲೆಲ್ಲಾ ನಾನಿದ್ದ ಕಚೇರಿಗೆ ಬರುತ್ತಿದ್ದರು. ಬಹಳಷ್ಟು ಹರಟುತ್ತಿದ್ದರು. ಮಣಿಪಾಲದ ಉದಯವಾಣಿ ಪ್ರಿಂಟಿಂಗ್ ಪ್ರೆಸ್‌ನ ಒಳಗೆ ಅವರ ಟೇಬಲ್. ಅವರು ವರದಿಗಾರಿಕೆ ಮಾಡುವ ಹಳೆಯ ಟೈಪ್ ರೈಟಿಂಗ್‌ನಂಥ ಕಟ ಕಟ ಶಬ್ದ ಮಾಡುವ ಮೆಶಿನ್ ಇತ್ತು. ಅದನ್ನು ತೋರಿಸಿದ್ದರು.
ಉಡುಪಿಯ ಆಗಿದ್ದ ಪತ್ರಕರ್ತರಾದ ಗಣಪತಿ ಭಟ್, ದಾಮೋದರ್ ಐತಾಳ್, ರಾಮಕೃಷ್ಣ ಮೂರ್ತಿ, ಬಾನಾ ಶಾಂತಪ್ರಿಯ, ಶಿಕಾರಿಪುರ ಈಶ್ವರ ಭಟ್, ಕುಂದರ್, ರಘುರಾಮ್ ಅವರ ಮುಂದೆ ನಾನು ಅತ್ಯಂತ ಕಿರಿಯವ. ಹಾಗಾಗಿ ಎಲ್ಲರೂ ನನ್ನ ಜತೆ ಹೆಚ್ಚು ಸಲುಗೆಯಿಂದ ಇದ್ದರು.
ನಾನು ಮಂಗಳೂರಿಗೆ ಬಂದ ನಂತರವೂ ಮಾಧವ ಆಚಾರ್ ಆಗಾಗ ಕರೆ ಮಾಡುತ್ತಿದ್ದರು. ನಂತರ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರಿಕೆಯ ಜವಾಬ್ದಾರಿಯೂ ಇದ್ದ ಕಾರಣ, ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಾರಕ್ಕೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದರು. ನಿವೃತ್ತಿ ಬಳಿಕ ಸುಮಾರು ಐದು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ.
ಇವತ್ತು ಅವರು ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರ ನಿಧನದ ನೋವನ್ನು ಸಹಿಸುವ ಶಕ್ತಿಯನ್ನು ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ದೇವರು ಕರುಣಿಸಲಿ.
- ಮುಹಮ್ಮದ್ ಆರಿಫ್ ಪಡುಬಿದ್ರಿ


Image may contain: 1 person, closeup

No comments:

Post a Comment