stat Counter



Friday, January 4, 2019

ವಿ. ಆರ್. ಕಾರ್ಪೆಂಟರ್ - ಶ್ರೀದೇವಿ ಕೆರೆಮನೆ ಅವರ - ಗೆಜ್ಜೆ ಕಟ್ಟದ ಕಾಲಲ್ಲಿ { ಕವಿತೆಗಳು}

No automatic alt text available.



ಆಗಷ್ಟೇ ಚಳಿಗಾಲ ಚಿಗುರುತ್ತಿತ್ತು. ಕೆಲಸದ ನಡುವೆ ನಿಟ್ಟುಸಿರು ಬಿಡುವಷ್ಟು ಕಾಲ ಆರಾಮವಾಗಿ ಮಕ್ಕಳ ಜೊತೆಗೆ ಕುಳಿತು ಮಾತನಾಡುತ್ತಾ... ವಾರದಿಂದ ಬಂದಿ‌ದ್ದ ಪೋಸ್ಟ್‌ಗಳನ್ನು ಬಿಚ್ಚತ್ತಾ ಕುಳಿತೆ. ದೂರದ ಗೆಳತಿ ಶ್ರೀದೇವಿ ಕೆರೆಮನೆ ಮೊದಲ ಬಾರಿಗೆ ನನಗೆ ಆಕೆಯ ಪುಸ್ತಕಗಳನ್ನು ಕಳುಹಿಸಿದ್ದಳು! ಕೋಕಂ ಜ್ಯೂಸ್ ಕಳುಹಿಸುತ್ತೇನೆ ಎಂಬ ಮಾತು ಮಾತಲ್ಲಷ್ಟೇ ಉಳಿದುಕೊಂಡಿದೆ, ಇರಲಿ... ಅವಳು ಕಳುಹಿಸಿದ್ದ ಪುಸ್ತಕಗಳಲ್ಲಿ 'ಗೆಜ್ಜೆ ಕಟ್ಟದ ಕಾಲಲ್ಲಿ' ಎಂಬ ಪದ್ಯದ ಗುಚ್ಛವನ್ನು ಎತ್ತಿಕೊಂಡೆ. ಪ್ರಾಮಾಣಿಕವಾಗಿ ಹೇಳುತ್ತೇನೆ; ನನಗೇಕೋ ಈ ಭಾರತೀಯ ಲೇಖಕಿಯರ (ಕೆಲವೇ ಕೆಲವರನ್ನು ಹೊರತುಪಡಿಸಿ) ಕ್ಲೀಷಾತ್ಮಕ ರೂಪಕಗಳು, ವಾಕ್ಯರಚನೆಗಳು ಆಕಳಿಕೆ ಹುಟ್ಟಿಸುತ್ತವೆ. ಅದೇನು ಸೋಜಿಗವೋ ಗೊತ್ತಿಲ್ಲ; 'ಗೆಜ್ಜೆ...' ನನ್ನೊಳಗೆ ಸದ್ದು ಮಾಡಿಬಿಟ್ಟಿತು! ಅನಾಮತ್ತಾಗಿ ಹದಿನೈದು ಪದ್ದಗಳನ್ನು ಒಂದೇ ಗುಕ್ಕಿಗೆ ಓದಿಬಿಟ್ಟೆ. ಅದೂ ಗಟ್ಟಿ ಗಂಟಲಲ್ಲಿ...! ನಾನು ಒಳ್ಳೆಯ ಪದ್ಯಗಳನ್ನಷ್ಟೇ ಗಟ್ಟಿಗಂಟಲಲ್ಲಿ ಓದುತ್ತೇನೆಂಬುದು ನನ್ನ ಮಕ್ಕಳ ಆರೋಪ!
ಫೇಸ್‌ಬುಕ್‌‌ನಲ್ಲಿ ಮೀನಿನ ಫೋಟೋಗಳನ್ನು ಹಾಕಿಕೊಂಡೋ, ಅಥವಾ ತನ್ನ ಫೋಟೋಗಳನ್ನೋ ಹಾಕಿಕೊಂಡೋ ಲೋಕದ ಆಗುಹೋಗುಗಳನ್ನು ನಿರ್ಲಕ್ಷಿಸುವಂತೆ ಕಾಣುವ ಈಕೆ ಪದ್ಯದಲ್ಲಿ ಮಾತ್ರ ಬಂಡಾಯಗಾರ್ತಿ! ಅಡುಗೆ, ಮೇಕಪ್ ಬಗ್ಗೆಯೋ, ಸವಕಲು ಸ್ತ್ರೀವಾದಿಗಳ ದಾಟಿಯಲ್ಲಿ ಪದ್ಯ ಬರೆದುಕೊಂಡು ವ್ಯರ್ಥ ಕಾವ್ಯಾಲಾಪ (ಲೋಪ ಕೂಡ) ಮಾಡುವ ನನ್ನ ಓರಗೆಯ ಅದೆಷ್ಟೋ ಕವಯಿತ್ರಿಗಳಲ್ಲಿ ಶ್ರೀದೇವಿ ಅನ್ಯವಾಗಿ ಕಾಣಿಸಿದಳು! ಈಕೆಯ ಕಾವ್ಯದ ಭಾಷೆ ದಣಿಯುವುದಿಲ್ಲ; ಕೂಗುಮಾರಿಯಂತೆ ಕೂಗುವುದೂ ಇಲ್ಲ; ಹಾಗೆಂದು ಪಿಸುಮಾತುಗಳಲ್ಲಿ ಲೀನವಾಗುವುದೂ ಇಲ್ಲ... ತಲುಪಬೇಕಾದ ನಿಲ್ದಾಣ ತಲುಪುವ ವಾಹನಕ್ಕೆ ಬೇಕಾದ ಇಂಧನ ದೊಡ್ಡ ದಾಸ್ತಾನನ್ನೇ ತನ್ನ ಕಾವ್ಯದಲ್ಲಿ ಅಡಗಿಸಿದ್ದಾಳೆ.
ಮುಗಿಯುತ್ತಾ ಬಂದ ಎಣ್ಣೆಯ ಪಸೆಗೆ
ಪ್ರಜ್ವಲಿಸಿ ಅಟ್ಟಹಾಸಗೈದು ಉರಿದುಬಿಡುವ ದೀಪವೇ
ನಿನಗದೆಂತಹ ಚೈತನ್ಯ; ಅದೆಲ್ಲಿಯ ಉಮೇದಿ?
ಎಂಬ ಸಾಲುಗಳು ಈಕೆಯ ದಾಸ್ತಾನಿನಲ್ಲಿ ಮೈ ಕೊಡವಿಕೊಂಡು ಎದ್ದುಬರುತ್ತವೆ.
ರಾಮರಾಜ್ಯ ಎಂಬ ಪದ್ಯ 'ಯಾವುದಕ್ಕೂ ಚಿಂತೆ‌ ಮಾಡಬೇಕಿಲ್ಲ
ನಾವು ರಾಮರಾಜ್ಯದಲ್ಲಿದ್ದೇವೆ'
ಎಂಬ ಸಾಲುಗಳಿಂದ ಆರಂಭವಾಗುತ್ತದೆ. ಈ ಎರಡು ಸಾಲುಗಳೇ ಎಲ್ಲವನ್ನೂ ಹೇಳುತ್ತಾವಾದರೂ ಭಕ್ತಪರಾಕಾಷ್ಠೆಯಲ್ಲಿ ಮಿಂದೇಳುತ್ತಿರುವ ಭಕ್ತರಿಗಾಗಿಯೇ ಅದನ್ನು ವಿಸ್ತರಿಸಿದ್ದಾಳೆ ಎಂದು ಅನಿಸುತ್ತದೆ. ಸದ್ಯದ ಆಗುಹೋಗುಗಳನ್ನು ಸೂಕ್ಷ್ಮ ಲೇಖಕ/ಕಿ ಹೀಗಲ್ಲದೆ ಇನ್ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕಿದೆ? ನಿಜವಾಗಿಯೂ ಭಾರತಕ್ಕೆ ಮತ್ತೊಂದಾವರ್ತಿಯಿಂದ ಪ್ರಾಥಮಿಕ ಶಿಕ್ಷಣವಾಗಬೇಕಿದೆ; ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವುದಕ್ಕಿಂತಲೂ, ಅಕ್ಷರಸ್ಥರನ್ನು ಹೃದಯವಂತರನ್ನಾಗಿಸುವ ಅನಿವಾರ್ಯತೆಯನ್ನು 'ರಾಮರಾಜ್ಯ' ಪದ್ಯ ನಿರೂಪಿಸುತ್ತದೆ.
ನಾನು ಪದ್ಯ ಬರೆಯುವುದನ್ನು ಬಿಟ್ಟು ಒಂದು ವರ್ಷ ಮೀರಿದೆ! ಇಂತ ಹೊತ್ತಿನಲ್ಲಿ ಹೀಗೆ, ಒಳ್ಳೆಯ ಪದ್ಯಗಳನ್ನು ಬರೆದು, ಮತ್ತೆ ಪದ್ಯ ಬರೆಯುವ 'ಉಮೇದಿ' ಹುಟ್ಟಿಸಿ, ಅದರ ಜತೆಜತೆಗೆ ಹೊಟ್ಟೆ ಕಿಚ್ಚನ್ನೂ ಹೆಚ್ಚಿಸಿದ ಕಾರಣಕ್ಕಾಗಿ ಆದಷ್ಟೂ ಶೀಘ್ರವಾಗಿ ಈಕೆ ಕೋಕಂ ಜ್ಯೂಸ್ ಕಳಿಸಿ ನನ್ನನ್ನು ತಣ್ಣಗಾಗಿಸಲು ನೀವಾದರೂ ಒತ್ತಾಯ ಮಾಡಬೇಕೆಂದು 'ನನ್ನ' ಕಳಕಳಿಯಿಂದ ವಿನಂತಿಸಿಕೊಳ್ಳುವೆ.
-ವಿ.ಆರ್.ಸಿ.

No comments:

Post a Comment