ನಾಂಕ ೨೫-೦೩-೨೦೧೭ ರಂದು ಜಯನಗರದ ಸಿರಿಸಂಪಿಗೆಯಲ್ಲಿ ಶ್ರೀ ಕೆ. ಸತ್ಯನಾರಾಯಣ ಅವರ ಎರಡು ಕಿರುಕಾದಂಬರಿಗಳು “ವಿಕಲ್ಪ” ದ ಕುರಿತಾದ ಈ ಹೊತ್ತಿಗೆಯ ಚರ್ಚೆಯಲ್ಲಿ ಭಾಗವಹಿಸಿದ್ದವರಲ್ಲಿ ಉಷಾ.ಪಿ ರ್ಐ, ಜಯಶ್ರೀ ದೇಶಪಾಂಡೆ ಮತ್ತು ಸಹನಾ ಹೆಗಡೆ ಅವರ ಅಭಿಪ್ರಾಯಗಳು ಬರಹ ರೂಪದಲ್ಲಿ, ನಿಮ್ಮ ಓದಿಗೆ ಜೊತೆಯಾಗಿ.
:)
” ಎಲ್ಲರೂ ವಿಕಲ್ಪದ ಬಗ್ಗೆ ಮಾತಾಡಿದ ಮೇಲೆ ನನಗೆ ಹೇಳುವುದೇನೂ ಉಳಿದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಹನಾ ಅವರು ನನಗನಿಸಿದ ಹಲವಾರು ಸಂಗತಿಗಳನ್ನು ಹೇಳಿದ್ದಾರೆ. ಕೆಲವೇ ಮಾತುಗಳಲ್ಲಿ ಹೇಳುವುದಾದರೆ ಮೊದಲ ಸಲ ಓದಿದಾಗ ಈ ಕಾದಂಬರಿ ನನಗೆ ಅಷ್ಟೇನೂ ಹೆಚ್ಚು ಇಷ್ಟವಾಗಲಿಲ್ಲವೆಂದೇ ಹೇಳಬಹುದು. ಎಲ್ಲಾ ಪಾತ್ರಗಳೂ ವಿಕಲ್ಪರೇ ಸರಿಯಾದ ಮನಸ್ಥಿತಿಯವರು ಯಾರೂ ಇಲ್ಲ ಎಂದನಿಸಿತ್ತು. ಆ ಕಾರಣಕ್ಕೆ ಇನ್ನೊಮ್ಮೆ ಓದಿದೆ. ಆಗ ಹೌದಲ್ಲ ಮನುಷ್ಯರು ಹೀಗೂ ಇರಬಹುದಲ್ಲ ಎಂದು ಅನಿಸಿತು. ಇಲ್ಲಿಯ ಹೆಣ್ಣು ಪಾತ್ರಗಳು ಆಧುನಿಕ ಮನೋಭಾವದವರೆಂದು ಅನಿಸಿದರೂ ಅವರಿಗೆ ಏನು ಬೇಕೆಂದು ಅವರಿಗೇ ಗೊತ್ತಿಲ್ಲದೆ ಗಂಡನನ್ನು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾಕ್ಕೆ ಹಾರಿದರೂ ಅವರು ಕೊನೆಗೆ ಮಾಡುವುದು ಅಲ್ಲೇ ಮದುವೆಯಾಗಿ ಸಂಸಾರವಂದಿಗರಾಗುವುದು. ಇದೇ ಆದರೆ ಅವರೇನು ಸಾಧಿಸಿದಂತಾಯಿತು? ಇಬ್ಬರು ಒಂದೇ ರೀತಿಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದುದನ್ನು ನೋಡುವಾಗ ಹೆಂಗಸರೆಂದರೆ ಇಷ್ಟೆನೇ ಎನ್ನುವ ಚೌಕಟ್ಟು ಹಾಕಿ ಬರೆದಿದ್ದಾರೇನೋ ಎಂದು ಆಲೋಚಿಸುವಂತೆ ಮಾಡುತ್ತದೆ.ಲೇಖಕರು ಅವರಿಬ್ಬರನ್ನೂ ಬೇರೆ ರೀತಿಯಲ್ಲಿ ಚಿತ್ರಿಸಬಹುದಿತ್ತು. ಮೂರನೇಯವಳೂ ಅವರಿಗಿಂತ ಭಿನ್ನಳಲ್ಲ. ಆದರೆ ಗಂಡನಿಂದ ತನಗೇನು ಬೇಕು ಎನ್ನುವ ಅರಿವು ಇದ್ದವಳು. ಇಲ್ಲಿಯ ನಾಯಕನೇ ತುಂಬಾ ವೀಕ್ ಕ್ಯಾರೆಕ್ಟರ್ ಅನಿಸುತ್ತದೆ.ಮಹಿಳೆಯರಿಗಿಂತ ವೀಕ್ ಅನಿಸುವಂತೆ ಒಬ್ಬ ಲೇಖಕ ನಾಯಕನನ್ನು ಚಿತ್ರಿಸುವುದು ಬಹಳ ಅಪರೂಪ. ಅದನ್ನು ಲೇಖಕ ಇಲ್ಲಿ ಮಾಡಿದ್ದಾರೆ. ತನ್ನ ಮೊದಲ ಹೆಂಡತಿಯರು ತಮ್ಮ ಆತ್ಮ ಚರಿತ್ರೆ ಬರೆಯುವರೆನ್ನುವಾಗ ಅವನಿಗೆ ಅನಿಸುವ ಕೀಳರಿಮೆ, ತನ್ನ ಬಗ್ಗೆ ಅವರೇನು ಬರೆಯುತ್ತಾರೋ ಎನ್ನುವ ಭಯ ಅವರಿಗಿಂತ ಮೊದಲು ತಾನೇ ಎಲ್ಲವನ್ನೂ ಹೇಳಿ ಬಿಡಬೇಕು ಎನ್ನುವ ತುಡಿತವನ್ನು ಹುಟ್ಟಿಸುತ್ತದೆ. ಹಾಗೇ ಬರೆದು ನಿರಾಳವಾಗಿ ಬಿಡುತ್ತಾನೆ. ಓದುಗರಿಗೆ ಆ ಹೆಂಗಸರು ದಕ್ಕುವುದು ಅವನು ಬರೆದ ಪುಟಗಳಿಂದ. ಇದರಲ್ಲಿ ಕೊನೆಯಲ್ಲಿ ಬರುವ ರಾಜಲಕ್ಷ್ಮಿ ಪಾತ್ರ ಇವರೆಲ್ಲರಿಗಿಂತ ಭಿನ್ನವಾದದ್ದು.ಅವಳೂ ಆತ್ಮ ಚರಿತ್ರೆ ಬರೆದವಳು ಆದರೆ ಅವಳದಲ್ಲ ಗಂಡ ಸತ್ತನಂತರ ಅವನದ್ದು. ಹೀಗೆ ಒಂದೆರಡು ಆತ್ಮಕತೆಗಳು ಕನ್ನಡದಲ್ಲಿ ಬಂದಿವೆ. ಅದರ ನೆನಪು ಇಲ್ಲಿ ಬಂತು. ಆದರೆ ಯಾರೂ ಬೇರೆಯವರ ಆತ್ಮ ಚರಿತ್ರೆ ಬರೆಯುವುದು ಸಾಧ್ಯವಿಲ್ಲ. ಅಲ್ಲಿ ಸಂಪೂರ್ಣ ಸತ್ಯ ಬರುವುದಿಲ್ಲ. ಹಾಗಾಗಿ ರಾಜಲಕ್ಷ್ಮಿಗೂ ಗಂಡನ ಆತ್ಮಚರಿತ್ರೆ ಬರೆದು ಅದು ಪ್ರಕಟವಾದ ನಂತರ ತಾನು ಬರೆಯಬಾರದಿತ್ತು ಎಂದು ಅನಿಸುತ್ತದೆ. ಅವಳು ಕೊನೆಯಲ್ಲಿ ಹೇಳುವ ಯಾರಲ್ಲೂ ಪರಿಪೂರ್ಣತೆ ಹುಡುಕುವುದು ಸರಿಯಲ್ಲ ಎನ್ನುವ ಮಾತನ್ನು ಈ ಕಾದಂಬರಿ ಹೇಳಲು ಹೊರಟಿದೆ ಎಂದನಿಸುವಂತೆ ಮಾಡುತ್ತದೆ. ಅದರಿಂದಾಗಿಯೇ ಇಲ್ಲಿಯ ನಾಯಕ ಅವನ ಆತ್ಮ ಚರಿತ್ರೆಯನ್ನು ಬರೆದ ಮೇಲೆ ನಿರಾಳನಾಗುವುದು ಇರಬಹುದು.
-- ಉಷಾ. ಪಿ. ರೈ