ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, November 23, 2010
Monday, November 22, 2010
Sunday, November 21, 2010
Kargallu Subbanna Bhat
ಮಾಸದ ನೆನಪು: ಕರ್ಗಲ್ಲು ಸುಬ್ಬಣ್ಣ ಭಟ್
ನಾ. ಕಾರಂತ ಪೆರಾಜೆ
ತೆಂಕುತಿಟ್ಟು ಯಕ್ಷಗಾನವು ಕೆಲವು ಖ್ಯಾತರನ್ನು ಸೃಷ್ಟಿಸಿದೆ. ಪ್ರತಿಭಾವಂತರನ್ನು ತೆಕ್ಕೆಯೊಳಗೆ ಸೇರಿಸಿದೆ.
ಯಕ್ಷಗಾನದ ಸ್ತ್ರೀಭೂಮಿಕೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಮಿಂಚಿ ಚಿರಸ್ಥಾನವನ್ನು ಪಡೆದ ಸುಬ್ಬಣ್ಣ ಭಟ್ಟರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಜೀವನ, ರಂಗಜೀವನ ಒಂದು ಆದರ್ಶ.
ಅವರ ಪಾತ್ರಗಳು ಯಕ್ಷಗಾನ ರಂಗದ ಜೀವಂತ ಶಿಲ್ಪಗಳು. ಕೆತ್ತಿ-ಮೆತ್ತಿ ಹದಗೊಂಡವುಗಳು, ಮೋದೆಲ್ಗಳು.
ಸುಬ್ಬಣ್ಣ ಭಟ್ಟರು ಯಕ್ಷಗಾನ ಕಲಾವಿದನಾಗಿ, ಶಿಕ್ಷಕನಾಗಿ ಸದ್ದಿಲ್ಲದೆ ದುಡಿದವರು.
ಪುತ್ತೂರು ತಾಲೂಕಿನ ಕುಳ ಗ್ರಾಮದ ಕರ್ಗಲ್ಲು ವಾಸಸ್ಥಳ. ಮೂಲತ: ಇವರ ಹಿರಿಯರು ವಿಟ್ಲದ ಅರಮನೆಗೆ ಆಮಂತ್ರಿಸಲ್ಪಟ್ಟವರು.
ಸುಬ್ಬಣ್ಣ ಭಟ್ಟರ ತಂದೆ ಈಶ್ವರ ಭಟ್, ಕಲಾಪ್ರೇಮಿ. ತಾಯಿ ಪರಮೇಶ್ವರಿ ಅಮ್ಮ.
ಪ್ರಾಥಮಿಕ ತನಕ ವಿದ್ಯಾಭ್ಯಾಸ. ಆರ್ಥಿಕ ಅನನುಕೂಲ. ನೋಡಿ, ಕೇಳಿ, ತಿಳಿದು ಕಲಿತದ್ದೇ ಹೆಚ್ಚು.
ಯಕ್ಷಗಾನ ವೇಷಧಾರಿಯಾಗಿ, ಅದರಲ್ಲೇ ವ್ಯವಸಾಯ ಮಾಡಬೇಕೆಂಬ ಹಂಬಲ ಸುಬ್ಬಣ್ಣ ಭಟ್ಟರನ್ನು ಕಲಾವಿದರನ್ನಾಗಿ ರೂಪಿಸಿತು. ಅದಕ್ಕಾಗಿಯೇ ತನ್ನ ಕೇಶರಾಶಿಯನ್ನು ಬೆಳೆಸಿದ್ದರು.
ಯಕ್ಷಗಾನ ಕೂಟಗಳಿಗಾಗ ಬಹಳ ಬೇಡಿಕೆ. ಇವರು ಹಿರಿಯ ಅರ್ಥಧಾರಿಗಳು. ಪರಿಸರವೂ ಅನುಕೂಲವಿತ್ತು. ಪಾಲಿಗೆ ಬಂದ ಚಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು.
ಅರ್ಥ ಹೇಳುವ ಚಪಲ ಹೆಚ್ಚಾಯಿತು. ಅದಕ್ಕಾಗಿ ರಾಮಾಯಣ, ಮಹಾಭಾರತ, ಭಾಗವತಗಳ ಅಧ್ಯಯನ. ಯಕ್ಷಗಾನ ಪ್ರಸಂಗಗಳ ಅಭ್ಯಾಸ. ಪ್ರಸಂಗಗಳ ಪ್ರತಿ ತೆಗೆಯುವ ಹವ್ಯಾಸವಿದ್ದ ತನ್ನಣ್ಣನ ಕಾರ್ಯದಲ್ಲಿ ಭಾಗಿ.
ಅರ್ಥಧಾರಿಯಾಗಿರುವುದಕ್ಕೆ ಹಿರಿಯರ ವಿರೋಧವಿರಲಿಲ್ಲ. ಆದರೆ ವೇಷಧಾರಿಯಾಗುವ ಆಶೆಗೆ ಕಡಿವಾಣ ಬಿತ್ತು.
ಕಾರಣ, ಕಲಾವಿದರ ಸಂಕಷ್ಟಮಯ ಜೀವನದ ಬಗ್ಗೆ ಭಟ್ಟರ ತಂದೆಯವರಿಗಾಗ ಸ್ಪಷ್ಟ ಅರಿವಿತ್ತು.
ಅದೊಂದು ದಿವಸ. ಯಕ್ಷಗಾನ ನಾಟಕದ ಪ್ರದರ್ಶನವೊಂದರ ಸುದ್ದಿ. ಕಿವಿಯರಳಿತು, ಭಾಗವಹಿಸಿದರು. ಅಂದಿನ ಪ್ರಸಂಗ 'ಕಂಸವಧೆ'. ಮನದಾಸೆ ಬಿಚ್ಚಿದರು. 'ಚಾಣೂರ' ಪಾತ್ರ ಪಾಲಿಗೆ ಬಂತು. ಇದು ಭಟ್ಟರ ಪ್ರಥಮ ರಂಗಪ್ರವೇಶ.
1935ನೇ ಇಸವಿ. ಕೋಳ್ಯೂರು ಶ್ರೀ ಶಂಕರನಾರಾಯಣ ಯಕ್ಷಗಾನ ಮಂಡಳಿಯ ಆಟವೊಂದು ಪುತ್ತೂರಿನಲ್ಲಿತ್ತು. ಸುಬ್ಬಣ್ಣ ಭಟ್ಟರು ಪ್ರೇಕ್ಷಕರಾಗಿ ಬಂದಿದ್ದರು. ಆಟ ನೋಡಿದರು. ತಡೆಯಲಾಗಲಿಲ್ಲ. ವೇಷಧಾರಿಯಾಗಲೇಬೇಕೆನ್ನುವ ಛಲ ಗಟ್ಟಿಯಾಯಿತು.
ಪರಿಚಿತ ಕೋಳ್ಯೂರು ನಾರಾಯಣ ಭಟ್ಟರು ಮೇಳದಲ್ಲಿದ್ದರು. ಮೊರೆಹೊಕ್ಕರು. ಯಜಮಾನರಲ್ಲಿ ಅರುಹಿದರು. ಮೇಳಕ್ಕೆ ಸೇರಿದರು. ಸ್ತ್ರೀವೇಷ ಪ್ರಾಪ್ತಿ.
ಮೇಳದಲ್ಲಿ ಕೋಳ್ಯೂರು ನಾರಾಯಣ ಭಟ್ಟರು, ಸೋಕೆ ಕೃಷ್ಣ ಭಟ್, ಕುಂಜಾರು ರಾಮಕೃಷ್ಣಯ್ಯ, ರಾಮಚಂದ್ರ ಬಲ್ಯಾಯ......... ಮೊದಲಾದ ಒಡನಾಟ ಭಟ್ಟರನ್ನು ಮತ್ತಷ್ಟು ಬೆಳೆಸಿತು. ಒಂದೆರಡು ವರುಷ ತಿರುಗಾಟ.
1940ರಿಂದ ಕೊಕ್ಕಡ ಮೇಳದಲ್ಲಿ ವ್ಯವಸಾಯ. ಪ್ರಧಾನ ಸ್ತ್ರೀ ವೇಷಧಾರಿಯ ಪಟ್ಟ. ಮುಂದೆ ಕಟೀಲು, ಇರಾ, ಮುಲ್ಕಿ ಮೇಳಗಳಲ್ಲಿ ದುಡಿತ.
ಕಟೀಲು ಮೇಳದ ತಿರುಗಾಟ ಭಟ್ಟರ ಪ್ರತಿಭೆಗೊಂದು ಸವಾಲಾಯಿತು. ಯಶ ಪಡೆದರು.
ಕುದ್ರೆಕೂಡ್ಲು ರಾಮ ಭಟ್ ಮತ್ತು ಬಲಿಪರ ಸಾಹಚರ್ಯ, ವಿರಾಮ ವೇಳೆಯಲ್ಲಿನ ಶಿಕ್ಷಣ, ಪಾತ್ರಗಳ ಬಗ್ಗೆ ವಿಮರ್ಶೆ, ಲೋಪದೋಷಗಳನ್ನು ಸರಿಪಡಿಸುವಿಕೆಯಿಂದಾಗಿ, ಭೌದ್ಧಿಕ ಸಾಮರ್ಥ್ಯ, ರಂಗ
ಸಾಮರ್ಥ್ಯಗಳು ಇಮ್ಮಡಿಯಾದುವು.
ಸುಬ್ಬಣ್ಣ ಭಟ್ಟರು ಇಷ್ಟಕ್ಕೇ ತೃಪ್ತರಾಗಲಿಲ್ಲ. ಕುರಿಯ ವಿಠಲ ಶಾಸ್ತ್ರಿಗಳ ನೇತೃತ್ವದ ಧರ್ಮಸ್ಥಳ ಮೇಳದಿಂದ ಮತ್ತಷ್ಟು ತಿರುಗಾಟ. ಶಾಸ್ತ್ರಿಗಳ ನಾಯಕನ ಪಾತ್ರಕ್ಕೆ ಭಟ್ಟರದು ನಾಯಕಿಯ ಪಾತ್ರ. ಖ್ಯಾತಿ ಪಡೆಯಿತು.
ಅವರಿಬ್ಬರ ಬ್ರಹ್ಮ-ಶಾರದೆ, ಕೃಷ್ಣ-ಸತ್ಯಭಾಮಾ, ಈಶ್ವರ-ದಾಕ್ಷಾಯಿಣಿ, ದಶರಥ-ಕೈಕೇಯಿ ಪಾತ್ರಗಳು ಎಟಕದ ಎತ್ತರಕ್ಕೇರಿವೆ. ಶ್ರೀ ದೇವಿ, ಶಕುಂತಲೆ, ದ್ರೌಪದಿ ಪಾತ್ರಗಳು ಜನಮನದಲ್ಲಿ ಮಾಸಿಲ್ಲ.
ಧಾನ್ಯಮಾಲಿನಿ, ಮಾಯಾ ಶೂರ್ಪನಖಿ, ಮಾಯಾ ಅಜಮುಖಿ, ಮಾಯಾ ಪೂತನಿ ಪಾತ್ರಗಳು, ಪ್ರಸಂಗದ ಆಶಯದಂತೆ ನಿರ್ವಹಿಸಸ್ಪಡುತ್ತಿದ್ದವು.
ಭಟ್ಟರ ಸ್ವರಗಾಂಭೀರ್ಯ ಸುಸ್ಪಷ್ಟ, ಶೃತಿಬದ್ಧ, ಅದರಲ್ಲಿ ಇಂಪಿದೆ, ಹೆಣ್ತನವಿದೆ. ಸ್ತ್ರೀವೇಷಕ್ಕೆ ಹೇಳಿ ಮಾಡಿಸಿದಂತೆ.
ಕಾಲ ಸರಿದಂತೆ ದೇಹಸ್ಥಿತಿಯೂ ಬದಲಾಯಿತು. ಸ್ತ್ರೀ ವೇಷಕ್ಕೆ ಒಪ್ಪುವ ಕಾಯ ಮಂಜಾಗಲು ಶುರುವಾಯಿತು. ದೇಹ ಮಾಗುವುದಕ್ಕೆ ಆರಂಭಿಸಿತು. ಅನಿವಾರ್ಯವಾಗಿ ಪುರುಷ ಪಾತ್ರಕ್ಕೆ ವಾಲಬೇಕಾಯಿತು.
ಅಲ್ಲೂ ಸೋತಿಲ್ಲ. ದಕ್ಷ, ಅತಿಕಾಯ, ಕಾರ್ತವೀರ್ಯ, ಜಲಂಧರ, ರಕ್ತಬೀಜ, ಕರ್ಣ, ದುಶ್ಯಂತ ಪಾತ್ರಗಳು ಪಾತ್ರಗಳಾಗಿಯೇ ಮಿಂಚಿದವು.
ಜೋಡಾಟಗಳಲ್ಲೂ ಶ್ರೀ ದೇವಿ, ಪ್ರಮೀಳೆ, ಶಶಿಪ್ರಭೆ ಪಾತ್ರಗಳನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ.
1960ರಲ್ಲಿ ನಿವೃತ್ತಿ. ಪ್ರವೃತ್ತಿಗೆ ತುಕ್ಕು ಹಿಡಿಯಬಾರದೆಂದು ಯಕ್ಷಗಾನ ತರಗತಿಗಳ ಆರಂಭ. ಗುರುಕುಲ ಯಶಸ್ವಿಯಾಯಿತು. ಕಲಾವಿದರು ತಯಾರಾದರು. ಆದರ್ಶ ಗುರುವಾದರು.
ಅನೇಕ ಸಂಘಸಂಸ್ಥೆಗಳು ಭಟ್ಟರನ್ನು ಸನ್ಮಾಸಿವೆ. ಹೊರರಾಜ್ಯಗಳಲ್ಲೂ ಓಡಾಡಿದ್ದಾರೆ.
ತಂದೆಯ ದಾರಿಯಲ್ಲಿ ಮಗ ಕರ್ಗಲ್ಲು ವಿಶ್ವೇಶ್ವರಭಟ್ಟರು ಸಾಗುತ್ತಿದ್ದಾರೆ. 'ತೆಂಕು-ಬಡಗು ಯಕ್ಷಗಾನದೊಂದಿಗೆ ಭರತನಾಟ್ಯ, ಕಥಕ್ ಇತ್ಯಾದಿಗಳನ್ನು ಕಲಿತ ವಿಶ್ವಣ್ಣ ಯಕ್ಷಗಾನ ತರಗತಿ, ಕಮ್ಮಟಗಳಿಗೆಲ್ಲಾ ಬೇಕೇಬೇಕು.
ಸುಬ್ಬಣ್ಣ ಭಟ್ಟರ ಕಲಾ ಪ್ರತಿಭೆಯು ಅವರ ಮಗನಲ್ಲೂ ಮುಂದುವರಿಯುತ್ತಿರುವುದು ಸಮಾಧಾನ-ಸಂತಸ ತರುವಂತಹದು.
ಕರ್ಗಲ್ಲು ಸುಬ್ಬಣ್ಣ ಭಟ್ಟರು ಮತ್ತು ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು - ಮೇಳದಲ್ಲಿ ಬಹಳ ಆಪ್ತರು. ಅವರೆನ್ನುವಂತೆ-
ಸುಬ್ಬಣ್ಣ ಭಟ್ಟರ ಪಾತ್ರ ತುಂಬಾ ಅಚ್ಚುಕಟ್ಟು. ಉಡುಗೆ ತೊಡುಗೆಯಲ್ಲಿ ಬಹಳ ನಯ ನಾಜೂಕು. ವೇಷಕ್ಕಾಗಿ ಸೀರೆ ಉಟ್ಟ ಬಳಿಕ ಸೀರಯ ನೆರಿಗೆ ಎಲ್ಲಿ ಹಾಳಾಗುತ್ತದೋ ಎಂಬ ಭಯದಿಂದ ಪಾತ್ರ ಮುಗಿಯುವ ತನಕವೂ ಕುಳಿತುಕೊಳ್ಳರು. ಮೇಳದ ತಿರುಗಾಟದ ಆರಂಭದಲ್ಲಿ ಹೇಗಿತ್ತೋ, ಪತ್ತನಾಜೆ ತನಕ ಅವರುಡುವ ಸೀರೆ ಹೊಸತಿನಂತಿರುತ್ತಿತ್ತು. ಉತ್ತರ ಕನ್ನಡದಲ್ಲಿ ಕರ್ಗಲ್ಲು ಅವರ ದೇವಿಯ ಪಾತ್ರಕ್ಕೆ ಬಹಳ ಪೂಜ್ಯತೆಯಿತ್ತು. 'ದೇವಿ ಸುಬ್ಬಣ್ಣ ಭಟ್' ಎಂದು ಕೆಲವರು ಕರೆಯುತ್ತಿದ್ದರು.
ವ್ಯಕ್ತಿಶಃ ಭಟ್ಟರು ಸರಳ. ಆಗೊಮ್ಮೆ, ಈಗೊಮ್ಮೆ ಬೀಡಿ ಸೇದುವುದು ಬಿಟ್ಟರೆ ಉಳಿದಂತೆ ಯಾವುದೇ ದುಶ್ಚಟಗಳಿಲ್ಲದ ಅಪರೂಪದ ಕಲಾವಿದ. ಅವರ ಜೀವನವೆ ಒಂದು ಆದರ್ಶ. 'ಇದ್ದರೆ ಸುಬ್ಬಣ್ಣ ಭಟ್ಟರ ಹಾಂಗಿರೆಕು' ಎಂದು ಹಿರಿಯರು ಹೇಳುತ್ತಿದ್ದರು.
ಕ್ಷಣಕ್ಷಣಕ್ಕೂ ಬದಲಾಗುವ ಮನಸ್ಥಿತಿಯಲ್ಲ, ಅದರಲ್ಲಿ ಖಚಿತತೆಯಿರುತ್ತಿತ್ತು. ನಿರ್ಧಾರವಿರುತ್ತಿತ್ತು.
ವಿನಯ, ಶಿಸ್ತುಬದ್ಧತೆ ಸೌಜನ್ಯಕ್ಕೆ ಹೆಸರಾದ ಕೋಡಪದವು ಶ್ರೀ ವೀರಾಂಜನೇಯ ಯಕ್ಷಗಾನ ಕಲಾ ಸಂಘವನ್ನು ಕಟ್ಟಿ ಅದರ
ನಿರ್ದೇಶಕರಾಗಿ ದುಡಿದಿದ್ದರು.
ಮೊನ್ನೆ 27-12-1998ರಂದು ಸುಬ್ಬಣ್ಣ ಭಟ್ಟರು ನಮ್ಮನ್ನೆಲ್ಲಾ ಅಗಲಿ ಬಹುದೂರ ಸಾಗಿದ್ದಾರೆ. ಅವರ ಒಡನಾಟ, ಕಲಾಬದುಕು, ಪಾತ್ರಗಳು - ಇನ್ನು ಮುಂದೆ ನೆನಪು ಮಾತ್ರ. ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕುರುಣಿಸಲಿ - ಎಂಬುದು ಹಾರೈಕೆ.
(ಹೊಸ ದಿಗಂತ, 1-1-1999)
ಟಿಪ್ಪಣಿ
ಕರ್ಗಲ್ಲು ಸುಬ್ಬಣ್ಣ ಭಟ್ಟರು, ನನ್ನ ಪತ್ನಿಯ (ಶಾರದಾ) ಸೋದರ ಮಾವ. 1979ರಲ್ಲಿ ನಾವು ದಂಪತಿಗಳು ಅವರ ಮನೆಗೆ ಹೋಗಿ ಆಶೀರ್ವಾದ ಪಡೆದದ್ದು ನೆನಪಾಗುತ್ತದೆ. ಸುಬ್ಬಣ್ಣ ಭಟ್ಟರ ಮಗ ಕರ್ಗಲ್ಲು ವಿಶ್ವೇಶ್ವರ ಭಟ್, ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕುರಿತು ಅಧಿಕಾರವಾಣಿಯಿಂದ ಮಾತನಾಡಬಲ್ಲ 'ಗುರು'ವಾಗಿ ಬೆಳೆದಿರುವುದು ಅಭಿಮಾನದ ಸಂಗತಿ.
ಮುರಳೀಧರ ಉಪಾಧ್ಯ ಹಿರಿಯಡಕ
Keerikkadu Vishnu Bhat
ಯಕ್ಷಗಾನ ಧ್ರುವತಾರೆ
ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರು
ಒಂದು ನೆನಪು
- ತಿಲಕನಾಥ ಮಂಜೇಶ್ವರ
ಜೀಪು ಪಯಸ್ವಿನಿ ನದಿಯನ್ನು ಎಡಕ್ಕಿರಿಸಿ ಆಕಾಶಕ್ಕೆ ಮೂತಿಯನ್ನಿಟ್ಟುಕೊಂಡು ಏದುಸಿರು ಬಿಡುತ್ತಾ ಗುಡ್ಡ ಹತ್ತುತ್ತಿತ್ತು. ಎಡ-ಬಲಗಳಲ್ಲಿ ಆಕಾಶವನ್ನು ಚುಂಬಿಸಲೆತ್ನಿಸುತ್ತಿರುವ, ಅವುಗಳನ್ನು ಸುತ್ತುವರಿದ ತೊಡೆ ಗಾತ್ರದ, ಹೆಬ್ಬಾವನ್ನು ನೆನಪಿಸುವಂಥ ಬಳ್ಳಿಗಳು ವಾತಾವರಣಕ್ಕೆ ಒಂದು ಗಂಭೀರದ ಆವರಣವನ್ನು ಸೃಷ್ಟಿಸಿದ್ದವು. ನಾವು ಹೋಗುತ್ತಿದ್ದುದು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಆರಂಭಿಸಿದ್ದ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವಜ್ರ ಮಹೋತ್ಸವ ಮತ್ತು ವಿಷ್ಣು ಭಟ್ ಸ್ಮಾರಕ ಕಟ್ಟಡ ಪ್ರವೇಶೋತ್ಸವ ಸಮಾರಂಭಕ್ಕೆ. ಜೀಪು ಕ್ರಮಿಸುತ್ತಿದ್ದ ದಾರಿಯನ್ನು ಗಮನಿಸಿದರೆ ಈ ಸಮಾರಂಭಕ್ಕೆ ಎಷ್ಟು ಜನ ಸೇರಬಹುದೆನ್ನುವ ಸಂಶಯ ಮೊಳೆತದ್ದಲ್ಲದೆ ಇಂಥ ಕಗ್ಗಾಡಿನಲ್ಲಿ ಸಮಾರಂಭ ನಡೆಸುವ ಧೈರ್ಯ ಈ ಸಂಘದವರಿಗೆ ಬಂದದ್ದು ಹೇಗೆ ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡಿದ್ದು ನಿಜ. ಆದರೆ ಅಂದಿನ ಗೋಷ್ಠಿಗಳೆಲ್ಲ ಮುಗಿದು ಸಂಜೆ ಏಳು-ಎಂಟು ಗಂಟೆಯ ಹೊತ್ತಿಗೆ ಅಲ್ಲಿ ಸೇರಿದ ಸಾವಿರಕ್ಕೆ ಕಡಿಮೆ ಇಲ್ಲದ ಜನಸಂದಣಿಯನ್ನು ವೀಕ್ಷಿಸಿ ಮೂಗಿನ ಮೇಲೆ ಬೆರಳಿಡುವ ಸರದಿ ನಮ್ಮದು!
ಹೌದು, ಈಗಲ್ಲ; 60 ವರ್ಷಗಳ ಹಿಂದೆಯೇ ನಾಡೆಲ್ಲ ಸೋಜಿಗಪಡುವಂಥ ದೇಲಂಪಾಡಿಯ ಬನಾರಿಯಂಥ ಕುಗ್ರಾಮದಲ್ಲಿ ಅದೂ ಬೆಟ್ಟದ ಮೇಲೆ ತೆಂಕುತಿಟ್ಟಿನ ಯಕ್ಷಗಾನ ತರಬೇತಿ ಶಾಲೆಯೊಂದನ್ನು ತೆರೆದವರು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು. ಅದು ಇಲ್ಲಿಯ ವರೆಗೂ ನಡೆದುಕೊಂಡು ಬಂದು ಈಗ ಅರುವತ್ತರ ಸಂಭ್ರಮ ಕಂಡದ್ದು ಸಾಂಸ್ಕೃತಿಕ ಜಗತ್ತಿನ ಪವಾಡಗಳಲ್ಲಿ ಒಂದು.
ಅಲ್ಲಿಯ ವರೆಗೆ ಯಕ್ಷಗಾನವೆಂದರೆ, ಅಶ್ಲೀಲ ಸಂಭಾಷಣೆಗಳಿಂದಲೇ ಮೆರೆಯುತ್ತಿದ್ದ, ಅನಕ್ಷರಸ್ಥರ ಸೊತ್ತಾಗಿದ್ದ ಆ ಕಲೆಯನ್ನು ಒಂದು ಶಿಸ್ತಿಗೆ ಒಳಪಡಿಸಿ, ಕಲಾವಿದರು ಬೀಡಿ, ಸಿಗರೇಟು, ಮದ್ಯಪಾನ, ಜೂಜುಗಳಿಂದ ದೂರವಿರುವಂತೆ ಪ್ರೇರೇಪಿಸಿ ಅವರಲ್ಲೂ ಕಲೆಯ ಬಗ್ಗೆ ಭಕ್ತಿ, ಗೌರವಗಳನ್ನು ಮೂಡಿಸಿದವರು ವಿಷ್ಣು ಭಟ್ಟರು. ಕಲಾವಿದರು ತಮ್ಮ ಅಂಕೆಯನ್ನು ಮೀರಿದಾಗ ಗಾಂಧೀಜಿಯಂತೆ ತಾನು ಉಪವಾಸ ಕುಳಿತು ಕಲಾವಿದರ ಮನ:ಪರಿವರ್ತನೆಗೆ ಎಳಸಿದವರು ಇವರು. ಆರ್ಥಿಕವಾಗಿ
ಹಿಂದುಳಿದ ಶಿಷ್ಯರಿಂದ ಶುಲ್ಕವನ್ನು ಅಪೇಕ್ಷಿಸದೆ, ಅವರಿಗೇ ನೆರವಾದರು ವಿಷ್ಣು ಭಟ್ಟರು.
ಅಸಂಖ್ಯ ಶಿಷ್ಯ ಗಡಣವನ್ನು ತಯಾರುಮಾಡಿ ತಾವು ನೆಲೆಸಿದ ಮತ್ತು ಸುತ್ತಮುತ್ತಲ ಊರುಗಳಲ್ಲೂ ಯಕ್ಷ ಸಂಸ್ಕೃತಿಯನ್ನು ಬಿತ್ತಿ ಜನರ ಜೀವನ ಮೌಲ್ಯವನ್ನು ಮತ್ತು ನೈತಿಕ, ಸಾಮಾಜಿಕ ಮಟ್ಟವನ್ನು ಎತ್ತರಿಸಿದ ವಿಷ್ಣು ಭಟ್ಟರದು ಉನ್ನತ ಧ್ಯೇಯಾದರ್ಶದ ಬದುಕು.
ಸ್ವ ಅಧ್ಯಯನದ ಹಿರಿಮೆ
ಯಕ್ಷಗಾನ ಅತಿರಥ-ಮಹಾರಥರಲ್ಲಿ ಪ್ರಮುಖರಾದ ಶೇಣಿ ಗೋಪಾಲಕೃಷ್ಣ ಭಟ್ಟರೇ - 'ಯಕ್ಷಗಾನದಲ್ಲಿ ತನ್ನ ಗುರು ಕೀರಿಕ್ಕಾಡು ವಿಷ್ಣು ಭಟ್ಟರು' ಎಂದು ಹೇಳಿದ್ದಾರೆ.
ಕೀರಿಕ್ಕಾಡು ಮಾಸ್ತರ್ ಜನಿಸಿದ್ದು, ಶಿಕ್ಷಣವನ್ನು ಪಡೆದದ್ದು, ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಯಕ್ಷಗಾನ ಗುರುವಾಗಿ ಮೆರೆದದ್ದು ಪರೆಡಾಲ ಗ್ರಾಮದ ಕೀರಿಕ್ಕಾಡುವಿನಲ್ಲಿ. 1912ರಲ್ಲಿ ಕೀರಿಕ್ಕಾಡು ಕೇಶವ ಭಟ್ಟ-ಲಕ್ಷ್ಮೀ ಅಮ್ಮನವರ ಹಿರಿಯ ಮಗನಾಗಿ ಜನಿಸಿದ ವಿಷ್ಣು ಭಟ್ಟರ ಪಾರಂಪರಿಕ ವಿದ್ಯೆ ಆರನೆಯ ತರಗತಿಗೆ ಮುಕ್ತಾಯವಾಗುತ್ತದೆ. ಉಳಿದಂತೆಲ್ಲ ಅವರದು ಸ್ವ ಅಧ್ಯಯನ. ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯ ಅವರು ಯಕ್ಷಗಾನ ಗುರು.
ವಿಷ್ಣು ಭಟ್ಟರ ಗರಡಿಯಲ್ಲಿ ತಯಾರಾದ ಶಿಷ್ಯರೆಲ್ಲ ತೆಂಕುತಿಟ್ಟಿನ ಯಕ್ಷಗಾನದಲ್ಲಿ ಹೆಸರು ಮಾಡಿರುವುದನ್ನು ಕಾಣಬಹುದು. ವಿವಿಧ ವ್ಯವಸಾಯಿ ಮೇಳಗಳಲ್ಲಿ ಉನ್ನತ ಸ್ಥಾನಕ್ಕೇರಿ ಕೀರ್ತಿಸಂಪಾದಿಸಿದವರಲ್ಲಿ ಕೇದಗಡಿ ಗುಡ್ಡಪ್ಪ ಗೌಡ, ಅಣ್ಣಯ್ಯ ಭಂಡಾರಿ, ಕಂಪ ನಾರಾಯಣ ರೈ, ಗುತ್ತು ನಾರಾಯಣ ರೈ, ಯು.ವಿ. ಗೋವಿಂದಯ್ಯ, ಲಕ್ಷ್ಮೀನಾರಾಯಣ ಕಲ್ಲೂರಾಯ, ಡಿ. ಮಾಲಿಂಗ ಪಾಟಾಳಿ ಮುಂತಾದವರು ಮುಖ್ಯರು. ತನ್ನ ಕೈಲಾಗದ ಸಂದರ್ಭದಲ್ಲಿ ಹಿರಿಯ ಭಾಗವತ ಜತ್ತಪ್ಪ ರೈಗಳ ಮೂಲಕ ಹಾಡುಗಾರಿಕೆ, ಮೃದಂಗ ವಾದನ, ತನ್ನ ಶಿಷ್ಯ ಕಡಾರು ನಾರಾಯಣ ಭಟ್ಟರಿಂದಲೂ ಶಿಕ್ಷಣ ಕೊಡಿಸಿದ್ದಾರೆ.
ವಿಷ್ಣು ಭಟ್ಟರ ಆಸಕ್ತಿ ಯಕ್ಷಗಾನ ಮಾತ್ರವೇ ಆಗಿರಲಿಲ್ಲ. ಒಳ್ಳೆಯ ಕೃಷಿಕ, ಅಧ್ಯಾಪಕ, ಸಾಹಿತಿ, ಯಕ್ಷಗಾನ ಪ್ರಸಂಗಕರ್ತರೂ ಆಗಿದ್ದರು.
ನೂರಕ್ಕೂ ಹೆಚ್ಚು ಪ್ರಸಂಗಗಳನ್ನು ಬರೆದಿದ್ದಾರೆ. 'ಪತ್ತೇದಾರ ರಮಾನಂದ'ವೇ ಮುಂತಾದ ಐದು ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದಾರೆ. 'ವಿಷ್ಣುಶರಣನ ವಚನಗಳು' ಮತ್ತು 'ಯಕ್ಷರಸ ಜೀವನ' ಮಹತ್ತ್ವಪೂರ್ಣವಾದ ಕೃತಿಗಳು. ನಗು ಸೂಸುವ ಅಗಲ ಮುಖ, ತಿದ್ದಿ-ತೀಡಿದ ಮೀಸೆ, ಗಡ್ಡ, ತೀಕ್ಷ್ಣವಾದ ಆದರೆ ಪ್ರೀತಿ ಸೂಸುವ ಕಣ್ಣುಗಳು, ಕಪ್ಪು ಫ್ರೇಮಿನ ಕನ್ನಡಕ, ಹಿಂದಕ್ಕೆ ಬಾಚಿದ, ಕತ್ತಿನ ತನಕ ಇಳಿಬಿಟ್ಟ ಕೂದಲು, ಶುಭ್ರವಾದ ಧೋತಿ, ಅಂಗಿ, ಅದರ ಮೇಲೊಂದು ವಾಸ್ಕೋಟು, ಇವೆಲ್ಲ ಅವರಿಗೆ ಕ್ರಾಂತಿಕಾರಿ ಚೌಕಟ್ಟು ಒದಗಿಸಿದಂತೆ ಯಕ್ಷಗಾನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದವರು.
ಎಲ್ಲವೂ ಶ್ರೇಷ್ಠ
ಕೀರಿಕ್ಕಾಡು ಮಾಸ್ತರರ ಅಗ್ಗಳಿಕೆಯನ್ನು ಮಂಗಳೂರಿನ ವಕೀಲರಾದ ಎಂ.ಎಸ್. ಭಟ್ ಎದುರಿಸುವುದು ಹೀಗೆ - 'ಯಕ್ಷಗಾನ ಅರ್ಥಗಾರಿಕೆ, ತಾಳಮದ್ದಲೆಯಲ್ಲಿ ಪಾತ್ರ ನಿರ್ವಹಣೆ, ನಾಟ್ಯ, ತಾಳ, ಕುಣಿತ ಯಾವುದರಲ್ಲಿ ಸ್ಪಷ್ಟತೆ, ನಿಖರತೆಗೆ ಎಂಥ ಪಂಡಿತರನ್ನೂ ಮೆಚ್ಚಿಸುವಂಥ ಮೇರು ಕುಶಲತೆ, ನೈಪುಣ್ಯ ಮಾಸ್ತರರಲ್ಲಿತ್ತು. ಅವರ ಪಾಂಡಿತ್ಯ ಅಷ್ಟು ಅಗಾಧ, ಅವರ ಮಾತು, ವೇಷ, ನೃತ್ಯ, ಹಾಸ್ಯ ಪ್ರತಿಯೊಂದೂ ಅಷ್ಟು ಶ್ರೇಷ್ಠ.'
ಪ್ರಶಸ್ತಿ, ಪುರಸ್ಕಾರಗಳ ಮಾತು ಕೇಳಿ ಗೊತ್ತಿಲ್ಲದ ದಿನಗಳಲ್ಲಿ ಜನ ಮೆಚ್ಚುಗೆಯೇ ತಮಗೆ ಸಂದ ಪ್ರತಿಫಲ ಎಂದು ಬಾಳಿದ, ರಂಗಸ್ಥಳವನ್ನು ಆಳಿದ, ಜನಮನದಲ್ಲಿ ನೆಲೆನಿಂತ ಈ ಮಹಾನುಭಾವರ ಹೆಸರಲ್ಲಿ ಅವರೇ ತಮ್ಮ ಕೊನೆಯ ದಿನಗಳಲ್ಲಿ ಆಸೆಪಟ್ಟಂತೆ ಒಂದು ಕಲಾಮಂದಿರ ನಿರ್ಮಾಣಗೊಂಡಿದೆ.
ಸುಮಾರು 600-700 ಜನರು ಕೂಡಬಹುದಾದ ಹೊರ ಗೋಡೆ ಕಿಟಿಕಿಗಳ ಬಂಧನವಿಲ್ಲದ ತೆರೆದ ಮಂದಿರವಾಗಿ ತಲೆ ಎತ್ತಿನಿಂತಿದೆ. ಮಾಸ್ತರ್ ಅವರ ಮಕ್ಕಳಾದ ವನಮಾಲಾ ಕೇಶವ ಭಟ್ಟ, ಡಾ. ರಮಾನಂದ ಬನಾರಿ, ವಿಶ್ವವಿನೋದ ಬನಾರಿ ಅವರ ಕರ್ತೃತ್ವಶಕ್ತಿ, ಊರವರ ಸಹಕಾರದಿಂದ ಸರಕಾರಿ ಸಹಾಯಕ್ಕೆ ಕೈಚಾಚದೆ ನಿರ್ಮಾಣಗೊಂಡ ಕಲಾಮಂದಿರ ಇದು.
ಎರಡು ವರ್ಷಗಳ ಪರ್ಯಂತ ನಡೆದ ಸಂಘದ ವಜ್ರ ಮಹೋತ್ಸವ ಸಮಾರಂಭ, ಯಕ್ಷಗಾನದ ಅಗ್ರಗಣ್ಯರ ಭಾಗವಹಿಸುವಿಕೆಯೊಂದಿಗೆ ಯಕ್ಷಗಾನದ ಬಗ್ಗೆ ವಿವಿಧ ಗೋಷ್ಠಿಗಳು, ಪ್ರಾತ್ಯಕ್ಷಿಕೆಗಳು, ಸನ್ಮಾನ ಸಮಾರಂಭ, ಮಾಸ್ತರ ಹೆಸರಿನಲ್ಲಿ ಸ್ಥಾಪಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭಗಳೊಂದಿಗೆ ಕೊನೆ ಕಂಡಿತು.
(ತರಂಗ, 1 ಜೂನ್, 2006)
ಟಿಪ್ಪಣಿ -
ನನ್ನ ಪತ್ನಿ (ಶಾರದಾ)ಯ ತೌರುಮನೆ ಕೋಟಿಗದ್ದೆ, ಕೀರಿಕ್ಕಾಡು ವಿಷ್ಣು ಭಟ್ಟರ ದೇಲಂಪಾಡಿ ಮನೆಯ ಸಮೀಪದಲ್ಲಿದೆ. ನನ್ನ ಪತ್ನಿಯ ತಾಯಿ-ತಂದೆ (ಕೃಷ್ಣಯ್ಯ-ದೇವಕಿ) ದಂಪತಿಗಳು ಕೌಟುಂಬಿಕ ಸಮಸ್ಯೆಗಳಲ್ಲಿ ಕಂಗಾಲಾಗಿದ್ದಾಗ ಅವರಿಗೆ ನೈತಿಕ ಬೆಂಬಲ ನೀಡಿದವರು ಕೀರಿಕ್ಕಾಡು ವಿಷ್ಣು ಭಟ್ಟರು.
1980ರ ದಶಕದಲ್ಲಿ ನಾನು ಹಲವು ಬಾರಿ ಅವರನ್ನು ಭೇಟಿಯಾಗಿದ್ದೆ. 'ಪರ್ವ'ದಲ್ಲಿರುವ ಪುರಾಣಭಂಜನೆ ಅವರಿಗೆ ಇಷ್ಟವಾಗಿರಲಿಲ್ಲ. ಕೀರಿಕ್ಕಾಡು ಅವರ ಆತ್ಮಕತೆ, ಹಲವು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿವೆ.
- ಮುರಳೀಧರ ಉಪಾಧ್ಯ ಹಿರಿಯಡಕ
Subscribe to:
Posts (Atom)


