stat Counter



Showing posts with label balaichand mukhyopadhyaya. Show all posts
Showing posts with label balaichand mukhyopadhyaya. Show all posts

Monday, July 9, 2018

ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದ ಬಂಗಾಳಿ ನೀಳ್ಗತೆ -- " ವಾಸನಾ "

ಬಲಾಯಿಚಂದ್ ಮುಖ್ಯೋಪಾಧ್ಯಾಯ { 1899-1979 }  ಠಾಗೋರೋತ್ತರ ಬಂಗಾಳಿ ಸಾಹಿತ್ಯದ ಮುಖ್ಯ ಲೇಖಕರಲ್ಲಿ ಒಬ್ಬರು. ಬನ್ ಫೂಲ್ " ಕಾವ್ಯನಾಮದ ಬಲಾಯಿಚಂದ್ ಅವರು ಬಂಗಾಳಿ ಕಾವ್ಯ , ನಾಟಕ , ಕಾದಂಬರಿ , ಸಣ್ಣಕತೆ ಪ್ರಕಾರಗಳಿಗೆ ಸಮೃದ್ದ ಕೊಡುಗೆ ನೀಡಿದ್ದಾರೆ . ಅವರ 61  ಕಾದಂಬರಿಗಳು , 600 ಸಣ್ಣ ಕತೆಗಳು ಪ್ರಕಟವಾಗಿವೆ .. ಸತ್ಯಚರಣ ಮುಖ್ಯೋಪಾಧ್ಯಾಯ , ಮೃಣಾಲಿನಿದೇವಿ ದಂಪತಿಗಳ ಮಗನಾಗಿ ಬಲಾಯಿಚಂದರು ಹುಟ್ಟಿದ್ದು ಬಿಹಾರದ ಪೂರ್ವೀಯಾ ಜಿಲ್ಲೆಯ ಮೊನಿಹಾರಿಯಲ್ಲಿ{1899}. ಸತ್ಯಚರಣ್ ಬಿಹಾರದ ಪೂರ್ವಿಯಾ ಜಿಲ್ಲಾಸ್ಪತ್ರೆಯಲ್ಲಿ ಡಾಕ್ಟರ್ ಆಗಿದ್ದರು. ಬಲಾಯಿಚಂದರು 1928 ರಲ್ಲಿ  ಕಲ್ಕತ್ತ ಮೆಡಿಕಲ್ ಕಾಲೇಜಿನ ಎಮ್. ಬಿ. ಬಿ. ಎಸ್ ಪದವೀಧರರಾದರು. ಮುನಿರಾಬಾದ್ ನ ಮುನಿಸಿಪಲ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಬಲಾಯಿಚಂದರು ಮುಂದೆ ಭಾಗಲ್ಪುರದಲ್ಲಿ  ಸ್ವಂತ ಕ್ಲಿನಿಕ್ ಆರಂಭಿಸಿದರು .

 ಬಲಾಯಿಚಂದರ ಕಾದಂಬರಿಗಳನ್ನು ಆಧರಿಸಿದ ಎಂಟು ಸಿನಿಮಾಗಳಿವೆ . ಅವುಗಳಲ್ಲಿ " ಭುವನ್ ಶೋಮ್ " { 1960 } , " ಅಗ್ನೀಶ್ವರ " ಮತ್ತು " ಅರ್ಜುನ್ ಪಂಡಿತ್ "  ಪ್ರಸಿದ್ದಿ ಗಳಿಸಿವೆ.   ಮೃಣಾಲ್ ಸೆನ್ ನಿರ್ದೇಸಿದ ’ ಭುವನ್ ಶೋಮ್ "  ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಮಧುಸೂದನ "{1940 -  ಮೈಖೇಲ್ ಮಧುಸೂಧನ ದತ್ತರ ಜೀವನ ಚರಿತ್ರೆ.} , " ವಿದ್ಯಾ ಸಾಗರ "{ 1941  -ಈಶ್ವರಚಂದ್ರ ವಿದ್ಯಾ ಸಾಗರ ಅವರ ಜೀವನ ಚರಿತ್ರೆ } ಗಳನ್ನು ಬರೆದಿರುವ ಬಲಾಯಿಚಂದರು ತನ್ನ ಆತ್ಮಕತೆಗೆ " ಪಶ್ಚಾತ್ತಾಪ " ಎಂಬ ಶೀರ್ಷಿಕೆ ನೀಡಿದ್ದಾರೆ.. 1975 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡಿದ ಬಲಾಯಿಚಂದರ ಸಮಗ್ರ ಕೃತಿಗಳು ಅಂತರ್ಜಾಲದಲ್ಲಿ ಲಭ್ಯ ಇವೆ.
                                                  ೨
   ಎಮ್. ಹರಿದಾಸ ರಾವ್  ಕನ್ನಡದ ಅಲಕ್ಷಿತ ಲೇಖಕರಲ್ಲೊಬ್ಬರು. ಹರಿದಾಸ ರಾವ್ ಅವರು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದ  ಸರ್ವೋದಯ ಸಾಹಿತ್ಯಮಾಲೆಯಲ್ಲಿ ಪಿ. ವಿ. ಆಚಾರ್ಯ { ಪಾ. ವೆಂ. ಆಚಾರ್ಯ} ರ  " ವಾಸನಾ "  { ಬನ್ ಫೂಲ್ ಅವರ ಬಂಗಾಳಿ ಕತೆಯ ಆಧಾರದಿಂದ } 1950 ರಲ್ಲಿ ಪ್ರಕಟವಾಗಿದೆ. .ಪಾ. ವೆಂ . ಆಚಾರ್ಯರು { 1915- 1992 }  ತನ್ನ  35  ನೆಯ ವಯಸ್ಸಿನಲ್ಲಿ ಈ ನೀಳ್ಗತೆಯನ್ನು ಭಾಷಾಂತರಿಸಿದ್ದಾರೆ . ಬಂಗಾಳಿ ಭಾಷೆ ಕಲಿತಿದ್ದ ಪಾ.ವೆಂ ಮೂಲ ಬಂಗಾಳಿಯಿಂದಲೇ ಈ ಕೃತಿಯನ್ನು ಅನುವಾದಿಸಿರಬಹುದು.
     ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳಿಯ ಶರತ್ ಚಂದ್ರ , ಬಂಕಿಮ ಚಂದ್ರ , ಮತ್ತು ರವೀಂದ್ರನಾಥ ಟಾಗೋರ ಅವರ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಪಾ.ವೆಂ .ಆಚಾರ್ಯರು ಬಂಗಾಳಿಯ ಹೊಸ ಲೇಖಕರೊಬ್ಬರನ್ನು - ಬಲಾಯಿಚಂದ ಮುಖ್ಯೋಪಾಧ್ಯಾಯ - ಕನ್ನಡಕ್ಕೆ ಪರಿಚಯಿಸಿದರು .
 ಬಲಾಯಿಚಂದರು ತನ್ನ ಕಥನ ತಂತ್ರ ಮತ್ತು ಪಾತ್ರಗಳ ಅಂತರಂಗ ಶೋಧದದಿಂದ ಖ್ಯಾತರಾದ ಲೇಖಕ . ’ ವಾಸನಾ ’ ನೀಳ್ಗತೆಯಲ್ಲೂ ಒಂದು ವಿನೂತನ ಕಥನ ತಂತ್ರ ಕಾಣಿಸುತ್ತದೆ .’ ವಾಸನಾ ದ ’ ದ ನಿರೂಪಕ ಒಬ್ಬ ಸರಕಾರಿ ಆಸ್ಪತ್ರೆಯ   ಡಾಕ್ಟರ್. ತನ್ನ ಕರ್ತವ್ಯಕ್ಕಾಗಿ  ನೂರಾರು ಹೆಣಗಳ ಮರಣೋತ್ತರ ಪರೀಕ್ಷೆ ಮಾಡಿದ್ದಾನೆ. ನಿದ್ರೆ ಬರದ ಒಂದು ರಾತ್ರಿ ಅವನಿಂದ ಸಿಗಿಸಿಕೊಡ ಹಲವು ಪಾತ್ರಗಳು ಅವನ ಬಳಿ  ಬಂದು ತಮ್ಮ ಕತೆ ವಿವರಿಸುತ್ತವೆ . ಇಲ್ಲಿ ಭಗ್ನ ಪ್ರಣಯ , ದಾಂಪತ್ಯೇತರ ಸಂಬಂಧ , ಬಡತನ , ಹೆಣ್ಣಿನ ಬಣ್ಣವನ್ನು ಕುರಿತ ಪೂರ್ವಗ್ರಹ , ಕೌಟುಂಬಿಕ ಕ್ರೌರ್ಯ , ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಹಲವು ದಾರುಣ ಕತೆಗಳಿವೆ. ವಿದೇಶಿ ಪಸ್ತ್ರಗಳ ಬಹಿಷ್ಕಾರ ಚಳುವಳಿಯಿಂದ ಒಬ್ಬನ ಬಟ್ಟೆ ಅಂಗಡಿ ದಿವಾಳಿಯಾದ ಪ್ರಸ್ತಾಪ - ಇದು ಸ್ವಾತಂತ್ರ್ಯ ಪೂರ್ವದ ಕತೆ ಎಂಬುದನ್ನು ಸೂಚಿಸುತ್ತದೆ . ಪುರುಷ ಪ್ರಧಾನ ಸಮಾಜದ ಗಂಡು  ಹೆಣ್ನಿ ನ ಸಂಕೀರ್ಣ ಸಂಬಂಧಗಳನ್ನು ಈ ನೀಳ್ಗತೆ ಅನಾವರಣ ಗೊಳಿಸುತ್ತದೆ . ಸೇಡು ಹಾಗೂ ಕೇಡಿನ ,’ ಭದ್ರಲೋಕ’ ದ ಅಭದ್ರ ದಾಂಪತ್ಯ ವ್ಯವಸ್ಥೆಯ ವಿವಿಧ ಕರಾಳ ಮುಖಗಳನ್ನು ಈ ನೀಳ್ಗತೆ ಚಿತ್ರಿಸುತ್ತದೆ .
   ಈ ನೀಳ್ಗತೆಯ ಒಬ್ಬಳು , ಹೆಂಗಸರ ಅಸಹಾಯಕ ಸ್ತಿತಿಯನ್ನು ಹೀಗೆ ವಿವರಿಸುತ್ತಾಳೆ --"ನಾನು ಬದುಕಿದ್ದಾಗ ನೋಡಿದ ಮಟ್ಟಿಗೆ   ಗಂಡಸರು ನಮ್ಮನ್ನು ತೆಗೆದುಕೊಂಡು ಬರಿ ಚಿನ್ನಾಟ ಆಡುತ್ತಾರೆ.. ನಾವು ಹೆಂಗಸರು ಫುಟ್ ಬಾಲ್ . ಅವರು ಪಟುಗಲಾದ ಪಂದ್ಯಾಟಗಾರರು . "    ಹದಿಮೂರರ ಹರೆಯದಲ್ಲಿ " ಪತಿದೇವರನ್ನು " ಕಳೆದುಕೊಂದ ಯುವತಿ , ವಿಧವೆಯರರ ಪಾಡನ್ನು ಕುರಿತು  " ನಮ್ಮ ದೇಶದಲ್ಲಿ ಸತೀ ಸಹಗಮನ ಪದ್ದತಿ ಇತ್ತಲ್ಲ ಅದೇ ಸುಖವಿತ್ತು ನೋಡಿರಿ. ಗಂಡನ ಜತೆಗೇ ಹೆಂಡತಿಯೂ ಸುಟ್ಟು ಹೋಗುತ್ತಿದ್ದಳು . ಸರಿ. ಹೀಗೆ ಬೆಂದು ಬೆಂದು ಕೊರಗಿ ಕೊರಗಿ ಸಾಯುವ ಅವಸ್ಥೆ ಯಾರಿಗೆ ಬೇಕಿತ್ತು ? ಈ ದೇಶದ ಮನೆ ಮನೆಯಲ್ಲಿಯೂ ವಿಧವೆಯರು ಬೆಂದು ಬೆಂದು ಸಾಯುತ್ತಿದ್ದಾರೆ. ಬೆಂಕಿಯ ರೂಪ ಮಾತ್ರ ಬೇರೆ- ಅದು ಚಿತಾನಲ , ಇದು ವ್ಯಥಾನಲ " ಹುಚ್ಚಿ ಹೆಂಡತಿಯನ್ನು ಅಟ್ಟದ ಮೇಲೆ ಬಂಧಿಸಿಟ್ಟು , ತನ್ನ ಏಕಮಾತ್ರ ಪುತ್ರನನ್ನು ಮನೆ ಪಾಥದವನಿಗೆ ಒಪ್ಪಿಸಿ , ತನ್ನ ಲಂಪಟಲೀಲೆಗೆ ಹೊರಡುವ ಶ್ರೀಮಂತನ ಚಿತ್ರ ಕಣ್ಣಿಗೆ ಕಟ್ಟುವಂತಿದೆ.
                      ಬಡರೋಗಿಗಳನ್ನು ಅಲಕ್ಷಿಸುವ ಸರಕಾರಿ ಆಸ್ಪತ್ರೆಯ ವರ್ಣನೆಯಲ್ಲಿ , ವೈದ್ಯ ವೃತ್ತಿಯಲ್ಲಿದ್ದ ಲೇಖಕ ಬಲಾಯಿಚಂದರ   ವೃತ್ತಿ ವಿಮರ್ಸೆ ತೀಕ್ಷ್ಣ ವಾಗಿದೆ.’ . ವಾಸನಾದಲ್ಲಿ ’ ದಲ್ಲಿ ಒಂದು ಕಲಾತ್ಮಕ  ಸಿನಿಮಾದ ಪಠಯ ನಿಚ್ಚಳವಾಗಿ ಕಾಣಿಸುತ್ತದೆ..’ ವಾಸನಾ ’ ಶಬ್ದಕ್ಕಿರುವ ಹಿಂದಿನ ಜನ್ಮದ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ , ಕಲ್ಪನೆ , ಬಯಕೆ , ಸುಗಂಧ , ದುರ್ಗಂಧ , ಜಾಡು - ಈ ಎಲ್ಲ ಅರ್ಥಗಳನ್ನೂ ಈ ಕಾದಂಬರಿ  ಧ್ವನಿಸುತ್ತದೆ. ಪಾ. ವೆಂ. ಆಚಾರ್ಯರ ಭಾಷಾಂತರ ಸ್ವತಂತ್ರ ಕೃತಿಯಂತೆ ಓದಿಸಿ ಕೊಂಡು ಹೋಗುತ್ತದೆ. ಮೂಲ ಕೃತಿ ಓದಲು ನನಗೆ ಬಂಗಾಳಿ ಭಾಷೆ ತಿಳಿದಿಲ್ಲ .
                                                             ೩
     ಪಾ. ವೆಂ ಆಚಾರ್ಯರು ಕನ್ನಡಕ್ಕೆ ತಂದಿರುವ ’ ವಾಸನಾ  ದ ವಸ್ತು ಕನ್ನಡದ ಎರಡು ಕೃತಿಗಳನ್ನು ನೆನಪಿಗೆ ತರುತ್ತದೆ.. ಆಸ್ಪತ್ರೆಗಳ ದುಸ್ಥಿತಿಯ ಚಿತ್ರಣ ನೀಡುವ " ಶವದ ಮನೆ " ಚದುರಂಗರ  ಪ್ರಸಿದ್ದ ಕತೆಗಳಲ್ಲಿ ಒಂದು.’ ಸಾವಿನ ದಶಾವತಾರ{ 2017- ಕೆ. ಸತ್ಯನಾರಾಯಣ }  ಕಾದಂಬರಿಯ ನಿರೂಪಕ ಶವ ಸಂಸ್ಕಾರ ನಿರ್ವಹಣೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಇದೊಂದು ಹೊಸ ವಸ್ತು ಇರುವ,  ಕಾಡುವ ಕಾದಂಬರಿ
            ಈ ಮುನ್ನುಡಿ ಬರಿಯುವ ಅವಕಾಶ ನೀಡಿದ ಪ್ರೊ/ ರಾಥಾ ಕೃಷ್ಣ ಆಚಾರ್ಯರಿಗೆ ಅಭಿವಂದನೆಗಳು .

                                     ಮುರಳೀಧರ ಉಪಾಧ್ಯ ಹಿರಿಯಡಕ
                                        26- 3-2018