stat Counter



Sunday, August 2, 2020

ಮುರಳೀಧರ ಉಪಾಧ್ಯ ಹಿರಿಯಡಕ - ಆಶೀಶ್ ನಂದಿ ವಿಚಾರ - ಆವೇಗದವರ ನಡುವೆ ಅಂತರ್ಮುಖಿ

ಡಾ| ಆಶೀಶ್ ನಂದಿ ಅವರು ದಿಲ್ಲಿಯ ’ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ನ್ ನಿರ್ದೇಶಕರಾಗಿದ್ದಾರೆ. ರಾಜಕೀಯ ಮನೋವಿಜ್ಞಾನಿಯಾಗಿರುವ ಅವರು ಸಮಕಾಲೀನ್ ಭಾರತದ ಜಿಜ್ಞಾಸುಗಳಲ್ಲೊಬ್ಬರಾಗಿ ಹೆಸರುವಾಸಿಯಾಗಿದ್ದಾರೆ. ಈ ಪುಸ್ತಕದಲ್ಲಿ ಅವರ್ ಮೂರು ಲೇಖನಗಳು ಮತ್ತು ಎರಡು ಭಾಷಣಗಳಿವೆ. ಇವು ಗಳನ್ನು ಕೆ.ವಿ. ಸುಬ್ಬಣ್ಣ, ಕು.ಶೀ. ಹರಿದಾಸ ಭಟ್ಟ, ಕೆ.ವಿ. ಅಕ್ಷರ ಮತ್ತು ಜಶವಂತ ಜಾಧವ್ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಚೆನ್ನಾಗಿ ಭಾಷಾಂತರಿಸಿದ್ದಾರೆ.

’ಸತಿ-ಹತ್ತೊಂಬತ್ತನೆಯ ಶತಮಾನದ ಹೆಂಗಸರು ಹಿಂಸೆ ಹಾಗೂ ಪ್ರತಿಭಟನೆಯ ಒಂದು ವೃತ್ತಾಂತ’ ಹಾಗೂ ’ಅಂತಿಮ ಮುಖಾಮುಖಿ-ಗಾಂಧೀ ಹತ್ಯೆಯ ರಾಜಕೀಯ’ ಇವು ಡಾ| ಆಶೀಶ್ ನಂದಿ ಯವರ ಸಂಶೋಧನಾತ್ಮಕ ಲೇಖನಗಳು.
ಸತಿ ಪದ್ಧತಿ ಬಂಗಾಳದ ನವ ಶ್ರೀಮಂತರಲ್ಲಿ ಜನಪ್ರಿಯವಾಗಿತ್ತು. ಈ  ನವ ಶ್ರೀಮಂತ ವರ್ಗಗಳವರು ಪಶ್ಚಿಮದ ಪ್ರಭಾವಕ್ಕೆ ತೆರೆದುಕೊಂಡು ಆ ಕಾರಣದಿಂದಲೇ ಮನೋವೈಜ್ಞಾನಿಕವಾಗಿ ಮೂಲೆ ಗುಂಪಾಗಿದ್ದರು. ಮೇಲು ಜಾತಿಯ ಹಿಂದು ಗಳು, ಸಂಸ್ಕೃತೀಕರಣಗೊಳ್ಳುತ್ತ ಮೇಲು ಮುಖ ಚಲನೆಯನ್ನಾರಂಭಿಸಿದ್ದ ಕೆಳ ಜಾತಿಗಳವರು ಸತಿ ಪದ್ಧತಿಯನ್ನು ಆಚರಿಸುತ್ತಿದ್ದರು. ಸತಿ ಪದ್ದತಿಯು ಆಸ್ತಿಯ ಹಂಚಿಕೆಯಲ್ಲಿ ಹಸ್ತಕ್ಷೇಪ ನಡೆಸುವ ತಂತವೂ ಆಗಿತ್ತು. ಆಶೀಶ್ ನಂದಿ ತನ್ನ್ ಲೇಖನದಲ್ಲಿ ರಾಮಮೋಹನ ರಾಯ್ ಅವರ ಎಳೆ ವಯಸ್ಸಿನ ಅಂತರಂಗದ ಅನುಭವಗಳ  ಮೇಲೆ ಒತ್ತು ನೀಡುತ್ತಾರೆ. ರಾಮ್ ಮೋಹನ ರಾಯ್ ಅವರ ಮೇಲೆ ತಾಯಿ ತಾರಿಣೀದೇವಿ, ತಂದೆ ರಮಾಕಾಂತ ರಾಯ್ ಅವರ್ ವ್ಯಕ್ತಿತ್ವಗಳ ಪ್ರಭಾವಗಳನ್ನು ಗುರುತಿಸುತ್ತಾರೆ. ನಂದಿಯವರು ವಿಶ್ಲೇಷಿಸಿರುವಂತೆ, " ತನ್ನ್ ತಾಯಿಯು ಹೀಗೆ ಪ್ರತೀ ಕಾರಕ್ಕೂ ವ್ಯಕ್ತಿ ಹನನಕ್ಕೂ ಹವಣಿಸಿದ್ದಾಳೆನ್ನುವ ಭಾವನೆಯೇ ರಾಯ್ ನಲ್ಲಿ ಆಳವಾದ ಸಿಟ್ಟು ನೋವುಗಳಿಗೂ ಮತ್ತು ತತ್ಫಲವಾಘಿ ಹುಟ್ಟಿದ ಪಾಪಪ್ರಜ್ಞೆಯ ತುಡಿತಕ್ಕೂ ಕಾರಣವಾಯಿತು.... ಅವನು ಆಕೆಯ ಆಸ್ತಿಕ ಧಾರ್ಮಿಕತೆಯನ್ನು ಖಂಡಿಸಿದ; ಆಕೆಯ ಕೌಟುಂಬಿಕ-ಆರ್ಥಿಕ ಅಧಿಕಾರಗಳನ್ನು ಕಿತ್ತುಕೊಂಡ; ಆಕೆಯ ವಿರುದ್ಧ ಕೋರ್ಟು ದಾವೆಗಳಲ್ಲಿ ಗೆದ್ದ. ಕಡೆಗೆ ಆಕೆಯ ಮಾತೃತ್ವವನ್ನು ಕೂಡಾ ನಿರಾಕರಿಸಿ ಬಿಟ್ಟ. ಅರ್ಥಾತ್ ಅವನು ಸಂಪೂರ್ಣವಾಗಿ ಆಕೆಯನ್ನು ಪರಾಭವಗೊಳಿಸಿ. ಹೆಮ್ಮೆಯ ಹೆಗ್ಗಡಿತಿ ತಾರಿಣೀದೇವಿಯು ತನ್ನ ಕಡೆಯ ದಿನಗಳಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರದ ದೇವಾಲಯವೊಂದರಲ್ಲಿ ಕಸಗುಡಿಸುತ್ತ ಕಾಲ ನೂಕಬೇಕಾಯಿತು." ರಾಮ ಮೋಹನ ರಾಯ್ ನ ಈ ಸಂಪೂರ್ಣ ಗೆಲುವು ಅಪಾಯಕಾರಿಯಾಗಿತ್ತು. ತನ್ನ್ ಮನಸ್ಸಿನಲ್ಲಿ ಉಳಿದ ಪಾಪ ಪ್ರಜ್ಜೆಯನ್ನು ಸರಿಪಡಿಸಿಕೊಳ್ಳಲು ಅವನು ದೊಡ್ಡ ಪ್ರಯತ್ನಗಳನ್ನು ಮಾಡಿದ. ರಾಮ ಮೋಹನ ರಾಯ್ ಕಟ್ಟಿದ ಸುಧಾರಣೆಯು ಒಂದು ಸಾರ್ವಜನಿಕ ಪಶ್ಚಾತ್ತಾಪದ ಬೃಹರ್ ಕಟ್ಟಡವಾಗಿ ತ್ತು ಎಂದು ಆಶೀಶ್ ನಂದಿ ವಿಶ್ಲೇಷಿಸುತ್ತಾರೆ.

 ’ ಗಾಂಧೀ ಹತ್ಯೆಯ ರಾಜಕೀಯ’ ಲೇಖನದಲ್ಲಿ ಆಶೀಶ್ ನಂದಿಯವರು ಗಾಂಧೀಜಿಯ   ರಾಜಕೀಯ ತಂತ್ರಗಳ ಮಹತ್ವವನು ವಿವರಿಸಿ,ಗೋಡ್ಸೆಯ ಬಾಲ್ಯ-ಯೌವನಗಳ ಅನುಭವಗಳನ್ನು ಬೆದಕುತಾರೆ.’ ಕಾಂಗ್ರೆಸ್ ಏನಾದರೂ ದೇಶ ವಿಭಜನೆಯನ್ನು ಒಪ್ಪಿಕೊಳ್ಳಲು ಇಚ್ಚಿಸಿದರೆ, ಅದು ನನ್ನ ಮೃತ ಶಾರೀರದ ಮೇಲೆ ಮಾತ್ರವೇ ಆಗತಕ್ಕದ್ದು’ ಎಂದು ಗಾಂಧೀಜಿ ಹೇಳಿದ್ದರು. ’ ನಮ್ಮ ಮಾತೃ ಭೂಮಿಯನ್ನು ತುಂಡರಿಸುವಲ್ಲಿ ಈತನು ಪ್ರಮುಖ ಪಾತ್ರ ವಹಿಸಿದವನು ಎನ್ನುವ ಕಾರಣಕ್ಕಾಗಿ ’ ತಾನು ಗಾಂಧಿಯನ್ನು ಕೊಂದೆ ಎಂದು ಗೋಡ್ಸೆ ತಿಳಿಸಿದ್ದ. ಗಾಂಧೀಜಿಯ ರಾಜಕಾರಣವು ಆತ್ಮಶಕ್ತಿ, ಅಂತರ್ವಾಣಿ, ಉಪವಾಸ, ಪ್ರಾರ್ಥನೆ, ಮನ:ಶೌಚ ಇತ್ಯಾದಿ ಪುರಾತನ ಕಾಲದ ಮೂಡನಂಬಿಕೆಗಳಿಂದ ಪೋಷಿತ ಗೊಂಡದ್ದೆಂಬುದು ಗೋಡ್ಸೆಯ ವಾದ ವಾಘಿತ್ತು. ನಂದಿಯವರ ಈ ಲೇಖನ ಒಬ್ಬ ಪ್ರತಿಭಾವಂತ ಸಿನಿಮಾ ನಿರ್ದೇಶಕನ ಟಿಪ್ಪಣೆಗಳಂತಿದೆ; ತಲಸ್ಪರ್ಶಿಯಾದ ಮನೋವೈಜ್ಜಾನಿಕ ಒಳನೋಟಗಳಿಂದ ಕೂಡಿದೆ.’ಪ್ರಸ್ತುತ ಭಾರತ ಮತ್ತು ಗ್ರಾಮೀಣ ತತ್ವ ಪರಿಕಲ್ಪನೆ’ ಹಾಗೂ ’ಪ್ರಸ್ತುತ ಭಾರತ ಮತ್ತು ದೇಶೀಯ ಜ್ಜಾನ  ಪರಂಪರೆಗಳು’ ಲೇಖನಗಳಲ್ಲಿ ನಮ್ಮ ಗ್ರಾಮತತ್ವ ಪ್ರತಿಭೆ-ಪರಿಕಲ್ಪನೆಗಳನ್ನು ನಾವು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಅಶೀಶ್ ನಂದಿ ಎಚ್ಚರಿಸುತ್ತಾರೆ-"ಜನ ಸಮುದಾಯಗಳು ಶತಶತಮಾನಗಳಿಂದ ಬದುಕುತ್ತ ಬಂದ ಜ್ಞಾನ ಪರಂಪರೆಗಳನ್ನು, ಸೃಜಿಸಿಕೊಳ್ಳುತ್ತ ಬಂದ ಜೀವನಕ್ರಮಗಳನ್ನು ಉಪೇಕ್ಷಿಸಿದಲ್ಲಿ, ಅವಮಾನಿಸಿದಲ್ಲಿ, ಏಕಾಯೇಕಿಯಾಗಿ, ಬದಲಾಯಿಸಲು ಹವಣಿಸಿದಲ್ಲಿ ಇಂದಲ್ಲ ಇನ್ನೊಂದು ದಿನ ಅದಕ್ಕಾಗಿ ಘೋರ ಬೆಲೆಯನ್ನು ನಾವು ತೆರಬೇಕಾಗುತ್ತದೆ".
’ ವಿಜ್ಞಾನ, ಅಧಿಕಾರ ಮತ್ತು ಸಂಸ್ಕೃತಿ’ ಲೇಖನದಲ್ಲಿ ಆಶೀಶ್ ನಂದಿ, ವಿಜ್ಜಾನ ಪರಂಪರೆಯನ್ನು ಇತಿಶ್ರೀ ಮಾಡಿ ಸಂಸ್ಕೃತಿ ವಿಶೇಷಗಳ ಪತನಕ್ಕೆ ಕಾರಣವಾಗಿರುವುದರತ್ತ ಗಮನಸೆಳೆಯುತ್ತಾರೆ. ರಾಜಕಾರಣೆಗಳು ಜನಾಭಿಪ್ರಾಯಕ್ಕೆ ಹೆದರಿದಂತೆ ವಿಜ್ಞಾನಿಗಳು ಹೆದರುವುದಿಲ್ಲ. ವಿಜ್ಞಾನ ಸೃಷ್ಟಿಸಿದ ಸಮಸ್ಯೆಗಳಿಗೆ ವಿಜ್ಞಾನ ದಲ್ಲಿಯೆ ಉತ್ತರವಿದೆ ಎಂದು ವಿಜ್ಞಾನಿಗಳು ಸುಳ್ಳು ಹೇಳುತ್ತಾರೆ. ಆಧುನಿಕ ವಿಜ್ಞಾನ ಸರ್ವಾಧಿಕಾರದ ಸ್ವರೂಪ ಲಕ್ಷಣಗಳನ್ನು ಪಡೆದುಕೊಳ್ಳುತ್ತಿದೆ ಎಂದು ಆಶೀಶ್ ನಂದಿ ವಾದಿಸುತ್ತಾರೆ.

ಅಕ್ಷರ ಚಿಂತನಮಾಲೆಯ ಸಂಪಾದಕ್ ಡಾ| ಟಿ.ಆರ್. ನಾಗರಾಜ್ ತನ್ನ ಹಿನ್ನುಡಿಯಲ್ಲಿ, ವಾಚ್ಯದ ಹಿಂದಿರುವ ವ್ಯಂಗ್ಯದ ಸಿದ್ಧಾಂತಿಯಾದ ಆಶೀಶ್ ನಂದಿ ಯವರ ದೃಷ್ಟಾಂತ ಪ್ರತಿಭೆಯ ಮಹತ್ವಮಿತಿಗಳನ್ನು ಗುರುತಿಸಿದ್ದಾರೆ.
ಡಾ| ಆಶೀಶ್ ನಂದಿ, ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಹೇಳುವ ಯೋಜನಾ ತಜ್ಞರಲ್ಲ. ಅವರು ರಾಜಕೀಯ ಮನೋವಿಜ್ಞಾನಿಯಾಗಿ ವ್ಯಕ್ತಿ ಮತ್ತು ಸಂದರ್ಭಗಳ ಹಿನ್ನೆಲೆಯನ್ನು ವಿಶ್ಲೇಷಿಸುತ್ತಾರೆ; ಜಿಜ್ಞಾಸುವಾಗಿ ಗಂಭೀರ ಪ್ರಶ್ನೆಗಳನ್ನು ಕೇಳುತ್ತಾರೆ. ವಿಜ್ಞಾನ ಬೃಹತ್-ತಂತ್ರಜ್ಞಾನಗಳನ್ನು ನಂಬಿ ಆವೇಗದಲ್ಲಿರುವ ಜನಜಂಗುಳಿಗೆ ಯಾವುದು ಮರೀಚಿಕೆ, ಯಾವುದು ಅಚ್ಛೋದಸರಸ್ಸು ಎಂದು ತಿಳಿಯುವುದಿಲ್ಲ. ಬೃಹತ್ ತಂತ್ರಜ್ಞಾನದ ದೋಷರಾಶಿ ಗೊತ್ತಿಲ್ಲದ ಜನ ಆಸೆಯಿಂದ ಅದರ್ ಚರಣ ಸೇವೆ ಮಾಡುತ್ತಿದ್ದಾರೆ. ಆವೇಗದವರ ನಡುವಿನಲ್ಲಿ ಅಂತರ್ಮುಖಿಯಾಗಿರುವ ಆಶೀಶ್ ನಂದಿ ಹುಲ್ಲೆ ಮೊಗದ ಹುಲಿಗಳನ್ನು ಗುರುತಿಸಿ ಎಚ್ಚರಿಸುತ್ತಾರೆ.

ಮುರಳೀಧರ ಉಪಾಧ್ಯ ಹಿರಿಯಡಕ
ಆಶೀಶ್ ನಂದಿ ವಿಚಾರ
(ಡಾ| ಆಶೀಶ್ ನಂದಿ ಅವರ ಆಯ್ದ ಬರಹಗಳು)
ಪ್ರ:ಅಕ್ಷರ ಪ್ರಕಾಶನ.
ಹೆಗ್ಗೋಡು-೫೭೭೪೧೭
ಮೊದಲ ಮುದ್ರಣ:೧೯೯೫ ಬೆಲೆ:ರೂ.೫೦.

No comments:

Post a Comment