
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label m. r. kamala. Show all posts
Showing posts with label m. r. kamala. Show all posts
Saturday, July 27, 2019
Wednesday, March 20, 2019
Friday, November 23, 2018
Friday, September 28, 2018
ಎಮ್. ಆರ್. ಕಮಲ --- ನಮ್ಮದಲ್ಲದ ದನಿಯಲ್ಲಿ ಮಾತನಾಡುವ ಸಂಕಟ
ನಮ್ಮದಲ್ಲದ ದನಿಯೊಂದರಲ್ಲಿ ಮಾತನಾಡುವ ಸಂಕಟ
ಎಷ್ಟು ಜನರಿಗೆ ಇಂಥ ಅನುಭವವಾಗಿದೆಯೋ ತಿಳಿಯದು. ಯಾವುದೋ ಸಂದರ್ಭಕ್ಕೆ ಅನುಸಾರವಾಗಿ ನಮ್ಮದಲ್ಲದ ದನಿಯಲ್ಲಿ, ನಮ್ಮದಲ್ಲದ ಮಾತುಗಳನ್ನು ಆಡತೊಡಗುತ್ತೇವೆ. ನೋಡುವವರಿಗೆ ಅದು ಅತ್ಯಂತ ಸಹಜವೇನೋ ಎನ್ನುವಂತಿರುತ್ತದೆ. ಆದರೆ ಸೂಕ್ಷ್ಮ ವ್ಯಕ್ತಿಗೆ ಇಂಥ ಟೊಳ್ಳು ಮಾತುಗಳನ್ನು ಆಡುತ್ತಿದ್ದೇನೆ ಎಂದು ಅನ್ನಿಸಿದ ತಕ್ಷಣ ವಿಚಿತ್ರ ಅವಮಾನ, ಸಂಕಟಗಳು ಶುರುವಾಗುತ್ತವೆ. ಅನಿವಾರ್ಯವಲ್ಲದಿದ್ದರೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಹೋಗಲು, ವೇದಿಕೆಯಲ್ಲಿ ಮಾತನಾಡಲು ನಾನು ಹೆದರುತ್ತೇನೆ. ಆದರೆ ನನ್ನ ಮಾತುಗಳನ್ನು ಕೇಳುವವರಿಗೆ ನನ್ನೊಳಗಿನ ಸಂಕಟ ಅರ್ಥವಾಗುವುದಿಲ್ಲ. ಯಾವುದೇ ಬಗೆಯ ಅಪ್ರಾಮಾಣಿಕತೆ ವಿಚಿತ್ರ ಕಸಿವಿಸಿ ಹುಟ್ಟಿಸಿಬಿಡುತ್ತದೆ.
ಯಾರದ್ದೋ ಸಾವಿನ ಮನೆಗೆ ಹೋಗುತ್ತೇವೆ. ಸುಮ್ಮನೆ ನಿಂತರೆ ಏನು ತಪ್ಪು ತಿಳಿಯುತ್ತಾರೋ ಅನ್ನಿಸತೊಡಗುತ್ತದೆ. `ಏನಾಯ್ತು?' ಎಂದು ಒಂದು ಪ್ರಶ್ನೆಯನ್ನು ಗೊತ್ತಿದ್ದರೂ ಕೇಳುತ್ತೇವೆ. ಯಾರೋ ಏನೋ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಮಾತುಗಳು ತಪ್ಪು, ಯಾವುದು ಸರಿ ಎಂದು ಅರ್ಥವಾಗುವುದಿಲ್ಲ. `ಸದ್ಯ ನರಳದೆ ಸತ್ತರಲ್ಲ', `ವಯಸ್ಸಾಗಿತ್ತು ಪಾಪ, ಆದರೂ ಮನೆಯವರಿಗೆ ದುಃಖ ಇದ್ದೇ ಇರುತ್ತಲ್ಲ' ಹೀಗೆ ಏನೋ ಒಂದು ಮಾತೊಗೆದು ಹಗುರಾಗಲು ನೋಡಿ ಮತ್ತಷ್ಟು ಭಾರವಾಗಿಬಿಡುತ್ತೇವೆ. ಆದಷ್ಟು ಬೇಗ ಅಲ್ಲಿಂದ ಹೊರಟುಬಿಡಬೇಕು ಅನ್ನಿಸಲು ಶುರುವಾಗುತ್ತದೆ. ಸತ್ತಿರುವ ವ್ಯಕ್ತಿ `ಹೆಸರಾಂತ' ಆಗಿದ್ದರೆ ಅಲ್ಲಿಯೇ ಟಿವಿ ಯವರು ಮೈಕ್ ತಂದು ಮುಂದೆ ಹಿಡಿಯುತ್ತಾರೆ. ಹೀಗೆ ಮಾತನಾಡುವವರನ್ನು ಅನೇಕ ಬಾರಿ ದೂರದರ್ಶನದಲ್ಲಿ ನೋಡುವಾಗ ಇವರು ತಮ್ಮ ಅಂತರಂಗದ ಮಾತು ಆಡುತ್ತಿದ್ದಾರೆಯೇ, ಸತ್ತಿರುವವರು ಇವರಿಗೆ ಅಷ್ಟು ಪ್ರಭಾವ ಬೀರಿದ್ದರೆ ಎನ್ನುವ ಅನುಮಾನ ಬರುವಷ್ಟು ಟೊಳ್ಳಾಗಿರುತ್ತದೆ. ಎದೆಯೊಳಗಿಂದ ಬಾರದ ಯಾವ ಮಾತುಗಳನ್ನಾಡುವುದು ಅತ್ಯಂತ ಕಷ್ಟಕರ ಎನ್ನುವುದು ನನ್ನ ಅನುಭವ. ಹೀಗಾಗಿಯೇ ನನ್ನ ಗೆಳೆಯರ ಸಂಖ್ಯೆ ಬಹು ಕಡಿಮೆ. ಯಾರ ಜೊತೆ ಅತ್ಯಂತ ಸಹಜವಾಗಿ ಇರಬಹುದು ಅನ್ನಿಸುವುದೋ ಅವರೊಂದಿಗೆ ಮಾತ್ರ ಇರುವುದಕ್ಕೆ, ಮಾತನಾಡುವುದಕ್ಕೆ ಇಷ್ಟ.
ಈ ಮೊಗಹೊತ್ತಿಗೆಯಲ್ಲಿ ಅನೇಕರು ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಹಾಗೆ ನೀಡಬೇಕಾದರೆ ಒಂದೋ ಆ ಘಟನೆ ನಮ್ಮ ಅನುಭವಕ್ಕೆ ಹತ್ತಿರವಾಗಿರಬೇಕು ಅಥವಾ ಅದನ್ನು ತೀವ್ರವಾಗಿ ಗ್ರಹಿಸುವಷ್ಟು ಸೂಕ್ಷ್ಮ ಸಂವೇದನೆ ಇರಬೇಕು. ಅವರೆಡೂ ಇಲ್ಲದಿದ್ದಾಗಲು ನೀವು ಒತ್ತಾಯದಿಂದ, ಒತ್ತಡದಿಂದ ಪ್ರತಿಕ್ರಿಯಿಸಲು ಆರಂಭಿಸಿದರೆ ಮಾತಿನ ಅರ್ಥಹೀನತೆ ಬಹುಬೇಗ ಅರಿವಿಗೆ ಬಂದು ನಗೆಪಾಟಲಾಗಿಬಿಡುತ್ತೇವೆ. ಎಲ್ಲರು ಒಂದೇ ರೀತಿಯ ಮಾತುಗಳನ್ನು ಆಡುವಾಗ, ಆ ಮಾತುಗಳು ನಿಮ್ಮದಲ್ಲ ಎನ್ನಿಸಿದಾಗ ಕೂಡ ಮಾತನಾಡಿದರೆ ಇಂಥ ಸಂಕಷ್ಟ ಎದುರಾಗುತ್ತದೆ. ಸಹಜತೆ, ಪ್ರಾಮಾಣಿಕತೆಗಳಿಂದ ಮಾತ್ರ ಇದನ್ನು ಮೀರಲು ಸಾಧ್ಯವೇನೋ. ಪ್ರೋತ್ಸಾಹಕ್ಕೆ ಆಡುವ ಮೆಚ್ಚುಗೆಯ ಮಾತುಗಳನ್ನು ನಾನು ಟೊಳ್ಳು ಎಂದು ಸಂಪೂರ್ಣವಾಗಿ ನಿರಾಕರಿಸಲಾರೆ. ಯಾರೋ ವಿದ್ಯಾರ್ಥಿ ಕವಿತೆಯನ್ನು ಬರೆಯಲು ಆರಂಭಿಸಿದರೆ ಅವರು ಮುಂದುವರಿಸಲಿ ಎನ್ನುವ ಕಾರಣಕ್ಕೆ ಶಿಕ್ಷಕ ಮನೋಭಾವದವರಾದವರು ಬೆನ್ನು ತಟ್ಟುತ್ತಾರೆ. ಅಲ್ಲಿರುವ ಉದ್ದೇಶ ದಾರಿ ತಪ್ಪಿಸುವುದಾಗಿರುವುದಿಲ್ಲ, ಅಗಾಧವಾದ ಪ್ರೀತಿ ವ್ಯಕ್ತವಾಗುವ ಬಗೆ ಅದು.
ಗದರುವುದು ಪ್ರೀತಿಯ ಇನ್ನೊಂದು ಬಗೆ. ನಾನು ಎಂ. ಎ. ಓದುವಾಗ ಡಿ. ಆರ್. ನಾಗರಾಜ್ ಬಹಳ ಉತ್ಸಾಹದಿಂದ ಜಗತ್ತಿನ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ಸೂಕ್ಷ್ಮವಾಗಿ ಗ್ರಹಿಸುವ ವಿದ್ಯಾರ್ಥಿಗಳೆಂದರೆ ಅವರಿಗೆ ಪಂಚಪ್ರಾಣ. ಒಮ್ಮೆ ಚೆಕಾಫ್ ನ `ಚೆರ್ರಿ ಆರ್ಚರ್ಡ್' ಪಾಠ ಮಾಡುತ್ತಿದ್ದರು. ಪಠ್ಯ ಪುಸ್ತಕವಿಲ್ಲದೆ ಬರುವ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಅಸಾಧ್ಯ ಸಿಟ್ಟು. ನಾನು ಹಾಗೆ ಒಂದು ದಿನವೂ ಪಠ್ಯ ಪುಸ್ತಕವನ್ನು ಬಿಟ್ಟು ಹೋದವಳಲ್ಲ. ಆ ದಿನ ನನ್ನ ಗೆಳತಿ ಮರೆತು ಬಂದಿದ್ದಳು. ಹೀಗಾಗಿ ಅವಳು ನೋಡಿಕೊಳ್ಳಲಿ ಎಂದು ಉದಾರತೆಯಿಂದ ಅವಳ ಮುಂದೆ ಪುಸ್ತಕವಿಟ್ಟು ಪಾಠ ಕೇಳುತ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದೊಡ್ಡ ದನಿ ಕೇಳಿಸಿತು. `ಕಮಲ, ವಾಟ್ ನಾನ್ಸೆನ್ಸ್? ವೈ ಡಿಡ್ ಯು ನಾಟ್ ಬ್ರಿನ್ಗ್ ದಿ ಟೆಕ್ಸ್ಟ್ ಬುಕ್?' ಎಂದು ಮೇಷ್ಟ್ರು ಕಿರುಚುತ್ತಿದ್ದರು. `ಸರ್, ದಿಸ್ ಈಸ್ ಮೈ ಟೆಕ್ಸ್ಟ್ ಬುಕ್' ಎಂದು ಹೇಳುವಾಗ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಪುಸ್ತಕ ತರದಿದ್ದುದಕ್ಕೆ ಗೆಳತಿಗೆ ಏನು ಹೇಳಲಿಲ್ಲ, ಬೈಯಲಿಲ್ಲ. ನನ್ನ ಮೇಲೆ ಹೀಗೆ ಕಿರುಚಿದ್ದೇಕೆ ಎಂದು ಬೇಸರವಾಗಿತ್ತು. ತರಗತಿ ಮುಗಿದ ಮೇಲೆ ಮೂಲೆಯಲ್ಲಿ ಕಾಯುತ್ತ ನಿಂತಿದ್ದ ಮೇಷ್ಟ್ರು, `ಕಮಲ ಐ ಯಾಮ್ ಸಾರಿ, ರಿಯಲಿ ಸಾರಿ' ಎಂದರು. `ಅವಳನ್ನೇಕೆ ಬೈಯಲಿಲ್ಲ ಸರ್' ಎಂದು ಸಣ್ಣ ಕೋಪದಿಂದ ಕೇಳಿದೆ. ಆಗ ಅವರು ಹೇಳಿದ ಉತ್ತರ ನನಗಿನ್ನೂ ಚೆನ್ನಾಗಿ ನೆನಪಿದೆ. `ವೇಸ್ಟ್ ಆಫ್ ಟೈಮ್! ನಮ್ಮ ಮಾತುಗಳು ಅರ್ಥ ಆಗದವರ ಬಳಿ ಮಾತಾಡುವುದು ಚೀರಾಟ ಅಷ್ಟೇ' .
ಆದರೆ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮಾತುಗಳು ಚೀರಾಟದಂತೆ, ಆಕ್ರಂದನದಂತೆ ಕೇಳತೊಡಗುತ್ತದೆ. ನನ್ನ ವೃತ್ತಿಯ ಕೊನೆಯ ದಿನಗಳಲ್ಲಿ ತರಗತಿಗಳಲ್ಲಿ ಅನೇಕ ಬಾರಿ ನಾನು ಆಡುವ ಮಾತುಗಳು `ಸ್ವಗತ'ದಂತೆ ತೋರಿ, ನಿಲ್ಲಿಸಿಬಿಟ್ಟು ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸುತ್ತಿದ್ದೆ. ಮಾತು ಕೇಳದ, ಮಾತು ಅರ್ಥಮಾಡಿಕೊಳ್ಳದವರ ನಡುವೆ ನಾವು ಆಡುವ ಮಾತುಗಳಿಗೆ ಅರ್ಥವಿದೆಯೇ ಎಂದು ಯೋಚಿಸಿದ್ದೇನೆ. ಅದನ್ನು ಇನ್ನೊಂದು ಬಗೆಯಲ್ಲೂ ಹೇಳಬಹುದು. ಬಹುಶಃ ನಮ್ಮ ಮಾತುಗಳೇ ಅಪ್ರಸ್ತುತ, ವಿಚಿತ್ರ ಎಂದು ಯುವಕರಿಗೆ ಕಾಣುತ್ತಿರಬಹುದು. ಅದೆಲ್ಲವನ್ನು ಅರ್ಥಮಾಡಿಕೊಂಡೂ ಮತ್ತೆ ಮಾತಾಡುತ್ತೇವಲ್ಲ! ಆಗ ವಿಚಿತ್ರ ಅವಮಾನದಿಂದ ಕುದ್ದು ಹೋಗಿಬಿಡುತ್ತೇವೆ. ಎಷ್ಟೋ ಜನರು ತಮ್ಮನ್ನು ಕಡೆಗಣಿಸಿದರೆಂದು ಭಾವಿಸುತ್ತ, ಮತ್ತಷ್ಟು ಜೋರಾಗಿ ತಮ್ಮ ಇರವನ್ನು ಸ್ಥಾಪಿಸಲು, ಹಠ ತೊಟ್ಟು ಮಾತನಾಡಲು ಶುರು ಮಾಡುತ್ತಾರೆ. ಅದು ಟಿವಿ ನಿರೂಪಕರ ಕಿರುಚಾಟದಂತೆ ಕೇಳಿಸುತ್ತದೆ. ಮನೆಯ ಹಿರಿಯರು ಹೇಳುವ ವಿಚಾರಗಳನ್ನು ಮುದುಕರ `ಗೊಣಗಾಟ' ಎಂದು ಕರೆಯುವುದರಲ್ಲಿಯೇ ಅರ್ಥಗಳು ಅಡಗಿವೆ.
ಸೂಕ್ಷ್ಮ ವ್ಯಕ್ತಿಗೆ `ಕೋಡಂಗಿ'ಯಂತೆ ವೇದಿಕೆಯಲ್ಲಿ ಕುಣಿಯುವುದು, ಮಾತನಾಡುವುದು ಕಷ್ಟ. ಅದು ಸಹಜವಾದ ಅವನ ವ್ಯಕ್ತಿತ್ವವೇ ಆಗಿದ್ದರೆ, ವೃತ್ತಿ ಆಗಿದ್ದರೆ ಸರಿ. ಅದೇನು ಅಲ್ಲದೆ ಬರಿಯ ಖ್ಯಾತಿಗಾಗಿ, ಜನಪ್ರೀತಿಗಾಗಿ ನಾವು ಮಾಡುವ ಸರ್ಕಸ್ ಗಳು ಎದೆಯಲ್ಲಿ ಗಾಢ ವಿಷಾದವನ್ನಲ್ಲದೆ ಬೇರೇನನ್ನು ಹುಟ್ಟಿಸಲಾರದು. ನಮಗಾಗದ್ದನ್ನು ಆದಷ್ಟು `ಆಗುವುದಿಲ್ಲ' ಎಂದು ಗಟ್ಟಿ ದನಿಯಲ್ಲಿ ಹೇಳುವುದನ್ನು, ನಿರಾಕರಿಸುವುದನ್ನು ಮಾಡದಿದ್ದರೆ ಜೀವನವೆಲ್ಲ ದಾಕ್ಷಿಣ್ಯದಲ್ಲಿ ಕಳೆದು, ಎದೆಯೊಳಗೊಂದು ತೀವ್ರ ನೋವು ಉಳಿಸಿಕೊಂಡುಬಿಡುತ್ತೇವೆ. `ಅಕ್ಕಿ ಮೇಲಾಸೆ, ನೆಂಟರ ಮೇಲೆ ಪ್ರೀತಿ' ಎಂಬ ದ್ವಂದ್ವದಿಂದ ಹೊರಬರದೆ ಮುಕ್ತಿಯಿಲ್ಲ. ಆದರೆ ಅದಕ್ಕೊಂದು ದಿಟ್ಟತನ ಬೇಕು. ನಿಂದೆಯನ್ನು ಸಹಿಸಿಕೊಳ್ಳುವ ಶಕ್ತಿ ಬೇಕು. .
Tuesday, September 18, 2018
ಎಮ್. ಆರ್. ಕಮಲ - ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ
ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ!-ಎಂ. ಆರ್. ಕಮಲ
ಪುಟ್ಟು ಚಿಕ್ಕವನಿದ್ದಾಗ ಜಗತ್ತಿನ `ಸುಕುಮಾರ' `ಸುಕುಮಾರಿ'ಯರ ಕತೆಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದ. ಅದರಲ್ಲಿ `ವಡ್ಡಾರಾಧನೆ' ಯ `ಸುಕುಮಾರಸ್ವಾಮಿ'ಯ ಕಥೆ ಮತ್ತು `ರಾಜಕುಮಾರಿ ಮತ್ತು ಬಟಾಣಿ' ಎಂಬ ವಿದೇಶದ ಕತೆ ಬಹು ಮುಖ್ಯವಾದವು. ನಮ್ಮ ಜನಪದರು ಸಹ ಈ ವಿದೇಶಿ ಕಥೆಯಂತಹ ಅನೇಕ ಕತೆಗಳನ್ನು ಹೆಣೆದಿದ್ದಾರೆ. ರಾಜಕುಮಾರನೊಬ್ಬ ನಿಜವಾದ ರಾಜಕುಮಾರಿಯನ್ನು ಹುಡುಕಿಕೊಂಡು , ದೇಶ ವಿದೇಶ ಸುತ್ತಿ ಕೊನೆಗೆ ಯಾರನ್ನು ಒಪ್ಪದೇ ಮನೆ ಸೇರುತ್ತಾನೆ. ತಂದೆ-ತಾಯಿಗಳು ಬೇಸತ್ತು ಹೋಗಿರುವಾಗ ಒಂದು ರಾತ್ರಿ ಭಯಂಕರವಾದ ಮಳೆ ಆರಂಭವಾಗುತ್ತದೆ. ಬಿರುಗಾಳಿ ಬೇರೆ! ಅವೇಳೆಯಲ್ಲಿ ಯಾರೋ ಬಾಗಿಲು ತಟ್ಟಿದ ಶಬ್ದ! ತಂದೆ ಹೋಗಿ ನೋಡಿದರೆ ನಿಜವಾದ ರಾಜಕುಮಾರಿ ಬಾಗಿಲಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿದ್ದಾಳೆ. ಅವಳನ್ನು ಒಳಗೆ ಕರೆದು, ಉಡುಪು ಬದಲಿಸಲು ಹೇಳಿದ ರಾಜಕುಮಾರನ ತಾಯಿ ಅವಳು ನಿಜವಾದ ರಾಜಕುಮಾರಿಯೋ ಅಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಒಂದು ಉಪಾಯ ಮಾಡುತ್ತಾಳೆ. ಮೆತ್ತನೆಯ ಹಾಸಿಗೆಯ ಮೇಲೆ ಮತ್ತೆ ಇಪ್ಪತ್ತು ಮೆತ್ತನೆಯ ಹಾಸಿಗೆಗಳನ್ನು ಹಾಸಿ, ಕೆಳಗಿದ್ದ ಹಾಸಿಗೆಯ ಕೆಳಗೆ ಒಂದು ಬಟಾಣಿ ಇಡುತ್ತಾಳೆ. ರಾಜಕುಮಾರಿ ಹೂವಿನ ಏಣಿಯನ್ನೇರಿ ಹಾಸಿಗೆಯಲ್ಲಿ ಮಲಗುತ್ತಾಳೆ. ಬೆಳಗ್ಗೆ ಬಂದು ತಾಯಿ ನೋಡಿದರೆ ಕಣ್ಣುಗಳೆಲ್ಲ ಕೆಂಪಾಗಿ, ತಲೆ ಕೆದರಿಕೊಂಡು ನಿದ್ದೆಯನ್ನೇ ಮಾಡದೆ ಇಡೀ ರಾತ್ರಿಯನ್ನು ರಾಜಕುಮಾರಿ ಕಳೆದಿದ್ದಾಳೆ. ರಾಜಕುಮಾರನ ತಾಯಿ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಾಸಿಗೆಯಲ್ಲಿ ಏನೋ ಒತ್ತುತ್ತಿದ್ದರಿಂದ ನಿದ್ದೆ ಬರಲಿಲ್ಲವೆಂದು ತಿಳಿಸುತ್ತಾಳೆ! ಆಗ ಗಂಡ-ಹೆಂಡತಿ ಇವಳು ನಿಜವಾದ ರಾಜಕುಮಾರಿ ಎಂದು ನಿರ್ಧರಿಸಿ ಮಗನನ್ನು ಮದುವೆಗೆ ಒಪ್ಪಿಸುತ್ತಾರೆ. ನಿಮಗೆಲ್ಲ ಈ ಕಥೆ ಹೇಳುವುದಕ್ಕೆ ದೊಡ್ಡ ಕಾರಣವಿದೆ.
ನಿನ್ನೆ ರಾತ್ರಿ ಕಣ್ಣೆಳೆಯಿತು ಎಂದು ಮಂಚದ ಮೇಲೆ ಹೊದಿಕೆಯನ್ನು ಹೊದ್ದುಕೊಳ್ಳದೆ, ದಿಂಬನ್ನು ಇಟ್ಟುಕೊಳ್ಳದೆ ಮಲಗಿಬಿಟ್ಟಿದ್ದೆ. ಪಾಪ ರಮೇಶ್, ಸಿನಿಮಾದಲ್ಲಿ ಹೆಂಡತಿಯರನ್ನು ನೋಡಿಕೊಳ್ಳುವಂತೆ ಒಂದು ಹೊದಿಕೆಯನ್ನು ಹೊದ್ದಿಸಿದ್ದಾರೆ, ದಿಂಬನ್ನು ಇಟ್ಟಿದ್ದಾರೆ. ಹತ್ತಾರು ದಿನದಿಂದ ನನ್ನ ದಿಂಬು ಹತ್ತಿಯನ್ನೆಲ್ಲ ಉದುರಿಸಿಕೊಂಡು, ನೆಪಕ್ಕೆ ಮಾತ್ರ ದಿಂಬಿನಂತೆ ಕಾಣುತ್ತಿದೆ ಎಂದು ಗಂಡನಿಗೆ ಒಮ್ಮೆ ಹೇಳಿದ್ದೆ. ಇಷ್ಟೆಲ್ಲಾ ದುರವಸ್ಥೆಯಲ್ಲಿರುವ, ದಿಂಬಿನಂತೆಯೂ ಕಾಣದ ಇದರ ಬಗ್ಗೆ ನನಗೆ ಕೊನೆಯಿರದ ವ್ಯಾಮೋಹ. ನನ್ನ ಮೂವತ್ತೈದು ವರ್ಷದ ಹೊದಿಕೆಯದು ಇನ್ನೊಂದು ಕತೆ. ಅದು ಅಲ್ಲಲ್ಲಿ ಎಳೆ ಬಿಟ್ಟು, ಕಂಡಿಗಳಾಗಿ, ಫ್ಯಾನ್ ಗಾಳಿ ಜೋರಾಗಿ ಬೀಸುವಾಗ ಒಂದು ಕಂಡಿಯಲ್ಲಿ ಮೂಗನ್ನಿಟ್ಟುಕೊಂಡು, ಗಾಳಿ ಹೀರುತ್ತಲೇ ಬೆಚ್ಚಗೆ ಮಲಗುವ ಸೌಭಾಗ್ಯ ಈ ಹೊದಿಕೆಯಿಂದ ಮಾತ್ರ ಸಿಗುವುದು. ಜೊತೆಗೆ ಒಗೆದು, ಒಗೆದು ಅದೆಷ್ಟು ಮೆತ್ತಗಾಗಿದೆ ಎಂದರೆ ಮೈಮೇಲಿರುವುದೂ ಗೊತ್ತಾಗುವುದಿಲ್ಲ. ಮಕ್ಕಳು ನನ್ನ ಹೊದಿಕೆ, ದಿಂಬುಗಳನ್ನು ನೋಡಲಾರದೆ ಹೊಸದನ್ನು ತಂದುಕೊಟ್ಟರು. ಪುಟ್ಟುವಂತೂ ಫ್ರಾನ್ಸ್ ನಿಂದ ಮೆತ್ತಗೆ ಇರುವ ಹೊದಿಕೆಗಳನ್ನು ನನಗೆ, ಗಂಗಮ್ಮನಿಗೆ ಒಂದು ದೊಡ್ಡ ಸೂಟ್ ಕೇಸ್ ನಲ್ಲಿ ಹಾಕಿಕೊಂಡು ತಂದ. ನಾನು ಒಂದು ದಿನವೂ ಹೊದ್ದುಕೊಳ್ಳಲಿಲ್ಲ. ರಾತ್ರಿ ನನ್ನ ಕಾಲ ಬಳಿ ನಿದ್ರಿಸುವ ಕಾಳ ಅದರ ಮೇಲೆ ಸುಖವಾಗಿ ಗೊರಕೆ ಹೊಡೆಯುತ್ತಿರುತ್ತಾನೆ. ನಿನ್ನೆ ನಾನು ನಿದ್ರಿಸಿದ ಮೇಲೆ ನನ್ನ ಗಂಡ ಅನುಕಂಪಗೊಂಡು ನನ್ನ ದಿಂಬಿಗೆ ಒಂದಿಷ್ಟು ಹತ್ತಿಯನ್ನು ತುರುಕಿ, ಅದಕ್ಕೊಂದು ಆಕಾರ ಕೊಟ್ಟು, ಮೆತ್ತಗೆ ಮಾಡಿ ತಲೆಗಿಟ್ಟಿದ್ದಾನೆ. ಒಳ್ಳೆಯದೊಂದು ಹೊದಿಕೆಯನ್ನು ಬೇರೆ ಹೊದಿಸಿದ್ದರಲ್ಲ! ಮಲಗಿ ಸ್ವಲ್ಪ ಹೊತ್ತಿಗೆ ನನಗೆ ಎಚ್ಚರಾಗಿ ಹೋಯಿತು. ಏನು ಮಾಡಿದರೂ ನಿದ್ದ ಬರುತ್ತಿಲ್ಲ. ಒಂದು, ಎರಡು ಎಣಿಸಿ ನೋಡಿದೆ. ಪಕ್ಕದಲ್ಲಿದ್ದ ಕಾಳನನ್ನು ಮಾತಾಡಿಸಿದೆ. ತಲೆ ಕಿತ್ತುಕೊಂಡೆ, ಕಣ್ಣುಗಳು ಕೆಂಪಗಾದವು. ಬೆಳಗ್ಗೆ ನಾಲ್ಕು ಗಂಟೆಯಾಗುವುದನ್ನೇ ಕಾಯುತ್ತ ಲೈಟ್ ಹಾಕಿದೆ. ನನ್ನ ಗಂಡ ಎದ್ದು ನೋಡುತ್ತಾನೆ. `ರಾಜಕುಮಾರಿ ಮತ್ತು ಬಟಾಣಿ' ಕಥೆಯ ರಾಜಕುಮಾರಿಯಂತಾಗಿ ಒದ್ದಾಡುತ್ತಿದ್ದೇನೆ. `ಪುಟ್ಟು ಊರಲ್ಲಿ ಇಲ್ಲ, ಇಷ್ಟು ಬೇಗ ಎದ್ದು ಏನು ಮಾಡಬೇಕು?ಮಲಕ್ಕೋ, ಮುಖ ನೋಡ್ಕೋ ಹೇಗಾಗಿದೆ?' ಎಂದು ಬೈದು, ತನ್ನ ನಿದ್ದೆಯನ್ನು ಕೆಡಿಸಿದ್ದಕ್ಕೆ ಗೊಣಗಿದ. ನಾನು ಕಣ್ಣು ಬಿಟ್ಟು ನೋಡಿ ಹೌಹಾರಿದೆ!
ದಿಂಬನ್ನು ಯಾರೋ ಸರಿಮಾಡಿದ್ದಾರೆ! ಯಾವುದೋ ಹೊದಿಕೆಯನ್ನು ಹೊದಿಸಿಬಿಟ್ಟಿದ್ದಾರೆ. ಹತ್ತಿಯೆಲ್ಲ ಮೂಲೆ ಸೇರಿ, ಒಂದು ಕಡೆ ಕಲ್ಲಿನಂತಾಗಿದ್ದ, ಒಂದು ಕಡೆ ಹತ್ತಿಯೇ ಇಲ್ಲದೆ ಟೊಳ್ಳಾಗಿದ್ದ ನನ್ನ ದಿಂಬಿನ ಸ್ವರೂಪ ಬದಲಾಗಿ ಹೋಗಿದೆ. ಜೊತೆಗೆ ಯಾವುದೋ ಮೆತ್ತೆಯನ್ನು ಬೇರೆ ಹೊದ್ದಿಸಿ ನನಗೆ ನಿದ್ರೆ ಬಾರದಂತಾಗಿದೆ ಎಂದು ಹೊಳೆಯಿತು. `ಯಾರು ನನ್ನ ದಿಂಬು ಮುಟ್ಟಿದ್ದು?' ಕಿರುಚಿದೆ. ಅವಳು ಯಾವಳೋ ರಾಜಕುಮಾರಿಗೆ ಬಟಾಣಿ ಒತ್ತಿ ನಿದ್ದೆ ಬಂದಿಲ್ಲ, ನನಗೆ ಈ ಕಲ್ಲಿನ ದಿಂಬು ಒತ್ತದೆ ನಿದ್ದೆ ಬಂದಿಲ್ಲ! ನನ್ನ ಈ ವಿಚಿತ್ರ ವರ್ತನೆ ನನ್ನ ಗಂಡನಿಗೆ ಆಘಾತ ಉಂಟು ಮಾಡಿರಬೇಕು. ನಾನು ಚಿಕ್ಕವಳಿದ್ದಾಗ ನನ್ನ ತಂದೆ ಕೊಬ್ಬರಿ ಸುಲಿಸಿ, ಒಳ್ಳೆ ರೇಟ್ ಬರಲಿ, ಆಮೇಲೆ ಮಾರೋಣ ಎಂದು ಮೂಟೆಗಳಲ್ಲಿ ಅದನ್ನು ತುಂಬಿ ನಡುಮನೆಯಲ್ಲಿ ಸಾಲಾಗಿ ಇಟ್ಟಿರುತ್ತಿದ್ದರು. ಆಗ ಮನೆಯಲ್ಲಿ ಮಂಚ ಇರಲಿಲ್ಲ. ನನಗೆ ಈ ಕೊಬ್ಬರಿ ಮೂಟೆಗಳು ಮಂಚದಂತೆ ಕಂಡು ಖುಷಿಯಾಗಿ ರಾತ್ರಿ ಅವುಗಳ ಮೇಲೆ ಕೂತು ಓದಿಕೊಳ್ಳುತ್ತಿದ್ದೆ. ಹಾಗೆ ನಿದ್ದೆ ಮಾಡಿಬಿಡುತ್ತಿದ್ದೆ. ಈ ಕಲ್ಲಿನಂಥ ಕೊಬ್ಬರಿ ಗಿಟುಕಿನ ಮೇಲೆ ನಿದ್ದೆ ಮಾಡುತ್ತೆ ಪಾಪ ಅಂತ ಅಮ್ಮ ಯಾವುದೋ ಹೊತ್ತಿನಲ್ಲಿ ಎಳೆದು ಹಾಸಿಗೆಗೆ ಹಾಕಿರುತ್ತಿದ್ದಳು. ಆ ಹಾಸಿಗೆಗಳೇನೂ ಹಂಸ ತೂಲಿಕಾ ತಲ್ಪಗಳಾಗಿರಲಿಲ್ಲ. ಅಲ್ಲಲ್ಲಿ ಹತ್ತಿ ಗಂಟು ಕಟ್ಟಿಕೊಂಡು ಹೋಗಿರುತ್ತಿತ್ತು. ದಿಂಬುಗಳಿಗೂ ಕಲ್ಲುಗಳಿಗೂ ಅಂತಹ ವ್ಯತ್ಯಾಸ ಕೂಡ ಇರುತ್ತಿರಲಿಲ್ಲ!
ವರ್ಷಕ್ಕೊಮ್ಮೆ ಸಾಬಣ್ಣ ತನ್ನ ಉಪಕರಣಗಳನ್ನು ದೊಡ್ಡ ಚೀಲಕ್ಕೆ ತುಂಬಿಕೊಂಡು ಹಾಸಿಗೆ ಮಾಡಿಕೊಡಲು ಬರುತ್ತಿದ್ದ. ಆ ದಿನ ಅಂಗಳಕ್ಕೆ ಅಥವಾ ಜಗುಲಿಗೆ ಮನೆಯಲ್ಲಿದ್ದ ಹತ್ತಾರು ಹಾಸಿಗೆಗಳು ವರ್ಗಾವಣೆಯಾಗುತ್ತಿದ್ದವು. ಮೊದಲು ಹಾಸಿಗೆಯ ಹೊಲಿಗೆಗಳನ್ನು ಬಿಚ್ಚುವುದು, ನಂತರ ಒಳಗಿದ್ದ ಹತ್ತಿಯನ್ನೆಲ್ಲ ಮಂದಳಿಗೆ ಚಾಪೆ ಮೇಲೆ ಹಾಕುವುದು. ಸಾಬಣ್ಣ . ತಂಬೂರಿ ತರಹ ಎಂಥದ್ದೋ ಒಂದು ಉಪಕರಣ ತರುತ್ತಿದ್ದ. ಅದಕ್ಕೆ ಒಂದೋ, ಎರಡೂ ದಪ್ಪ ತಂತಿಗಳು. ಆ ತಂತಿಯಲ್ಲಿ ಮೀಟಿಕೊಂಡು ಹತ್ತಿಯನ್ನು ಮೃದು ಮಾಡುತ್ತಿದ್ದ. ಆ ಸಮಯದಲ್ಲಿ ಅಂಗಳದ ತುಂಬಾ ಹಾರುತ್ತಿದ್ದ ಹತ್ತಿಯನ್ನು ಹಿಡಿಯಲು ನಾವು ಖುಷಿಯಿಂದ ಓಡುತ್ತಿದ್ದೆವು. ಅವು ಗಿಡದ ಮೇಲೆ, ಹೆಂಚಿನ ಮೇಲೆಲ್ಲಾ ಕೂತಿರುತ್ತಿದ್ದವು. ಹೊಸ ಹಾಸಿಗೆಯ ಕವರ್ ಬೇಕೆಂದರೆ ಮೊದಲೇ ಹೊಲಿದು ತಂದಿದ್ದ (ಒಂದು ಭಾಗವನ್ನು ಬಿಟ್ಟು) ಪಟಾ ಪಟಿ ಡಿಸೈನ್ ಬಟ್ಟೆಗೆ ಈ ಹತ್ತಿಯನ್ನು ತುಂಬಿ, ಹತ್ತಿ ಹಾಸಿಗೆಯಲ್ಲಿ ಜಾರದಂತೆ ಮಧ್ಯೆ ಮಧ್ಯೆ ಒಂದೊಂದು ಟಾಕ್ ಹಾಕಿ ಹೊಲಿದುಕೊಡುತ್ತಿದ್ದ. ಆಮೇಲೆ ಸರಿಯಾಗಿ ಕೂರುವಂತೆ ಯಾವುದೋ ಬಡಿಗೆಯಿಂದ ಬಡಿಯುವುದು ಇತ್ಯಾದಿ. ಅವತ್ತು ಸಾಬಣ್ಣನಿಗೆ ಊಟ, ತಿಂಡಿಯೆಲ್ಲ ನಮ್ಮ ಮನೆಯಲ್ಲೇ. ಅವನ ಕಥೆಯನ್ನು ಕೇಳಿಕೊಂಡು ಸುತ್ತ ನಾಲ್ಕಾರು ಜನ ಕುಳಿತಿರುತ್ತಿದ್ದರು. ನಾವು ಮಕ್ಕಳು ಹತ್ತಿಯನ್ನು ಅಂಗಳದ ತುಂಬಾ ಹಾರಿಸಿಕೊಂಡು, ಅಮ್ಮನ ಹತ್ತಿರ ಬೈಸಿಕೊಂಡು ಓಡಾಡುವುದು. ಆದರೆ ಹಾಸಿಗೆಯ ಮೇಲೆ ನಾವು ಕುಣಿಯುತ್ತಿದ್ದ ಪರಿಗೆ ಬಹುಬೇಗನೆ ಹಾಸಿಗೆಗಳು ಕಲ್ಲಾಗಿ, ಟೊಳ್ಳಾಗಿ ಹೋಗುತ್ತಿದ್ದವು. ಈ ರೀತಿ ಬಾಲ್ಯವನ್ನು ಕಳೆದ ನನಗೆ ಒಳ್ಳೆಯ ಹೊದಿಕೆ, ದಿಂಬುಗಳು ಶತ್ರುಗಳಂತೆ ಕಂಡಿದ್ದು ಅಚ್ಚರಿಯೇನಲ್ಲ. ಬೆಳಗ್ಗೆ ಬಂದ ಸಿಟ್ಟಿಗೆ ದಿಂಬಿನ ಮೂಲೆಯಲ್ಲಿನ ಹೊಲಿಗೆಯನ್ನು ಕಿತ್ತು, ಒಂದಿಷ್ಟು ಹತ್ತಿಯನ್ನು ತೆಗೆದೆಸೆದೆ. ನನ್ನ ಗಂಡ ಇಂಥ ವಿಚಿತ್ರ ಹೆಂಗಸನ್ನು ಬೇರೆಲ್ಲೂ ಕಂಡಿಲ್ಲ ಎನ್ನುವಂತೆ ನೋಡಿದ. ಈ ಮೆತ್ತನೆಯ ದಿಂಬಿನ ಮೇಲೆ ಮಲಗಿ, ಕತ್ತು ಬೇರೆ ಉಳುಕಿ, ಬರೆಯಲು ಒದ್ದಾಡುತ್ತಿದ್ದೇನೆ! ನನಗೆ ಹೊದಿಕೆ ಹೊದಿಸಿ, ದಿಂಬು ಸರಿ ಮಾಡಿಕೊಟ್ಟಿದ್ದಕ್ಕೆ ಇವತ್ತು ಇಡೀ ದಿನ ಬೈಗುಳವನ್ನು ಬೇರೆ ಕೇಳಬೇಕು!
`ಪುಷ್ಪಕ ವಿಮಾನ' ಮೂಕಿ ಚಿತ್ರದಲ್ಲಿ ಹೋಟೆಲ್ ನಲ್ಲಿ ನಿದ್ದೆ ಬಾರದೆ, ತಾನಿದ್ದ ಮನೆಗೆ ಮರಳಿ ಬಂದು, ಪಕ್ಕದ ಟೆಂಟಿನ ಚಲನಚಿತಗಳ ವಿಚಿತ್ರ ಸದ್ದುಗಳನ್ನು ರೆಕಾರ್ಡ್ ಮಾಡಿಕೊಂಡು, ಹೋಟೆಲ್ ಗೆ ಮರಳಿ, ಅವುಗಳನ್ನು ಹಾಕಿಕೊಂಡು ಕೇಳುತ್ತ ಮಲಗುತ್ತಾನಲ್ಲ ಹಾಗಾಗಿದೆ ನನ್ನ ಸ್ಥಿತಿ. ಮೀನಿನ ಪೇಟೆಯಲ್ಲಿರುವವರಿಗೆ ಮೀನಿನ ವಾಸನೆಯಿಲ್ಲದೆ ಬದುಕಲು ಸಾಧ್ಯವಾಗದಂತೆ. ಇದ್ದಕ್ಕಿದ್ದಂತೆ ನೀವ್ಯಾರು ದಯವಿಟ್ಟು ನಮ್ಮ ಮನೆಗೆ ಬರಬೇಡಿ. ನಾನು ಹಾಕಿಕೊಳ್ಳುವ ಕಿತ್ತುಹೋದ ಬಟ್ಟೆಗಳು, ಅವತಾರಗಳನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿದ್ದ ನನ್ನ ರೂಪ ಅಳಿದುಹೋಗಬಹುದು!.
Saturday, July 21, 2018
ಎಮ್. ಆರ್. ಕಮಲಾ ---ನೀವು ನೋಡಿದವಳು
ನೀವು ನೋಡಿದವಳು....
ನಿಮ್ಮ ನೋಟ ನಾನಲ್ಲ
ನನ್ನ ಸೀರೆ, ಕುಂಕುಮ, ಬಿಚ್ಚಿದ ಕೂದಲು
ಅರಳುಗಣ್ಣು, ಭಾವಗಳ ಹೊಮ್ಮಿಸುವ ಚಿತ್ರ
ಇದ್ಯಾವುದು ನಾನಲ್ಲ.
ನನ್ನ ಸೀರೆ, ಕುಂಕುಮ, ಬಿಚ್ಚಿದ ಕೂದಲು
ಅರಳುಗಣ್ಣು, ಭಾವಗಳ ಹೊಮ್ಮಿಸುವ ಚಿತ್ರ
ಇದ್ಯಾವುದು ನಾನಲ್ಲ.
ಊಹಿಸುತ್ತ ಹೋಗುತ್ತೀರಿ
ನಿಮ್ಮದೇ ಕಲ್ಪನೆಗೆ ರೆಕ್ಕೆಪುಕ್ಕ ಹಚ್ಚಿ
ಸಾವಿರ ಕಣ್ಣ ನವಿಲಾಗಿ ನನ್ನ ಕುಣಿಸುತ್ತೀರಿ
ಇದ್ಯಾವುದು ನಾನಲ್ಲ
ನಿಮ್ಮದೇ ಕಲ್ಪನೆಗೆ ರೆಕ್ಕೆಪುಕ್ಕ ಹಚ್ಚಿ
ಸಾವಿರ ಕಣ್ಣ ನವಿಲಾಗಿ ನನ್ನ ಕುಣಿಸುತ್ತೀರಿ
ಇದ್ಯಾವುದು ನಾನಲ್ಲ
ನಿಮ್ಮ ರಾಗ ದ್ವೇಷದಮಲಿನಲಿ
ನನ್ನನ್ನು ನಾದಿ, ಕೆಂಪಗೆ ಕರಿದು
ಕುದಿವ ಸಕ್ಕರೆಯ ಪಾಕದಲ್ಲಿ ಅದ್ದುತ್ತೀರಿ
ಇದ್ಯಾವುದು ನಾನಲ್ಲ
ನನ್ನನ್ನು ನಾದಿ, ಕೆಂಪಗೆ ಕರಿದು
ಕುದಿವ ಸಕ್ಕರೆಯ ಪಾಕದಲ್ಲಿ ಅದ್ದುತ್ತೀರಿ
ಇದ್ಯಾವುದು ನಾನಲ್ಲ
ಓಟದ `ಹಿಮ'ದ ಹುಡುಗಿಯ
ಜಾತಿ, ಖ್ಯಾತಿಯ ಹುಡುಕಿದಂತೆ
ಹಿನ್ನೆಲೆ ಹುಡುಕುತ್ತ ಅಲೆದು ಬಳಲುತ್ತೀರಿ
ಇದ್ಯಾವುದು ನಾನಲ್ಲ
ಜಾತಿ, ಖ್ಯಾತಿಯ ಹುಡುಕಿದಂತೆ
ಹಿನ್ನೆಲೆ ಹುಡುಕುತ್ತ ಅಲೆದು ಬಳಲುತ್ತೀರಿ
ಇದ್ಯಾವುದು ನಾನಲ್ಲ
ಹುಲ್ಲು ಕಡ್ಡಿ, ಪುಟ್ಟ ಹೂವು, ಮುಳ್ಳು
ಮರಳು, ಕಡಲು, ಆಕಾಶದಲ್ಲೂ
ಅರ್ಥ ಹುಡುಕಿ,ತಡಕಿ ತೊಳಲುತ್ತೀರಿ
ಅಲ್ಲೂ ದಕ್ಕಿಲ್ಲ, ಇಲ್ಲೂ,,,,
ಮರಳು, ಕಡಲು, ಆಕಾಶದಲ್ಲೂ
ಅರ್ಥ ಹುಡುಕಿ,ತಡಕಿ ತೊಳಲುತ್ತೀರಿ
ಅಲ್ಲೂ ದಕ್ಕಿಲ್ಲ, ಇಲ್ಲೂ,,,,

,,,
Friday, June 15, 2018
ಎಮ್. ಆರ್. ಕಮಲಾ - ಎಷ್ಟು ವರ್ಷಗಳಾದವೋ ?
ಎಷ್ಟು ವರುಷಗಳಾದವೋ?
ಎಷ್ಟು ವರುಷಗಳಾದವೋ
ಅಂಗಳದಿ ನಿಂತ ನೀರಲ್ಲಿ ಗುಬ್ಬಿ ಮೈಯೊದರಿ?
ಅಂಗಳದಿ ನಿಂತ ನೀರಲ್ಲಿ ಗುಬ್ಬಿ ಮೈಯೊದರಿ?
ಎಷ್ಟು ವರುಷಗಳಾದವೋ
ಶಾಲೆಯ ಡೆಸ್ಕಿನಲ್ಲಿ ಹೆಸರ ಬರೆದು ಕೊರೆದು?
ಶಾಲೆಯ ಡೆಸ್ಕಿನಲ್ಲಿ ಹೆಸರ ಬರೆದು ಕೊರೆದು?
ಎಷ್ಟು ವರುಷಗಳಾದವೋ
ಹಿತ್ತಲಿನ ಹೂ ಕಿತ್ತ ಬೆರಳ ಘಮವ ಹೀರಿ?
ಹಿತ್ತಲಿನ ಹೂ ಕಿತ್ತ ಬೆರಳ ಘಮವ ಹೀರಿ?
ಎಷ್ಟು ವರುಷಗಳಾದವೋ
ಸೀದ ರಾಗಿರೊಟ್ಟಿಯ ಚೂರಿಗೆ ಬಡಿದಾಡಿ ?
ಸೀದ ರಾಗಿರೊಟ್ಟಿಯ ಚೂರಿಗೆ ಬಡಿದಾಡಿ ?

ಎಷ್ಟು ವರುಷಗಳಾದವೋ
ಗೋರಂಟಿ ಗಿಡದೆಲೆಯ ಜಜ್ಜಿ ಅಂಗೈಗೆ ಹಚ್ಚಿ?
ಗೋರಂಟಿ ಗಿಡದೆಲೆಯ ಜಜ್ಜಿ ಅಂಗೈಗೆ ಹಚ್ಚಿ?
ಎಷ್ಟು ವರುಷಗಳಾದವೋ
ಮನೆಯೊಳಗಿಳಿದ ಬಿಸಿಲ ಕೋಲ ಹಿಡಿದು?
ಮನೆಯೊಳಗಿಳಿದ ಬಿಸಿಲ ಕೋಲ ಹಿಡಿದು?
ಎಷ್ಟು ವರುಷಗಳಾದವೋ
ಅಕ್ಕರೆಯ ಕಣ್ಣಿನಲಿ ಸಕ್ಕರೆ ನೀರು ಹರಿದು?
ಅಕ್ಕರೆಯ ಕಣ್ಣಿನಲಿ ಸಕ್ಕರೆ ನೀರು ಹರಿದು?
ಎಷ್ಟು ವರುಷಗಳಾದವೋ
ಕಣ್ಣೊಳಗೆ ಒಂದೊಂದೇ ಕಾಮನಬಿಲ್ಲ ಬಣ್ಣವಿಳಿದು?
ಕಣ್ಣೊಳಗೆ ಒಂದೊಂದೇ ಕಾಮನಬಿಲ್ಲ ಬಣ್ಣವಿಳಿದು?
ವರುಷಗಳೆಷ್ಟಾದವು
ನನ್ನದೇ ನಿಜ ಮುಖವ ಕನ್ನಡಿಯಲ್ಲಿ ನೋಡಿ?!
ನನ್ನದೇ ನಿಜ ಮುಖವ ಕನ್ನಡಿಯಲ್ಲಿ ನೋಡಿ?!
Friday, November 25, 2016
ಎಮ್. ಆರ್. ಕಮಲ - ನೆತ್ತರಲಿ ನೆನೆದ ಚಂದ್ರ { ಅರಬ್ ಮಹಿಳಾ ಕಾವ್ಯ ಲೋಕ }

Arabian Women's Poetry translated to Kannada by M. R. Kamala -NETTARALI NENEDA CHANDRA { 2016 }
Sunday, November 6, 2016
Sunday, January 3, 2016
Friday, March 7, 2014
Saturday, October 5, 2013
Monday, August 19, 2013
ಶಾಕುಂತಲೋಪಾಖ್ಯಾನ -ಎಮ್.ಆರ್. ಕಮಲಾ
ಲಡಾಯಿ ಪ್ರಕಾಶನ: ಶಾಕುಂತಲೋಪಾಖ್ಯಾನ: - ಎಂ. ಆರ್ . ಕಮಲಾ ಅಪ್ಸರೆಯ ಮಗಳು, ಕೂದಲೆಳೆಯಲ್ಲಿ, ಉಗುರ ತುದಿಯಲ್ಲೂ ಸೌಂದರ್ಯ! ಆಶ್ರಮದ ತರು, ಲತೆಗು ಉಕ್ಕಿ ಬಂದು ಜೀವೋನ್ಮಾದ ಧುಮ್ಮಿಕ್ಕಿ ಹರಿವ...
M. R. KAMALA - Shakuntalopaakhyana
M. R. KAMALA - Shakuntalopaakhyana
Subscribe to:
Posts (Atom)


