stat Counter



Showing posts with label ಎಮ್ ಆರ್. ಕಮಲ. Show all posts
Showing posts with label ಎಮ್ ಆರ್. ಕಮಲ. Show all posts

Friday, September 28, 2018

ಎಮ್. ಆರ್. ಕಮಲ --- ನಮ್ಮದಲ್ಲದ ದನಿಯಲ್ಲಿ ಮಾತನಾಡುವ ಸಂಕಟ

ನಮ್ಮದಲ್ಲದ ದನಿಯೊಂದರಲ್ಲಿ ಮಾತನಾಡುವ ಸಂಕಟ
ಎಷ್ಟು ಜನರಿಗೆ ಇಂಥ ಅನುಭವವಾಗಿದೆಯೋ ತಿಳಿಯದು. ಯಾವುದೋ ಸಂದರ್ಭಕ್ಕೆ ಅನುಸಾರವಾಗಿ ನಮ್ಮದಲ್ಲದ ದನಿಯಲ್ಲಿ, ನಮ್ಮದಲ್ಲದ ಮಾತುಗಳನ್ನು ಆಡತೊಡಗುತ್ತೇವೆ. ನೋಡುವವರಿಗೆ ಅದು ಅತ್ಯಂತ ಸಹಜವೇನೋ ಎನ್ನುವಂತಿರುತ್ತದೆ. ಆದರೆ ಸೂಕ್ಷ್ಮ ವ್ಯಕ್ತಿಗೆ ಇಂಥ ಟೊಳ್ಳು ಮಾತುಗಳನ್ನು ಆಡುತ್ತಿದ್ದೇನೆ ಎಂದು ಅನ್ನಿಸಿದ ತಕ್ಷಣ ವಿಚಿತ್ರ ಅವಮಾನ, ಸಂಕಟಗಳು ಶುರುವಾಗುತ್ತವೆ. ಅನಿವಾರ್ಯವಲ್ಲದಿದ್ದರೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಹೋಗಲು, ವೇದಿಕೆಯಲ್ಲಿ ಮಾತನಾಡಲು ನಾನು ಹೆದರುತ್ತೇನೆ. ಆದರೆ ನನ್ನ ಮಾತುಗಳನ್ನು ಕೇಳುವವರಿಗೆ ನನ್ನೊಳಗಿನ ಸಂಕಟ ಅರ್ಥವಾಗುವುದಿಲ್ಲ. ಯಾವುದೇ ಬಗೆಯ ಅಪ್ರಾಮಾಣಿಕತೆ ವಿಚಿತ್ರ ಕಸಿವಿಸಿ ಹುಟ್ಟಿಸಿಬಿಡುತ್ತದೆ.
ಯಾರದ್ದೋ ಸಾವಿನ ಮನೆಗೆ ಹೋಗುತ್ತೇವೆ. ಸುಮ್ಮನೆ ನಿಂತರೆ ಏನು ತಪ್ಪು ತಿಳಿಯುತ್ತಾರೋ ಅನ್ನಿಸತೊಡಗುತ್ತದೆ. `ಏನಾಯ್ತು?' ಎಂದು ಒಂದು ಪ್ರಶ್ನೆಯನ್ನು ಗೊತ್ತಿದ್ದರೂ ಕೇಳುತ್ತೇವೆ. ಯಾರೋ ಏನೋ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಮಾತುಗಳು ತಪ್ಪು, ಯಾವುದು ಸರಿ ಎಂದು ಅರ್ಥವಾಗುವುದಿಲ್ಲ. `ಸದ್ಯ ನರಳದೆ ಸತ್ತರಲ್ಲ', `ವಯಸ್ಸಾಗಿತ್ತು ಪಾಪ, ಆದರೂ ಮನೆಯವರಿಗೆ ದುಃಖ ಇದ್ದೇ ಇರುತ್ತಲ್ಲ' ಹೀಗೆ ಏನೋ ಒಂದು ಮಾತೊಗೆದು ಹಗುರಾಗಲು ನೋಡಿ ಮತ್ತಷ್ಟು ಭಾರವಾಗಿಬಿಡುತ್ತೇವೆ. ಆದಷ್ಟು ಬೇಗ ಅಲ್ಲಿಂದ ಹೊರಟುಬಿಡಬೇಕು ಅನ್ನಿಸಲು ಶುರುವಾಗುತ್ತದೆ. ಸತ್ತಿರುವ ವ್ಯಕ್ತಿ `ಹೆಸರಾಂತ' ಆಗಿದ್ದರೆ ಅಲ್ಲಿಯೇ ಟಿವಿ ಯವರು ಮೈಕ್ ತಂದು ಮುಂದೆ ಹಿಡಿಯುತ್ತಾರೆ. ಹೀಗೆ ಮಾತನಾಡುವವರನ್ನು ಅನೇಕ ಬಾರಿ ದೂರದರ್ಶನದಲ್ಲಿ ನೋಡುವಾಗ ಇವರು ತಮ್ಮ ಅಂತರಂಗದ ಮಾತು ಆಡುತ್ತಿದ್ದಾರೆಯೇ, ಸತ್ತಿರುವವರು ಇವರಿಗೆ ಅಷ್ಟು ಪ್ರಭಾವ ಬೀರಿದ್ದರೆ ಎನ್ನುವ ಅನುಮಾನ ಬರುವಷ್ಟು ಟೊಳ್ಳಾಗಿರುತ್ತದೆ. ಎದೆಯೊಳಗಿಂದ ಬಾರದ ಯಾವ ಮಾತುಗಳನ್ನಾಡುವುದು ಅತ್ಯಂತ ಕಷ್ಟಕರ ಎನ್ನುವುದು ನನ್ನ ಅನುಭವ. ಹೀಗಾಗಿಯೇ ನನ್ನ ಗೆಳೆಯರ ಸಂಖ್ಯೆ ಬಹು ಕಡಿಮೆ. ಯಾರ ಜೊತೆ ಅತ್ಯಂತ ಸಹಜವಾಗಿ ಇರಬಹುದು ಅನ್ನಿಸುವುದೋ ಅವರೊಂದಿಗೆ ಮಾತ್ರ ಇರುವುದಕ್ಕೆ, ಮಾತನಾಡುವುದಕ್ಕೆ ಇಷ್ಟ.
ಈ ಮೊಗಹೊತ್ತಿಗೆಯಲ್ಲಿ ಅನೇಕರು ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಹಾಗೆ ನೀಡಬೇಕಾದರೆ ಒಂದೋ ಆ ಘಟನೆ ನಮ್ಮ ಅನುಭವಕ್ಕೆ ಹತ್ತಿರವಾಗಿರಬೇಕು ಅಥವಾ ಅದನ್ನು ತೀವ್ರವಾಗಿ ಗ್ರಹಿಸುವಷ್ಟು ಸೂಕ್ಷ್ಮ ಸಂವೇದನೆ ಇರಬೇಕು. ಅವರೆಡೂ ಇಲ್ಲದಿದ್ದಾಗಲು ನೀವು ಒತ್ತಾಯದಿಂದ, ಒತ್ತಡದಿಂದ ಪ್ರತಿಕ್ರಿಯಿಸಲು ಆರಂಭಿಸಿದರೆ ಮಾತಿನ ಅರ್ಥಹೀನತೆ ಬಹುಬೇಗ ಅರಿವಿಗೆ ಬಂದು ನಗೆಪಾಟಲಾಗಿಬಿಡುತ್ತೇವೆ. ಎಲ್ಲರು ಒಂದೇ ರೀತಿಯ ಮಾತುಗಳನ್ನು ಆಡುವಾಗ, ಆ ಮಾತುಗಳು ನಿಮ್ಮದಲ್ಲ ಎನ್ನಿಸಿದಾಗ ಕೂಡ ಮಾತನಾಡಿದರೆ ಇಂಥ ಸಂಕಷ್ಟ ಎದುರಾಗುತ್ತದೆ. ಸಹಜತೆ, ಪ್ರಾಮಾಣಿಕತೆಗಳಿಂದ ಮಾತ್ರ ಇದನ್ನು ಮೀರಲು ಸಾಧ್ಯವೇನೋ. ಪ್ರೋತ್ಸಾಹಕ್ಕೆ ಆಡುವ ಮೆಚ್ಚುಗೆಯ ಮಾತುಗಳನ್ನು ನಾನು ಟೊಳ್ಳು ಎಂದು ಸಂಪೂರ್ಣವಾಗಿ ನಿರಾಕರಿಸಲಾರೆ. ಯಾರೋ ವಿದ್ಯಾರ್ಥಿ ಕವಿತೆಯನ್ನು ಬರೆಯಲು ಆರಂಭಿಸಿದರೆ ಅವರು ಮುಂದುವರಿಸಲಿ ಎನ್ನುವ ಕಾರಣಕ್ಕೆ ಶಿಕ್ಷಕ ಮನೋಭಾವದವರಾದವರು ಬೆನ್ನು ತಟ್ಟುತ್ತಾರೆ. ಅಲ್ಲಿರುವ ಉದ್ದೇಶ ದಾರಿ ತಪ್ಪಿಸುವುದಾಗಿರುವುದಿಲ್ಲ, ಅಗಾಧವಾದ ಪ್ರೀತಿ ವ್ಯಕ್ತವಾಗುವ ಬಗೆ ಅದು.
ಗದರುವುದು ಪ್ರೀತಿಯ ಇನ್ನೊಂದು ಬಗೆ. ನಾನು ಎಂ. ಎ. ಓದುವಾಗ ಡಿ. ಆರ್. ನಾಗರಾಜ್ ಬಹಳ ಉತ್ಸಾಹದಿಂದ ಜಗತ್ತಿನ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ಸೂಕ್ಷ್ಮವಾಗಿ ಗ್ರಹಿಸುವ ವಿದ್ಯಾರ್ಥಿಗಳೆಂದರೆ ಅವರಿಗೆ ಪಂಚಪ್ರಾಣ. ಒಮ್ಮೆ ಚೆಕಾಫ್ ನ `ಚೆರ್ರಿ ಆರ್ಚರ್ಡ್' ಪಾಠ ಮಾಡುತ್ತಿದ್ದರು. ಪಠ್ಯ ಪುಸ್ತಕವಿಲ್ಲದೆ ಬರುವ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಅಸಾಧ್ಯ ಸಿಟ್ಟು. ನಾನು ಹಾಗೆ ಒಂದು ದಿನವೂ ಪಠ್ಯ ಪುಸ್ತಕವನ್ನು ಬಿಟ್ಟು ಹೋದವಳಲ್ಲ. ಆ ದಿನ ನನ್ನ ಗೆಳತಿ ಮರೆತು ಬಂದಿದ್ದಳು. ಹೀಗಾಗಿ ಅವಳು ನೋಡಿಕೊಳ್ಳಲಿ ಎಂದು ಉದಾರತೆಯಿಂದ ಅವಳ ಮುಂದೆ ಪುಸ್ತಕವಿಟ್ಟು ಪಾಠ ಕೇಳುತ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದೊಡ್ಡ ದನಿ ಕೇಳಿಸಿತು. `ಕಮಲ, ವಾಟ್ ನಾನ್ಸೆನ್ಸ್? ವೈ ಡಿಡ್ ಯು ನಾಟ್ ಬ್ರಿನ್ಗ್ ದಿ ಟೆಕ್ಸ್ಟ್ ಬುಕ್?' ಎಂದು ಮೇಷ್ಟ್ರು ಕಿರುಚುತ್ತಿದ್ದರು. `ಸರ್, ದಿಸ್ ಈಸ್ ಮೈ ಟೆಕ್ಸ್ಟ್ ಬುಕ್' ಎಂದು ಹೇಳುವಾಗ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಪುಸ್ತಕ ತರದಿದ್ದುದಕ್ಕೆ ಗೆಳತಿಗೆ ಏನು ಹೇಳಲಿಲ್ಲ, ಬೈಯಲಿಲ್ಲ. ನನ್ನ ಮೇಲೆ ಹೀಗೆ ಕಿರುಚಿದ್ದೇಕೆ ಎಂದು ಬೇಸರವಾಗಿತ್ತು. ತರಗತಿ ಮುಗಿದ ಮೇಲೆ ಮೂಲೆಯಲ್ಲಿ ಕಾಯುತ್ತ ನಿಂತಿದ್ದ ಮೇಷ್ಟ್ರು, `ಕಮಲ ಐ ಯಾಮ್ ಸಾರಿ, ರಿಯಲಿ ಸಾರಿ' ಎಂದರು. `ಅವಳನ್ನೇಕೆ ಬೈಯಲಿಲ್ಲ ಸರ್' ಎಂದು ಸಣ್ಣ ಕೋಪದಿಂದ ಕೇಳಿದೆ. ಆಗ ಅವರು ಹೇಳಿದ ಉತ್ತರ ನನಗಿನ್ನೂ ಚೆನ್ನಾಗಿ ನೆನಪಿದೆ. `ವೇಸ್ಟ್ ಆಫ್ ಟೈಮ್! ನಮ್ಮ ಮಾತುಗಳು ಅರ್ಥ ಆಗದವರ ಬಳಿ ಮಾತಾಡುವುದು ಚೀರಾಟ ಅಷ್ಟೇ' .
ಆದರೆ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮಾತುಗಳು ಚೀರಾಟದಂತೆ, ಆಕ್ರಂದನದಂತೆ ಕೇಳತೊಡಗುತ್ತದೆ. ನನ್ನ ವೃತ್ತಿಯ ಕೊನೆಯ ದಿನಗಳಲ್ಲಿ ತರಗತಿಗಳಲ್ಲಿ ಅನೇಕ ಬಾರಿ ನಾನು ಆಡುವ ಮಾತುಗಳು `ಸ್ವಗತ'ದಂತೆ ತೋರಿ, ನಿಲ್ಲಿಸಿಬಿಟ್ಟು ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸುತ್ತಿದ್ದೆ. ಮಾತು ಕೇಳದ, ಮಾತು ಅರ್ಥಮಾಡಿಕೊಳ್ಳದವರ ನಡುವೆ ನಾವು ಆಡುವ ಮಾತುಗಳಿಗೆ ಅರ್ಥವಿದೆಯೇ ಎಂದು ಯೋಚಿಸಿದ್ದೇನೆ. ಅದನ್ನು ಇನ್ನೊಂದು ಬಗೆಯಲ್ಲೂ ಹೇಳಬಹುದು. ಬಹುಶಃ ನಮ್ಮ ಮಾತುಗಳೇ ಅಪ್ರಸ್ತುತ, ವಿಚಿತ್ರ ಎಂದು ಯುವಕರಿಗೆ ಕಾಣುತ್ತಿರಬಹುದು. ಅದೆಲ್ಲವನ್ನು ಅರ್ಥಮಾಡಿಕೊಂಡೂ ಮತ್ತೆ ಮಾತಾಡುತ್ತೇವಲ್ಲ! ಆಗ ವಿಚಿತ್ರ ಅವಮಾನದಿಂದ ಕುದ್ದು ಹೋಗಿಬಿಡುತ್ತೇವೆ. ಎಷ್ಟೋ ಜನರು ತಮ್ಮನ್ನು ಕಡೆಗಣಿಸಿದರೆಂದು ಭಾವಿಸುತ್ತ, ಮತ್ತಷ್ಟು ಜೋರಾಗಿ ತಮ್ಮ ಇರವನ್ನು ಸ್ಥಾಪಿಸಲು, ಹಠ ತೊಟ್ಟು ಮಾತನಾಡಲು ಶುರು ಮಾಡುತ್ತಾರೆ. ಅದು ಟಿವಿ ನಿರೂಪಕರ ಕಿರುಚಾಟದಂತೆ ಕೇಳಿಸುತ್ತದೆ. ಮನೆಯ ಹಿರಿಯರು ಹೇಳುವ ವಿಚಾರಗಳನ್ನು ಮುದುಕರ `ಗೊಣಗಾಟ' ಎಂದು ಕರೆಯುವುದರಲ್ಲಿಯೇ ಅರ್ಥಗಳು ಅಡಗಿವೆ.
ಸೂಕ್ಷ್ಮ ವ್ಯಕ್ತಿಗೆ `ಕೋಡಂಗಿ'ಯಂತೆ ವೇದಿಕೆಯಲ್ಲಿ ಕುಣಿಯುವುದು, ಮಾತನಾಡುವುದು ಕಷ್ಟ. ಅದು ಸಹಜವಾದ ಅವನ ವ್ಯಕ್ತಿತ್ವವೇ ಆಗಿದ್ದರೆ, ವೃತ್ತಿ ಆಗಿದ್ದರೆ ಸರಿ. ಅದೇನು ಅಲ್ಲದೆ ಬರಿಯ ಖ್ಯಾತಿಗಾಗಿ, ಜನಪ್ರೀತಿಗಾಗಿ ನಾವು ಮಾಡುವ ಸರ್ಕಸ್ ಗಳು ಎದೆಯಲ್ಲಿ ಗಾಢ ವಿಷಾದವನ್ನಲ್ಲದೆ ಬೇರೇನನ್ನು ಹುಟ್ಟಿಸಲಾರದು. ನಮಗಾಗದ್ದನ್ನು ಆದಷ್ಟು `ಆಗುವುದಿಲ್ಲ' ಎಂದು ಗಟ್ಟಿ ದನಿಯಲ್ಲಿ ಹೇಳುವುದನ್ನು, ನಿರಾಕರಿಸುವುದನ್ನು ಮಾಡದಿದ್ದರೆ ಜೀವನವೆಲ್ಲ ದಾಕ್ಷಿಣ್ಯದಲ್ಲಿ ಕಳೆದು, ಎದೆಯೊಳಗೊಂದು ತೀವ್ರ ನೋವು ಉಳಿಸಿಕೊಂಡುಬಿಡುತ್ತೇವೆ. `ಅಕ್ಕಿ ಮೇಲಾಸೆ, ನೆಂಟರ ಮೇಲೆ ಪ್ರೀತಿ' ಎಂಬ ದ್ವಂದ್ವದಿಂದ ಹೊರಬರದೆ ಮುಕ್ತಿಯಿಲ್ಲ. ಆದರೆ ಅದಕ್ಕೊಂದು ದಿಟ್ಟತನ ಬೇಕು. ನಿಂದೆಯನ್ನು ಸಹಿಸಿಕೊಳ್ಳುವ ಶಕ್ತಿ ಬೇಕು. .

ಎಮ್. ಆರ್. ಕಮಲ --Deactivate ಎಂಬ ಕ್ರೌರ್ಯ



Deactivate ' ಎಂಬ ಕ್ರೌರ್ಯ!
ಈ ಮೂರುವರ್ಷಗಳಿಂದ, ಅದರಲ್ಲೂ ಮೊಗಹೊತ್ತಿಗೆಯನ್ನು (ಫೇಸ್ಬುಕ್) ಹೆಚ್ಚು ಬಳಸತೊಡಗಿದ ಮೇಲೆ ಒಂದು ವಿಷಯ ನನ್ನ ತಲೆಯನ್ನು ಕೊರೆಯುತ್ತಿದೆ. ಈ ಮೊಗಹೊತ್ತಿಗೆಯಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುವ (ಕಲೆ, ಸಂಗೀತ, ಕವನ, ಕಸೂತಿ, ಹೊಸ ಬಗೆಯ ಉಡುಪುಗಳು, ಮಾತು ಇತ್ಯಾದಿ ಇತ್ಯಾದಿ) ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು ಏಕೆ? ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ `deactivate ' ಮಾಡಿಕೊಳ್ಳುವುದು. ಈ ಪದವೇ ಎಷ್ಟು ಕ್ರೂರವಾಗಿದೆ ನೋಡಿ! ಚಟುವಟಿಕೆಯಿಂದಿದ್ದ ಹೆಣ್ಣುಮಕ್ಕಳು ಇಲ್ಲಿ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವುದು! ಮೊಗಹೊತ್ತಿಗೆಯ ಆಚೆಗೂ ಇದೆಲ್ಲವನ್ನು ಅವರು ಮಾಡುತ್ತಿರಬಹುದು. ಆದರೆ ತಮ್ಮ ಕಲೆಯನ್ನು ವಿಶಾಲ ನೆಲೆಯಲ್ಲಿ ಪ್ರಕಟಿಸಿ, ಬರುವ ಸಣ್ಣ ಪುಟ್ಟ ಪ್ರೋತ್ಸಾಹದ ನುಡಿಗಳಿಂದ ಬದುಕನ್ನು ಆತ್ಮವಿಶ್ವಾಸದಿಂದ ನಡೆಸುವುದಕ್ಕೆ ಸಾಧನವಾಗಿದ್ದ ಮೊಗಹೊತ್ತಿಗೆಯೇ ಅವರನ್ನು ಇಲ್ಲಿಂದ ಆಚೆಗಟ್ಟುತ್ತಿರುವುದು ನನ್ನನ್ನು ಚಿಂತಾಕ್ರಾಂತಳನ್ನಾಗಿಸುತ್ತದೆ. ಗಂಡಸೊಬ್ಬ ಇಲ್ಲಿಂದ ಹೋದರೆ ಅದು ಪುಸ್ತಕ ಬರೆಯುವುದಕ್ಕೋ, ಪ್ರವಾಸ ಹೋಗುವುದಕ್ಕೋ ಅಥವಾ ಮನೆಯಲ್ಲಿ ಯಾರಿಗೋ ತೊಂದರೆಯಾಗಿದೆ ಎನ್ನುವ ಕಾರಣಕ್ಕೋ ಇರುತ್ತದೆ. ಆದರೆ ಹೆಣ್ಣೊಬ್ಬಳು ಇಲ್ಲಿಂದ ಕಣ್ಮರೆಯಾದರೆ ಕಾರಣಗಳು ಅಷ್ಟು ಸುಲಭದ್ದಾಗಿರುವುದಿಲ್ಲ. ಬರೆಯುವ ಹುಡುಗಿ ಸ್ವಲ್ಪ ನಿರ್ಭಿಡೆಯವಳಾಗಿದ್ದರೆ ಅವಳ ಮೇಲೆ ಗುಂಪು ದಾಳಿ ನಡೆಸುತ್ತಾರೆ. ಅಶ್ಲೀಲವಾಗಿ ಬರೆದು ಖುಷಿ ಪಡುತ್ತಾರೆ. ಅವಳ ಹೆಸರನ್ನು ಯಾರಿಗೋ ಕಟ್ಟಿ ಮಾನವನ್ನು `ಹರಾಜು' (?) ಮಾಡಿ ಬರೆಯದಂತೆ ಮಾಡಿಬಿಡುತ್ತೇವೆ ಎಂದು ಮಾನಗೇಡಿಗಳು ಭ್ರಮಿಸುತ್ತಾರೆ. ಇದೆಲ್ಲವನ್ನು ಮಾಡುವವರು ಯಾರೂ ಅವಿದ್ಯಾವಂತರಲ್ಲ. ಆ ಹೆಣ್ಣುಮಗಳು ತಮ್ಮ ಗುಂಪಿನವಳೋ ಅಲ್ಲವೋ ಎನ್ನುವುದರ ಮೇಲೆ ಈ ದ್ವೇಷಾಸೂಯೆಗಳೆಲ್ಲ ನಿರ್ಧಾರವಾಗುತ್ತದೆ. ತಾವು ಹೇಳಿದ ವಿಚಾರಗಳನ್ನು ಒಪ್ಪುವುದಿಲ್ಲ ಎನ್ನುವ ಪುರುಷಾಹಂಕಾರ ಮೆರೆಯತೊಡಗುತ್ತದೆ.
ಒಮ್ಮೆ ಕಾಲೇಜಿನ ಸಹೋದ್ಯೋಗಿಯೊಬ್ಬಳನ್ನು, `ಯಾಕಮ್ಮ ಫೇಸ್ ಬುಕ್ ನಲ್ಲಿ ಬರೆಯುವುದನ್ನು ನಿಲ್ಲಿಸಿದೆ?' ಎಂದು ಕೇಳಿದೆ. ಅವಳು ಹೇಳಿದ ಉತ್ತರ ಕೇಳಿ ದಂಗಾದೆ. ವಯೋ ಸಹಜವಾಗಿ ಯಾವುದೋ ಆಧುನಿಕ ಉಡುಪು ತೊಟ್ಟು, ಕರಿಮಣಿ ಸರ ಅದಕ್ಕೆ ಹೊಂದುವುದಿಲ್ಲವೆಂದು ತೆಗೆದು ಪರ್ಸ್ ನಲ್ಲಿ ಇಟ್ಟು ಫೋಟೋ ತೆಗೆಸಿಕೊಂಡಿದ್ದಳಂತೆ. ಅದನ್ನು ಫೇಸ್ಬುಕ್ ನಲ್ಲಿ ನೋಡಿದ ಅತ್ತೆ, ಎಲ್ಲಿಂದಲೋ ಫೋನ್ ಮಾಡಿ ಬಾಯಿಗೆ ಬಂದ ಹಾಗೆ ಬೈದರಂತೆ. ನಿನ್ನ ತವರು ಮನೆಯಲ್ಲಿ ಹೀಗಿರಬಹುದು. ನಮ್ಮ ಮನೆಯಲ್ಲಿ ಇದೆಲ್ಲ ನಡೆಯುವುದಿಲ್ಲ ಎಂದರಂತೆ. ನನಗೆ ಮೈಯೆಲ್ಲಾ ಉರಿದುಹೋಯಿತು. `ಮೇಡಂ, ನೀವು ಕರಿಮಣಿ ಸರ ಹಾಕಿಕೊಂಡಿರುತ್ತೀರಲ್ಲ, ಅದಕ್ಕೆ ಇದನ್ನು ಹೇಳಲು ಸಂಕೋಚವಾಯಿತು' ಎಂದಳು. `ಅಯ್ಯೋ, ನನಗೆ ಅಲಂಕಾರ ಇಷ್ಟ ಎಂದು ಹಾಕಿಕೊಳ್ಳುತ್ತೇನೆ ಅಷ್ಟೇ, ನನ್ನನ್ನು ಮನೆಗೆ ಬಂದು ನೋಡು, ಬೇಡವಾದಾಗ ಎಲ್ಲವನ್ನು ತೆಗೆದಿಟ್ಟು ಆರಾಮಾಗಿರುತ್ತೇನೆ' ಎಂದೆ. ಅವಳು ಬಹಳ ಒಳ್ಳೆಯ ಹುಡುಗಿ, ಅತ್ತೆ ಹೀಗೆಲ್ಲ ಗಮನಿಸುತ್ತಾರೆ ಎಂದು ತಿಳಿದ ತಕ್ಷಣ ಮೊಗಹೊತ್ತಿಗೆಯಿಂದ ಕಣ್ಮರೆಯಾಗಿದ್ದಳು. ಹೆಣ್ಣನ್ನು ಸೆರೆಹಿಡಿದು ಬಂಧಿಸುವುದಕ್ಕೆ ಇವೆಲ್ಲ ವಿಷಯಗಳೇ ಎಂದು ಅಚ್ಚರಿಯಾಗುತ್ತದೆ. ಇನ್ನೊಬ್ಬಳು ಸಹೋದ್ಯೋಗಿ ಚಂದವಾಗಿ ಹಾಡುತ್ತಿದ್ದಳು. ಆಗಾಗ್ಗೆ ತಾನು ಹಾಡಿದ ಹಾಡನ್ನು ಅಪ್ಲೋಡ್ ಮಾಡುತ್ತಿದ್ದಳು. `ಈ ವಯಸ್ಸಿನಲ್ಲಿ ನಿನ್ನ ಅವತಾರ ಏನಮ್ಮ?' ಎಂದು ಮಗ ಬೈದು ನಿಲ್ಲಿಸಿದನಂತೆ. ಹೀಗೆ ಗಂಡ ಬೈದ, ಮಗ ಬೈದ, ಗೆಳೆಯ ಬೈದ, ಅತ್ತೆ ಬೈದರು, ಮಾವ ಬೈದರು ಎಂದೆಲ್ಲ ಸಹಜವಾಗಿ ವ್ಯಕ್ತವಾಗುವ ಚೈತನ್ಯವನ್ನು ಕಟ್ಟಿ ಹಿಡಿಯುವ ವ್ಯಕ್ತಿಗಳ ಬಗ್ಗೆ ಯೋಚಿಸುವಾಗ ಇನ್ನಷ್ಟು ಹಿಂದಕ್ಕೆ ಹೋಗುತ್ತಿರುವ ಸಮಾಜದ ಬಗ್ಗೆ ತೀವ್ರ ಆತಂಕವಾಗುತ್ತದೆ.
`ಕರಿ'ಮಣಿಯನ್ನು ಶ್ರೇಷ್ಠ ಎಂದು ವಾದಿಸುವವರೇ `ಕಪ್ಪು ಬಣ್ಣ' ವನ್ನು ಹೀಗಳೆಯುತ್ತಾರೆ. ನಾನು ಮೊದಲಿನಿಂದಲೂ `ಐ ಲೈನರ್' ನಲ್ಲಿ ಚಂದದ ಕುಂಕುಮದ ವಿನ್ಯಾಸಗಳನ್ನು ಬರೆದುಕೊಳ್ಳುತ್ತಿದ್ದೆ. ಆಗೆಲ್ಲ ಅನೇಕ ಗೆಳತಿಯರು ಕಪ್ಪು ಕುಂಕುಮವನ್ನು ಇಟ್ಟುಕೊಳ್ಳುವ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಸ್ವಲ್ಪ ದಿನಗಳಲ್ಲಿ ಅವರು ನನ್ನನ್ನು ಅನುಸರಿಸಿದರು ಎಂದು ಬೇರೆ ಹೇಳಬೇಕಿಲ್ಲ. ಅಮ್ಮ ಕಪ್ಪು ಬಣ್ಣವನ್ನು ತುಂಬಾ ಪ್ರೀತಿಸುತ್ತಿದ್ದಳು. ಅಂಗಡಿಗೆ ಕರೆದುಕೊಂಡು ಹೋದಾಗೆಲ್ಲ ಕಪ್ಪು ಬಣ್ಣದ ಸೀರೆಯನ್ನು ನೋಡಿ ನಿಟ್ಟುಸಿರುಬಿಡುತ್ತಿದ್ದಳು. `ತಗೊಳ್ಳಮ್ಮ' ಎಂದರೆ `ಗಂಡನಿಗೆ ಶ್ರೇಯಸ್ಸಲ್ಲ ಅಂತ ನೆರೆಯವರುಆಡಿಕೊಳ್ಳುತ್ತಾರೆ ಕಣೆ' ಎನ್ನುತ್ತಿದ್ದಳು. ಅಂತೂ ಅಮ್ಮ ಊರು ಬಿಟ್ಟ ಮೇಲೆ ಕಪ್ಪು ಬಣ್ಣದ ಮೈಸೂರ್ ಸಿಲ್ಕ್ ಸೀರೆಯೊಂದನ್ನು ಬೈದು ಅಕ್ಕಂದಿರು ಅಂಗಡಿಗೆ ಹೋಗಿ ತಂದುಕೊಟ್ಟರು. ಅದನ್ನು ತಂದ ಮೇಲೆ ಉಟ್ಟು, ಅಣ್ಣನಿಗೆ ಏನಾದರೂ ಆದರೆ ಎಂದು ಅದೆಷ್ಟು ಹೆದರಿದ್ದಳೆಂದರೆ ಆರು ತಿಂಗಳು ಅವಳ ಬೀರುವಿನಲ್ಲಿ ಸೀರೆ ಹಾಗೇ ಕೂತಿತ್ತು. ಕೊನೆಗೆ ಮಕ್ಕಳು ಕೊಟ್ಟ ಧೈರ್ಯದ ಮೇಲೆ ಎಪ್ಪತ್ತನೆಯ ವಯಸ್ಸಿನಲ್ಲಿ ಉಟ್ಟು ಸಂಭ್ರಮಿಸಿದಳು! ಅಣ್ಣ ಅದಾದ ಮೇಲೂ ಎಷ್ಟೋ ವರ್ಷಗಳ ಕಾಲ ಆರೋಗ್ಯವಾಗಿದ್ದರು ಎಂದು ಹೇಳಬೇಕಿಲ್ಲ!
ಮೊಗಹೊತ್ತಿಗೆಯಲ್ಲಿ ಇಂಥ ಮನಸ್ಸುಗಳೇ ಹೆಣ್ಣನ್ನು, ಅವಳ ವಿಚಾರಗಳನ್ನು ಬಂಧಿಸಲು ಯತ್ನಿಸುತ್ತಿವೆ. ನನ್ನನ್ನೂ ಸೇರಿ ಈ ಅನುಭವಕ್ಕೆ ಪಕ್ಕಾಗದವರು ಯಾರಾದರೂ ಇಲ್ಲಿ ಇದ್ದಾರೆಯೇ? `ಒಂದು ಕೆಟ್ಟ ಚಿತ್ರದ ಬಗ್ಗೆ ಅಭಿಪ್ರಾಯವನ್ನು ಹೇಳಿದ್ದಕ್ಕೆ ಅದೆಷ್ಟು ಜನ ನನ್ನ ಮೇಲೆ ಮುಗಿಬಿದ್ದಿದ್ದರು! ಎಷ್ಟೋ ಮನೆಗಳೇ ಈ ಮೊಗಹೊತ್ತಿಗೆಯಿಂದ ಹಾಳಾಗಿವೆಯಂತೆ! ನೆಂಟರಿಷ್ಟರು ಹಾಕಿಕೊಳ್ಳುವ ಮನೆ, ಕಾರುಗಳ ಚಿತ್ರವನ್ನು ನೋಡಿಕೊಂಡು ಉರಿದು ಬೀಳುತ್ತಾರಂತೆ. ನೀನು ಯಾರಿಗೆ ಕಾಮೆಂಟ್ ಹಾಕಿದೆ, ಯಾರಿಗೆ ಹಾಕಬಾರದಿತ್ತು, ಯಾರ ಜೊತೆಯಿರುವ ಫೋಟೋ ಹಾಕಿದೆ ಇತ್ಯಾದಿಗಳೆಲ್ಲ ಪ್ರತಿ ಮನೆಗಳಲ್ಲೂ ಗಂಟಾನುಗಟ್ಟಲೆ ಚರ್ಚಿತವಾಗಿ ಅನೇಕರು ಬೇಸತ್ತು ಓಡಿ ಹೋಗಿದ್ದಾರಂತೆ. ಒಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಸದಾ ನಿಯಂತ್ರಿಸಲು ನೂರಾರು ತಂತ್ರಗಳು! ಯಾರೋ ಚಂದದ ಚಿತ್ರ ಹಾಕಿ ನಕ್ಕರೆ ಆ ಕ್ಷಣದ ಸಂತೋಷದ ಅಭಿವ್ಯಕ್ತಿ ಎಂದು ಕೊಳ್ಳುವುದನ್ನು ಬಿಟ್ಟು ಹಿನ್ನೆಲೆಯನ್ನು ಹುಡುಕುತ್ತ, ಇದು ಯಾರನ್ನೋ ಉರಿಸಲು ಹಾಕಿದ್ದು ಎಂದೆಲ್ಲ ವಿಶ್ಲೇಷಣೆಗಳು ನಡೆಯುತ್ತವಂತೆ! ಕೆಲವರಂತೂ ಯಾರೋ ಒಬ್ಬರನ್ನು ತಮ್ಮ ಶತ್ರುವಾಗಿಸಿಕೊಂಡು ಅವರನ್ನು ಆಡಿಕೊಂಡು ಪೋಸ್ಟ್ ಹಾಕುವುದರಲ್ಲಿಯೇ ಜೀವನ ಕಳೆಯುತ್ತಿರುತ್ತಾರೆ.
ಇತ್ತೀಚಿಗೆ ಮೊಗಹೊತ್ತಿಗೆಯಲ್ಲಿ ಹೆಣ್ಣುಮಕ್ಕಳ ಮೇಲೆ ಗುಂಪು ದಾಳಿ ನಡೆಸುವುದು ಹೆಚ್ಚುತ್ತಿದೆ. `soft target ' ಎನ್ನುವುದನ್ನು ಸರಾಗವಾಗಿ ಕಂಡುಕೊಂಡಿದ್ದಾರೆ. ಯಾರನ್ನಾದರೂ ಹೀಗಿರಬೇಕು ಎಂದು ನಿಯಂತ್ರಿಸುವ ಹಕ್ಕನ್ನು ಯಾರು ಯಾರಿಗೆ ಕೊಟ್ಟಿದ್ದಾರೋ ತಿಳಿಯದು. ನಮ್ಮದು ತಪ್ಪು ವಿಚಾರಗಳಾಗಿದ್ದರೆ ವಾದ-ಸಂವಾದಗಳನ್ನು ಮಾಡಲಿ. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಹಿಡಿದು ಓಡಿಸುವ ಪ್ರಯತ್ನ ಮಾಡುವ ಪಾಳೆಗಾರಿಕೆ ಒಪ್ಪತಕ್ಕದೇ ಅಲ್ಲ. ಯಾವ ಗುಂಪಿನ ವಿಚಾರಗಳು ನಮ್ಮನ್ನು ನಿಯಂತ್ರಿಸಬಾರದು. ಬದುಕನ್ನು ವಿಶಾಲ, ಮಾನವೀಯ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಇವು ಸಹಕಾರಿಯೂ ಅಲ್ಲ. ಇಲ್ಲಿ ಯಾರೂ ಅಸ್ಪೃಶ್ಯರಲ್ಲ. ಎಲ್ಲರೊಂದಿಗೆ ಬೆರೆತು, ಮಾತಾಡುತ್ತಲೇ ನಮ್ಮ ವಿಚಾರವನ್ನು ಗಟ್ಟಿಯಾಗಿ ಹೇಳುವ ಶಕ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವಮಾನಿತರಾಗಿಯೋ, ಹೆದರಿಯೋ, ಬೇಸರದಿಂದಲೋ ಇಲ್ಲಿಂದ ಹೋಗಬೇಕಾಗುತ್ತದೆ. ಮೊಗಹೊತ್ತಿಗೆ ಸಮಾಜದ ಪ್ರತಿರೂಪ ಅಷ್ಟೇ. ಬದುಕನ್ನು ಅಲ್ಲಿ ಎದುರಿಸುವಾಗ ಇಲ್ಲಿಯೂ ಇದ್ದೇ ಎದುರಿಸಬೇಕು ಅನ್ನುವ ಛಲ ನಮ್ಮ ಹೆಣ್ಣುಮಕ್ಕಳಿಗೆ ಇರಬೇಕು ಎನ್ನುವುದೇ ನನ್ನ ಆಸೆ.