stat Counter



Showing posts with label ಕೆ. ರಾಮಚಂದ್ರ. Show all posts
Showing posts with label ಕೆ. ರಾಮಚಂದ್ರ. Show all posts

Tuesday, July 10, 2018

ಸುಬ್ರಾಯ ಚೊಕ್ಕಾಡಿ - " ಬಿದ್ದಗರಿ " ಸಂಕಲನದ ಕೆ. ರಾಮಚಂದ್ರ {1935 -55 }

ಎಳವೆಯಲ್ಲೇ ನಿಧನರಾದ,ದ.ಕ.ದ ಇಬ್ಬರು ಕವಿಗಳ ಬಗ್ಗೆ ಬರೆಯಬೇಕೆನಿಸುತ್ತದೆ.ಯರ್ಮುಂಜ ರಾಮಚಂದ್ರ(1933-1955) ಮತ್ತುಕೆ.(ಕುಂಞಿಹಿತ್ಲು)ರಾಮಚಂದ್ರ.(1935-1955).ಈ ಇಬ್ಬರು ಕವಿಗಳೂ ಒಂದೇ ತಿಂಗಳ ಅವಧಿಯಲ್ಲಿ ಕ್ಷಯರೋಗಕ್ಕೆ ತುತ್ತಾಗಿ ನಿಧನರಾದರು.
ಅಧ್ಯಾಪಕರೂ,ಪೋಸ್ಟ್ ಮಾಸ್ಟರೂ,ಮಂಗಳೂರಿನಲ್ಲಿ ಪತ್ರಿಕೋದ್ಯೋಗಿಯೂ ಆಗಿದ್ದ ಯರ್ಮುಂಜರು, ತಮ್ಮ"ಯಾರಿಲ್ಲಿಗೆ ಬಂದರು ಕಳೆದಿರುಳು"ಎಂಬ ಪ್ರಸಿದ್ಧ ಕವಿತೆಯುಳ್ಳ "ವಿದಾಯ"ಕವನ ಸಂಕಲನ ಹಾಗೂ "ಚಿಕಿತ್ಸೆಯ ಹುಚ್ಚು"ಕಥಾ ಸಂಕಲನದ ಮೂಲಕ ಸಾಹಿತ್ಯಾಸಕ್ತರಿಗೆ ತಕ್ಕ ಮಟ್ಟಿಗೆ ಪರಿಚಿತರು.ನಿಧನರಾದಾಗ ಅವರ ವಯಸ್ಸು 22.
ಇನ್ನೊಬ್ಬ ಕವಿ ಕೆ.ರಾಮಚಂದ್ರ ಮೈಸೂರಲ್ಲಿ ಬಿ.ಎ(ಆನರ್ಸ್)ಕೊನೆಯ ವರ್ಷದಲ್ಲಿ ಕಲಿಯುತ್ತಿದ್ದಾಗಲೇ ತಮ್ಮ20ನೇವಯಸ್ಸಿನಲ್ಲೇ ನಿಧನರಾದರು.ಅವರ ಕತೆ"ಕೊನೆಯ ಮಾತು" ಪುತ್ತೂರಿನ"ಜನಪ್ರಿಯ ಸಾಹಿತ್ಯ"ಪ್ರಕಟಿಸಿದ "ಮುಂಗಾರು ಮುಗಿಲು"ಕಥಾ ಸಂಕಲನದಲ್ಲಿ ಪ್ರಕಟವಾಗಿತ್ತು.ಆ ಕೃತಿಗೆ ಅ.ನ.ಕೃ ಮುನ್ನುಡಿಯಿತ್ತು ಹಾಗೂ ಅದನ್ನು ಶಿವರಾಮ ಕಾರಂತರಿಗೆ ಅರ್ಪಿಸಲಾಗಿತ್ತು.ರಾಮಚಂದ್ರರ ಪ್ರಕಟಿತ ಕವನ ಸಂಕಲನ"ಬಿದ್ದ ಗರಿ"ಯಲ್ಲಿ 18 ಕವಿತೆಗಳಿವೆ.ಯರ್ಮುಂಜರ ಹಾಗೂ ರಾಮಚಂದ್ರರ ಕವನನ ಸಂಕಲನಗಳಿಗೆ ಮುನ್ನುಡಿ ಬರೆದವರು ಕವಿ ಗೋಪಾಲಕೃಷ್ಣ ಅಡಿಗರು.ಈ ಇಬ್ಬರ ಅಕಾಲ ನಿಧನದ ಹಿನ್ನೆಲೆಯಲ್ಲಿಆ ಎರಡೂ ಸಂಕಲನದ ಹೆಸರುಗಳು,ರಾಮಚಂದ್ರರ ಏಕಮಾತ್ರ ಕತೆಯ ಹೆಸರುಗಳು ತುಂಬಾ ಅರ್ಥಪೂರ್ಣ ಎಂಬುದನ್ನು ಗಮನಿಸಬೇಕು.
ಅಂದಹಾಗೆ ಕೆ.ರಾಮಚಂದ್ರರ ಅಣ್ಣನ ಮಗ ಕೆ.ಶಿವಸುಬ್ರಹ್ಮಣ್ಯ ಈಗ ಬೆಂಗಳೂರಿನ ಉದಯವಾಣಿಯ ಸಂಪಾದಕರು..!
ಸ್ಯಾಂಪಲ್ ಗಾಗಿ ಕೆ.ರಾಮಚಂದ್ರರ ಕವಿತೆಗಳ ಕೆಲವು ಸಾಲುಗಳ ಸಾಲುಗಳು ನಿಮಗಾಗಿ:
ನಾನು ನೀನು ಎಲ್ಲ ಎಲ್ಲ ಬಾನಿನಲ್ಲೆ ನಡೆದು ಬರುವ
ಗರುಡನಿಟ್ಟ ಮೊಟ್ಟೆಯು.
ಬುವಿಯ ಗಿರಿಕಿರೀಟದಲ್ಲಿ ಕೋಡುಗಲ್ಲ ಗೂಡಿನಲ್ಲಿ
ನಮ್ಮ ಭ್ರೂಣ ನಿದ್ರೆಯು.
ನಮ್ಮ ಸಾಕುತಾಯಿ ಮಾಯೆ, ಕಾವು ಕೂರೆ ಗರುಡನೊಂದುನಿಯಮಿಸಿಟ್ಟ ದಾದಿಯು;ನಾವು ಬೆಳೆಯೆ ಮುಗಿಲ ರಾಣಿ ಅಮರಪುತ್ರರುಣ್ಣುವಂಥ
ತುತ್ತ ತರುವ ನೇಮವು..
* * * * *
ಸಾವನಪ್ಪಿ ಚೆಲ್ಲಿ ಹೋದ ಎಲುಬ ಗೂಡ ರಾಶಿಗೆ
ಮಲಯಗಿರಿಯ ಕಳಸದಿಂದ ಅಮೃತ ಧಾರೆ ಸುರಿವೆವು.
ಸುರಿದು ಕಲ್ಪ ವೃಕ್ಷದೊಂದು ಬೀಜ ನೆಗೆವೆವು
ನೆಗೆದು ರೆಕ್ಕೆ ಬಿಚ್ಚಿ ಧರೆಗೆ ತಂಪು ನೆಳಲ ತರುವೆವು.
(ಸುಪ್ತ ಶಕ್ತಿ)
* * * * *
ಯಾವ ದುಃಖಕೊ ಯಾವ ಸುಖಕೋ ಯಾವ ಗೀತಕೊ ಕಾಣೆನು
ಯಾವ ಮೌನಕೊ ಎದೆಯ ದನಿಯೊಂದೇ ಇದೇನಿದು ಅಚ್ಚರಿ!
* * * *
ಏನಿದೇನಿದು?ಯಾವ ಮೊರೆಯನು ಅರುಹುತಿಲ್ಲಿಗೆ ಬಂದಿಹೆ
ಇಂದ್ರ ಲೋಕದ ತುಂಗ ಸ್ಥಾನವೊ?ನಿಮ್ನ ಲೋಕದ ಬಂಧುವೋ?
* * * *
(ಈ ದನಿ)

Image may contain: 1 person, text