stat Counter



Wednesday, March 4, 2020

ಗಿರಿಜಾ ಶಾಸ್ತ್ರಿ = ಕೀರ್ತಿನಾಥ ಕುರ್ತಕೋಟಿ

ಕನ್ನಡದ ಕೀರ್ತಿಯ ಅನಾವರಣ.
ಮಾನ್ಯರಾದ ಎಸ್. ಆರ್, ವಿಜಯಶಂಕರ್ ಅವರೇ, ಕುರ್ತುಕೋಟಿಯವರ ಸಾಹಿತ್ಯದ ವಿರಾಟ್ ಸ್ವರೂಪವನ್ನು ಬಹಳ ಚೆನ್ನಾಗಿ ಪರಿಚಯ ಮಾಡಿಕೊಟ್ಟಿದ್ದೀರ. ಪರಂಪರೆಯೊಡನೆ/ ಲೇಖಕರೊಡನೆ ಅವರಿಗಿದ್ದ ಭಿನ್ನಾಭಿಪ್ರಾಯ, ವಾಗ್ವಾದ, ಚರ್ಚೆ, ಸಿದ್ಧಾಂತ, ಸಮಸ್ಯೆಗಳನ್ನು ವ್ಯಕ್ತಪಡಿಸುವಲ್ಲಿ ಅವರ ನಿರ್ಭಿಡೆಯನ್ನು ಬಹಳ ಸೊಗಸಾಗಿ ಕಾಣಿಸಿದ್ದೀರಿ. ನಾನು ಎಂ.ಎ. ತರಗತಿಯಲ್ಲಿ ಅವರ ಒಂದೆರೆಡು ಪುಸ್ತಕಗಳನ್ನು ಓದಿದ್ದಷ್ಟೇ. ನಿಮ್ಮ ಈ ಕಿರು ಪುಸ್ತಕ ಕೀರ್ತಿಯವರ ಬರಹಗಳನ್ನು ಒಟ್ಟಾರೆಯಾಗಿ ಓದಬೇಕೆಂಬ ಹಂಬಲವನ್ನೂ, ಕುತೂಹಲವನ್ನೂ ಹುಟ್ಟಿಸುತ್ತದೆ.
ಈ ನಿಟ್ಟಿನಲ್ಲಿ ಕುರ್ತುಕೋಟಿಯವರ ಸಾವಿರಾರು ಪುಟಗಳ ಬರಹಗಳನ್ನು ಓದಿ ಅರಗಿಸಿಕೊಂಡು ಅವುಗಳ ವೈಶಿಷ್ಟ್ಯವನ್ನು ಬೀಜರೂಪದಲ್ಲಿ ( ಮಾನೋಗ್ರಾಫ್) ಇಟ್ಟ ನಿಮ್ಮ ಸಾಹಸ ಮೆಚ್ಚುವಂತಹದ್ದು.
ಕುರ್ತುಕೋಟಿಯವರು ಸೋದ್ದಿಶ್ಯ, ಪ್ರತ್ಯಭಿಜ್ಞಾನ, ಭಾಷಾಂತರ, ಕಥಾಂತರ, ಮೂಲ್ಯಮಾಪನಗಳ ಪರಿಕಲ್ಪನೆಯನ್ನು ಬಳಸಿರುವುದು ಗಮನ ಸೆಳೆಯುವ ಅಂಶಗಳು. “ಭೈರಪ್ಪನವರ ಕಾದಂಬರಿಗಳೆಲ್ಲಾ ಸೋದ್ದಿಶ್ಯ (Bad Faith)ಸಾಹಿತ್ಯ ನಿರ್ಮಾಣದ ಲವಲವಿಕೆಯಲ್ಲಿ ಹುಟ್ಟಿದವುಗಳಾಗಿವೆ”… “ಕೃತಿಯ ಉದ್ದೇಶ ಕೃತಿಯ ಅನುಭವ ಸಾಮಾಗ್ರಿಯನ್ನು ಭೇದಿಸಿಕೊಂದು ಬಂದಾಗಲೇ ಸಾರ್ಥಕವಾಗುವುದೆಂಬ ಮಾತು ನಿಜವೇ. ಆದರೆ ಅದೇ ಒಂದು ಹವ್ಯಾಸವಾದರೆ ಕಾದಂಬರಿಯ ವಾಸ್ತವ ಸತ್ಯದ ಗತಿ ಏನಾಗುತ್ತದೆಂಬುದನ್ನು ಪರಿಶೀಲಿಸುವುದು ಅಗತ್ಯ" ಎಂದು ಹೇಳುತ್ತಾರೆ.
ಸಂಸ್ಕೃತ ನಾಟಕಗಳ ಬಗ್ಗೆ ಬರೆಯುವಾಗ ಬಳಸಿರುವ ಪ್ರತ್ಯಭಿಜ್ಞಾನದ ಪರಿಕಲ್ಪನೆಯನ್ನು ನೀವು ವಿಶ್ಲೇಷಿಸಿರುವುದು ವಿಶಿಷ್ಟವಾಗಿದೆ. ಸಾಹಿತ್ಯ ಕಥನದ ಸಾತತ್ಯದಲ್ಲೆ ಆಧುನಿಕ ಸ್ವರೂಪ ಅಡಗಿದೆ ಒಂದನ್ನು ಭಂಗಗೊಳಿಸಿ ಇನ್ನೊಂದು ಹುಟ್ಟುವ ಕ್ರಮದಲ್ಲಿಯೇ ಹೊಸತನವಿದೆ. ಭಾಷಾಂತರ ಮತ್ತು ಕಥಾಂತರಗಳ ಕಲ್ಪನೆ ಪಾಶ್ಚಾತ್ಯರಿಂದ ಬಂದಿದ್ದು ಎಂದು ಕುರ್ತುಕೋಟಿಯವರು ಹೇಳಿದರೂ ಅವರ ಪ್ರತ್ಯಭಿಜ್ಞಾನದ ತಾತ್ವಿಕತೆ, ನಮ್ಮ ಸಂಸ್ಕೃತಿ ಸಾಹಿತ್ಯಗಳಲ್ಲಿ ಹೊಸತಿನ ಪ್ರವೇಶ ಕಾಲ ಕಾಲಕ್ಕೆ ಆಗಿರುವುದನ್ನು ಹೇಳುತ್ತ ಎಲ್ಲದಕ್ಕೂ ಇಂಗ್ಲಿಷ್ ಮೂಲಕ ಬಂದ ಪಾಶ್ಚಿಮಾತ್ಯ ಚಿಂತನೆಗಳಿಗೆ ಅಡಿಯಾಳಾಗಬೇಕಿಲ್ಲ ಎಂಬಂತಹ ಮಾತುಗಳು ಕುರ್ತುಕೋಟಿಯವರ ಸಾಹಿತ್ಯ ಪರಿಚಾರಿಕೆಯ ಬಗ್ಗೆ ಹೊಸ ಹೊಳಲನ್ನು ನೀಡುತ್ತದೆ.
ಯೂ. ಆರ್. ಅನಂತಮೂರ್ತಿ ಯವರು ಮುಂಬಯಿಗೆ ಬಂದಿದ್ದಾಗ "ಅಭಿವೃದ್ಧಿ' ಎಂದರೆ ನನಗೆ ಇನ್ನು ಹಿಂದಕ್ಕೆ ಹೋಗುವುದು ಮಾತ್ರ ಎಂದಿದ್ದರು. 'ಎ.ಸಿ.ಬ್ರಾಡ್ಲೆ ಗೀಡ್ಲೇ ಓದಿಕೊಂಡು ಕಾಲಕಳೆದು ಬಿಟ್ಟೆ. ಪುರಂದರದಾಸರನ್ನು ಓದಿಕೊಳ್ಳಲಿಲ್ಲವಲ್ಲಾ ಎಂದೆನಿಸುತ್ತದೆ ಎಂದಿದ್ದರು. ಅಡಿಗರು ಹೇಳುವ "ಇನ್ನಾದರೂ ಪೂರ್ವ ಮೀಮಾಂಸೆಯ ಬಗೆಯಬೇಕು'" ಎನ್ನುವಂತಹ ಮಾತುಗಳೂ ಪ್ರತ್ಯಭಿಜ್ಞಾನದ ರೂಪವೇ ಇರಬಹುದಲ್ಲವೇ?
ಮೂಲ್ಯಮಾಪನ ಎಂಬ ಇಂಗ್ಲಿಷಿನ evaluation ಎನ್ನುವ ಅರ್ಥದಲ್ಲಿ ಮೊದಲಬಾರಿಗೆ ಮುಗಳಿಯವರು ಪ್ರಾರಂಭಿಸಿದರೂ ಆಧುನಿಕ ಸಾಹಿತ್ಯಕ್ಕೆ ಅದನ್ನು ಅನ್ವಯಿಸಿ ಮೂಲ್ಯಮಾಪನ ಮಾಡಿದವರಲ್ಲಿ ಕೀರ್ತಿಯವರೇ ಮೊದಲಿಗರು ಎಂದು ಹೇಳಿರುವುದು ಅವರ ಪ್ರಾಯೋಗಿಕ ನೆಲೆಗೆ ಉದಾಹರಣೆಯಾಗಿದೆ
ಕುಮಾರವ್ಯಾಸನ ಬಗ್ಗೆ ಬರೆಯುತ್ತಾ , ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ ಎನ್ನುವ ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯಲ್ಲಿ ಬರುವ ಸಾಲುಗಳನ್ನು, ಮಹಾಭಾರತವನ್ನು ವ್ಯಾಸ ಮತ್ತು ಗಣಪತಿಯ ಕೂಡಿ ಬರೆದುದಕ್ಕೆ ಸಂವಾದಿಯಾಗಿ ಕುರ್ತುಕೋಟಿಯವರು ಗ್ರಹಿಸಿರುವುದು, ಅಲ್ಲದೆ ಇದು ಸನಕಾದಿ ಸಜ್ಜನರಿಗೆ ಹೇಳುವ ಕಥೆ ಆದುದರಿಂದ ಇದು ವಿನಯದ ಮಾತಲ್ಲ ಹೆಮ್ಮೆಯ ಮಾತು ಎಂದಿರುವುದೂ ಕುರ್ತುಕೋಟಿಯವರ ಅನನ್ಯತೆಯನ್ನೇ ತೋರಿಸುತ್ತದೆ. ನೀವು ಇದನ್ನು ಗಮನಿಸಿರುವುದು ನಿಮ್ಮ ಸಾಹಿತ್ಯಕ ಅನನ್ಯತೆಯನ್ನೂ ತೋರಿಸುತ್ತದೆ. ಆದರೆ ಸನಕಾದಿ ಸಜ್ಜನರಿಗೆ ಮಾತ್ರವಲ್ಲ ಜಂಗಮ ಜನಾರ್ಧರನ್ನೂ ಉದ್ದೇಶಿಸಲಾಗಿದೆಯೆಂದು ಕವಿಯು ಹೇಳಿರುವುದರಲ್ಲಿ ಇಬ್ಬರನ್ನೂ ಸಮತೋಲನ ದೃಷ್ಟಿಯಿಂದ ನೋಡುವ ಪರಿಗೆ ಕುಮಾರವ್ಯಾಸನಲ್ಲಿ ಹಲವಾರು ನಿದರ್ಶನಗಳು ಇವೆಯಲ್ಲವೇ?
ಟಿ.ಎಸ್ ವೆಂಕಣ್ಣಯ್ಯ, ಕುವೆಂಪು, ಎಸ್. ವಿ. ರಂಗಣ್ಣ ಮೊದಲಾದ ದಿಗ್ಗಜರ ಕುರಿತು ನಿರ್ಭಿಡೆಯ ವಿಮರ್ಶೆ ಮಾಡುವಲ್ಲಿ ಕುರ್ತುಕೋಟಿಯವರು ತೋರಿದ ಎದೆಗಾರಿಕೆ, ಬೇಂದ್ರೆ, ಕುಮಾರವ್ಯಾಸ, ಮತ್ತು ಕಾಳಿದಾಸರನ್ನು ಮಾತ್ರ ಸಾಹಿತ್ಯದ ಮಹತ್ವದ ಮೂರು ಮೆಟ್ಟಿಲುಗಳು ಎಂದು ಪರಿಗಣಿಸುವ ಕುರ್ತುಕೋಟಿಯವರು ಅವರಿಗೆ ನ್ಯಾಯ ಸಲ್ಲಿಸುತ್ತಲೇ ಅನೇಕ ಕಡೆ ಅವರುಗಳನ್ನು ಮೈಮೇಲೆ ಆವಾಹಿಸಿಕೊಂಡಂತೆ ಬರೆದಿರುವುದನ್ನು ನೀವು ಉಲ್ಲೇಖಿಸಿರುವುದು ಕುರ್ತುಕೋಟಿಯವರ ಒಟ್ಟು ನಿಲುವನ್ನು ಗ್ರಹಿಸಲು ಸಹಕರಿಸುತ್ತದೆ.
ಬೇಂದ್ರೆಯವರ ಬಗೆಗಿನ ತಮ್ಮ ಒಳನೋಟದ ಓಘದಲ್ಲಿ ಕೊಚ್ಚಿಕೊಂಡು ಹೋಗುವ ಕುರ್ತುಕೋಟಿಯವರಿಗೆ ತಾತ್ವಿಕ ಖಚಿತತೆ ಇಲ್ಲ ಎಂದು ಹೇಳುವ ನೀವು, ಜಿ.ಎಸ್ ಅಮೂರರು ಬೇಂದ್ರೆಯವರ ಬಗ್ಗೆ ಬರೆದಿರುವ 'ಭುವನದ ಭಾಗ್ಯ' ದಂತಹ ಸಮಗ್ರ ಸಂಪುಟವೊಂದು ಕೀರ್ತಿಯವರಿಂದ ಅವರ ಜೀವಿತ ಕಾಲದಲ್ಲಿ ಪ್ರಕಟವಾಗದೇ ಹೋಯಿತು. ಆದರೂ ಗಿರಡ್ಡಿಯವರು, ಕೀರ್ತಿಯವರು ಬೇಂದ್ರೆ ಬಗ್ಗೆ ಬರೆದ ಇನ್ನಷ್ಟು ಬರಹಗಳು, ಅವರ ಭಾಷಣಗಳು ಮುದ್ರಿತ ರೂಪ ಮುಂತಾದವನ್ನು ಒಟ್ಟು ಸೇರಿಸಿ, ೬೪೫ ಪುಟಗಳ ' ಬೇಂದ್ರೆ ಕಾವ್ಯ' ಎಂಬ ಬೃಹತ್ ಸಂಪುಟವನ್ನು ಪ್ರಕಟಿಸಿ ಕುರ್ತುಕೋಟಿಯವರ ಪುಸ್ತಕ ಪ್ರಕಟಣೆಯಲ್ಲಿದ್ದ ಕೊರತೆಯನ್ನು ತುಂಬಿದ್ದಾರೆ ಎಂದು ನೀವು ಅಭಿಪ್ರಾಯ ಪಡುವುದು ಕೀರ್ತಿಯವರ ಬರಹಗಳ ಬಗ್ಗೆ ಒಂದು ಅಖಂಡವಾದ ಒಳನೋಟವನ್ನು ಹರಿಸುತ್ತದೆ.
ಬೇಂದ್ರೆ ಕಾವ್ಯದ ತಂತ್ರದ ಚತುರ್ಮುಖಗಳಾದ ಶಬ್ದ , ಛಂದ, ಭಾವ ಮತ್ತು ಧ್ವನಿ ಇವುಗಳಲ್ಲಿ ಶಬ್ದ ಪರಿಕಲ್ಪನೆಯನ್ನು ವರ್ಣಿಸುತ್ತಾ ಶಬ್ದ ಮತ್ತು ಅರ್ಥಗಳು ಪಾರ್ವತಿ ಪರಮೇಶ್ವರರಂತೆ ಸೇರಿಕೊಂಡಿರುವುದೇ ಶ್ರೇಷ್ಟ ಕಾವ್ಯದ ಮಾನದಂಡ ಎಂದು ಕೀರ್ತಿಯವರು ಹೇಳಿದ್ದನ್ನು ಉಲ್ಲೇಖಿಸುತ್ತಾ, ನೀವು ಕುರ್ತುಕೋಟಿಯವರಿಗಿದ್ದ ಕಾಳಿದಾಸನ ಮೋಹದ ಕಡೆಗೂ ಗಮನ ಸೆಳೆಯುತ್ತೀರಿ. ಈ ಮಾನದಂಡದಿಂದ ಕುರ್ತುಕೋಟಿಯವರು ಕಾಣುವ ಅತಿ ಶ್ರೇಷ್ಠ ಅಭಿವ್ಯಕ್ತಿ ಎಂದರೆ ಬೇಂದ್ರೆಯವರ ಕಾವ್ಯ ಎಂದು ಹೇಳುವುದರ ಮೂಲಕ ಬೇಂದ್ರೆಯವರ ಬಗ್ಗೆ ಕುರ್ತುಕೋಟಿಯವರು ಎಷ್ಟು ಪೊಸೆಸೀವ್ ಆಗಿದ್ದರು ಎಂಬುದೂ ಇಲ್ಲಿ ಧ್ವನಿತವಾಗುತ್ತದೆ. ಬೇಂದ್ರೆಯವರನ್ನು ಕವಿಯಾಗಿ ಒಪ್ಪಿಕೊಂಡರೂ ವಿಮರ್ಶಕರಾಗಿ ಅವರು ಯಾವುದೇ ಸಿದ್ಧಾಂತವನ್ನು ಮಂಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ಅವರ ಬಗ್ಗೆ ಕೀರ್ತಿಯವರಿಗೆ ಅಸಮಾಧಾನವಿದೆ ಎಂಬುದನ್ನೂ ಹೇಳಿರುವುದು ಕೀರ್ತಿಯವರ ವಿಮರ್ಶನ ವ್ಯಕ್ತಿತ್ವದ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ.
ಕನ್ನಡ ಸಾಹಿತ್ಯ ವಿಮರ್ಶೆ ಬಿ.ಎಂ.ಶ್ರೀ ಯವರಿಂದ ಮುಂದೆ ಎರಡು ಕವಲಾಗಿ ಎ.ಆರ್. ಕೃಷ್ಣಶಾಸ್ತ್ರಿ ಮತ್ತು ತೀನಂಶ್ರೀ ಅವರಲ್ಲಿ ಮುಂದುವರೆಯಿತು. ತೀ. ನಂ.ಶ್ರೀ ಯವರನ್ನು ಕೀರ್ತಿಯವರು ಸರಿಯಾಗಿ ಗಮನಿಸಿಲ್ಲ ಎಂದು ಕೆ.ವಿ. ನಾರಾಯಣ ಅವರು ಹೇಳಿರುವುದು ("ಬೇರು ಕಾಂಡ ಚಿಗುರು") ಕುರ್ತುಕೋಟಿಯವರ ಪೂರ್ವಾಗ್ರಹ ಪೀಡಿತ ದೃಷ್ತಿಕೋನವನ್ನೇ ಹೇಳುತ್ತದೆ. ಕೀರ್ತಿಯವರಿಗೆ ವಿಶೇಷವಾಗಿ ಮೈಸೂರು ಕಡೆಯ ಅನೇಕ ಲೇಖಕರ ಬಗ್ಗೆ ಇದ್ದ ತಾರತಮ್ಯ ಭಾವವನ್ನು, ಅವರ ಮಿತಿಗಳನ್ನು ನೀವು ಉಪಸಂಹಾರ ಭಾಗದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದ್ದೀರಿ. ಇದು ನಿಮ್ಮ ನಿಷ್ಪಕ್ಷಪಾತ ನಿಲುವಿಗೆ ಸಾಕ್ಷಿಯಾಗಿದೆ.
ಅವರ ಅಂಕಣ ಸಾಹಿತ್ಯದ ಬಗ್ಗೆ ಬರೆಯುತ್ತಾ ಸಾಹಿತ್ಯ, ಸಂಸ್ಕೃತಿ, ಬದುಕಿನ ರಹಸ್ಯ ಇವುಗಳ ಬಗ್ಗೆ ಕೇಂದ್ರೀಕರಿಸುತ್ತಿದ್ದ ಕೀರ್ತಿಯವರ ಅಂಕಣ ಬರಹಗಳು ಕೊನೆ ಕೊನೆಗೆ ಎಲ್ಲಾ ಕಲೆಗಳ, ಬದುಕಿನ, ಸಂಸ್ಕೃತಿಯ ಹಿಂದಿರುವ ಮೂಲ ಯಾವುದು ಎಂಬುದರ ಚಿಂತನೆಯನ್ನು ಒಳಗೊಂಡಿತ್ತಲ್ಲದೆ ಅವರ ಕೊನೆಯ ದಿನಗಳ ಅಂಕಣ ಬರಹಗಳು ಅಭಿಜಾತ- ಜಾನಪದಸಾಹಿತ್ಯ ಕಲ್ಪನೆಗಳನ್ನೂ ಮೀರಿತ್ತು ಎಂದು ನೀವು ಗುರುತಿಸಿರುವುದು ಅವರ ಬೆಳವಣಿಗೆಯ ಉತ್ತುಂಗವನ್ನೂ, ಅವರ ಪರಿಪಕ್ವವಾದ ಸಾಹಿತ್ಯಕ ಪರಿಕಲ್ಪನೆಗಳೆಡೆಗೆ ಬೊಟ್ಟು ಮಾಡಿ ತೋರಿಸುತ್ತದೆ.
ಕೀರ್ತಿಯವರ ಬರಹಗಳ ಇಂತಹ ಅನನ್ಯತೆಯ ಹಲವಾರು ಮುಖಗಳನ್ನು ಹತ್ತು ಅಧ್ಯಾಯಗಳ ಈ ಕಿರು ಹೊತ್ತಿಗೆಯಲ್ಲಿ ವ್ಯಕ್ತಪಡಿಸಿದ್ದೀರಿ.
ಕಿರಿದರೊಳ್ ಪಿರಿದರ್ಥವನ್ನು ಕಾಣಿಸಿದ ನಿಮ್ಮ ಪ್ರಯತ್ನ ಸಾರ್ಥಕವಾದುದು. ನಿಮ್ಮ ವಿದ್ವತ್ ಪೂರ್ಣವಾದ ಈ ಕಿರು ಹೊತ್ತಿಗೆಯನ್ನು ನಾನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂದಿದ್ದೇನೆಯೋ ತಿಳಿಯದು. ನೀವು ಪ್ರೀತಿಯಿಂದ ಕೊಟ್ಟ ನಿಮ್ಮ ಪುಸ್ತಕ ಓದಿದ ತಕ್ಷಣ ಹೊಳೆದ ವಿಚಾರಗಳಿವು. ನಿಮಗೆ ಶುಭಾಶಯಗಳು.

No comments:

Post a Comment