stat Counter



Sunday, October 17, 2010

Govinda Pai (ಗೋವಿಂದ ಪೈ)

ರಾಷ್ಟ್ರಕವಿ ಗೋವಿಂದ ಪೈ
ಮುರಳೀಧರ ಉಪಾಧ್ಯ ಹಿರಿಯಡಕ

ಗೋವಿಂದ ಪೈಗಳು ಮುದ್ದಣನಿಗಿಂತ ಹದಿಮೂರು ವರ್ಷ, ಪಂಜೆ ಮಂಗೇಶರಾಯರಿಗಿಂತ ಒಂಬತ್ತು ವರ್ಷ ಚಿಕ್ಕವರು. ಮಂಗಳೂರಿನ ರಥಬೀದಿಯ ಸಾಹುಕಾರ ಬಾಬಾ ಪೈ ಮನೆತನ ವೈಷ್ಣವ ಸಂಪ್ರದಾಯದ ಗೌಡ ಸಾರಸ್ವತ ಬ್ರಾಹ್ಮಣರ ಪ್ರಸಿದ್ಧ ಮನೆತನವಾಗಿತ್ತು. ಸಾಹುಕಾರ ತಿಮ್ಮಪ್ಪ-ದೇವಕಿ ದಂಪತಿಗಳ ಚೊಚ್ಚಲ ಮಗನಾಗಿ ಗೋವಿಂದ ಪೈಗಳು ಜನಿಸಿದ್ದು ಕ್ರಿ.ಶ. 1883ನೆಯ ಇಸವಿ ಮಾರ್ಚ್ 23ರಂದು. ಅವರು ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಮುಗಿದ ನಂತರ ನೆಲೆಸಿದ್ದು, ಮಂಜೇಶ್ವರದಲ್ಲಿದ್ದ ತನ್ನ ಮಾತಾಮಹ ಲಕ್ಷ್ಮಣ ಶ್ಯಾನುಭಾಗರ ಮನೆಯಲ್ಲಿ.

ಮಂಗಳೂರಿನ ಮಿಶನ್ ಶಾಲೆಯಲ್ಲಿ ಕಲಿತ ಪೈಗಳು ಮುಂದೆ ಕೆನರಾ ಹೈಸ್ಕೂಲು ಸೇರಿದರು. ಕೆನರಾ ಹೈಸ್ಕೂಲಿನಲ್ಲಿ (1897-98) ಬಂಟವಾಳ ವಾಮನ ಬಾಳಿಗ ಮತ್ತು ಬಂಟವಾಳ ಪುಂಡಲೀಕ ಬಾಳಿಗರು ಅವರ ಕನ್ನಡ ಅಧ್ಯಾಪಕರಾಗಿದ್ದರು. ಎಂ.ಎನ್. ಕಾಮತರು ಸಹಪಾಠಿಗಳಾಗಿದ್ದರು. ಗೋವಿಂದ ಪೈಗಳು ಮತ್ತು Angel (ಮಾತೆ) ಎಂಬ ಕೈಬರಹದ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಎಫ್.ಎ. (1899-1900) ವಿದ್ಯಾರ್ಥಿಯಾಗಿದ್ದಾಗ ತನ್ನ ಪ್ರಾಧ್ಯಾಪಕರಾಗಿದ್ದ ಪಂಜೆ ಮಂಗೇಶರಾವ್, ಅರವಳ್ಳಿ ಸುಬ್ಬರಾವ್, ಯು.ಎಸ್. ರಾಘವೇಂದ್ರರಾವ್, ಎಂ. ಶೇಷಗಿರಿ ಪ್ರಭು, ಮಾರ್ಕ್ ಹಂಟರ್ , ಅಕಾಲ ಮೃತ್ಯುವಿಗೀಡಾದ ಸಹಪಾಠಿ ಕುಂಬ್ಳೆ ನರಸಿಂಗರಾವ್ ಇವರನ್ನು ಪೈಗಳು ತಮ್ಮ ಉಪನ್ಯಾಸವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ('Fox' ಎಂಬ ಅಡ್ಡ ಹೆಸರಿದ್ದ ಅಧ್ಯಾಪಕರಿಗೆ ವರ್ಗವಾಗಿ ಹಂಟರ್ ಅವರು ಬಂದಾಗ ವಿದ್ಯಾರ್ಥಿ ವೃಂದದಲ್ಲಿ HUNTER CAME AND THE FOX RAN AWAY ಎಂಬ ಹೊಸ ಗಾದೆ ಹುಟ್ಟಿತಂತೆ).
ಯಕ್ಷಗಾನ ಪ್ರದರ್ಶನಗಳು, ಸಾಂಗಲಿಯ ಮರಾಠಿ ನಾಟಕ ಮಂಡಳಿಯ ನಾಟಕಗಳು, ಬಾಸೆಲ್ ಮಿಶನ್‍ನ 'ಹಳಗನ್ನಡ ವ್ಯಾಕರಣ ಸೂತ್ರಗಳು' (1899) ಎಂಬ ಪುಸ್ತಕ, 'ಸುವಾಸಿನಿ' ಪತ್ರಿಕೆ - ಇವು ಬಾಲ್ಯದಲ್ಲಿ ಗೋವಿಂದ ಪೈಗಳ ಸಾಹಿತ್ಯಸೃಷ್ಟಿಗೆ ಪ್ರೇರಣೆ ನೀಡಿದುವು. ಗೋವಿಂದ ಪೈಗಳು ಹದಿನೇಳನೆಯ ವರ್ಷದಲ್ಲಿ (1900) 'ಸುವಾಸಿನಿ' ಪತ್ರಿಕೆಯನ್ನು ಕುರಿತು ಬರೆದ ಮೂರು ಕಂದಪದ್ಯಗಳಿಗೆ ಆ ಪತ್ರಿಕೆ ಐದು ರೂಪಾಯಿ ಬಹುಮಾನ ನೀಡಿತು. ಕವಿಗಳಿಗೆ ಹುಚ್ಚು ಹಿಡಿಯುತ್ತದೆಂಬ ನಂಬಿಕೆಯಿಂದ ಪೈಗಳ ತಾಯಿ ಕವನ ಬರೆದುದಕ್ಕಾಗಿ ಮಗನನ್ನು ಒಮ್ಮೆ ದಂಡಿಸಿದರಂತೆ. ಗೋವಿಂದ ಪೈಗಳು ವೃತ್ತಕಂದಗಳಲ್ಲಿ ಭಾಷಾಂತರಿಸಿದ ಶೇಕ್ಸ್ ಪಿಯರ್ ನ TWELFTH NIGHT ನಾಟಕದ ಕೆಲವು ದೃಶ್ಯಗಳನ್ನು ಓದಿದ ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಪ್ಪ) ಅದನ್ನು ಮುಂದುವರಿಸಲು ಸಲಹೆ ನೀಡಿದ್ದರು.

ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವಧಿಯಲ್ಲಿ ಪೈಗಳು ಬಹುಭಾಷಾ ಪ್ರವೀಣರಾಗಿ ಬೆಳೆದರು. ಆಗ ಡಾ ಎಸ್. ರಾಧಾಕೃಷ್ಣನ್ ಅವರ ಸಹಪಾಠಿಯಾಗಿದ್ದರು. ತಂದೆಯ ಅನಾರೋಗ್ಯದ ಸುದ್ದಿ ಬಂದುದರಿಂದಾಗಿ, ಗೋವಿಂದ ಪೈಗಳು ಅಂತಿಮ ಬಿ.ಎ. ಪರೀಕ್ಷೆಯನ್ನು ಪೂರ್ತಿಗೊಳಿಸದೆ ಊರಿಗೆ ಹಿಂದಿರುಗಿದರು. ಅವರು ಉತ್ತರಿಸಿದ್ದ ಇಂಗ್ಲಿಷ್ ಭಾಷಾವಿಷಯದಲ್ಲಿ ವಿಶ್ವವಿದ್ಯಾನಿಲಯದ ಮೊದಲ ಸ್ಥಾನ - ಬಂಗಾರದ ಪದಕ - ಪಡೆದರು.
ಸುಮಾರು 1909ರಲ್ಲಿ ನಡೆದಿರಬಹುದಾದ ಗೋವಿಂದ ಪೈಗಳ ಮದುವೆಯ ತೇದಿ ಲಭ್ಯವಿಲ್ಲ. ಅವರ ಪತ್ನಿ ಲಕ್ಷ್ಮಿ ಯಾನೆ ಕೃಷ್ಣಾಬಾಯಿ ಮುದ್ದಣನ ಮನೋರಮೆಯಂಥ ಸಹೃದಯಿನಿಯಾಗಿದ್ದರು. ಪೈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಕೃಷ್ಣಾಬಾಯಿ 1927ರಲ್ಲಿ ಉಬ್ಬಸ ಉಲ್ಬಣಗೊಂಡು ತೀರಿಕೊಂಡರು. ತನ್ನ 44ನೆಯ ವಯಸ್ಸಿನಲ್ಲಿ ವಿಧುರರಾದ ಗೋವಿಂದ ಪೈಗಳು ಮರುಮದುವೆಯಾಗಲಿಲ್ಲ. ಹೆಂಡತಿಯ ಸಾವು ಅವರ ಜೀವನಕ್ಕೆ ತಿರುವು ನೀಡಿದ ದೊಡ್ಡ ಆಘಾತವಾಗಿತ್ತು. ವಿಪ್ರಲಂಭ ಮತ್ತು ಭಕ್ತಿಗಳು ಸಂಲಗ್ನಗೊಂಡಿರುವ 'ನಂದಾದೀಪ' ಕವನ ಮಾಲಿಕೆಯನ್ನು ಪೈಗಳು ಪತ್ನಿಯ ಸವಿನೆನಪಿಗಾಗಿ ಬರೆದರು. ನಾನು ಹೆಚ್ಚಾಗಿ ಹಾಡುವುದು ನೊಂದಾಗ ಎಂದ ಪೈಗಳ ಕಾವ್ಯದ ಒಂದು ಮುಖ್ಯ ವಸ್ತು ಸಾವು.

ಆಗರ್ಭ ಶ್ರೀಮಂತರಾಗಿದ್ದ ಗೋವಿಂದ ಪೈಗಳು ಯಾವ ಉದ್ಯೋಗಕ್ಕೂ ಸೇರಲಿಲ್ಲ. 1950ರ ದಶಕದಲ್ಲಿ ರೂ.1500 ಭೂಕಂದಾಯ ಕಟ್ಟುತ್ತಿದ್ದ ಪೈಗಳನ್ನು ಸರಕಾರ ಗೌರವ ನ್ಯಾಯಾಧೀಶರನ್ನಾಗಿ ನೇಮಿಸಿತ್ತು. ಸರಸ್ವತಿಯ ಜತೆಗೆ ಲಕ್ಷ್ಮಿಯ ಕೃಪಾಕಟಾಕ್ಷದಲ್ಲಿದ್ದ ಅವರಿಗೆ ತನ್ನ ಅಧ್ಯಯನ ಸಂಶೋಧನೆಗಳಿಗಾಗಿ ಸಾವಿರಾರು ಗ್ರಂಥಗಳನ್ನು ಕೊಂಡುಕೊಳ್ಳುವುದು ಕಷ್ಟವಾಗಲಿಲ್ಲ. ಪೈಗಳು ತನ್ನ ಯೌವನದಲ್ಲಿ ಬರೋಡಾ ಸಂಸ್ಥಾನದ ನೌಸಾದಿಯಲ್ಲಿ ಅರವಿಂದ ಘೋಷ್‍ರ ಪ್ರೇರಣೆಯಿಂದ ಸ್ಥಾಪನೆಗೊಂಡಿದ್ದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಸೇರಲೆಂದು ಹೋಗಿದ್ದರು. ಪತ್ನಿಯ ಅನಾರೋಗ್ಯದ ಸುದ್ದಿ ಬಂದುದರಿಂದ ಅವರು ಊರಿಗೆ ಹಿಂದಿರುಗಿದರು. ಈ ಭೇಟಿಯಿಂದಾಗಿ ಅವರಿಗೆ ಕಾಕಾ ಕಾಲೇಲ್ಕರ್ (ಜನನ 1885) ಅವರ ಸ್ನೇಹಲಾಭವಾಯಿತು.

"ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ. ಕನ್ನಡ ಸಾಕುತಾಯಿ, ನನ್ನನ್ನು ಸಾಕಿದ ದಾಯಿ" ಎನ್ನುತ್ತಿದ್ದ ಗೋವಿಂದ ಪೈಗಳು 1925ರಲ್ಲಿ ಕೊಂಕಣಿ ಲೇಖನಗಳನ್ನು ಬರೆದರು. ಆಗ ಕೊಂಕಣಿ ಪತ್ರಿಕೋದ್ಯಮ ಬೆಳೆದಿರಲಿಲ್ಲ. ಆದ್ದರಿಂದ ಅವರ ಕೊಂಕಣಿ ಬರವಣಿಗೆಗೆ ಉತ್ತೇಜನ ಸಿಗಲಿಲ್ಲ. 1911ರಲ್ಲಿ ಆದಿಪ್ರಾಸ ಕೈಬಿಟ್ಟು ಬರೆದ 'ಹೊಲೆಯನು ಯಾರು?' ಮತ್ತಿತರ ಕವನಗಳಿಂದ ಗೋವಿಂದ ಪೈಗಳು ವಿವಾದಗ್ರಸ್ತ ಕವಿಯಾಗಿ ಪ್ರಸಿದ್ಧರಾದರು. "ಇಂದು ಒಬ್ಬನೇ ನಡೆವ ಮೇಕೆ ದಾರಿಯೇ ಮುಂದು ತೇರು ಎಳೆವ ಹೆದ್ದಾರಿ" ಎಂಬ ಅವರ ಭವಿಷ್ಯವಾಣಿ ನಿಜವಾಯಿತು. 1927ರಲ್ಲಿ ತನ್ನ ಹೆಂಡತಿಯ ಅಗಲಿಕೆಯ ಅನಂತರ ಅಂತರಂಗದಲ್ಲಿ ಒಂಟಿಯಾದ ಪೈಗಳು ಸಂಶೋಧನ ಕ್ಷೇತ್ರದಲ್ಲಿ ತಲ್ಲೀನರಾದರು. ಅವರ ಅಭಿಮಾನಿ ಕವಿಮಿತ್ರ ಪಾಂಡೇಶ್ವರ ಗಣಪತಿರಾಯರು 'ಪಂಡಿತವಕ್ಕಿ' ಎಂಬ ಕವನ ಬರೆದು ಕಾವ್ಯಸೃಷ್ಟಿಯನ್ನು ಅಲಕ್ಷಿಸಬಾರದೆಂದು ಗೋವಿಂದ ಪೈಗಳನ್ನು ವಿನಂತಿಸಿದರು. ಪೈಗಳು ತನ್ನ ಹೆಚ್ಚಿನ ಸಂಪ್ರಬಂಧಗಳನ್ನು ಜನಸಾಮಾನ್ಯರಿಗೆ ಸುಲಭಗ್ರಾಹ್ಯವಾಗಿದ್ದ ವಾರ, ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದರು. ಅವರು ಬದುಕಿದ್ದಾಗ ಅವರ ಸಂಪ್ರಬಂಧಗಳ ಒಂದು ಚಿಕ್ಕ ಸಂಕಲನ ('ಮೂರು ಉಪನ್ಯಾಸಗಳು' - 1940) ಮಾತ್ರ ಪ್ರಕಟವಾಯಿತು. 1961ರ ಜುಲೈ 11ರಂದು ಪೈಗಳು ತನ್ನ ಬರಹಗಳ ಕೃತಿಸ್ವಾಮ್ಯವನ್ನು ಮೈಸೂರಿನ ಕಾವ್ಯಾಲಯದ ಕೂಡಲಿ ಚಿದಂಬರಂ ಅವರಿಗೆ ನೀಡಿದರು.

1947ರ ರಾಷ್ಟ್ರ ವಿಭಜನೆ ಮತ್ತು 1956ರ ದಕ್ಷಿಣ ಕನ್ನಡ ಜಿಲ್ಲೆ ವಿಭಜನೆ (ಕಾಸರಗೋಡು ತಾಲೂಕು ಕೇರಳ ರಾಜ್ಯಕ್ಕೆ ಸೇರಿದ್ದು) ಇವುಗಳಿಂದ ಗೋವಿಂದ ಪೈಗಳು ಭಾವೋದ್ರಿಕ್ತರಾದರು. 1963ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ನೀಡಿದ ಗೌರವ ಡಾಕ್ಟರೇಟನ್ನು ಪೈಗಳು ತಿರಸ್ಕರಿಸಿದರು. ಕಾಸರಗೋಡು ಕೇರಳಕ್ಕೆ ಸೇರಲು ಕಾರಣರಾದ ಕೆ.ಎಂ. ಪಣಿಕ್ಕರ್ ಆಗ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದುದು ಪೈಗಳ ಈ ನಿರ್ಧಾರದ ಹಿಂದಿನ ಪ್ರಚ್ಛನ್ನ ಕಾರಣವಾಗಿತ್ತಂತೆ. ಮದ್ರಾಸು ಸರಕಾರ 1949ರಲ್ಲಿ ಗೋವಿಂದ ಪೈಗಳಿಗೆ ರಾಷ್ಟ್ರಕವಿ ಬಿರುದನ್ನಿತ್ತು ಗೌರವಿಸಿತು. 1950ರಲ್ಲಿ ಪೈಗಳು ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಗೋವಿಂದ ಪೈಗಳ ಸಂಪ್ರಬಂಧ ಸೃಷ್ಟಿ 1959ರ ಅನಂತರ ಕಡಿಮೆಯಾಯಿತು. 1960-62ರ ನಡುವೆ ಅವರು ಪರಿಷ್ಕರಿಸಿದ 'ಮಂಜೇಶ್ವರ ದೇವಸ್ಥಾನ' ಅವರ ಕೊನೆಯ ಸಂಶೋಧನ ಲೇಖನವಾಯಿತು. 3-10-1962ರಲ್ಲಿ ಬರೆದ ಪತ್ರವೊಂದರಲ್ಲಿ ನನ್ನ ವಯಸ್ಸಿನ 80ನೆ ಪರ್ವದಲ್ಲಿದ್ದೇನೆ. ಅದಾಗಿ ಯಾವುದನ್ನಾದರೂ ಹೊಸತನ್ನು ಓದಿ ನೋಡಬೇಕೆಂಬ ಇಷ್ಟವೂ ಇಲ್ಲ, ಓದುವ ತಾಳ್ಮೆಯೂ ಇಲ್ಲ ಎಂದು ಬರೆದಿದ್ದಾರೆ. 1963 ಸೆಪ್ಟೆಂಬರ್ ನಲ್ಲಿ ಜ್ವರದಿಂದ ಬಳಲುತ್ತಿದ್ದ ಪೈಗಳಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಗೋವಿಂದ ಪೈಗಳು ಸೆಪ್ಟೆಂಬರ್ 6, 1963ರಂದು ಶುಕ್ರವಾರ ಬೆಳಿಗ್ಗೆ 9-10ಕ್ಕೆ ಮಂಗಳೂರಿನಲ್ಲಿ ತಮ್ಮ ತಮ್ಮನ ಮಗ ತುಕಾರಾಮ ಪೈಗಳ ಮನೆಯಲ್ಲಿ ನಿಧನರಾದರು.

ವ್ಯಕ್ತಿತ್ವ


ದ.ರಾ. ಬೇಂದ್ರೆಯವರು ಗೋವಿಂದ ಪೈಗಳನ್ನು ಕುರಿತ ತಮ್ಮ ಸಾನೆಟ್‍ನಲ್ಲಿ "ಕಲ್ಲು-ಕಾಗದ-ಕಡತಗಳಲ್ಲಿ ಕಾಲನ ಕಾಲು ಸಿಕ್ಕು ತೊಳಲಾಡುವಲ್ಲಿ ಕುಣಿಕೆ ಬಿಡಿಸಿದಿರಣ್ಣ ! ...... ಹರಸಿದಿರಿ ತರುಣರನು. ಆ ಅಸೂಯೆಯ ದಗ್ಧ ನೀವು ಕಾಲಜ್ಞಾನಿ ಮುಗ್ಧ, ಅಕ್ಕರಿಗ ವಿದಗ್ಧ" ಎಂದಿದ್ದಾರೆ. 'ತಾವೊಂದು ಗೊಮ್ಮಟಸಮ ಮಹಾಕಾವ್ಯ' ಎಂದಿದ್ದಾರೆ ಕುವೆಂಪು. ಸಂಶೋಧಕ ಕವಿ ಬನ್ನಂಜೆ ಗೋವಿಂದಾಚಾರ್ಯರಿಗೆ 'ಹಳೆಯ ಕಾಲದ ಮನೆಯ' ಪೈಗಳು 'ಅಲ್ಲಿ ಕಾಲಿಟ್ಟವರ ಬಗೆ ತುಂಬ ಹೊಸತನದ ಬೆಳಕು' ತುಂಬುವ 'ಮಗುವಿನಂಥದೆ ನಗು'ವಿನ 'ಬೆಳ್ಳಿಮೀಸೆಯ ಮಗು'ವಾಗಿ ಕಂಡರು.

ಖಂಡತುಂಡವಾದ ಅವರ ಮಾತಿನಂತೆಯೇ, ಮನಸ್ಸಿನಂತೆಯೇ ಅವರ ಆಕೃತಿ. ಆ ನೆರೆತ ಬೆಳ್ಳಿಮೀಸೆ; ಆ ಸಿಂಹದಂಥ ರೂಪ; ತುಂಡು ತೋಳಿನ ಜುಬ್ಬ ಅಥವಾ ಬನಿಯನ್, ಉದ್ದದಟ್ಟಿ, ಕೆಲವೇಳೆ ಛತ್ರಿ, ಮಂಗಳೂರು ಚಪ್ಪಲಿ, ಇಷ್ಟೆ ಅವರ ಪೋಷಾಕು. ಏತಕ್ಕಾದರೂ ಬೆರಳು ಕೊಡವುತ್ತಾ, ಮೀಸೆ ಕಡಿಯುತ್ತಾ, ಬೀಡಿ ಸೇದುತ್ತಾ ಅದು ಯಾವುದೋ ವಿಚಾರವನ್ನು ಹೊರಗೆಡಹುತ್ತಾ ಇದ್ದಾಗ ಅವರನ್ನು ನೋಡುವುದು ಒಂದು ಹಬ್ಬವಾಗುತ್ತಿತ್ತು. ಮನಸ್ಸು, ಮಾತು ನಡತೆಗಳಲ್ಲಿ ಅಂತರವಿಲ್ಲದ ಹಿರಿಮೆ ಅವರದು. ಎಲ್ಲಕ್ಕಿಂತ ವಿಶಿಷ್ಟವಾದುದು ಅವರ ವ್ಯಕ್ತಿಗುಣ. ಆ ಸರಸ ಸಂಭಾಷಣೆ, ಆ ವಿಶ್ವಾಸ, ಆ ಗೆಳೆತನ, ಆ ನಗು, ಆ ಮಗುವಿನಂಥ ಮನಸ್ಸು ನಮಗೆ ಇನ್ನೆಲ್ಲಿ ದೊರೆತಾವು? - ನಿಟ್ಟೂರು ಶ್ರೀನಿವಾಸರಾಯರು ಬಣ್ಣಿಸುವ ಗೋವಿಂದ ಪೈಗಳ ವ್ಯಕ್ತಿಚಿತ್ರವಿದು.
ಅತಿಥಿ ಸತ್ಕಾರಕ್ಕೆ ಪ್ರಸಿದ್ಧರಾಗಿದ್ದ ಗೋವಿಂದ ಪೈಗಳ ಬಗ್ಗೆ ದಂತಕತೆಗಳು ಹುಟ್ಟಿಬೆಳೆದಿವೆ. ಗೋವಿಂದ ಪೈ, ಸುಬ್ರಾಯ ಪೈ ಸಹೋದರರ ಆತ್ಮೀಯ ಉಪಚಾರವನ್ನು, ಗಡದ್ದಾದ ಊಟ-ಉಪಹಾರಗಳನ್ನು ಮಂಜೇಶ್ವರದ ಕಡಲದಂಡೆಯಲ್ಲಿ ಪಟ್ಟಾಂಗ ಹೊಡೆದುದನ್ನು, ಶಿವರಾಮ ಕಾರಂತ, ಮಾಸ್ತಿ, ಜಿ.ಪಿ. ರಾಜರತ್ನಂ, ದ.ಬಾ. ಕುಲಕರ್ಣಿ, ಶ್ರೀನಿವಾಸ ಹಾವನೂರ ಮತ್ತಿತರ ಲೇಖಕರು ತಮ್ಮ ಬರಹಗಳಲ್ಲಿ ನೆನಪಿಸಿಕೊಂಡಿದ್ದಾರೆ. 'ನಾನು ಹದಿನೆಂಟು ವರ್ಷ ಬೀಡಿ, ಹದಿನೆಂಟು ವರ್ಷ ಸಿಗರೇಟ್, ಮತ್ತೆ ಸುಮಾರಾಗಿ ಹದಿನೆಂಟು ವರ್ಷ ಬೀಡಿ ಹೀಗೆ 54 ವರುಷ ಹೊಗೆ ಕುಡಿದಿದ್ದೇನೆ' ಎನ್ನುವ ಪೈಗಳ ವಿವರಣೆಯನ್ನು ದ.ಬಾ. ಕುಲಕರ್ಣಿ ದಾಖಲಿಸಿದ್ದಾರೆ. ಸಂಶೋಧನ ಜಿಜ್ಞಾಸೆಯ ಅಭಿಪ್ರಾಯಭೇದಗಳಿಗಾಗಿ ಪೈಗಳು ಸ್ನೇಹಿತರನ್ನು ದೂರ ಮಾಡಲಿಲ್ಲ.

ತನ್ನ ಸ್ವಂತ ಕೃತಿಗಳ ಕುರಿತ ವಿಮರ್ಶೆಯಲ್ಲಿ ಪೈಗಳ ದೊಡ್ಡತನ ಕಾಣಿಸುತ್ತದೆ - "ನಾನು ಕವಿಯೇ ಅಹುದೋ ಅಲ್ಲವೋ ಎಂಬುದು ಭವಿಷ್ಯಕ್ಕೆ ಬಿಟ್ಟ ಪ್ರಶ್ನೆ". ತನ್ನ 'ಗಿಳಿವಿಂಡು' ಕವನ ಸಂಕಲವನ್ನು ಕುರಿತು ಅವರು 'ಗಿಳಿವಿಂಡಿ'ನಲ್ಲಿಯ ಕೆಲವು ಮೂರನೆಯ ತರಗತಿ (THIRD RATE)ಯ ಕವನಗಳನ್ನು ತಗೆದು, ಹೊಸ ಕೆಲವನ್ನು ಸೇರಿಸಿ, ಅದೇ ಹೆಸರನ್ನು ಇಲ್ಲವೆ ಬೇರೊಂದನ್ನಿಟ್ಟು ಸದ್ಯದಲ್ಲೆ ಪ್ರಕಟಿಸಬೇಕೆಂದು ಯೋಚಿಸಿದ್ದೇನೆ ಎಂದಿದ್ದಾರೆ. ಜಗತ್ತಿನ ಹಲವು ಪ್ರಮುಖ ಭಾಷೆಗಳ ಗ್ರಂಥಗಳಿಂದ ಕೂಡಿದ ನಾಡಿನ ಅಪೂರ್ವ ಖಾಸಗಿ ಗ್ರಂಥಭಂಡಾರ ಗೋವಿಂದ ಪೈಗಳಲ್ಲಿತ್ತು. ಪೈಗಳ ಮನೆಗೆ ಭೇಟಿಯಿತ್ತ ನಾಟಕಕಾರ ಶ್ರೀರಂಗರಿಗೆ ಪುಸ್ತಕಗಳಿಂದಲೇ ಗೋಡೆಗಳನ್ನು ನಿರ್ಮಿಸಿದ್ದಾರೇನೊದ್ದಾರೇನೊ ಅನ್ನಿಸಿತು. ಉಳ್ಳವರ ವರ್ಗಕ್ಕೆ ಸೇರಿದ್ದ ಪೈಗಳು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ದಾನಶೂರರಾಗಿದ್ದರು. ಮಕ್ಕಳನ್ನು ಕತೆಗಳ ಮಾಯಾಲೋಕ್ಕೆ ಕರೆದೊಯ್ಯುವುದು ಅವರಿಗೆ ತುಂಬ ಇಷ್ಟದ ಕೆಲಸವಾಗಿತ್ತು.

ಇದುವರೆಗೆ ಪ್ರಕಟವಾಗಿರುವ ಗೋವಿಂದ ಪೈಗಳ ನಾಲ್ಕು ಪತ್ರಸಂಕಲನಗಳಲ್ಲಿ ಅವರ ಇನ್ನೂರಕ್ಕಿಂತ ಹೆಚ್ಚು ಪತ್ರಗಳು ಪ್ರಕಟಗೊಂಡಿವೆ. ಈ ಪತ್ರಗಳು ಪೈಗಳ ಪ್ರಾಮಾಣಿಕತೆ, ವಿನಯ, ಪರೋಪಕಾರ, ಸ್ಮೃತಿಶಕ್ತಿ, ಸಂಶೋಧನೆಯ ಒಳನೋಟ, ಮುಪ್ಪಿನ ಕಷ್ಟಗಳು - ಇವನ್ನೆಲ್ಲ ವಿವರಿಸುತ್ತವೆ. ಉಡುಪಿಯ ಲೇಖಕಿ ಸರಸ್ವತಿಬಾಯಿ ರಾಜವಾಡೆಯವರ ಪತ್ರಗಳಿಗೆ ನೀಡಿದ ಉತ್ತರಗಳಲ್ಲಿ ಪೈಗಳು ಆಪ್ತಸಲಹೆಯ ತಜ್ಞರಂತೆ ಕಾಣಿಸುತ್ತಾರೆ. ಇಂಗ್ಲೆಂಡಿನ ತತ್ತ್ವಜ್ಞಾನಿ ಹರ್ಬರ್ಟ್ ಸ್ಪೆನ್ಸರ್(1820-1903)ನ ಗ್ರಂಥವನ್ನು ಓದಿ, ತನ್ನ ಅಭಿಪ್ರಾಯ ತಿಳಿಸಿ ಅವರಿಗೆ ಪತ್ರ ಬರೆದಿದ್ದರು. ಸ್ಪೆನ್ಸರ್‍ ರಿಂದ ಈ ಪತ್ರಕ್ಕೆ ಉತ್ತರ ಬಂದಿತ್ತು.
"ಯಾರನ್ಯ ಧರ್ಮವಂ ಯಾರನ್ಯ ಜನಗಳ ಸ್ವಾತಂತ್ರ್ಯವಂ ಮನ್ನಿಸುವರೋ ತಮ್ಮದರಂತೆ, ಅವರ ಧರ್ಮಂ, ಜನಂ, ಸ್ವಾತಂತ್ರ್ಯ ಬಾನಂತೆ ಬೆಳೆಯುತ್ತಿದೆ" - ಗೋವಿಂದ ಪೈಗಳ 'ವೈಶಾಖಿ'ಯಲ್ಲಿ ಬುದ್ಧ ಹೇಳುವ ಮಾತುಗಳಿವು. 'ಸರ್ವಧರ್ಮ ಸಮಭಾವ'ದ ಆದರ್ಶವನ್ನು ಗೋವಿಂದ ಪೈಗಳು ನೋಂಪಿಯಂತೆ ಪಾಲಿಸುತ್ತಿದ್ದರು. 'ವೈಶಾಖಿ', 'ಗೊಲ್ಗೊಥಾ' ಖಂಡಕಾವ್ಯಗಳಲ್ಲಿ, ಯೇಸು-ಕೃಷ್ಣ, 'ಶ್ವಪಚನ್ನು ದೊರೆಕೊಳದೆ ದಿವಕೇರ್ವೆನೆಂತು?’, 'ಹೊಲೆಯನು ಯಾರು?' ಕವನಗಳಲ್ಲಿ ಆಸ್ತಿಕ ಗೋವಿಂದ ಪೈಗಳ ಉದಾರವಾದಿ ಧಾರ್ಮಿಕ-ಸಾಮಾಜಿಕ ನಿಲುವನ್ನು ಕಾಣುತ್ತೇವೆ.

'ವರುಷವೆರಡಾಯ್ತು' (1949), 'ರಾಹುವನು ತೊಲಗಿಸಿದೊ ಕೇತುವನು ತಂದೆ' (1959), 'ಸತ್ತು ಗಡ ಬದುಕಿದಿರಿ ಮಹಾತ್ಮ ನೀ ಧನ್ಯ' (1957) 'ವರುಷ ಹದಿನಾಲ್ಕು ನೀನೆಮೆಗೆ ಬಿಡುಗಡೆಯ ನೀಡಿ' (1962) ಇಂಥ ರಾಜಿಕೀಯ ಕವನಗಳಲ್ಲಿ ಸ್ವಾತಂತ್ರ್ಯೋತ್ತರ ರಾಜಕೀಯವನ್ನು ಕುರಿತ ಪೈಗಳ ಅತೃಪ್ತಿ, ನಿರಾಶೆ ಸ್ಪಷ್ಟವಾಗಿ ತೋರುತ್ತದೆ. ಕಾಶ್ಮೀರ ಮತ್ತು ಗೋವಾಗಳ ವಿಮೋಚನೆಯಾಗದಿದ್ದುದರಿಂದ ಕವಿ ಪೈಗಳು ಅಸಮಾಧಾನಗೊಂಡಿದ್ದರು. ಪ್ರಜಾಪ್ರಭುತ್ವದ ಸರಕಾರ ನಿರಂಕುಶತೆಯತ್ತ ಸಾಗುತ್ತಿರುವುದನ್ನು ಅವರು ಗುರುತಿಸಿದ್ದರು. ಮಹಾತ್ಮಾ ಗಾಂಧೀಜಿಯನ್ನು ಕುರಿತ ಪೈಗಳ ಭಕ್ತಿ-ಗೌರವ 'ದೆಹಲಿ ಅಥವಾ ಮಹಾತ್ಮನ (ಗಾಂಧಿಯ) ಕಡೆಯ ದಿನ' ಮತ್ತಿತರ ಕವನಗಳಲ್ಲಿ ಅಭಿವ್ಯಕ್ತಗೊಂಡಿದೆ.
'ಗಿಳಿವಿಂಡು' (1930), 'ನಂದಾದೀಪ' (1968), 'ಹೃದಯರಂಗ' (1969), ಇಂಗಡಲು (1983) - ಇವು ಗೋವಿಂದ ಪೈಗಳ ಕವನ ಸಂಕಲನಗಳು. ಈಗ ಲಭ್ಯವಿರುವ ಗೋವಿಂದ ಪೈಗಳ ಒಟ್ಟು ಕವನಗಳು 177. ಕನ್ನಡದ ಮೊತ್ತಮೊದಲ ಸಾನೆಟ್ ಬರೆದವರು ಪೈಗಳು. ಕಥನ ಕವನ, ಪ್ರಗಾಥ, ಖಂಡಕಾವ್ಯ, ಸಾನೆಟ್ - ಇವುಗಳಲ್ಲಿ ಅವರ ಸಾಧನೆಯನ್ನು ಅಲಕ್ಷಿಸುವಂತಿಲ್ಲ. ಆದಿ ಪ್ರಾಸ ನಿರಾಕರಣೆಯ ಅವರ ನಿರ್ಧಾರ ಹೊಸಗನ್ನಡ ಕಾವ್ಯದ ಮುನ್ನಡೆಗೆ ದಿಕ್ಸೂಚಿಯಾಯಿತು. ಕೀರ್ತಿನಾಥ ಕುರ್ತಕೋಟಿಯವರು ಬರೆದಿರುವಂತೆ ಗೋವಿಂದ ಪೈಗಳ ಕಾವ್ಯ ಹಳೆ ಹೊಸ ಕಾವ್ಯಗಳನ್ನು ಒಂದೆಡೆಗೆ ಜೋಡಿಸುವ ಸೇತುವೆಯಾಗಿದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ ಅವರ ಕಾವ್ಯದ ಭಾಷೆ ಮಿಶ್ರಲೋಹದಂತೆ ಬಹಳ ದಿನ ಬಾಳಬಲ್ಲುದಾಗಿದೆ.

'ಗೊಲ್ಗೊಥಾ' (1931), 'ವೈಶಾಖಿ ಅಥವಾ ಬುದ್ಧನ ಕಡೆಯ ದಿನಗಳು' (1947) - ಖಂಡಕಾವ್ಯಗಳಲ್ಲಿ ಪೈಗಳ ಮಹಾಕವಿ ಪ್ರತಿಭೆಯ ಮಿಂಚುಗಳಿವೆ. ಪೈಗಳ ವ್ಯುತ್ಪತ್ತಿ ಪ್ರತಿಭೆಗಳ ಸಮರಸದ ದಾಂಪತ್ಯ ಈ ಕಾವ್ಯಗಳಲ್ಲಿದೆ. ಅವರ ಛಂದೋಪ್ರಯೋಗಗಳಿಗೆ ಐತಿಹಾಸಿಕ ಮಹತ್ವವಿದೆ.

'ಹೆಬ್ಬೆರಳು' (1964), 'ಚಿತ್ರಭಾನು ಅಥವಾ 1947 (1962), 'ತಾಯಿ ಮತ್ತು ಇತರ ನೋ ನಾಟಕಗಳು' - ಇವು ಪೈಗಳ ನಾಟಕಗಳು. ಆರ್ಯ-ಅನಾರ್ಯ ಸಂಬಂಧವನ್ನು ಸಂಕೀರ್ಣವಾಗಿ ಚಿತ್ರಿಸುವ 'ಹೆಬ್ಬೆರಳು' ಇಂದಿಗೂ ಪ್ರಸ್ತುತವಾಗಿದೆ. 1942ರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ ಪೈಗಳ 'ಚಿತ್ರಭಾನು'ಗೆ ಪ್ರೇರಣೆ ನೀಡಿದೆ. ಜಪಾನಿನ ನೋ ನಾಟಕಗಳನ್ನು ಭಾಷಾಂತರಿಸುವುದರ ಮೂಲಕ ಪೈಗಳು ಪಶ್ಚಿಮದ ಬದಲು ಪೂರ್ವದ ಕಡೆ ನೋಡಲು ಸೂಚಿಸುತ್ತಿದ್ದಾರೆ.
ಸಂಶೋಧಕ


'ಗೋವಿಂದ ಪೈ ಸಂಶೋಧನ ಸಂಪುಟ' (ಸಂ.-ಮುರಳೀಧರ ಉಪಾಧ್ಯ ಹಿರಿಯಡಕ, ಹೆರಂಜೆ ಕೃಷ್ಣ ಭಟ್) 1995ರಲ್ಲಿ ಪ್ರಕಟವಾಯಿತು. ಈ ಸಂಪುಟದಲ್ಲಿ ಗೋವಿಂದ ಪೈಗಳ 144 ಲೇಖನ, ಸಂಪ್ರಬಂಧಗಳಿವೆ. ಗೋವಿಂದ ಪೈಗಳ ಒಟ್ಟು ಇಂಗ್ಲಿಷ್, ಕನ್ನಡ ಲೇಖನ, ಸಂಪ್ರಬಂಧಗಳ ಸಂಖ್ಯೆ - 165.

ಗೋವಿಂದ ಪೈಗಳ ಭಾಷಾ ಪ್ರವೀಣತೆಯನ್ನು ಕಂಡಾಗ ಇದು ವಾಸ್ತವವೊ ಅಥವಾ ಪುರಾಣ ಕತೆಯೊ ಎಂದು ಅಚ್ಚರಿಯಾಗುತ್ತದೆ. ಅವರ ಗ್ರಂಥಭಂಡಾರದಲ್ಲಿ 36 ಭಾಷೆಗಳ 4734 ಪುಸ್ತಕಗಳಿವೆ. ಇಂಗ್ಲಿಷ್, ಕನ್ನಡ, ಕೊಂಕಣಿ ಭಾಷೆಗಳಲ್ಲಿ ಅವರು ಲೇಖನಗಳನ್ನು ಬರೆದಿದ್ದಾರೆ. ಸಂಸ್ಕೃತ, ಪ್ರಾಕೃತ, ಪಾಲಿ, ಮರಾಠಿ, ಬಂಗಾಲಿ, ಉದರ್ು, ಜರ್ಮನ್, ಜಪಾನಿ ಮತ್ತು ತುಳುವಿನಿಂದ ಭಾಷಾಂತರ ಮಾಡಿದ್ದಾರೆ. ಬ್ರಿಟಿಷರ ಭಾರತದಲ್ಲಿ ತಮ್ಮ ಜೀವನದ 64 ವರ್ಷಗಳನ್ನು ಕಳೆದ ಪೈಗಳು ಜಗತ್ತಿನ ಜ್ಞಾನನಿಧಿ ಇಂಗ್ಲಿಷಿನಲ್ಲಿ ಮಾತ್ರ ಇದೆ ಎಂಬುದನ್ನು ಒಪ್ಪಲಿಲ್ಲ - ಎಂಬುದು ಮಹತ್ವದ ಸಂಗತಿ. ಸಂಸ್ಕೃತ, ಪಾಲಿ, ಪ್ರಾಕೃತ, ಪರ್ಷಿಯನ್,ಜಪಾನಿ, ಚೀನೀ ಇಂಥ ಪೌರಾತ್ಯ ಭಾಷೆಗಳಲ್ಲಿ ಜ್ಞಾನದ ಕೊಪ್ಪರಿಗೆಗಳಿವೆ ಎಂಬುದು ಅವರಿಗೆ ಗೊತ್ತಿತ್ತು. ಅವರು ಪಶ್ಚಿಮದ ವ್ಯಾಪಾರಿ ಕಣ್ಣುಗಳಿಂದ ಪೂರ್ವವನ್ನು ನೋಡುತ್ತಿದ್ದ ತಥಾಕಥಿತ 'ಓರಿಯಂಟಲಿಷ್ಟ'ರಿಗೆ ಸವಾಲು ಹಾಕಬಲ್ಲ ಮಹಾವಿದ್ವಾಂಸರಾಗಿದ್ದರು. ಕವಿಯ ಪ್ರತಿಭೆ, ಸಂಶೋಧಕನ ಬಹುಜ್ಞತೆ ಮತ್ತು ಉಚಿತಾನುಚಿತ ವಿವೇಕಗಳು ಅವರಲ್ಲಿ ಮುಪ್ಪುರಿಗೊಂಡಿದ್ದುವು. ಅವರ ಗ್ರೀಕ್ ಭಾಷಾಪಾಂಡಿತ್ಯ ಎರಡು ಸಂಪ್ರಬಂಧಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪೈಗಳು ಉತ್ಸವಮೂರ್ತಿಗಳನ್ನು ನೋಡಿ ತೃಪ್ತರಾಗದೆ ಕತ್ತಲೆಯಲ್ಲಿರುವ ಗರ್ಭಗುಡಿಯ ಮೂರ್ತಿಗಳನ್ನು ಶೋಧಿಸುತ್ತಿದ್ದ ಸಂಶೋಧಕ.
ಕವಿಗಳ ಮತ್ತು ರಾಜರುಗಳ ಕಾಲನಿರ್ಣಯದಿಂದ ಸಾಹಿತ್ಯ ಪರಂಪರೆ ಮತ್ತು ರಾಜಕೀಯ ಪರಂಪರೆಯ ಸಾತತ್ಯ ಮತ್ತು ಅಂತರ್ಸಂಬಂಧಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಪೈಗಳ ಮಹತ್ವದ ಸಂಪ್ರಬಂಧಗಳು ಬುದ್ಧ, ಮಹಾವೀರ, ಮಧ್ವಾಚಾರ್ಯ, ವೀರಶೈವ ಆಚಾರ್ಯತ್ರಯರು, ಚಾಳುಕ್ಯ ವಿಕ್ರಮ, ರನ್ನ, ದುರ್ಗಸಿಂಹ, ಜಯಕೀರ್ತಿ, ಬ್ರಹ್ಮಶಿವ, ಶಿಶುಮಾಯಣ, ಸೋಮರಾಜ, ಷಡಕ್ಷರದೇವ, ರತ್ನಾಕರ ಸಿದ್ಧ, ಲಕ್ಷ್ಮೀಶ, ಹರಿಹರ, ರಾಘವಾಂಕರ ಕಾಲನಿರ್ಣಯಗಳಿಗೆ ಸಂಬಂಧಪಟ್ಟಿವೆ. ಜ್ಯೋತಿಷಶಾಸ್ತ್ರದ ತಲಸ್ಪರ್ಶಿಅಧ್ಯಯನದಿಂದಾಗಿ ಕಾಲನಿರ್ಣಯಗಳಲ್ಲಿ ಸ್ಥೂಲ ವಿವರಗಳಿಂದ ಸೂಕ್ಷ್ಮ ವಿವರಗಳಿಗೆ ಹೋಗುವುದು ಪೈಗಳಿಗೆ ಸಾಧ್ಯವಾಯಿತು.

ಗೋವಿಂದ ಪೈಗಳು ಅಲಿಖಿತ ಇತಿಹಾಸವನ್ನು ಅಲಕ್ಷಿಸಿಲ್ಲ. ಬಾಸೆಲ್ ಮಿಶನ್‍ನಲ್ಲಿ ಸಿಕ್ಕಿದ ಕೈಫಿಯತ್ತಿನ ಆಧಾರದಿಂದ ಪೈಗಳು 'ವಿಜಯನಗರದ ನಿರ್ಮಾಣವೂ ಶೃಂಗೇರಿಯ ಗುರುಪರಂಪರೆಯೂ' ಎಂಬ ಲೇಖನ ಬರೆದಿದ್ದಾರೆ. 'ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕಲಾವೈಭವ' ಎಂಬ ಸಂಪ್ರಬಂಧವನ್ನು ಬರೆದಿರುವ ಪೈಗಳು ಕರಾವಳಿಯ ಜಾನಪದ ಅಧ್ಯಯನ ಮಾಡಿದ ಮೊದಲಿಗರಲ್ಲೊಬ್ಬರು. ಪಾರ್ತಿಸುಬ್ಬನ ಕಾಲನಿರ್ಣಯ ಮಾಡುವಲ್ಲಿ ಅವರು ಕಂಠಸ್ಥ ಸಂಪ್ರದಾಯದ ಇತಿಹಾಸಕ್ಕೆ ಮಹತ್ವ ನೀಡಿದ್ದಾರೆ.

ಗೋವಿಂದ ಪೈಗಳು 'ಓರಿಯಂಟಲಿಸ್ಟ್' ಪುರೋಹಿತರನ್ನು ನಂಬಿ ಪಶ್ಚಿಮ ಬುದ್ಧಿಯಾಗದ, ರಾಷ್ಟ್ರೀಯತೆಯನ್ನು ಅತಿರೇಕಿಸದೆ ಇತಿಹಾಸವನ್ನು ವೈಭವೀಕರಿಸದ ಸಂಶೋಧಕರಾಗಿದ್ದರು. ಅವರ ಇತಿಹಾಸ ದೃಷ್ಟಿ ವಸಾಹತುಶಾಹೀ ಕಾಲದಲ್ಲಿ ರೂಪಿತವಾದ ಚಿತ್ರಕ್ಕೆ ಒಳಗೊಳ್ಳಲಿಲ್ಲವೆಂಬುದು ಅಭಿಮಾನ ಪಡಬೇಕಾದ ಸಂಗತಿ. ಗೋವಿಂದ ಪೈಗಳ ಯೌವನಕಾಲದ ಭಾರತದಲ್ಲಿ ವಸಾಹತುಶಾಹಿ ಚಿಂತನೆಯು ದಟ್ಟವಾಗಿತ್ತು. ಗಾಂಧೀಯುಗದ ಚಿಂತನೆಯಿಂದ ಪ್ರಭಾವಿತರಾಗಿದ್ದ ಪೈಗಳಲ್ಲಿ ಪಶ್ಚಿಮದ ಗಾಳಿ, ನಾವು ನಮ್ಮ ನೆಲದಲ್ಲಿ ಕುಸಿಯುವಂತೆ ಮಾಡಬಾರದೆಂಬ ಎಚ್ಚರ ಇತ್ತು. ಅವರು ನಿರ್ವಸಹಾತೀಕರಣ ಪ್ರಕ್ರಿಯೆಗೆ ಪ್ರೇರಣೆ ನೀಡಿದ ಸ್ವೋಪಜ್ಞ ಸಂಶೋಧಕರಾಗಿದ್ದರು. ಪೈಗಳ ಪೂರ್ವಾಪರ ಚಿಂತನೆಯಲ್ಲಿ ಅಪರ ಪೂರ್ವವನ್ನು ಕಂಡ ರೀತಿಯ ಕುರಿತು ತೀವ್ರ ಆಕ್ಷೇಪ ಕಂಡುಬರುತ್ತದೆ. ಅವರು 1949ರಲ್ಲಿ ಬರೆದ 'ಪ್ರಾಕ್ತನ ವಿಮರ್ಶನದ ಮುಂದಣ ಹೆಜ್ಜೆ' ಒಳನೋಟ, ಮುನ್ನೋಟಗಳಿರುವ ಒಂದು ಮಹತ್ವದ ಲೇಖನ.

ಗೋವಿಂದ ಪೈಗಳ ಹಲವು ಸಂಪ್ರಬಂಧಗಳು ಆಖ್ಯಾನ, ಉಪಖ್ಯಾನಗಳಿಂದ ಕೂಡಿದ ಕಾವ್ಯಗಳಂತೆ ಸುದೀರ್ಘವಾಗಿವೆ. ಆದರೆ ಅವರ ಗದ್ಯದಲ್ಲಿ ಶಬ್ದಗಳ ಅಪವ್ಯಯವಿಲ್ಲ, ಅನಗತ್ಯವಾದ ವಾಗಾಡಂಬರವಿಲ್ಲ, ಶೈಲಿಯಲ್ಲಿ ಅವಿಶದತೆ ಇಲ್ಲ.

ಗೋವಿಂದ ಪೈಗಳು ಸಣ್ಣತನಗಳಿಲ್ಲದ ದೊಡ್ಡ ಸಂಶೋಧಕರಾಗಿದ್ದರು. ತುಳುನಾಡು, ಕರ್ನಾಟಕ, ಭಾರತದ ಇತಿಹಾಸದಲ್ಲಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಸ್ಪಷ್ಟವಾಗಿದ್ದ ನೂರಾರು ವಿಷಯಗಳನ್ನು ಸ್ಪಷ್ಟಗೊಳಿಸಿದರು. ಕಾಲನಿರ್ಣಯಗಳಿರುವ ಅವರ ಹತ್ತಾರು ಸಂಪ್ರಬಂಧಗಳು ಕಾಲದ ಪರೀಕ್ಷೆಯಲ್ಲಿ ಗೆದ್ದಿವೆ. ಪೈಗಳು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಸಂಶೋಧನೆಯ ಸಾಮಗ್ರಿಗಳ 'ಸರ್ವಸಂಗ್ರಹ' ಕಾಲದ ಸಂಶೋಧಕರು. ಸರ್ವಸಂಗ್ರಹದ ಜತೆಯಲ್ಲಿ ಅವರು 'ಸತ್ಯ ಸಂಗ್ರಹ'ಕ್ಕಾಗಿ ಶ್ರಮಿಸಿದರು. ಭಾರತದ ರಾಜಕೀಯ ಬೆಳವಣಿಗೆಯನ್ನಾಗಲಿ, ವಸಾಹತುಶಾಹಿ ಚಿಂತನಾಕ್ರಮದ ಅಪಾಯವನ್ನಾಗಲಿ ಅವರು ಅಲಕ್ಷಿಸಲಿಲ್ಲ. ಪೈಗಳು ಹೊಸ ಹೊಸ ಶಬ್ದಗಳನ್ನು ಸೃಷ್ಟಿಸುತ್ತ ಕನ್ನಡ ಗದ್ಯಕ್ಕೆ ಕಸಿ ಕಟ್ಟಿ ಅದನ್ನು ಬೆಳೆಸಿದರು.
(ಇನ್ನಷ್ಟು ಮಾಹಿತಿಗಾಗಿ 'ಗೋವಿಂದ ಪೈ ಸಂಶೋಧನ ಸಂಪುಟ'ದ ಸಂಪಾದಕೀಯ ನೋಡಿ.)
ಗ್ರಂಥ ಋಣ:

ಗೋವಿಂದ ಪೈ ಸಂಶೋಧನ ಸಂಪುಟ (1995)
ಸಂ.: ಹೆರಂಜೆ ಕೃಷ್ಣಭಟ್, ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ
ಎಂ.ಜಿ.ಎಂ. ಕಾಲೇಜು, ಉಡುಪಿ 576102

1 comment:

  1. ಸರ್ ಪುಸ್ತಕ ಸಿಗುತ್ತದೆನು ಸರ್

    ReplyDelete