stat Counter



Monday, July 1, 2019

ಸವಿತಾ ನಾಗಭೂಷಣ ---ಬಾಂಧವ್ಯ ( ಅತಿ ಸಣ್ಣ ಕತೆ) -------

ಬಾಂಧವ್ಯ ( ಅತಿ ಸಣ್ಣ ಕತೆ)
-------
ಶಶಾಂಕ ದಿನಾಲು ಮನೆಯಿಂದ ಕಛೇರಿಗೆ ಹೊರಡುವುದು ಬೆಳಿಗ್ಗೆ ಎಂಟೂವರೆಗೆ. ಮಡಿವಾಳ ಮೇಲು ಸೇತುವೆ ಬಳಿ ಬಂದಾಗ ಸರಿಸುಮಾರು ಸಿಗ್ನಲ್ ಬೀಳುತ್ತದೆ. ಅದೇ ಆ ಮುದುಕಿ ಕಾರಿನ ಬಳಿ ಬಂದು ಟಕ್ ಟಕ್ ಟಕ್ ಎಂದು ಮೂರು ಸಲ ಕಿಟಕಿ ಗಾಜು ಕುಟ್ಟುತ್ತಾಳೆ. ಶಶಾಂಕ ಐದು ರೂಪಾಯಿಯ ನಾಣ್ಯ ನೀಡುತ್ತಾನೆ. ಅವಳು. ನಮಸ್ಕಾರ ಮಾಡಿ ಜಾಗ ಖಾಲಿ ಮಾಡುತ್ತಾಳೆ. ಆ ಮುದುಕಿಗೆ ಏನಿಲ್ಲ ಅಂದರೂ ಎಂಭತ್ತರ ಮೇಲಾಗಿದೆ ಎಂದು ಅವನಿಗೆ ಅನಿಸಿದೆ. ತಟ್ಟಾಡುತ್ತಾ ಓಡಾಡುವ ಅವಳ
ಬಗ್ಗೆ ಅರಿಯುವ ಕುತೂಹಲ ಕೂಡ ಇದೆ. ಕಾರು ನಿಲ್ಲಿಸಿ ಕೇಳಬೇಕು ಅಂದುಕೊಳ್ಳುತ್ತಲೇ ನಾಲ್ಕೈದು ವರುಷಗಳೇ ಕಳೆದಿವೆ. ಒಮ್ಮೊಮ್ಮೆ ಮನೆಯಿಂದ ಹೊರಡುವುದು ತಡವಾಗಿ ಆಕೆ ಸಿಗದಿದ್ದಾಗ ಹಿಂದಿನ ದಿನದ ಬಾಕಿ ಸೇರಿಸಿ ಕೊಡುವುದೂ ಇದೆ
ಸರಿಯಾಗಿ ಎಂಟೂವರೆಗೆ ಮನೆಯಿಂದ ಹೊರಡುವುದು.... ಆ ಸಮಯದಲ್ಲಿ ಮನೆಮಂದಿ ಏನಾದರೂ ಕೆಲಸ ಹೇಳಿದರೆ ಆ ಮುದುಕಿ ಕಾಯುತ್ತ ಇರುತ್ತಾಳೆ, ಈಗ ಆಗಲ್ಲ ಎಂದು ಹೇಳಿ ಸಿಡಿಮಿಡಿಗೊಳ್ಳುವುದು, ಇವೆಲ್ಲಾ ಶಶಾಂಕನ ಮನೆಯವರಿಗೆ ವಿಚಿತ್ರವೆನಿಸಿ ಆಗಾಗ ಅವರು ಮುದುಕಿಯ ವಿಷಯ ತೆಗೆದು ತಮಾಷೆ ಮಾಡಿ ಆಡಿಕೊಳ್ಳುವ ತನಕ ಬಂದಿದೆ.
ಕಳೆದ ತಿಂಗಳಿನಿಂದ ಬಡ್ತಿ ಸಿಕ್ಕಿ ಶಶಾಂಕನಿಗೆ ಪಗಾರ ಹೆಚ್ಚಾದ ಮೇಲೆ ಅವನು ಆಕೆಗೆ ಹತ್ತು ರೂಪಾಯಿಯ ನೋಟು ನೀಡಲು ಶುರು ಮಾಡಿದ್ದಾನೆ. ಒಹೋ ಮದುಕಿಗೂ ಪ್ರೋಮೋಷನ್ ಎಂದು ಮಗಳು ರೇಗಿಸಿ ನಕ್ಕಿದ್ದಾಗಿದೆ.
ನಲವತ್ತರ ಆಸುಪಾಸಿನಲ್ಲಿರುವ ಶಶಾಂಕನಿಗೆ ಯಾಕೋ ಮೊನ್ನೆ ಎದೆ ಹಿಂಡಿದಂತಾಗಿ ಡಾಕ್ಟರ್ ಹತ್ತಿರ ತಪಾಸಣೆ ಮಾಡಿಸಿದಾಗ ಒಂದಿಷ್ಟು ಪರೀಕ್ಷೆ ಗಳನ್ನು ಮಾಡಿ ಆರು ವಾರ ವಿಶ್ರಾಂತಿ ತೆಗೆದುಕೊಳ್ಳಲೇ ಬೇಕು ಎಂದು ಸೂಚಿಸಿರುತ್ತಾರೆ. ಮಾರನೆಯ ದಿನದಿಂದ ಶಶಾಂಕ ಕಛೇರಿಗೆ ರಜೆ ಹಾಕಿದ್ದರೂ ಸರಿಯಾಗಿ ಎಂಟೂವರೆಗೆ ಹೊರಟು ಸಿಗ್ನಲ್ ಬಳಿ ಮುದುಕಿ ಸಿಕ್ಕಿ ಟಕ್ ಟಕ್ ಟಕ್ ಎಂದು ಬಾಗಿಲು ಬಡಿದಾಗ ಆಕೆಯ ಕೈಯಲ್ಲಿ ಐದುನೂರು ರೂಪಾಯಿಯ ನೋಟ ಇರಿಸಿ '
' ನನಗೆ ಆರಾಮಿಲ್ಲ, ನಾನು
ನಾಲ್ಕೈದು ವಾರ ಬರಲ್ಲ...ಎನಲು' ನಡುಗುವ ಕೈಯಿಂದ ಮುದುಕಿ ಅದನ್ನು ಇಸಿದುಕೊಂಡು ಕಣ್ಣಿಗೆ ಒತ್ತಿಕೊಳ್ಳುವಳು.
ಶಶಾಂಕನಿಗೆ ಏನೋ ಕಳವಳ...... ಆಕೆಯನ್ನು ಮತ್ತೆ ನೋಡುವೆನೋ ಇಲ್ಲವೋ ಎಂದು ಅನಿಸಿ ಕಾರಿನ ಗಾಜು ಏರಿಸಿ ಕಾರನ್ನು ತಿರುಗಿಸಿಕೊಂಡು ಮರಳಿದರೂ ಅದೇ ಗುಂಗಿನಲ್ಲಿ ಇರುವನು. ಇದನ್ನು ಗಮನಿಸಿದ ಶಶಾಂಕನ ಹೆಂಡತಿ ಯಾಕೆ ಮುದುಕಿಗೇನಾಯಿತು ? ಎಂದು ಕೇಳಲು, ಆಕೆ ಗಟ್ಟಿಮುಟ್ಟಾಗಿರುವಳು ಅದಲ್ಲ ವಿಷಯ, ಯಾಕೋ ಸುಸ್ತು ಎಂದು ಕ್ಷೀಣವಾದ ದನಿಯಲ್ಲಿ ಉಸುರುತ್ತಾ ಮಾತ್ರೆ ನುಂಗಿ ನೀರು ಕುಡಿಯುವನು.

No comments:

Post a Comment