stat Counter



Sunday, July 26, 2020

ಎನ್. ಜಗದೀಶ್ ಕೊಪ್ಪ - ಮಂಜುನಾಥ್ ಚಾಂದ್ ಅವರ " ಕಾಡ ಸೆರಗಿನ ಸೂಡಿ" { ಕಾದಂಬರಿ -2020}

ಕಾದಂಬರಿಗೆ ಮುನ್ನುಡಿ ಬರೆದಿರುವ ಡಾ.ಎನ್,ಜಗದೀಶ್ ಕೊಪ್ಪ ಅವರ ಕೆಲವು ಆಯ್ದ ಸಾಲುಗಳು ಇಲ್ಲಿವೆ...
...........................................................
ಈ ಕಾದಂಬರಿಯ ಕಥಾವಸ್ತು ಮತ್ತು ಪಾತ್ರಗಳ ಜೊತೆಯಲ್ಲಿ ಅಲ್ಲಿನ ನಿಸರ್ಗ, ಕಾಡು ಬೆಟ್ಟ, ನದಿ, ಪಾಣಿ ಮತ್ತು ಪಕ್ಷಿ ಸಂಕುಲಗಳು ಪ್ರಾಮುಖ್ಯತೆಯನ್ನು ಪಡೆದಿರುವುದು ವಿಶೇಷವಾಗಿದೆ. ಕಥನವನ್ನು ಹೇಳುವ ತಂತ್ರದ ಜೊತೆಗೆ ಸ್ಥಳಿಯ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಿರುವುದು ಲೇಖಕರ ಪ್ರತಿಭೆಗೆ ಸಾಕ್ಷಿಯಾಗಿದೆ. ಕನ್ನಡದ ಸಂದರ್ಭದಲ್ಲಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರು ಮಾತ್ರ ಕಥಾ ವಸ್ತುವಿನ ಜೊತೆಗೆ ಪ್ರಕೃತಿ ಮತ್ತು ಅಲ್ಲಿನ ಜೀವಜಾಲದ ಲೋಕವೊಂದನ್ನು ಬೆಸೆಯುವಲ್ಲಿ ಪರಿಣತಿಯನ್ನು ಸಾಧಿಸಿದ್ದರು.
ಈ ಕಾದಂಬರಿಯ ಉದ್ದಕ್ಕೂ ಬರುವ ಸೌಪರ್ಣಿಕಾ ನದಿ, ಕಂದೀಲು ಗುಡ್ಡ, ಹಾಗೂ ಕುಂದಾಪುರ ಮತ್ತು ಕೊಲ್ಲೂರು ನಡುವೆ ಹಬ್ಬಿರುವ ಅರಣ್ಯ ಹಾಗೂ ಕೊಲ್ಲೂರು ಮತ್ತು ಹೆಬ್ರಿಯ ನಡುವಿನ ಕಾಡು ಕಣಿವೆ ಹೀಗೆ ಅಲ್ಲಿನ ನಿಸರ್ಗದ ನಡುವಿನ ಸನ್ನಿವೇಶಗಳು ಕಾದಂಬರಿಯ ವಸ್ತು ಮತ್ತು ಅದರ ತಂತ್ರಕ್ಕೆ ಘನತೆಯನ್ನು ತಂದುಕೊಟ್ಟಿವೆ. ಎರಡು ದಶಕಗಳ ಹಿಂದೆ ತೆಲುಗು ಭಾಷೆಯಲ್ಲಿ ಮಹಿಂದ್ರ ರಾಜಾರಾಂ ಮೋಹನ್ ರಾವ್ ಎಂಬುವರು ಆಂಧ್ರ ಪ್ರದೇಶದ ಉತ್ತರ ಭಾಗದ ಪೂರ್ವ ಗೋದಾವರಿ ಜಿಲ್ಲೆಯ ಮುಂಗಡ ಎಂಬ ತನ್ನೂರಿಗೆ 1931ರಲ್ಲಿ ಗಾಂಧೀಜಿಯವರು ಪ್ರಥಮವಾಗಿ ಕಾಲಿಟ್ಟ ಸಂದರ್ಭವನ್ನು ಹಿನ್ನೆಲೆಯಾಗಿಟ್ಟು ತಮ್ಮ ಆತ್ಮ ಕಥನವನ್ನು ಕಾದಂಬರಿ ರೂಪದಲ್ಲಿ 'ಸ್ವರಾಜ್ಯಂ' ಹೆಸರಿನಲ್ಲಿ ಪ್ರಕಟಿಸಿದ್ದಾರೆ. (ಈ ಕೃತಿ ಇಂಗ್ಲಿಷ್ ಭಾಷೆಯಲ್ಲಿ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ) ತಾವು ಬಾಲಕನಾಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಪ್ರಭಾವದಿಂದ ತನ್ನ ನೆಲದಲ್ಲಿ ಸಂಭವಿಸಿದ ಅನೇಕ ಹೋರಾಟ, ಕ್ರಾಂತಿಕಾರಿ ಘಟನೆಗಳು, ತ್ಯಾಗ ಮತ್ತು ಬಲಿದಾನದ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಾಂದ್ ಅವರ ಈ ಕಾದಂಬರಿಯು ನನ್ನ ಮೇಲೆ ಅಂತಹದ್ದೇ ಪರಿಣಾಮ ಬೀರಿದೆ. ಅವರ ನಿರೂಪಣಾ ಶೈಲಿ, ಮತ್ತು ಆ ಕಾಲಘಟ್ಟದ ಕಾಡು ಕಣಿವೆಯ ನಡುವಿನ ಒಂಟಿ ಮನೆಯೇ ಊರಾಗಿರುವ ಸನ್ನಿವೇಶದಲ್ಲಿ ಅಲ್ಲಿನ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಅನೇಕ ರೋಚಕ ತಿರುವುಗಳ ನಡುವೆಯೂ ಸಹ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ. ಈ ದೃಷ್ಟಿಯಿಂದ ಮಂಜುನಾಥ ಚಾಂದ್ ಅವರ ಈ ಕಾದಂಬರಿ ಸೂಡಿ ಕನ್ನಡದ ಸಾರಸ್ವತ ಲೋಕಕ್ಕೆ ಒಂದು ವಿಶಿಷ್ಟ ಕೊಡುಗೆ ಎಂದೇ ಹೇಳಬಹುದು. ಇಂತಹ ಅಪರೂಪದ ಕಥನವನ್ನು ನೀಡಿದ ಮಿತ್ರರಾದ ಚಾಂದ್ ಅವರಿಂದ ಇಂತಹ ಇನ್ನಷ್ಟು ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸುತ್ತೇನೆ....
---------------------------------------
ಮುಖಪುಟ ರಚನೆ ಮತ್ತು ಇಡೀ ಕೃತಿಯನ್ನು ಒಂದು ಕಲಾಕೃತಿಯಂತೆ ರೂಪಿಸಿಕೊಟ್ಟವರು: ಸುಧಾಕರ ದರ್ಬೆ.
ಒಟ್ಟು ಪುಟಗಳು: 196
ಬೆಲೆ: 180
ಮುಂಗಡ ಕಾಯ್ದಿರಿಸಿದವರಿಗೆ: 150
ಈ ಸಂಖ್ಯೆಗೆ ಗೂಗಲ್ ಪೇ ಮಾಡಿದರೆ ಬಿಡುಗಡೆಯಾದ ತಕ್ಷಣ ಕಾದಂಬರಿ ನಿಮ್ಮ ಮಡಿಲಿಗೆ. -7899774123
ವಿಳಾಸವನ್ನು ಈ ಸಂಖ್ಯೆಗೆ ವಾಟ್ಸಾಪ್ ಮಾಡಿ- 9449238154
ಗರಿಷ್ಠ ಹತ್ತು ದಿನಗಳಲ್ಲಿ ಕೃತಿ ಲಭ್ಯ
ಇದು ಅಕ್ಷರ ನಂಬಿದವನ ಸಾಹಸ
ನಿಮ್ಮ ಬೆಂಬಲವಿರಲಿ...
-ಚಾಂದ್
-------------------------------------------


No comments:

Post a Comment